ಮದುವೆಗಾಗಿ ಮತಾಂತರಗೊಂಡ್ರಾ ಖುಷ್ಬೂ: ನಟಿ ಕೊಟ್ಟ ಉತ್ತರವೇನು ಗೊತ್ತಾ?

May 10, 2023, 2:04 PM IST

ನಟನೆ ಹಾಗೂ ಸಕ್ರಿಯ ರಾಜಕಾರಣಿಯೂ ಆಗಿರುವ ಖುಷ್ಬೂ ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಒಂದಿಲ್ಲೊಂದು ಚರ್ಚೆ ಹುಟ್ಟು ಹಾಕುತ್ತಲೇ ಇರುತ್ತಾರೆ. ಇದೀಗ ಅವರ ಮದುವೆ ಮತ್ತು ಮತಾಂತರ ಕುರಿತಾಗಿ ಪ್ರಶ್ನೆಯೊಂದು ಬಂದಿದ್ದು, ಅದಕ್ಕೆ ಖುಷ್ಬೂ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಖುಷ್ಬೂ ಮುಂಬೈನ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದವರು. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಅವರು ದಕ್ಷಿಣ ಭಾರತದಲ್ಲಿ ನೆಲೆಯೂರಿದರು. ಹೆಚ್ಚೆಚ್ಚು ಸಿನಿಮಾಗಳು ಸಿಕ್ಕಾಗಿ ಚೆನ್ನೈನಲ್ಲೇ ಮನೆ ಮಾಡಿಕೊಂಡರು. ಅಲ್ಲದೇ, ನಿರ್ದೇಶಕ ಸುಂದರ್. ಸಿ ಅವರನ್ನು ವಿವಾಹವೂ ಆದರು. 

ಈ ವಿವಾಹದ ಕುರಿತಾಗಿಯೇ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ನೀವು ಹಿಂದೂ ವ್ಯಕ್ತಿಯನ್ನು ಮದುವೆ ಆಗಿದ್ದೀರಿ. ಹಾಗಾಗಿ ಮತಾಂತರ ಆಗಿದ್ದೀರಾ? ಎನ್ನುವ ಪ್ರಶ್ನೆಯನ್ನು ನಟಿಯ ಮುಂದಿಟ್ಟಿದ್ದಾರೆ.  ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಪ್ರಶ್ನೆ ಅವರಿಗೆ ಎದುರಾಗಿದೆ. ಕೇಳಿದ ಪ್ರಶ್ನೆಗೆ ಸಮಚಿತ್ತದಿಂದಲೇ ಉತ್ತರಿಸಿರುವ ಖುಷ್ಭೂ. ನಾನು ಮತಾಂತರ ಆಗಿಲ್ಲ. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದೆ. ಈ ಕಾಯ್ದೆ ಬಗ್ಗೆ ತಿಳಿದುಕೊಳ್ಳಿ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಾವು ಯಾವುದೇ ಧರ್ಮಕ್ಕೆ ಮತಾಂತರ ಆಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.