Explainer: ಏನಿದು ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ, ರಾಜ್ಯ ರಾಜಕಾರಣದಲ್ಲಿ ಯಾಕಿಷ್ಟು ಇಂಪಾರ್ಟೆಂಟ್‌!

By Santosh NaikFirst Published Oct 26, 2024, 8:39 PM IST
Highlights

ಬಹುಶಃ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ರಾಜಕಾರಣವನ್ನು ಫಾಲೋ ಮಾಡುತ್ತಿರುವ ವ್ಯಕ್ತಿಗಳಿಗೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಬಗ್ಗೆ ಅಷ್ಟಾಗಿ ತಿಳಿದಿರಲಿಕ್ಕಿಲ್ಲ. ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಪ್ರಕರಣ ಇದಾಗಿತ್ತು. ಅಷ್ಟಕ್ಕೂ ಈ ಕೇಸ್‌ನಲ್ಲಿ ಆಗಿದ್ದೇನು ಅನ್ನೋದರ ಫುಲ್‌ ಡೀಟೇಲ್ಸ್‌ ಇಲ್ಲಿದೆ.

ಬೆಂಗಳೂರು (ಅ.26): ಅದು 2009-10ರ ಕಾಲ. ಬೇಲೇಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ಜಪ್ತಿ ಮಾಡಿ ಇಟ್ಟಿದ್ದ ಅದಿರು ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಟ್ಟಿತು. ಕೇವಲ ನೂರಿನ್ನೂರು ಕೇಜಿಯಲ್ಲ. ಟನ್‌ಗಳಷ್ಟು ಅದಿರು ನಾಪತ್ತೆಯಾಗಿತ್ತು. ಈಗ ಇದೇ ಕೇಸ್‌ಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ದೋಷಿ ಎಂದು ಸ್ಥಳೀಯ ಜನಪ್ರತಿನಿಧಿ ನ್ಯಾಯಾಲಯ ತೀರ್ಪು ನೀಡಿದ್ದಲ್ಲದೆ, 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನೂ ವಿಧಿಸಿದೆ.ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸತೀಶ್‌ ಸೈಲ್‌, ಕಳ್ಳತನ, ಕ್ರಿಮಿನಲ್‌ ಸಂಚು ಹಾಗೂ ಮೋಸದಲ್ಲಿ ಭಾಗಿಯಾಗಿದ್ದಾರೆ ಎಂದು ಕೋರ್ಟ್‌ ತಿಳಿಸಿದೆ. ಇದರ ಬೆನ್ನಲ್ಲಿಯೇ 2 ಬಾರಿಯ ಶಾಸಕ ಸತೀಶ್‌ ಸೈಲ್‌ಗೆ ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ ಕೂಡ ಎದುರಾಗಿದೆ.ಒಟ್ಟಾರೆ ಸತೀಶ್‌ ಸೈಲ್‌ಗೆ ಪ್ರಕರಣದಲ್ಲಿ ಕೋರ್ಟ್‌ 9.36 ಕೋಟಿ ರೂಪಾಯಿ ದಂಡ ವಿಧಿಸಿದೆ.ಹಾಗಾದರೆ ಈ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಏನು? ರಾಜ್ಯ ರಾಜಕಾರಣದಲ್ಲಿ ಯಾಕಿಷ್ಟು ಇಂಪಾರ್ಟೆಂಟ್‌ ಎಲ್ಲಾ ವಿವಗಳು ಇಲ್ಲಿವೆ.

ಬೇಲೆಕೇರಿ ಬಂದರಿನಲ್ಲಿ ಜಪ್ತಿ ಮಾಡಲಾಗಿದ್ದ 250 ಕೋಟಿ ರೂ. ಮೌಲ್ಯದ ಅಕ್ರಮ ಅದಿರು ನಾಪತ್ತೆ ಪ್ರಕರಣ ಇದು. 14 ವರ್ಷಗಳ ನಂತರ ನ್ಯಾಯಾಲಯದಿಂದ ಪ್ರಕರಣದ ತೀರ್ಪು ಹೊರಬಿದ್ದಿದೆ. ಬಳ್ಳಾರಿ, ಹೊಸಪೇಟೆ, ಸಂಡೂರ್, ಹಾಗೂ ಚಿತ್ರದುರ್ಗಾ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರು ಚೀನಾಗೆ ಸಾಗಾಟವಾಗುತ್ತಿತ್ತು. ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಈ ಅದಿರು ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ, ಸರ್ಕಾರದ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ 2009 ಮಾರ್ಚ್ 20ರಂದು ದಾಳಿ ನಡೆಸಿತ್ತು. ಈ ವೇಳೆ 350 ಕೋಟಿ ರೂಪಾಯಿ ಮೌಲ್ಯದ 8.5 ಲಕ್ಷ ಮೆಟ್ರಿಕ್ ಟನ್ ಅದಿರು ವಶಪಡಿಸಿಕೊಂಡಿತ್ತು.

