New Rules: ಹೆಣ್ಣು ಮಗು ಹುಟ್ಟಿದ್ರೆ 111 ಸಸಿಗಳನ್ನು ನೆಡುವುದು ಕಡ್ಡಾಯ!

By Web DeskFirst Published Oct 10, 2019, 12:08 PM IST
Highlights

ಇದೊಂದು ಯಶೋಗಾಥೆ. ಹೆಣ್ಣುಮಕ್ಕಳ ಹುಟ್ಟನ್ನು ಸಂಭ್ರಮಿಸುವುದರಿಂದ ಬದುಕು ಬಂಗಾರವಾಗುವ ಕತೆ. ಪಾಸಿಟಿವ್ ವೈಬ್ಸ್ ನೀಡುವ ಸ್ಟೋರಿ. ರಾಜಸ್ಥಾನದ ಪಿಪ್ಲಾಂತ್ರಿ ಹಳ್ಳಿಗರ ಈ ಆಚಾರ, ಪದ್ಧತಿ ಹೆಣ್ಣುಮಕ್ಕಳಿಗಷ್ಟೇ ಅಲ್ಲ, ಅವರನ್ನು ಹೆತ್ತವರಿಗೆ, ಜೊತೆಗೆ ಊರಿನ ಪ್ರತಿಯೊಬ್ಬರಿಗೂ ಲಾಭ, ಸಂತೋಷ, ನೆಮ್ಮದಿ ತಂದುಕೊಟ್ಟಿದೆ. ಇದೆಲ್ಲದರ ಹಿಂದಿರುವುದು ಪಲಿವಾಲ್...

ಕೆಲ ವರ್ಷಗಳ ಹಿಂದಿನ ಮಾತು. ರಾಜಸ್ಥಾನದ ಇತರೆಡೆಗಳಂತೆ ರಾಜ್ಸಮಂಡ್ ಜಿಲ್ಲೆಯ ಪಿಪ್ಲಾಂತ್ರಿ ಹಳ್ಳಿಯಲ್ಲಿ ಕೂಡಾ ಹೆಣ್ಣು ಮಗುವೊಂದು ಜನಿಸಿತೆಂದರೆ ಅದೊಂದು ಅಪಶಕುನವೆಂಬಂತೆ ನೋಡಲಾಗುತ್ತಿತ್ತು.  

ಹೆಣ್ಣೆಂದು ತಿಳಿದರೆ ಸಾಕು, ವರದಕ್ಷಿಣೆಯ ಭಯಕ್ಕೆ ಮಗು ಜನಿಸುವ ಮೊದಲೇ ಅಥವಾ ಜನಿಸಿದ ಬಳಿಕ ಅದರ ಕತೆಯನ್ನು ಶುರುವಲ್ಲೇ ಮುಗಿಸುವುದು ಇಲ್ಲಿ ಹೊಸತೇನಾಗಿರಲಿಲ್ಲ. ಕಾನೂನುಗಳ್ಯಾವುವೂ ಇಲ್ಲಿ ಕೆಲಸ ಮಾಡುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಕೇಳಿದವರೆಲ್ಲರೂ ಅಚ್ಚರಿ ಪಡುವಂತೆ ಹೆಣ್ಣು ಮಕ್ಕಳ ಜನನವೇ ತಂದೆತಾಯಿಗೆ ವರವಾಗುವಂತೆ ಮಾಡಿದ್ದು ಶ್ಯಾಮ ಸುಂದರ್ ಪಲಿವಾಲ್. 

ಫ್ರಾನ್ಸ್‌, ಸ್ವಿಜರ್‌ಲ್ಯಾಂಡ್‌ ಬೀದಿಯಲ್ಲಿ ಕಾಣಿಸಿಕೊಂಡ ಚುಟುಚುಟು ಚೆಲುವೆ!

ಪಲಿವಾಲ್ ಮಾಡಿದ ಐಡಿಯಾಕ್ಕೆ, ಸಾಕಷ್ಟು ಒದ್ದಾಡಿ ಅದನ್ನು ಅನುಷ್ಠಾನಕ್ಕೆ ತಂದಿದ್ದಕ್ಕೆ ಇಂದು ಪಿಪ್ಲಾಂತ್ರಿಯ ಪ್ರತಿಯೊಬ್ಬರೂ ಅವರಿಗೆ ಕೃತಜ್ಞರಾಗಿದ್ದಾರೆ. ಅಷ್ಟೇ ಅಲ್ಲ, ಪಿಪ್ಲಾಂತ್ರಿಯು ಇಡೀ ದೇಶಕ್ಕೇ ಮಾದರಿ ಹಳ್ಳಿಯಾಗಿ ಗಮನ ಸೆಳೆಯುತ್ತಿದೆ. ಇಷ್ಟಕ್ಕೂ ಪಲಿವಾಲ್ ಮಾಡಿದ್ದೇನು ಗೊತ್ತಾ?

