30 ಮಂದಿಗೆ ಜಾನಪದ ಅಕಾಡಮಿ ಪ್ರಶಸ್ತಿ; ಇಬ್ಬರಿಗೆ ಒಲಿದ ಜಾನಪದ ತಜ್ಞ ಪ್ರಶಸ್ತಿ

By Kannadaprabha NewsFirst Published Jan 5, 2021, 9:32 AM IST
Highlights

30 ಮಂದಿಗೆ ಜಾನಪದ ಅಕಾಡೆಮಿ ಪ್ರಶಸ್ತಿ | ದಕ್ಷಿಣ ಕನ್ನಡದ ಡಾ. ಗಾಯತ್ರಿ ನಾವಡ, ಕಲಬುರ್ಗಿಯ ಡಾ. ಬಸವರಾಜು ಸಬರದಗೆ ಜಾನಪದ ತಜ್ಞ ಪ್ರಶಸ್ತಿ | ಚಾಮರಾಜನಗರದಲ್ಲಿ ಮುಂದಿನ ತಿಂಗಳು ಪ್ರಶಸ್ತಿ ಪ್ರದಾನ ಸಮಾರಂಭ 

ಚಾಮರಾಜನಗರ (ಜ. 05): ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜನಪದ ಕಲಾವಿದರಿಗೆ ಹಾಗೂ ರಾಜ್ಯದ ಇಬ್ಬರು ಜಾನಪದ ತಜ್ಞರಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಘೋಷಣೆ ಮಾಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ 30 ಮಂದಿ ಜನಪದ ಕಲಾವಿದರು ಮತ್ತು ಇಬ್ಬರು ತಜ್ಞರನ್ನು 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1980 ರಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಅಕಾಡೆಮಿ ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಜನಪದ ಕಲಾವಿದರಿಗೆ ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ 1980 ರಿಂದ 2019ರ ಸಾಲಿನವರೆಗೆ 963 ಜಾನಪದ ಕಲಾವಿದರು, 105 ವಿದ್ವಾಂಸರು ಸೇರಿದಂತೆ ಅಕಾಡೆಮಿ ಒಟ್ಟಾರೆ 1068 ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಚೀನಾ ಅಧ್ಯಕ್ಷ ಜಿನ್ ಪಿಂಗ್ ಜೊತೆ ಸಂಘರ್ಷ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿಂದ ನಾಪತ್ತೆ

ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ .25 ಸಾವಿರ, ತಜ್ಞರಿಗೆ .50 ಸಾವಿರ ಪ್ರಶಸ್ತಿ ಮೊತ್ತವಾಗಿರುತ್ತದೆ. ಪ್ರಶಸ್ತಿ ಜೊತೆಗೆ ಪುರಸ್ಕೃತರಿಗೆ ಸ್ಮರಣಿಕೆ ಶಾಲು ಹಾರ ಫಲತಾಂಬೂಲ ನೀಡಿ ಗೌರವಿಸಲಾಗುತ್ತದೆ ಎಂದರು.

ಇದುವರೆಗೂ ಚಾಮರಾಜನಗರ ಜಿಲ್ಲೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಯಾವುದೇ ಕಾರ್ಯಕ್ರಮ ನೀಡದಿರುವುದರಿಂದ ಇಲ್ಲೇ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆ ಜಾನಪದ ಅಕಾಡೆಮಿ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚಾಮರಾಜನಗರ ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲಾಧಿ​ಕಾರಿ ಡಾ. ಎಂ. ಆರ್‌.ರವಿ ಮಾತನಾಡಿ, ಜಾನಪದ ಕಲೆಗೂ ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧ ಇದೆ. ಚಾಮರಾಜನಗರ ಜಿಲ್ಲೆ ಜಾನಪದ ತವರೂರು ಇಲ್ಲಿ ಅಕಾಡೆಮಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಜಿಲ್ಲೆಯ ಜನತೆಯಿಂದ ಅಭಿನಂದನೆಗಳು ಎಂದರು.

ಚಾಮರಾಜನಗರ ಜಿಲ್ಲೆಯ ಭಾಷೆಯ ಸೊಗಡು, ಭಾಷೆಯ ವೈವಿಧ್ಯತೆ ಅಪಾರವಾದದ್ದು, ಭಾಷೆ ಕಲೆ ಎಲ್ಲದರಲ್ಲೂ ಅಗಾಧವಾದ ಸಂಪತ್ತನ್ನು ಜಿಲ್ಲೆ ಹೊಂದಿದ್ದು, ಅಗಾಧ ಸಂಪತ್ತನ್ನು ಹೊಂದಿರುವ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸುತ್ತಿರುವ ಐತಿಹಾಸಿಕ ತೀರ್ಮಾನವಾಗಿದೆ ಎಂದರು.

ನಮ್ಮ ಲಸಿಕೆ ಫೈಜರ್‌ಗಿಂತ ಕಮ್ಮಿ ಏನಿಲ್ಲ, ನಮ್ಮನ್ನೇಕೆ ಟರ್ಗೆಟ್ ಮಾಡಲಾಗುತ್ತಿದೆ?