Latest Videos

ಒಂದೆರಡು ಕೆಜಿಯಲ್ಲಿ. ಇದ್ದಿದ್ದು ಬರೋಬ್ಬರಿ 8.5 ಲಕ್ಷ ಮೆಟ್ರಿಕ್‌ ಟನ್‌ ಅದಿರು. ಅರಣ್ಯ ಇಲಾಖೆಗೆ ಜಪ್ತಿ ಮಾಡಿರುವ ಅದಿರನ್ನು ಕಾಯ್ದುಕೊಳ್ಳುವ ಸ್ಥಳಾವಕಾಶ ಇದ್ದಿರಲಿಲ್ಲ. ಹಾಗಾಗಿ ಈ ಅದಿರನ್ನು ಕಾಯ್ದುಕೊಳ್ಳುವಂತೆ ಬಂದರು ಇಲಾಖೆಗೆ ಅರಣ್ಯ ಇಲಾಖೆ ಮನವಿ ಮಾಡಿತ್ತು. 

ವಶಪಡಿಸಿಕೊಂಡ ಅದಿರನ್ನು ಜೂನ್ 2ರಂದು ಮತ್ತೆ ಅರಣ್ಯ ಇಲಾಖೆ ಮತ್ತೊಮ್ಮೆ ಮೌಲ್ಯಮಾಪನ ನಡೆಸಿತ್ತು.ಅದಿರು ಜಪ್ತಿ ಮಾಡುವಾಗ 8.5 ಲಕ್ಷ ಮೆಟ್ರಿಕ್‌ ಟನ್‌ ಇದ್ದರೆ, ಮರು ಮೌಲ್ಯಮಾಪನದ ವೇಳೆ ಕೇವಲ 2 ಲಕ್ಷ ಮೆಟ್ರಿಕ್‌ ಟನ್‌ ಅದಿರು ಮಾತ್ರವೇ ಉಳಿಸಿತ್ತು. ಅಂದಾಜು 250 ಕೋಟಿ ರೂಪಾಯಿ ಮೌಲ್ಯದ ಅದಿರು ನಾಪತ್ತೆಯಾಗಿತ್ತು. ಸಿಟ್ಟಾಗಿದ್ದ ಅರಣ್ಯ ಇಲಾಖೆ, ಬಂದರು ಅಧಿಕಾರಿ ಹಾಗೂ ಅದಿರು ಕಂಪೆನಿಗಳ ಮೇಲೆ ದೂರು ದಾಖಲು ಮಾಡಿತ್ತು. ಅಕ್ರಮವೆಸಗಿದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ವರದಿ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸಿತ್ತು. ಲೋಕಾಯುಕ್ತ ವರದಿಯಿಂದಲೇ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರಾಜಸ್ವ ನಷ್ಟವಾಗಿರುವದು ಬೆಳಕಿಗೆ ಬಂದಿತ್ತು.

ಸ್ಪಂದಿಸದ ಸರ್ಕಾರ: ಲೋಕಾಯುಕ್ತರ ವರದಿಗೆ  ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಅದರ ಬದಲು, ಪ್ರಾಮಾಣಿಕ ಅಧಿಕಾರಿ ಡಿಎಫ್‌ಓ ಆರ್ ಗೋಕುಲ ಅವರ ಅಮಾನತ್ತಿಗೆ ಮುಂದಾಗಿತ್ತು. ಸರಕಾರದ ನಿರ್ಧಾರದಿಂದ ಬೇಸರಗೊಂಡಿದ್ದ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ರಾಜೀನಾಮೆ ನೀಡುವುದರೊಂದಿಗೆ ಪ್ರಕರಣದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಬೇಲೆಕೇರಿ ಅಕ್ರಮ ಅದಿರು ಪ್ರಕರಣವನ್ನೇ ಪ್ರಮುಖವಾಗಿಟ್ಟುಕೊಂಡು ಸಂತೋಷ ಹೆಗ್ಡೆ ರಾಜೀನಾಮೆ ನೀಡಿದ್ದರು. ಲೋಕಾಯುಕ್ತರು ರಾಜೀನಾಮೆ ವಾಪಾಸ್‌ ಪಡೆದುಕೊಳ್ಳಬೇಕು ಎಂದು ಸರ್ಕಾರ ಮನವೊಲಿಸಲು ಹರಸಾಹಸ ಮಾಡಿತು.