ಗಿಡ ನೆಡಿ, ಹಣ ಪಡಿ

ಒಂದು ಹೆಣ್ಣು ಮಗು ಜನಿಸಿದರೆ ಅದರ ತಂದೆತಾಯಿ, ಕುಟುಂಬವರ್ಗ ಊರಿನಲ್ಲಿ 111 ಮರಗಳನ್ನು ನೆಡಬೇಕು ಎಂಬ ನಿಯಮಾವಳಿ ರೂಪಿಸಿದರು ಪಲಿವಾಲ್. ಅದರಿಂದೇನಾಗುತ್ತದೆ ಪ್ರಶ್ನಿಸಿದಿರಾ? ಹೀಗೆ ನೆಟ್ಟ ಗಿಡಗಳನ್ನು ಗ್ರಾಮ ಪಂಚಾಯಿತಿ ನೋಡಿಕೊಳ್ಳುತ್ತದೆ. ಅಂದರೆ ಮಹಿಳಾ ಸ್ವಸಹಾಯ ಮಂಡಳಿ, ಹಿರಿಯ ಮಹಿಳೆಯರು  ಮುಂತಾದವರು ಇದರ ಪಾಲನೆ ನೋಡಿಕೊಳ್ಳಬೇಕು. ಕುಟುಂಬವರ್ಗ ಕೂಡಾ ಆಗಾಗ ಅವು ಸರಿಯಾಗಿ ಬೆಳೆಯುತ್ತಿವೆ ಎಂದು 18 ವರ್ಷಗಳ ಕಾಲ ಗಮನಿಸಿಕೊಳ್ಳಬೇಕು. ಹೆಣ್ಣುಮಗಳು ಮದುವೆಯ ಹೊತ್ತಿಗೆ ಬರುವಾಗಲಾಗಲೇ ಅದರ ಸಂಪೂರ್ಣ ಖರ್ಚನ್ನು ಈ ಮರಗಳೇ ನಿಭಾಯಿಸುತ್ತವೆ. ಏನಿಲ್ಲವೆಂದರೂ ಮರವೊಂದಕ್ಕೆ 1 ಲಕ್ಷ ರುಪಾಯಿಯೆಂದರೂ ಕುಟುಂಬದ ಆಸ್ತಿ 1 ಕೋಟಿ 11 ಲಕ್ಷ ರೂಪಾಯಿಯಾಯಿತು.

ಕಾರಣಾಂತರಗಳಿಂದ ಅಷ್ಟಾಗಲಿಲ್ಲವೆಂದರೂ ಕನಿಷ್ಠ 25 ಲಕ್ಷ ಹಣವನ್ನು ಈ ಮರಗಳು ತಂದುಕೊಡುವುದರಲ್ಲಿ ಮೋಸವಿಲ್ಲ. ಇದರೊಂದಿಗೆ ಮಗುವಿನ ತಂದೆತಾಯಿ ಆಕೆ ಹುಟ್ಟಿದೊಡನೆ 10,000 ರೂಪಾಯಿಗಳನ್ನು ಹಾಗೂ ದಾನಿಗಳು 31,000 ರೂಪಾಯಿಗಳನ್ನು ಫಿಕ್ಸ್ಡ್ ಡೆಪಾಸಿಟ್‌ನಲ್ಲಿಡುವುದು ಕಡ್ಡಾಯ. ಆಕೆಗೆ 20 ವರ್ಷಗಳಾಗುವ ಹೊತ್ತಿಗೆ ಇದು ಕೆಲವಾರು ಲಕ್ಷ ದಾಟಿರುತ್ತದೆ. ಇದರ ನಿಭಾವಣೆಯನ್ನೂ ಗ್ರಾಮ ಪಂಚಾಯಿತಿ ನೋಡಿಕೊಳ್ಳುತ್ತದೆ. ಯೋಜನೆಯಂತೆ ಪ್ರತಿ ಮನೆಯ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆಸಿ ಆಕೆಗೆ ಭಾಮಶಾ ಕಾರ್ಡ್ ನೀಡಲಾಗುತ್ತದೆ. ಇದರಿಂದ ಮಹಿಳೆ ಕುಟುಂಬದ ಯಜಮಾನಿಯಾಗುವ ಜೊತೆಗೆ ಆರ್ಥಿಕ ಸಂಗತಿಗಳನ್ನು ಹ್ಯಾಂಡಲ್ ಮಾಡುವ ಸಾಮರ್ಥ್ಯ ಪಡೆಯುತ್ತಾಳೆ. 

