Indonesia Masters : ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಸೆನ್‌ಗೆ ಆಘಾತ, ಭಾರತದ ಹೋರಾಟ ಅಂತ್ಯ

By Kannadaprabha NewsFirst Published Jun 11, 2022, 8:42 AM IST
Highlights

* ಇಂಡೋನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯ

* ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡ ಲಕ್ಷ್ಯ ಸೆನ್, ಪಿ ವಿ ಸಿಂಧು

* ಥಾಯ್ಲೆಂಡ್‌ನ ರಚನಾಕ್‌ ಇಂಟನಾನ್‌ ಎದುರು ಮುಗ್ಗರಿಸಿದ ಮಾಜಿ ಚಾಂಪಿಯನ್ ಸಿಂಧು

ಜಕಾರ್ತ(ಜೂ.11): ಇಂಡೋನೇಷ್ಯಾ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Indonesia Masters Super 500) ಭಾರತದ ಸವಾಲು ಅಂತ್ಯಗೊಂಡಿದೆ. ಶುಕ್ರವಾರ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು (PV Sindhu) ಮತ್ತು ಲಕ್ಷ್ಯ ಸೆನ್‌ (Lakshya Sen) ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಸೆನ್‌ ವಿಶ್ವ ನಂ.4 ಚೈನೀಸ್‌ ತೈಪೆಯ ಚೊಯು ಚೆನ್‌ ವಿರುದ್ಧ 16-21, 21-12, 14-21 ಗೇಮ್‌ಗಳಲ್ಲಿ ಪರಾಭವಗೊಂಡರು. 

ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಲಕ್ಷ್ಯ ಸೆನ್ ಎರಡನೇ ಗೇಮ್‌ನಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಚೈನೀಸ್ ತೈಪೆಯ ಚೊಯು ಚೆನ್ ಪ್ರಾಬಲ್ಯ ಮೆರೆಯುವ ಮೂಲಕ ಸೆಮೀಸ್ ಹಾದಿಯನ್ನು ಖಚಿತ ಪಡಿಸಿಕೊಂಡರು. ಲಕ್ಷ್ಯ ಸೆನ್‌ ಥಾಮಸ್‌ ಕಪ್‌ ಲೀಗ್‌ ಹಂತದಲ್ಲೂ ಚೆನ್‌ ವಿರುದ್ಧ ಸೋತಿದ್ದರು. 

ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಥಾಯ್ಲೆಂಡ್‌ನ ರಚನಾಕ್‌ ಇಂಟನಾನ್‌ ವಿರುದ್ಧ 12-21, 10-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಒಟ್ಟಾರೆ 13 ಮುಖಾಮುಖಿಗಳಲ್ಲಿ ಸಿಂಧು, ರಚನಾಕ್‌ ವಿರುದ್ಧ 9 ಬಾರಿ ಸೋತಿದ್ದಾರೆ. ಮಾಜಿ ಚಾಂಪಿಯನ್ ಸಿಂಧು ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ಥಾಯ್ಲೆಂಡ್ ಆಟಗಾರ್ತಿ ಕ್ವಾರ್ಟರ್ ಫೈನಲ್‌ನಲ್ಲಿ ಅಧಿಕಾರಯುತ ಗೆಲುವು ದಾಖಲಿಸಿದರು.

ಫಿಬಾ ಅ-16 ಏಷ್ಯನ್‌ ಕೂಟ: ರಾಜ್ಯದ ಕುಶಾಲ್‌ ಭಾರತ ತಂಡಕ್ಕೆ ಆಯ್ಕೆ

ನವದೆಹಲಿ: ಕತಾರ್‌ನಲ್ಲಿ ನಡೆಯಲಿರುವ ಫಿಬಾ ಅಂಡರ್‌-16 ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಭಾರತ ತಂಡದಲ್ಲಿ ಕರ್ನಾಟಕದ ಕುಶಾಲ್‌ ಗೌಡ ಅವರು ಸ್ಥಾನ ಪಡೆದಿದ್ದಾರೆ. 12 ಮಂದಿಯ ಭಾರತ ತಂಡವನ್ನು ರಾಜಸ್ಥಾನದ ಲೋಕೇಂದ್ರ ಸಿಂಗ್‌ ಮುನ್ನಡೆಸಲಿದ್ದು, ಶುಕ್ರವಾರ ಕತಾರ್‌ಗೆ ಪ್ರಯಾಣ ಬೆಳೆಸಿತು. ಕೂಟ ಜೂನ್‌ 12ರಿಂದ 19ರ ವರೆಗೆ ನಡೆಯಲಿದ್ದು, ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜೂ.12ಕ್ಕೆ ಆಸ್ಪ್ರೇಲಿಯಾ, 13ಕ್ಕೆ ಬಹರೇನ್‌, 14ಕ್ಕೆ ಕತಾರ್‌ ವಿರುದ್ಧ ಆಡಲಿದೆ.

ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹೊರಬಿದ್ದ ಮೇರಿ

ನವದೆಹಲಿ: ಭಾರತದ ತಾರಾ ಬಾಕ್ಸರ್‌ ಮೇರಿ ಕೋಮ್‌ ಅವರ ಕಾಮನ್‌ವೆಲ್ತ್‌ ಗೇಮ್ಸ್‌ ಕನಸು ಭಗ್ನಗೊಂಡಿದೆ. ಶುಕ್ರವಾರ ಅವರು ಗಾಯದ ಕಾರಣ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನಿಂದ ಅರ್ಧದಲ್ಲೇ ಹಿಂದೆ ಸರಿದರು. ಟ್ರಯಲ್ಸ್‌ನಲ್ಲಿ 48 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಮೇರಿ, ಹರಿಯಾಣದ ನೀತು ವಿರುದ್ಧದ ಸೆಣಸಾಟದ ವೇಳೆ ಗಾಯಗೊಂಡರು. ಬಳಿಕ ಚೇತರಿಸಿದಂತೆ ಕಂಡರೂ ದೇಹದ ಮೇಲೆ ನಿಯಂತ್ರಣ ಸಾಧಿಸಲಾಗದೆ ಹಿಂದೆ ಸರಿದರು. ಪಂದ್ಯ ನಿಲ್ಲಿಸಿದ ರೆಫ್ರಿ ನೀತು ಅವರನ್ನು ವಿಜೇತೆ ಎಂದು ಘೋಷಿಸಿದರು. ಮೇರಿ 2018ರ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದರು.

ನಾರ್ವೆ ಚೆಸ್‌: ಆನಂದ್‌ ಪ್ರಶಸ್ತಿ ಕನಸಿಗೆ ಹಿನ್ನಡೆ

ಸ್ಟಾವೆಂಜರ್‌(ನಾರ್ವೆ): 5 ಬಾರಿ ವಿಶ್ವ ಚಾಂಪಿಯನ್‌ ಭಾರತದ ವಿಶ್ವನಾಥನ್‌ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲುವ ಸಾಧ್ಯತೆ ಕ್ಷೀಣಿಸಿದೆ. ಗುರುವಾರ ರಾತ್ತಿ ನಡೆದ 8ನೇ ಸುತ್ತಿನಲ್ಲಿ ಅವರು ಅಜರ್‌ಬೈಜಾನ್‌ನ ಶಕ್ರಿಯಾರ್‌ ಮಮೆದ್ಯರೊವ್‌ ವಿರುದ್ಧ 22 ನಡೆಗಳ ಪಂದ್ಯದಲ್ಲಿ ಸೋಲನುಭವಿಸಿದರು. ಇದರೊಂದಿಗೆ 13 ಅಂಕಗಳನ್ನು ಹೊಂದಿರುವ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. 

ಇಂಡೋನೇಷ್ಯಾ ಮಾಸ್ಟ​ರ್ಸ್‌: ಪಿವಿ ಸಿಂಧು, ಲಕ್ಷ್ಯ ಸೆನ್‌ ಕ್ವಾರ್ಟರ್‌ಗೆ

ಟೂರ್ನಿಯಲ್ಲಿ ಇನ್ನೊಂದು ಸುತ್ತಿನ ಹಣಾಹಣಿ ಬಾಕಿ ಇದ್ದು, ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾಲ್‌ರ್‍ಸನ್‌ ಗೆಲುವಿನ ಓಟ ಮುಂದುವರಿಸಿ 15 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರು 8ನೇ ಸುತ್ತಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಶಿರ್‌ ವಿರುದ್ಧ ಗೆದ್ದರು. 14.5 ಅಂಕ ಹೊಂದಿರುವ ಮಮೆದ್ಯರೊವ್‌ 2ನೇ ಸ್ಥಾನದಲ್ಲಿದ್ದಾರೆ.

click me!