ಸಿಐಡಿಗೆ ವಹಿಸಿದ ಸರ್ಕಾರ: ಈ ಹಂತದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅಕ್ರಮ ಅದಿರು ನಾಪತ್ತೆ ಪ್ರಕರಣದ ಸಮಗ್ರ ತನಿಖೆಯನ್ನು 2010ರ ಜೂನ್ 23ರಂದು ಸಿಐಡಿಗೆ ವಹಿಸಿತು. ಸಿಐಡಿ ತನಿಖೆ ಆರಂಭಿಸಿದಾಗ 11 ಕಂಪೆನಿ ಹಾಗೂ ಓರ್ವ ಅಧಿಕಾರಿ ಮಾತ್ರ ಪ್ರಕರಣದಲ್ಲಿ ಕಾಣಿಸಿದ್ದರು. ತನಿಖೆ ಸಾಗುತ್ತಾ ಹೋದಂತೆ  ಇನ್ನೂ ಹೆಚ್ಚುವರಿ 45 ಕಂಪೆನಿಗಳು ಅಕ್ರಮದಲ್ಲಿ ಪಾಲ್ಗೊಂಡಿದ್ದ ಬಗ್ಗೆ ಬೆಳಕಿಗೆ ಬಂದಿತ್ತು. ಪ್ರಾಥಮಿಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಿಐಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು. ಸಿಐಡಿ ಎಸ್ಪಿ ಕೆ.ಪಿ. ಭೀಮಯ್ಯ, ಡಿವೈಎಸ್‌ಪಿ ಮುದ್ದು ಮಹಾದೇವಯ್ಯ ನೇತೃತ್ವದ ತಂಡ ಜಿಲ್ಲಾ ಸ್ಥಾನಿಕ ತನಿಖಾಧಿಕಾರಿಗಳಾಗಿ ತನಿಖೆ ನಡೆಸಿದ್ದರು. ಅಂಕೋಲಾ ತಾಲೂಕು ವ್ಯಾಪ್ತಿಯ ಅಂದಿನ ಸಿಪಿಐ ಶಿವಾನಂದ ಚಲವಾದಿಯಿಂದ ಹೆಚ್ಚಿನ ಮಾಹಿತಿ ಹಾಗೂ ಕಡತಗಳನ್ನು ಪಡೆದಿದ್ದರು. ಅದಿರು ವಶಪಡಿಸಿಕೊಂಡ ಸಂದರ್ಭ ಅದಾನಿ ಎಂಟರ್‌ ಪ್ರೈಸೆಸ್ ಕಂಪೆನಿಯ ಜಾಗದಲ್ಲಿ ಹಲವು ಅದಿರು ಗುಡ್ಡಗಳಿತ್ತು. 31 ರಪ್ತುದಾರ ಕಂಪೆನಿಗಳ ಅದಿರಿನ ಗುಡ್ಡ ಮತ್ತು 3 ಕಚ್ಚಾ ಅದಿರಿನ ಗುಡ್ಡ ಸೇರಿ 34 ಗುಡ್ಡಗಳಿತ್ತು.