ಇನ್ನು ಊರಿನಲ್ಲಿ ಯಾವುದೇ ಹೆಣ್ಣುಮಗು ಹುಟ್ಟಿದರೂ ಪಂಚಾಯಿತಿ ಅದನ್ನು ದಾಖಲಿಸಿ, ಹೆಣ್ಣುಮಕ್ಕಳ ಪಾಲಿನ ಸರ್ಕಾರದ ಯೋಜನೆಗಳೆಲ್ಲವೂ ದೊರಕುವಂತೆ ನೋಡಿಕೊಳ್ಳುತ್ತದೆ. 
ಇಷ್ಟೇ ಅಲ್ಲದೆ, ಯೋಜನೆಯಂತೆ ಹೆಣ್ಣು ಮಗು ಜನಿಸಿದಾಗ ಪೋಷಕರು ಆಕೆಯ ಹೆಸರಿನಲ್ಲಿ 111 ಗಿಡಗಳನ್ನು ನೆಟ್ಟು ಬೆಳೆಸುವ, ಅಕೆಗೆ ಸಂಪೂರ್ಣ ಶಿಕ್ಷಣ ಕೊಡಿಸುವ, 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ನೋಡಿಕೊಳ್ಳುವುದಾಗಿ, ಹಣವನ್ನು ಆಕೆಯ ಮದುವೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಬಳಸಿಕೊಳ್ಳುವುದಾಗಿ ಬರೆದ ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕುತ್ತಾರೆ. 

ಜಗತ್ತಿನ ಎತ್ತರದ ಯುದ್ಧಭೂಮಿಯಲ್ಲಿ ಯೋಧರ ಬದುಕು ಹೇಗಿರುತ್ತದೆ ಗೊತ್ತಾ?

ಪಲಿವಾಲ್ ಈ ಯೋಜನೆಯನ್ನು ಸರ್ಕಾರದ ಸಹಕಾರದೊಂದಿಗೆ ಕಿರಣ್ ನಿಧಿ ಯೋಜನೆ ಹೆಸರಿನಲ್ಲಿ ಆರಂಭಿಸಿದರು. ಆರಂಭದಲ್ಲಿ ಅವರು ಇದಕ್ಕಾಗಿ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ, ಪಿಪ್ಲಾಂತ್ರಿ ಗ್ರಾಮ ಪಂಚಾಯಿತಿ ಬೇರೆ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಅಷ್ಟರೊಳಗಾಗಲೇ ಹಲವು ಅವಾರ್ಡ್‌ಗಳನ್ನು ಪಡೆದುಕೊಂಡಿತ್ತು. ಇದರಿಂದಾಗಿ ಪಿಪ್ಲಾಂತ್ರಿಯ ಜನ ಈ ಯೋಜನೆಯನ್ನೂ ಪ್ರಯೋಗಿಸಿ ನೋಡುವ ಮನಸ್ಥಿತಿ ಬೆಳೆಸಿಕೊಳ್ಳುವಂತಾಯಿತು. 

ಈ ಯೋಜನೆಯಿಂದ ಏನಾಯಿತು ಗೊತ್ತೇ? 

ಇದರಿಂದ ಹೆಣ್ಣುಮಗುವಿನ ಗರ್ಭಪಾತ ಹಾಗೂ ಕೊಲೆ ನಿಂತಿದ್ದಷ್ಟೇ ಅಲ್ಲ, ಊರಿನ ಜನರಿಗೆ ಉದ್ಯೋಗ ದೊರಕಿತು, ಹೆಣ್ಣುಮಕ್ಕಳ ಪೋಷಕರು ನಿಶ್ಚಿಂತರಾದರು, ಮಹಿಳಾ ಸಬಲೀಕರಣವಾಯಿತು, ಪರಿಸರದ ಉಳಿವೂ ಆಯಿತು, ಊರಿನ ಬೆಳವಣಿಗೆಯೂ ಆಯಿತು. ಒಂದೇ ಯೋಜನೆಯಿಂದ ಹತ್ತಾರು ಬಗೆಯ ಲಾಭಗಳನ್ನು ತಂದುಕೊಟ್ಟಿದ್ದಾರೆ ಪಲಿವಾಲ್. 
ಕೆಲ ವರ್ಷಗಳಲ್ಲೇ ಈ ಹಳ್ಳಿಯ ಜನ ಸುಮಾರು ಮೂರು ಲಕ್ಷ ಮರಗಳನ್ನು ಬೆಳೆಸುವಲ್ಲಿ ಸಫಲರಾಗಿದ್ದಾರೆ. ಇವುಗಳಲ್ಲಿ ಬೇವು, ಮಾವು, ನೆಲ್ಲಿ, ತೇಗ, ಹಲಸು ಇತ್ಯಾದಿ ಬೃಹತ್ ಮರಗಳಿವೆ. ಈ ಮರಗಳಿಗೆ ಹುಳ ಹತ್ತದಂತೆ, ಬೆಳೆ ಹಾಳಾಗದಂತೆ ನೋಡಿಕೊಳ್ಳಲು ಜನ ಅವುಗಳ ಸುತ್ತ 2.5 ದಶಲಕ್ಷಕ್ಕೂ ಹೆಚ್ಚು ಅಲೋವೆರಾ ಗಿಡಗಳನ್ನು ನೆಟ್ಟಿದ್ದಾರೆ.

