ಹಿರಿಯರ ಸೇವೆ ಹೊರಗಿನ ಮಂದಿ; ಕೇವಲ ನೋಡಿಕೊಳ್ಳುವವರು ಬೇಕೋ? ದಾದಿಯರು ಬೇಕೋ?

By Kannadaprabha NewsFirst Published Dec 11, 2022, 2:26 PM IST
Highlights

ಕೇವಲ ನೋಡಿಕೊಳ್ಳವವರು ಬೇಕೋ? ದಾದಿಯರು ಬೇಕೋ? ಆ ಅಂಶದ ಮೇಲೆ ತಿಂಗಳ ವೆಚ್ಚ ನಿರ್ಧಾರವಾಗುತ್ತದೆ. ಹೀಗೆ ಬರುವ ಆರೈಕೆದಾರರಿಗೆ ಮನೆಯಲ್ಲಿಯೇ ಉಳಿಯಲು ಜಾಗ, ತಿಂಡಿ-ಊಟದ ವ್ಯವಸ್ಥೆಯನ್ನು ಕಲ್ಪಿಸುಬೇಕು. ಬರುವ ಆರೈಕೆದಾರರು 8 ಗಂಟೆ ಸೇವೆ ಅಥವಾ 24 ಗಂಟೆ ಸೇವೆಗೆ ಲಭ್ಯವಿರುತ್ತಾರೆ.

ಡಾ.ಪದ್ಮಿನಿ ನಾಗರಾಜು, ಬೆಂಗಳೂರು

ಗಂಡ ಹೆಂಡಿರಿಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಇಬ್ಬರೂ ನಡುವಯಸ್ಸಿಗೆ ಬಂದಿದ್ದಾರೆ. ಕೆಲಸ ಬಿಡುವಂತಿಲ್ಲ. ಮನೆ ಸಾಲ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಹೊರೆಯಿದೆ.

ಆದರೆ ಮನೆಯಲ್ಲಿ ಹಿರಿಯರಿದ್ದಾರೆ. ಅಪ್ಪ ಅಮ್ಮ ಇಬ್ಬರಿಗೂ ಎಪ್ಪತ್ತೈದು ದಾಟಿದೆ. ಸುಸ್ತಾಗಿದ್ದಾರೆ. ಆರೋಗ್ಯ ಹದಗೆಡುತ್ತಾ ಇದೆ.

ಅವರನ್ನು ನೋಡಿಕೊಳ್ಳುವವರು ಯಾರು?

ಹೋಮ್‌ ಹೆಲ್ತ್‌ ಕೇರ್‌ ಶುರುವಾಗಿದ್ದೇ ಅದಕ್ಕೆ. ಶುಶ್ರೂಷೆಗಾಗಿ ಮನೆಗೆ ಭೇಟಿ ನೀಡುವುದು ಇಂಗ್ಲೆಂಡ್‌ನಲ್ಲಿ 1800ರ ಮಧ್ಯಭಾಗದಲ್ಲಿ ಪ್ರಾರಂಭವಾಯಿತು. ಫ್ಲಾರೆನ್ಸ್‌ ನೈಟಿಂಗೇಲ್‌ನ ಸಹಾಯದಿಂದ ಶ್ರೀಮಂತ ಉದ್ಯಮಿ ಮತ್ತು ಪರೋಪಕಾರಿಯಾಗಿದ್ದ ವಿಲಿಯಂ ರಾಥ್‌ಬೋನ್‌ ಅವರು ತಮ್ಮ ಮನೆಗಳಲ್ಲಿ ಅಸ್ವಸ್ಥ ಬಡವರಿಗೆ ಸಹಾಯ ಮಾಡಲು ಭೇಟಿ ನೀಡುವ ದಾದಿಯರಿಗೆ ತರಬೇತಿ ನೀಡಲು ಶಾಲೆಯನ್ನು ಸ್ಥಾಪಿಸಿದರು.