2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಎಂ.ಕೆ.ಸಿದ್ದಯ್ಯ, ಬೆಂಗಳೂರು (ಜಾನಪದ), ಹೊನ್ನ ಗಂಗಮ್ಮ, ಬೆಂಗಳೂರು ಗ್ರಾಮಾಂತರ (ಸೋಬಾನೆ ಪದ), ತಿಮ್ಮಯ್ಯ ತಂದೆ, ರಾಮನಗರ (ತಮಟೆ ವಾದನ), ಕೆ.ಎನ್‌.ಚೆಂಗಪ್ಪ ಕೋಲಾರ ಭಜನೆ (ತತ್ವಪದ), ನಾರಾಯಣಪ್ಪ ಚಿಕ್ಕಬಳ್ಳಾಪುರ (ಕೀಲುಕುದುರೆ), ಸಿ.ವಿ. ವೀರಣ್ಣ ತುಮಕೂರು (ವೀರಭದ್ರನ ಕುಣಿತ), ಭಾಗ್ಯಮ್ಮ ದಾವಣಗೆರೆ (ಸೋಬಾನೆ ಹಾಡುಗಾರಿಕೆ), ಕೆಂಚಮ್ಮ ಚಿತ್ರದುರ್ಗ (ಮದುವೆ ಹಾಡು), ಕೆ.ಯುವರಾಜು ಶಿವಮೊಗ್ಗ (ಜಾನಪದ ಹಾಡುಗಾರಿಕೆ), ಕುಮಾರಸ್ವಾಮಿ ಮೈಸೂರು (ಕಂಸಾಳೆ), ಭೂಮಿಗೌಡ ಮಂಡ್ಯ (ಕೋಲಾಟ), ಗ್ಯಾರಂಟಿ ರಾಮಣ್ಣ ಹಾಸನ (ಹಾಡುಗಾರಿಕೆ), ಎಂ.ಸಿ.ಭೋಗಪ್ಪ ಚಿಕ್ಕಮಗಳೂರು (ಚೌಡಿಕೆ ಪದ), ಗೋಪಾಲಕೃಷ್ಣ ಬಂಗೇರಾ ಮಧ್ವ ದಕ್ಷಿಣ ಕನ್ನಡ (ಬೊಂಬೆ ಕುಣಿತ), ರಮೇಶ್‌ ಕಲ್ಮಾಡಿ ಉಡುಪಿ (ಕರಗ ಕೋಲಾಟ), ಕೆ.ಕೆ.ಪೊನ್ನಪ್ಪ ಕೊಡಗು (ಬೋಳೋ ಪಾಟ್‌), ಹೊನ್ನಮ್ಮ ಚಾಮರಾಜನಗರ (ಸೋಬಾನೆ ಪದ), ಮುತ್ತಪ್ಪ ಅಲ್ಲಪ್ಪ ಸವದಿ ಬೆಳಗಾವಿ (ತತ್ವಪದ), ಮಲ್ಲೇಶಪ್ಪ ಪಕೀರಪ್ಪ ತಡಸದ ಧಾರವಾಡ (ತತ್ವಪದ), ಸುರೇಶ ರಾಮಚಂದ್ರ ಜೋಶಿ ವಿಜಯಪುರ (ಡೊಳ್ಳಿನ ಹಾಡುಗಾರಿಕೆ), ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ ಬಾಗಲಕೋಟೆ (ತತ್ವಪದ ಮತ್ತು ಭಜನೆ), ಸಹದೇವಪ್ಪ ಈರಪ್ಪ ನಾಡಗೇರ ಉತ್ತರ ಕನ್ನಡ (ಲಾವಣಿ ಪದ), ಬಸವರಾಜ ತಿರುಕಪ್ಪ ಶಿಗ್ಗಾವಿ ಹಾವೇರಿ (ತತ್ವಪದ), ಮುತ್ತಪ್ಪ ರೇವಣಪ್ಪ ರೋಣದ ಗದಗ (ಪುರವಂತಿಕೆ), ಸಾಯಬಣ್ಣ ಕಲಬುರಗಿ (ಹಲಗೆ ವಾದನ), ವೈಜಿನಾಥಯ್ಯ ಸಂಗಯ್ಯ ಸ್ವಾಮಿ ಬೀದರ್‌ (ಚಕ್ರಿ ಭಜನೆ), ಜಂಬಣ್ಣ ರಾಯಚೂರು (ಹಗಲುವೇಷ), ತಿಪ್ಪಣ್ಣ ಅಂಬಾಜಿ ಸುಗತೆಕರ ಕೊಪ್ಪಳ (ಗೋಂದಲಿಗರು), ಗೋಮಪ್ಪ ಬಳ್ಳಾರಿ (ಗೋಂದಳಿ ಪದ), ಗೋಗಿ ಬಸವ ಲಿಂಗಮ್ಮ ಯಾದಗಿರಿ (ಮದುವೆ ಹಾಡು).

ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರು:

ಡಾ.ಗಾಯತ್ರಿ ನಾವಡ ದಕ್ಷಿಣ ಕನ್ನಡ ಜಿಲ್ಲೆ,

ಡಾ.ಬಸವರಾಜು ಸಬರದ ಕಲಬುರಗಿ ಜಿಲ್ಲೆ ಅವರು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 

click me!