ಬೇಲೇಕೇರಿ ಅದಿರು ನಾಪತ್ತೆ ಕೇಸ್: ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ

ಸಿಇಸಿಯಿಂದಲೂ ತನಿಖೆ: ಸೈಲ್ ಮಾಲಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿಯ ಜಾಗದಲ್ಲಿ 16 ರಪ್ತುದಾರ ಕಂಪೆನಿಗೆ ಸೇರಿದ 16 ಗುಡ್ಡಗಳಿದ್ದವು. ಸಾಲಗಾಂವಕರ ಮೈನಿಂಗ್ ಜಾಗಕ್ಕೆ ಸೇರಿದ ಜಾಗದಲ್ಲಿ 4 ರಪ್ತು ಕಂಪೆನಿಯ 4 ಗುಡ್ಡ ಮತ್ತು ರಾಜ್‌ಮಹಲ್ ಸಿಲ್ಕ್ ಜಾಗದಲ್ಲಿ 2 ಕಬ್ಬಿಣದ ಅದಿರು ಗುಡ್ಡಗಳಿತ್ತು. ಆದರೆ, ಮಾರ್ಚ್ 20 ರಿಂದ ಮೇ 31ರ ಒಳಗೆ ಈ ಕಂಪೆನಿಗಳು ನ್ಯಾಯಾಲಯದ ಅನುಮತಿ ಪಡೆದು ಬಹುತೇಕ ಅದಿರು ರಫ್ತು ಮಾಡಿದ್ದವು. ಅಂತಿಮವಾಗಿ ಸಿಐಡಿ ತಂಡ ಪರಿಶೀಲಿಸಿದಾಗ 8.5 ಲಕ್ಷ ಮೆ.ಟನ್ ಅದಿರಿನಲ್ಲಿ ಕೇವಲ 2 ಲಕ್ಷ ಮೆ. ಟನ್ ಅದಿರು ಉಳಿದಿತ್ತು. ಸಿಐಡಿ ತನಿಖೆ ನಡೆಸುತ್ತಿರುವಾಗಲೇ ಸಿಇಸಿ ಕೂಡಾ ಎಂಟ್ರಿಕೊಟ್ಟು ಪ್ರತ್ಯೇಕ ತನಿಖೆ ನಡೆಸಿತ್ತು. ಸಿಐಡಿ ನಡೆಸಿದ ತನಿಖೆ ಸಮರ್ಪಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಿಇಸಿ ಮನವಿ ಸಲ್ಲಿಸಿತ್ತು. ಅದಿರು ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿಇಸಿ ಸುಪ್ರೀಂ ಕೋರ್ಟ್‌ಗೆ 2010ರ ಎ. 23ರಂದು ಮನವಿ ಮಾಡಿತ್ತು.

ಕಾರವಾರ ಬಂದರಿನಲ್ಲಿದ್ದ 38 ಸಾವಿರ ಮೆ. ಟನ್ ಕಬ್ಬಿಣ ಅದಿರಿಗೆ ವಾರಸುದಾರರೇ ಇಲ್ಲ: 13 ವರ್ಷದ ಬಳಿಕ ವಿಲೇವಾರಿ

ಸಿಬಿಐ ಎಂಟ್ರಿ: ಸೆ. 6ರಂದು ಸಿಇಸಿ ಸದಸ್ಯ ಜೀವರಾಜ್ ಈ ಬಗ್ಗೆ ವರದಿ ನೀಡಿದ್ದರು. 2011ರ ಸೆ. 7ರಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಅಕ್ರಮ ಅದಿರು ನಾಪತ್ತೆ ಪ್ರಕರಣ ಸಂಬಂಧಿಸಿ ಸಿಬಿಐ ಹಲವರನ್ನು ಬಂಧಿಸಿತ್ತು. ಸಚಿವರಾಗಿದ್ದ ಆನಂದ್ ಸಿಂಗ್ ಶಾಸಕರಾಗಿದ್ದ ಸತೀಶ ಸೈಲ್, ಜನಾರ್ಧನ ರೆಡ್ಡಿ, ನಾಗೇಂದ್ರ ಹಾಗೂ ಅಧಿಕಾರಿಗಳು ಸೇರಿದಂತೆ ಒಟ್ಟು 11 ಆರೋಪಿಗಳು ಜೈಲಿಗೆ ಹೋಗಿದ್ದರು. ಒಂದೂವರೆ ವರ್ಷಗಳ ಬಳಿಕ ಜಾಮೀನಿನ ಮೇಲೆ ಆರೋಪಿಗಳು ಬಿಡುಗಡೆಯಾಗಿದ್ದರು. ಆದರೆ, ಜನಾರ್ದನ ರೆಡ್ಡಿ 3 ವರ್ಷಗಳ ನಂತರ ಬಿಡುಗಡೆಯಾಗಿದ್ದರು.

click me!