ಈ ಉದ್ಯಮ ಇಂದು ಎಷ್ಟುವೃತ್ತಿಪರವಾಗಿದೆ ಎಂದರೆ ಮನೆಯಲ್ಲಿಯೇ ಐಸಿಯು ಸೇವೆ, ಕ್ರಿಟಿಕಲ್‌ ಕೇರ್‌, ಕೊನೆಯ ದಿನಗಳ ಆರೈಕೆ, ಹಿರಿಯರ ಜೊತೆಯಲ್ಲಿ ನಿಂತು ಸೇವೆ ನೀಡುವುದು, ಕ್ಯಾನ್ಸರ್‌ ರೋಗಿಗಳ ಶುಶ್ರೂಷೆ, ಮನೆಯಲ್ಲಿಯೇ ಡಯಾಲಿಸಿಸ್‌ ಸೇವೆ ಮುಂತಾದ ಸೇವೆಯಲ್ಲದೆ, ಬಾಣಂತಿ ಮತ್ತು ಮಗುವಿನ ಆರೈಕೆಗೂ ವೃತ್ತಿಪರ ಸಿಬ್ಬಂದಿಗಳನ್ನು ಈ ಸಂಸ್ಥೆಗಳು ಒದಗಿಸುತ್ತಿವೆ.

ಸಂತೋಷದ ಹಾಡು 175 ಸಲ ಕೇಳಿದ್ರೆ ದುಃಖ ಹಾಡನ್ನು 800 ಸಲ ಕೇಳುತ್ತಾರೆ; ಅಧ್ಯಯನ ಬಗ್ಗೆ ಕೆಎಸ್‌ ಪವಿತ್ರ ಮಾತು

ಬೆಂಗಳೂರಿನಲ್ಲಿ ನಾನು ಅಪ್ಪನನ್ನು ಹಾಗೂ ತೊಡೆ ಮೂಳೆ ಮುರಿದುಕೊಂಡು ಅಪರೇಶನ್‌ ಮಾಡಿಸಿಕೊಂಡ ಅಮ್ಮನಿಗಾಗಿ ಕೇರ್‌ ಟೇಕರಗಳನ್ನು ಹುಡುಕಲು ಪ್ರಾರಂಭಿಸಿದೆ. ಗೂಗಲ್‌ನಲ್ಲಿ ಸರ್ಚ ಮಾಡಿದರೆ ಸಾವಿರಾರು ಸಂಸ್ಥೆಗಳಿವೆ. ಅಂತಹ ಏಜನ್ಸ್ಸಿಗಳಲ್ಲಿ ವಿಚಾರಿಸಿದಾಗ ತಿಳಿದು ಬಂದದ್ದು ಏನೆಂದರೆ, ಇಂತಹ ಸಂಸ್ಥೆಗಳಿಗೆ ಡಿಫಾಸಿಟ್‌ನ್ನು 3000 ಸಾವಿರದಿಂದ 20 ಸಾವಿರದವರೆಗೆ ಇಡಬೇಕು. ಇದನ್ನು ಮರುಪಾವತಿಸಲಾಗುವುದಿಲ್ಲ. ಒಂದು ವರ್ಷದವರೆಗೆ ಆ ಸಂಸ್ಥೆಯ ಸೇವೆ ಪಡೆಯಬಹುದು. ರೋಗಿಯ ಸ್ಥಿತಿಯ ಮೇಲೆ ತಿಂಗಳ ವೆಚ್ಚ 5000-60000 ಸಾವಿರದವರೆಗೂ ನಿರ್ಧರಿಸುತ್ತಾರೆ. ಕೇವಲ ನೋಡಿಕೊಳ್ಳುವವರು ಬೇಕೋ? ದಾದಿಯರು ಬೇಕೋ? ಈ ಅಂಶದ ಮೇಲೆ ತಿಂಗಳ ವೆಚ್ಚ ನಿರ್ಧಾರವಾಗುತ್ತದೆ. ಹೀಗೆ ಬರುವ ಆರೈಕೆದಾರರಿಗೆ ಮನೆಯಲ್ಲಿಯೇ ಉಳಿಯಲು ಜಾಗ, ತಿಂಡಿ-ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು. ಬರುವ ಆರೈಕೆದಾರರು 8 ಗಂಟೆ ಸೇವೆ ಅಥವಾ 24 ಗಂಟೆ ಸೇವೆಗೆ ಲಭ್ಯವಿರುತ್ತಾರೆ. ಅವರ ಸೇವೆ ಇಷ್ಟವಾಗದಿದ್ದರೆ ಸಂಬಂಧಪಟ್ಟಸಂಸ್ಥೆ ಬೇರೆಯವರನ್ನು ಬದಲಾಯಿಸಿ ಕಳುಹಿಸುತ್ತದೆ. ಇತ್ತೀಚೆಗೆ ಗಂಟೆಗಿಷ್ಟುಎಂದೂ ಫಿಕ್ಸ್‌ ಮಾಡಿದ್ದಾರೆ.

