'ಮರ್ಯಾದೆ ಕೊಟ್ಟು ಮಾತನಾಡು...'ಬಿಜೆಪಿ ಹಿರಿಯ ನಾಯಕರ ವಿರುದ್ಧ ಅರುಣ್‌ ಸೋಮಣ್ಣ ಗರಂ!

Mar 14, 2023, 4:45 PM IST

ಬೆಂಗಳೂರು (ಮಾ.14): ರಾಜ್ಯದ ನಮ್ಮ ಪಕ್ಷದಲ್ಲಿಯೇ ಹಿರಿಯ ನಾಯಕರೊಬ್ಬರು ತಮ್ಮ ಸೀಟು ತ್ಯಾಗ ಮಾಡಿ ಮಗನಿಗೆ ಕೊಟ್ಟಿದ್ದಾರೆ. ಆದರೆ, ಈಗ ಇಡೀ ಕರ್ನಾಟಕಕ್ಕೆ ಅವನೇ ಲೀಡರ್‌ನಂತೆ ಓಡಾಡ್ತಾ ನಿಂತುಕೊಂಡಿದ್ದಾನೆ ಎಂದು ವಸತಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್‌ ಸೋಮಣ್ಣ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ತೊರೆಯುತ್ತಾರೆ ಎಂಬ ವಿಚಾರವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆದರೆ, ಸೋಮಣ್ಣ ಅವರ ಪುತ್ರನಿಗೆ ಲೋಕಸಭಾ ಟಿಕೆಟ್‌ ನೀಡುವುದಾಗಿ ಬಿಜೆಪಿ ಹೈಕಮಾಂಡ್‌ ಭರವಸೆ ನಿಡಿದ್ದರಿಂದ ಬಿಜೆಪಿಯಲ್ಲಿಯೇ ಮುಂದುವರೆಯುವುದಾಗಿ ಸೋಮಣ್ಣ ತಿಳಿಸಿದ್ದಾರೆ. ಮತ್ತೊಂದೆಡೆ ಸೋಮಣ್ಣ ಅವರ ಪುತ್ರ ಅರುಣ್‌ ಸೋಮಣ್ಣ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರನ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ರಾಜ್ಯದ ನಮ್ಮ ಪಕ್ಷದಲ್ಲಿಯೇ ಹಿರಿಯ ನಾಯಕರೊಬ್ಬರು ತಮ್ಮ ಸೀಟು ತ್ಯಾಗ ಮಾಡಿ ಮಗನಿಗೆ ಕೊಟ್ಟಿದ್ದಾರೆ. ಆದರೆ, ಈಗ ಇಡೀ ಕರ್ನಾಟಕಕ್ಕೆ ಅವನೇ ಲೀಡರ್‌ನಂತೆ ಓಡಾಡ್ತಾ ನಿಂತುಕೊಂಡಿದ್ದಾನೆ. ನಾನು ಹೆದರಿಕೊಂಡು ಅವರಿಗೆ ಫೋನ್‌ ಮಾಡಿದರೆ ಏಕವಚನದಲ್ಲಿ ಮಾತನಾಡಿದನು. ಸರ್ ಮರ್ಯಾದೆ ಕೊಟ್ಟು ಮಾತಾಡ್ತಿದೀನಿ, ನೀವು ಮರ್ಯಾದೆಕೊಟ್ಟು ಮಾತನಾಡಿ. ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ ಎಂದು ತಿರುಗೇಟು ನೀಡಿದೆ ಎಂದು ಹೇಳಿದ್ದಾರೆ.