ಬೆಂಗಳೂರು ವಿವಿಯ ಪಿಎಚ್‌ಡಿ ಪದವೀಧರ ಇಸ್ರೋ 'ಸೂರ್ಯಯಾನ' ಪ್ರಾಜೆಕ್ಟ್‌ ಡೈರೆಕ್ಟರ್‌!

By Santosh NaikFirst Published Sep 2, 2023, 11:25 AM IST
Highlights

ಹಿರಿಯ ಸೌರ ವಿಜ್ಞಾನಿ ಡಾ. ಶಂಕರಸುಬ್ರಮಣಿಯನ್ ಕೆ ಅವರನ್ನು ಇಸ್ರೋ ಆದಿತ್ಯ ಎಲ್1 ಮಿಷನ್‌ನ ಪ್ರಧಾನ ವಿಜ್ಞಾನಿಯಾಗಿ ನೇಮಿಸಿದೆ. ಅವರು ಈಗಾಗಲೇ ಚಂದ್ರಯಾನ-1, ಚಂದ್ರಯಾನ-2 ಮತ್ತು ಆಸ್ಟ್ರೋಸ್ಯಾಟ್ ಮಿಷನ್‌ಗಳಿಗೆ ಕೊಡುಗೆ ನೀಡಿದ್ದಾರೆ.

ಬೆಂಗಳೂರು (ಸೆ.2): ಭಾರತದ ಚಂದ್ರಯಾನ-3 ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್‌ ಆದ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ತನ್ನ ಮೊದಲ ಸೌರ ಮಿಷನ್ 'ಆದಿತ್ಯ-ಎಲ್ 1' ಅನ್ನು ಶನಿವಾರ ಶ್ರೀಹರಿಕೋಟಾದಿಂದ ನಭಕ್ಕೆ ಹಾರಿಸಲಿದೆ.  ಈ ಮಿಷನ್ ಸೂರ್ಯನನ್ನು ಅಧ್ಯಯನ ಮಾಡುವುದರ ಮೇಲೆ ಕೇಂದ್ರೀಕೃತವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ನಡೆಯಲಿದೆ. ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ರಾಕೆಟ್  ಬಳಸಿಕೊಂಡು ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗುತ್ತದೆ. ತನ್ನ ಮೊಟ್ಟಮೊದಲ ಸೌರಯಾನಕ್ಕೆ ಇಸ್ರೋ ಹಿರಿಯ ವಿಜ್ಞಾನಿ ಡಾ.ಶಂಕರಸುಬ್ರಮಣಿಯನ್ ಕೆ ಅವರನ್ನು ಮಿಷನ್‌ಗೆ ಪ್ರಧಾನ ವಿಜ್ಞಾನಿಯಾಗಿ ನೇಮಿಸಿದೆ.

ಯಾರಿವರು ಡಾ ಶಂಕರಸುಬ್ರಮಣಿಯನ್ ಕೆ ?: ಡಾ ಶಂಕರಸುಬ್ರಮಣಿಯನ್ ಕೆ ಬೆಂಗಳೂರಿನ ಯು ಆರ್ ರಾವ್ ಸ್ಯಾಟಲೈಟ್ ಸೆಂಟರ್ (ಯುಆರ್‌ಎಸ್‌ಸಿ) ನಲ್ಲಿ ಸೌರ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ಅನುಭವಿ ವಿಜ್ಞಾನಿ. ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಭೌತಶಾಸ್ತ್ರದಲ್ಲಿ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದರು. ಅವರ ಸಂಶೋಧನೆಯು ಸೌರ ಮ್ಯಾಗ್ನೆಟಿಕ್ ಫೀಲ್ಡ್, ಆಪ್ಟಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್‌ನಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.

ಡಾ ಶಂಕರಸುಬ್ರಮಣ್ಯನ್ ಕೆ ಅವರು ಆಸ್ಟ್ರೋಸ್ಯಾಟ್, ಚಂದ್ರಯಾನ-1, ಮತ್ತು ಚಂದ್ರಯಾನ-2 ಸೇರಿದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿವಿಧ ಯೋಜನೆಗಳಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಪ್ರಸ್ತುತ, ಅವರು ಯುಆರ್‌ಎಸ್‌ಸಿಯಲ್ಲಿ ಬಾಹ್ಯಾಕಾಶ ಖಗೋಳವಿಜ್ಞಾನ ಗ್ರೂಪ್‌ಅನ್ನು (SAG) ಮುನ್ನಡೆಸುತ್ತಿದ್ದಾರೆ. ಇದೇ ಗ್ರೂಪ್‌, ಆದಿತ್ಯ-ಎಲ್‌1, ಮುಂಬರುವ ಎಕ್ಸ್‌ಪೋಟ್ಯಾಟ್‌ ಮತ್ತು ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್‌ಗಾಗಿ ಪೇಲೋಡ್‌ಗಳು ಹಾಗೂ ವೈಜ್ಞಾನಿಕ ಸಾಧನಗಳನ್ನು ನಿರ್ಮಾಣ ಮಾಡುತ್ತದೆ. ಅದರೊಂದಿಗೆ, ಡಾ. ಶಂಕರಸುಬ್ರಮಣಿಯನ್ ಕೆ ಅವರು ಆದಿತ್ಯ-ಎಲ್1 ನೌಕೆಯಲ್ಲಿ ಎಕ್ಸ್-ರೇ ಪೇಲೋಡ್‌ಗಳಲ್ಲಿ ಒಂದಕ್ಕೆ ಪ್ರಧಾನ ಅಧಿಕಾರಿಯ ಪಾತ್ರವನ್ನು ಹೊಂದಿದ್ದಾರೆ. ಅವರು ಆದಿತ್ಯ-L1 ಸೈನ್ಸ್ ವರ್ಕಿಂಗ್ ಗ್ರೂಪ್‌ನ ಮುಖ್ಯಸ್ಥರಾಗಿದ್ದು, ಇದು ಸೌರ ಸಂಶೋಧನೆಯಲ್ಲಿ ತೊಡಗಿರುವ ಹಲವಾರು ಭಾರತೀಯ ಸಂಶೋಧನಾ ಸಂಸ್ಥೆಗಳ ತಜ್ಞರನ್ನು ಒಳಗೊಂಡಿರುವ ಸಹಯೋಗದ ಪ್ರಯತ್ನವಾಗಿದೆ.