ಮಾನವ ಸಂಪನ್ಮೂಲವನ್ನೇ ನೆಚ್ಚಿಕೊಂಡಿರುವ ಈ ಉದ್ಯಮದಲ್ಲಿ ಹೆಚ್ಚಿನ ಲಾಭವಿರುವುದನ್ನು ಮನಗಂಡೇ ಅನೇಕ ಸಂಸ್ಥೆಗಳು ಪ್ರಾರಂಭವಾಗುತ್ತಿವೆ. ಈ ಕೆಲಸಕ್ಕೆ ಬರುವವರಿಗೂ ಊಟ-ತಿಂಡಿ ಖರ್ಚಿರುವುದಿಲ್ಲ. ಮನೆ ಬಾಡಿಗೆ ಕಟ್ಟಬೇಕಿಲ್ಲ. ದುಡಿಯುವ ಹಣವೆಲ್ಲ ಉಳಿಯುತ್ತದೆಂಬ ಭರವಸೆಯಿಂದ ಹೆಚ್ಚಿನ ಯುವಕ-ಯುವತಿಯರು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕೆಲ ಶುಶ್ರೂಷಕರು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಂತೆಯೇ, ಮನೆಯವರನ್ನು ವಂಚಿಸಿ ಕಳ್ಳತನ ಮಾಡಿ ಪರಾರಿಯಾಗಿರುವುದೂ ಇದೆ. ಆದ್ದರಿಂದ ಅರ್ಹ ಏಜನ್ಸಿಗಳಿಂದಲೇ ಕೇರ್‌ ಟೇಕರ್‌ಗಳನ್ನು ನೇಮಿಸಿಕೊಳ್ಳಬೇಕು. ಇಲ್ಲವೇ ಪರಿಚಯಸ್ಥರು ನೇಮಿಸಿಕೊಂಡು ಸಲಹೆ ನೀಡುವ ಏಜನ್ಸಿಗಳನ್ನೂ ನಂಬಬಹುದು.

ಬೆಂಗಳೂರು ತನ್ನ ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತಿದೆ... ಬೆಚ್ಚಿ ಬೀಳಿಸುತ್ತಿದೆ ವರದಿ

ಒಟ್ಟಿನಲ್ಲಿ ಯಾರನ್ನೇ ನೇಮಿಸಿಕೊಂಡರೂ, ನೋಡಿಕೊಂಡರೂ ತಮ್ಮ ಭಾವನಾತ್ಮಕ ಸಂಬಂಧ, ಒಡನಾಟ, ಕುಟುಂಬದವರಷ್ಟುಬರುವುದಿಲ್ಲ ಎಂಬುವುದು ನಿಜ. ಆದರೆ ಬದಲಾಗುತ್ತಿರುವ ಸಮಾಜ, ಕೌಟುಂಬಿಕ ವಿಘಟನೆಗಳ ಹಿನ್ನೆಲೆಯಲ್ಲಿ ಇಂತಹ ವ್ಯವಸ್ಥೆ ಅನಿವಾರ್ಯ. ಇಂತಹ ನಿಸ್ವಾರ್ಥಸೇವೆ ನೀಡುವ ಕೇರ್‌ ಟೇಕರಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುವುದೊಂದೆ ಮಾರ್ಗ.

click me!