
ಉಡುಪಿ (ಮಾ. 27): ದಕ್ಷಿಣ ಭಾರತದ ಪ್ರಸಿದ್ದ ಶಕ್ತಿ ಪೀಠ ಕೊಲ್ಲೂರು (Kolluru) ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ಟಿಪ್ಪು ನೆನಪಿನಲ್ಲಿ ನಡೆಯುವ ಸಲಾಂ ಮಂಗಳಾರತಿಯ (Salam Mangalarati) ಹೆಸರನ್ನು ಬದಲಿಸಿ, ಸಲಾಂ ಶಬ್ದವನ್ನು ಕೈಬಿಟ್ಟು ಕೇವಲ ದೇವರ ಹೆಸರಲ್ಲಿ ಆರತಿ ನಡೆಸಬೇಕೆಂಬ ಕೂಗು ಕೇಳಿಬಂದಿದೆ.
ಕೊಲ್ಲೂರು ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ದೇವಾಲಯಕ್ಕೆ ಭೇಟಿ ಕೊಟ್ಟಿರುವ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ನೇತೃತ್ವದಲ್ಲಿ ಈ ಕುರಿತು ಶನಿವಾರ ಮನವಿ ಸಲ್ಲಿಸಲಾಗಿದೆ.ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಸಂಧ್ಯಾ ರಮೇಶ್ ಹಾಗೂ ದೇವಳದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯ್ಕ್ ಮನವಿಯನ್ನು ಸ್ವೀಕರಿಸಿದ್ದಾರೆ.
ಮನವಿ ಕೊಟ್ಟ ಬಳಿಕ ಶರಣ್ ಪಂಪವೆಲ್ ಹೇಳಿದ್ದೇನು?
ಕ್ರೂರಿ, ಮತಾಂಧ, ಕನ್ನಡ ಮತ್ತು ಹಿಂದೂ ವಿರೋಧಿ ಟಿಪ್ಪು ಸಾವಿರಾರು ಹಿಂದೂಗಳ ನರಮೇಧ ನಡೆಸಿದ್ದಾನೆ. ನೂರಾರು ದೇವಸ್ಥಾನಗಳು ಟಿಪ್ಪುವಿನಿಂದ ಧ್ವಂಸಗೊಂಡಿದೆ. ದೇವಿ ಮೂಕಾಂಬಿಕೆಗೆ ಸಲಾಂ ಹೆಸರಿನಲ್ಲಿ ಮಂಗಳಾರತಿಯಾಗುತ್ತಿರುವುದು ಖೇದಕರ. ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಆಗುತ್ತದೆ. ಸಲಾಂ ಹೆಸರಲ್ಲಿ ಮಂಗಳಾರತಿ ನಡೆಯುವುದು ಗುಲಾಮಗಿರಿಯ ಸಂಕೇತ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕು, ಸಲಾಂ ಹೆಸರನ್ನು ತೆಗೆದು ದೇವರ ಹೆಸರಲ್ಲಿ ಮಂಗಳಾರತಿ ಮಾಡಿ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳಿಗೆ ಮನವಿ ಸಲ್ಲಿಸುವ ವೇಳೆ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬೈಂದೂರು ಪ್ರಖಂಡ ಅಧ್ಯಕ್ಷ ಜಗದೀಶ ಕೊಲ್ಲೂರು ಉಪಸ್ಥಿತರಿದ್ದರು. ಮನವಿಯ ಪ್ರತಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು, ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ಕಳುಹಿಸಲಾಗಿದೆ.
ಸಲಾಂ ಮಂಗಳಾರತಿಯ ಹಿನ್ನಲೆ
ಟಿಪ್ಪು ಆಗಮಿಸಿದ ನೆನಪಿನಲ್ಲಿ ಇಂದಿಗೂ ನಿತ್ಯ ಕೊಲ್ಲೂರು ದೇವಾಲಯದಲ್ಲಿ ಸಲಾಂ ಮಂಗಳಾರತಿ ನಡೆಯುತ್ತಿದೆ. ಶ್ರೀ ಕ್ಷೇತ್ರಕ್ಕೆ 1765ರಿಂದ 1795ರ ನಡುವೆ ಟಿಪ್ಪು ಭೇಟಿ ನೀಡಿ, ಪೂಜೆ ಸಲ್ಲಿಸಿದ್ದ. ದೇವಿ ದರ್ಶನ ಮಾಡುವಾಗ ಮೂಲ ವಿಗ್ರಹಗಳು ಟಿಪ್ಪುನಿಗೆ ಸ್ಪಷ್ಟವಾಗಿ ಕಾಣಿಸಿರಲಿಲ್ಲವಂತೆ. ಅಂತೂ ದರ್ಶನ ಮಾಡಿದ ಬಳಿಕ ದೇವಿಯನ್ನು ಕಣ್ತುಂಬಿಕೊಂಡು, ಟಿಪ್ಪು ಬಣ್ಣಿಸಿದ ಎನ್ನುವ ಮೌಖಿಕ ಇತಿಹಾಸ ಅರ್ಚಕರ ಮೂಲಕ ಇಂದಿಗೂ ಚಾಲ್ತಿಯಲ್ಲಿದೆ.
ನಂತರ ತನ್ನ ಹೆಸರಲ್ಲಿ ದೇವರಿಗೆ ಪ್ರತಿದಿನ ಆರತಿ ನಡೆಸುವಂತೆ ಆದೇಶಿಸಿದ್ದನು. ಅಂದಿನಿಂದ ಇಂದಿನವರೆಗೆ ದೇವಳದಲ್ಲಿ ಇದು ಪಾಲನೆಯಾಗುತ್ತಿದೆ. ಪ್ರತಿ ದಿನ ರಾತ್ರಿ 8 ರಿಂದ 8:15ರ ನಡುವೆ ಪರಿವಾರ ದೇವತೆಗಳ ಪೂಜೆ ಬಳಿಕ ನಡೆಯುವ ಮಂಗಳಾರತಿ (ಸುತ್ತು ಸಲಾಂ) ಪೂಜೆಗೆ ಸಲಾಂ ಮಂಗಳಾರತಿ ಎನ್ನುವ ಹೆಸರು ಉಳಿದಿದೆ.
ಕಟ್ಟಿಗೆ ಪಾಠಕರು ಧ್ವಜಸ್ತಂಭದ ಬಳಿ ಬಂದು ಸ್ತುತಿ ಮಾಡಿದ ಬಳಿಕ ದೇವರಿಗೆ ಒಂದು ಮಂಗಳಾರತಿ (ಸಲಾಂ ಪೂಜೆ) ಮಾಡುವವರನ್ನು ಸಲಾಂ ಅಡಿಗಳು ಎಂದೇ ಕರೆಯಲಾಗುತ್ತಿದೆ. ಅರ್ಚಕರ ಮೂಲಕ ಬಂದ ಪರಂಪರೆ ಈಗಲೂ ಮುಂದುವರಿಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