ಭೂತದ ಕಾಟ ಕಾಡುವ ಭಾರತದ 6 ರೈಲು ನಿಲ್ದಾಣಗಳು

ಈಗ ಈ ಅಲೋವೆರಾ ಗಿಡಗಳು ಕೂಡಾ ಊರಿನ ಜನರಿಗೆ ದುಡ್ಡಿನ ಮೂಲಗಳಾಗಿವೆ. ಇದರಿಂದ ಹತ್ತು ಹಲವು ಉತ್ಪನ್ನಗಳನ್ನು ತಯಾರಿಸಿ ಅವರು ಮಾರಾಟ ಮಾಡುತ್ತಿದ್ದಾರೆ. ಮರಗಳು ನೀಡುವ ಹಣ್ಣುಹಂಪಲುಗಳು, ಧೂಪ ಇತ್ಯಾದಿಗಳು ಕೂಡಾ ಹಣ ತಂದುಕೊಡುತ್ತಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಊರಿನಲ್ಲಿ ನೀರು, ನೆರಳು, ಉತ್ತಮ ಗಾಳಿಗೆ ಕೊರತೆಯಿಲ್ಲ.

ಗಿಡ ನೆಟ್ಟು ಹೆಣ್ಣು ಮಗುವಿನ ಜನನ ಸಂಭ್ರಮಿಸುವ ಐಡಿಯಾ ಈ ಯೋಜನೆಯನ್ನು ಕ್ರಾಂತಿಕಾರಿಯಾಗಿಸಿದೆ. ಜೈಪುರ, ಜೋಧ್ಪುರ, ಕೋಟಾ ಹಾಗೂ ಇತರೆ ಕಡೆಗಳಲ್ಲಿ ಕರಕುಶಲ ಕೈಗಾರಿಕೆಗಳಿಂದಾಗಿ ಮರಗಳು ಅಳಿವಿನಂಚಿನತ್ತ ಸಾಗಿದೆ. ಕೃಷಿಭೂಮಿ ಬಹಳ ಕಡಿಮೆಯಾಗಿದೆ. ಪಿಪ್ಲಾಂತ್ರಿ ಸುತ್ತಮುತ್ತದ ಊರಿನಲ್ಲಿ ವೈಟ್ ಮೈನಿಂಗ್‌ನಿಂದಾಗಿ ನೀರಿಗೆ ಬರವಿದೆ. ಈ ಎಲ್ಲ ಕಾರಣಗಳಿಂದಾಗಿ ಮನೆಯ ಯುವಕರು ಕೆಲಸ ಅರಸಿ ಪರಸ್ಥಳಗಳಿಗೆ ಹೋಗಬೇಕಾಗಿದೆ. ಕಡಿಮೆ ಕೂಲಿಗೆ ದುಡಿಯಬೇಕಾಗಿದೆ. ಇಂಥ ಸಂದರ್ಭದಲ್ಲಿ ಪಲಿವಾಲ್ ಮಾಡಿದ ಯೋಜನೆಯಿಂದಾಗಿ ಪಿಪ್ಲಾಂತ್ರಿಯ ಜನ ಕೈತುಂಬಾ ಕೆಲಸ, ಹಣ, ನೀರು ನೆರಳಿನಿಂದ ಸಮೃದ್ಧವಾಗಿ ಜೀವಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಹುಟ್ಟು ಸಂಭ್ರಮವಾದರೆ, ಬದುಕು ಬಂಗಾರವಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? 
 

click me!