ಆದಿತ್ಯ ಎಲ್‌1 ಸೌರ ಪರಿಶೋಧನೆ ಸೂರ್ಯನ ಅಧ್ಯಯನ ಮಾಡಲು ಭಾರತ ಕಳಿಸಲಿರುವ ಮೊದಲ ನೌಕೆ ಎನಿಸಿದೆ. ಇಸ್ರೋ ಹಾಗೂ ಭಾರತದ ಸಂಶೋಧನಾ ಸಂಸ್ಥೆಗಳಿಂದ ಈ ನೌಕೆ ಹಾಗೂ ಇದರ ಪೇಲೋಡ್‌ಗಳನ್ನಿ ಅಭಿವೃದ್ಧಿ ಮಾಡಲಾಗಿದೆ. ಸೂರ್ಯನನ್ನು ಆಳವಾಗಿ ಅಧ್ಯಯನ ಮಾಡುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ. 'ಆದಿತ್ಯ' ಎಂಬ ಹೆಸರು ಸಂಸ್ಕೃತದಲ್ಲಿ ಸೂರ್ಯನನ್ನು ಸೂಚಿಸುತ್ತದೆ, ಆದರೆ 'L1' ಸೂರ್ಯ-ಭೂಮಿಯ ವ್ಯವಸ್ಥೆಯೊಳಗೆ ನೆಲೆಗೊಂಡಿರುವ ಲಾಗ್ರೇಂಜ್ ಪಾಯಿಂಟ್ 1 ಎಂಬ ಮಹತ್ವದ ಸ್ಥಾನವನ್ನು ಸೂಚಿಸುತ್ತದೆ. ನಭಕ್ಕೆ ಉಡಾವಣೆಗೊಂಡ ಬಳಿಕ ಆದಿತ್ಯ ಎಲ್‌1 ಭೂಮಿ ಮತ್ತು ಸೂರ್ಯನ ನಡುವೆ ಇರುವ ಎಲ್‌1 ಬಿಂದುವಿನಲ್ಲಿರುವ ಇರುವ ಹಾಲೋ ಕಕ್ಷಕೆಯಲ್ಲಿ ಇರಿಸಲಾಗುತ್ತದೆ. ಈ ಸ್ಥಳದಿಂದ ಗ್ರಹಣಗಳಂತಹ ಯಾವುದೇ ಅಡೆತಡೆಗಳಿಲ್ಲದೆ ಸೂರ್ಯನ ನಡವಳಿಕೆಯನ್ನು ನಿರಂತರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ADITYA-L1: ಭೂಮಿಯ ಕಕ್ಷೆಯಲ್ಲಿ 16 ದಿನ ಇರಲಿದೆ ಆದಿತ್ಯ, ಆ ಬಳಿಕ ಸೂರ್ಯನತ್ತ!

ISRO ಪ್ರಕಾರ, ಬಾಹ್ಯಾಕಾಶ ನೌಕೆಯು ದ್ಯುತಿಗೋಳ ಮತ್ತು ಕ್ರೋಮೋಸ್ಪಿಯರ್ ಸೇರಿದಂತೆ ಸೂರ್ಯನ ವಿವಿಧ ಪದರಗಳನ್ನು ಅಧ್ಯಯನ ಮಾಡಲು ಸುಧಾರಿತ ಸಾಧನಗಳನ್ನು ಹೊಂದಿದೆ.  ಈ ಉದ್ದೇಶಕ್ಕಾಗಿ ಎಲೆಕ್ಟ್ರೋಮ್ಯಾಗ್ನೆಟಿಕ್ ಮತ್ತು ಪಾರ್ಟಿಕಲ್ ಡಿಟೆಕ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ನಾಲ್ಕು ಪೇಲೋಡ್‌ಗಳು L1 ನ ವಿಶಿಷ್ಟ ದೃಷ್ಟಿಕೋನದಿಂದ ನೇರವಾಗಿ ಸೂರ್ಯನನ್ನು ವೀಕ್ಷಿಸುತ್ತವೆ, ಆದರೆ ಉಳಿದ ಮೂರು ಪೇಲೋಡ್‌ಗಳು ಈ ಲಾಗ್ರೇಂಜ್ ಪಾಯಿಂಟ್‌ನಲ್ಲಿ ಕಣಗಳು ಮತ್ತು ಕ್ಷೇತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತವೆ, ಸೌರ ವಿದ್ಯಮಾನಗಳ ಬಗ್ಗೆ ನಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ.

‘ಆದಿತ್ಯ ಎಲ್‌-1’ ಉಪಗ್ರಹ ಉಡಾವಣೆಗೆ ಕ್ಷಣಗಣನೆ: ನಿಮಿಷಕ್ಕೆ 1ರಂತೆ ನಿತ್ಯ 1140 ಫೋಟೋ ಕಳಿಸುವ ಸಾಮರ್ಥ್ಯ

click me!