ಸುರತ್ಕಲ್‌ನ ಫಾಝಿಲ್‌ ಹತ್ಯೆ: ಎಲ್ಲ ಬಂಧಿತರಿಗೆ ಹಿಂದು ಸಂಘಟನೆಗಳ ನಂಟು

Aug 3, 2022, 1:54 PM IST

ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಕರಾವಳಿಯ ತ್ರಿವಳಿ ಹತ್ಯೆ ಪ್ರಕರಣ ಪೈಕಿ ಒಂದಾದ ಸುರತ್ಕಲ್‌ನಲ್ಲಿ ನಡೆದ ಫಾಝಿಲ್‌ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ರೌಡಿಶೀಟರ್‌ ಸೇರಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. 

ಜು.28ರಂದು ರಾತ್ರಿ ಸುರತ್ಕಲ್‌ನ ಮಂಗಳಪೇಟೆ ನಿವಾಸಿ ಮೊಹಮ್ಮದ್‌ ಫಾಝಿಲ್‌ನನ್ನು (23) ದುಷ್ಕರ್ಮಿಗಳ ತಂಡವೊಂದು ಹತ್ಯೆ ತಲವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಘಟನೆಗೆ ಸಂಬಂಧಿಸಿ ಬಜಪೆಯ ಸುಹಾಸ್‌ ಶೆಟ್ಟಿ(29), ಮೋಹನ್‌ (26), ಗಿರಿಧರ್‌ (23), ಅಭಿಷೇಕ್‌ (21), ಶ್ರೀನಿವಾಸ್‌ (23) ಹಾಗೂ ದೀಕ್ಷಿತ್‌ (21) ಅನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರಿನ ಮಾಲೀಕ ಅಜಿತ್‌ ಕ್ರಾಸ್ತಾನನ್ನು ಈಗಾಗಲೇ ಬಂಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಒಟ್ಟು 7 ಮಂದಿಯನ್ನು ಬಂಧಿಸಿದಂತಾಗಿದೆ.

ಈ ಪೈಕಿ ಮೂವರು ರೌಡಿಶೀಟರ್‌ಗಳಾಗಿದ್ದು, 6 ಮಂದಿ ವಿರುದ್ಧ ಕೂಡ ಈ ಹಿಂದೆ ನಾನಾ ಘಟನೆಗಳಲ್ಲಿ ಕೇಸು ದಾಖಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.