ಟ್ವೀಟ್ ಮೂಲಕ ಅಸಮಧಾನ ಹೊರಹಾಕಿದ್ದ ದೆಹಲಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮೈದಾನದಲ್ಲೇ ಗರಂ ಆಗಿದ್ದಾರೆ. ರಣಜಿ ಟೂರ್ನಿ ಆಡುತ್ತಿರುವ ಗೌತಮ್ ಗಂಭೀರ್ ಅಂಪೈರ್ ವಿರುದ್ದ ಸಿಟ್ಟಾಗಿದ್ದೇಕೆ? ಇಲ್ಲಿದೆ ವಿವರ.
ದೆಹಲಿ(ನ.12): ದೆಹಲಿ ಮಾಲಿನ್ಯ ಕುರಿತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ರಿಂಗ್ ಬೆಲ್ ಬಾರಿಸಿದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ವಿರುದ್ಧ ತಿರುಗಿಬಿದ್ದಿದ್ದ ದೆಹಲಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಅಂಪೈರ್ ವಿರುದ್ದ ಅಸಮಧಾನಗೊಂಡಿದ್ದಾರೆ.
ಹಿಮಾಚಲ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಗೌತಮ್ ಗಂಭೀರ್ 44 ರನ್ ಸಿಡಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. 17ನೇ ಓವರ್ನಲ್ಲಿ ಮಯಾಂಕ್ ದಾಗರ್ ಎಸೆತವನ್ನ ಗಂಭೀರ್ ಪ್ಯಾಡ್ಗೆ ಬಡಿದು ಶಾರ್ಟ್ ಫೀಲ್ಡರ್ ಪ್ರಿಯಾಂಶು ಖಂಡೂರಿ ಕೈಸೇರಿತು. ಆದರೆ ಅಂಪೈರ್ ಇದನ್ನ ಔಟ್ ಎಂದು ತೀರ್ಪು ನೀಡಿದರು.
ಅಂಪೈರ್ ತೀರ್ಪು ಗಂಭೀರ್ ಪಿತ್ತ ನೆತ್ತಿಗೇರಿಸಿತು. ಕೈಸನ್ನೆ ಮೂಲಕ ಅಸಮಧಾನ ವ್ಯಕ್ತಪಡಿಸಿದ ಗಂಭೀರ್ ಪೆವಿಲಿಯನ್ ತೆರಳೋ ವೇಳೆ ಮತ್ತೊಮ್ಮೆ ಅಂಪೈರ್ ದಿಟ್ಟಿಸಿ ನೋಡಿ ಒಲ್ಲದ ಮನಸ್ಸಿನಿಂದ ಮೈದಾನದಿಂದ ತೆರಳಿದರು.
ಈ ಬಾರಿಯ ರಣಜಿ ಟೂರ್ನಿ ಆರಂಭಕ್ಕೂ ಮುನ್ನ ಯುವಕರಿಗೆ ಅವಕಾಶ ನೀಡೋ ನಿಟ್ಟಿನಲ್ಲಿ ಗಂಭೀರ್ ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ನಿತೀಶ್ ರಾಣಾ ದೆಹಲಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.