ತವರು ಕ್ಷೇತ್ರ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ಸಿಎಂ ಸಕಲ ಯತ್ನ!

By Kannadaprabha NewsFirst Published Apr 15, 2024, 10:59 AM IST
Highlights

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶತಾಯ ಗತಾಯ ಕಮಲವನ್ನು ಮಣಿಸಿ, ತನ್ನ ವಶಕ್ಕೆ ಪಡೆಯಲು ಕೈ ಹರಸಾಹಸ ಪಡುತ್ತಿದೆ. ಇದೇ ವೇಳೆ, ತವರು ಜಿಲ್ಲೆಯಲ್ಲಿ ಕಳೆದ ಎರಡು ಅವಧಿಯಿಂದ ಕೈಬಿಟ್ಟಿರುವ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯ ವಿಷಯವಾಗಿದೆ.

ಅಂಶಿ ಪ್ರಸನ್ನಕುಮಾರ್/ ವಿಘ್ನೇಶ್ ಭೂತನಕಾಡು

ಮೈಸೂರು/ಮಡಿಕೇರಿ (ಏ.15): ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶತಾಯ ಗತಾಯ ಕಮಲವನ್ನು ಮಣಿಸಿ, ತನ್ನ ವಶಕ್ಕೆ ಪಡೆಯಲು ಕೈ ಹರಸಾಹಸ ಪಡುತ್ತಿದೆ. ಇದೇ ವೇಳೆ, ತವರು ಜಿಲ್ಲೆಯಲ್ಲಿ ಕಳೆದ ಎರಡು ಅವಧಿಯಿಂದ ಕೈಬಿಟ್ಟಿರುವ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯ ವಿಷಯವಾಗಿದೆ.

ಬಿಜೆಪಿ, ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನೀಡದೆ, ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಿದೆ. 1991ರಲ್ಲಿ ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಬಿಜೆಪಿ ಅಭ್ಯರ್ಥಿಯಾಗಿ ನಿಂತು ಸೋತಿದ್ದರು. 33 ವರ್ಷಗಳ ನಂತರ ಯದುವಂಶಸ್ಥರಿಗೆ ಟಿಕೆಟ್ ನೀಡಿರುವ ಬಿಜೆಪಿ, ಈ ಭಾಗದಲ್ಲಿ ರಾಜವಂಶಸ್ಥರ ಮೇಲಿರುವ ಗೌರವದ ಲಾಭ ಪಡೆದು ಮತ್ತೊಮ್ಮೆ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ 47 ವರ್ಷಗಳ ನಂತರ ಒಕ್ಕಲಿಗ ಜನಾಂಗಕ್ಕೆ ಸೇರಿದ ಎಂ.ಲಕ್ಷ್ಮಣ ಅವರಿಗೆ ಟಿಕೆಟ್ ನೀಡಿದೆ.

ಒಕ್ಕಲಿಗರ ಸಭೆಯಲ್ಲಿ ಮುಖ್ಯಮಂತ್ರಿ ಆಗುವ ಬಗ್ಗೆ ಪರೋಕ್ಷ ಸುಳಿವು ನೀಡಿದ ಡಿಕೆ ಶಿವಕುಮಾರ!

ಪ್ರಚಾರ ವೈಖರಿ:

ಎರಡೂ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಬಿಜೆಪಿಗೆ ಮೈಸೂರು ನಗರ ಹಾಗೂ ಕೊಡಗಿನಲ್ಲಿ ಪ್ರಬಲ ನೆಲೆ ಇದೆ. ಆದರೆ, ಚಾಮುಂಡೇಶ್ವರಿ, ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ಬಲಿಷ್ಠವಾಗಿರುವ ಮೈತ್ರಿ ಪಕ್ಷವಾದ ಜೆಡಿಎಸ್ ಕೊಡಿಸುವ ಮತಗಳನ್ನು ನೆಚ್ಚಿಕೊಂಡಿದೆ.

ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಪ್ರತಾಪ್‌ ಸಿಂಹಗೆ ಟಿಕೆಟ್‌ ನಿರಾಕರಿಸಿ, ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್‌ ಒಕ್ಕಲಿಗಾಸ್ತ್ರ ಪ್ರಯೋಗಿಸುತ್ತಿದೆ. ತನ್ನ ಬೆನ್ನಿಗೆ ನಿಂತಿರುವ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರ ಸಾಂಪ್ರದಾಯಿಕ ಮತಗಳ ಜೊತೆಗೆ ಒಕ್ಕಲಿಗ ಮತಗಳನ್ನು ವಿಭಜನೆ ಮಾಡುವ ತಂತ್ರ ಅದರದು. ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ ಎಂಬ ಅಚಲವಾದ ವಿಶ್ವಾಸ ಹೊಂದಿದೆ.

ಜಾತಿ ಲೆಕ್ಕಾಚಾರ:

ಒಕ್ಕಲಿಗರು 4 ಲಕ್ಷ, ಮುಸ್ಲಿಮರು 2.80 ಲಕ್ಷ, ಲಿಂಗಾಯಿತರು 1.80 ಲಕ್ಷ, ಕುರುಬರು 1.80 ಲಕ್ಷ, ಪ.ಜಾತಿಯವರು 3.25 ಲಕ್ಷ, ಪ.ಪಂಗದವರು 1.85 ಲಕ್ಷ, ಇತರ ಹಿಂದುಳಿದವರು 2.30 ಲಕ್ಷ, ಕೊಡವರು 1 ಲಕ್ಷ, ಬ್ರಾಹ್ಮಣರು 1.10 ಲಕ್ಷದಷ್ಟಿದ್ದಾರೆ.

ಕ್ಷೇತ್ರದ ಕಿರು ಪರಿಚಯ:

ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 13 ರಲ್ಲಿ ಕಾಂಗ್ರೆಸ್ ಹಾಗೂ 4 ಬಾರಿ ಬಿಜೆಪಿ ಜಯಭೇರಿ ಬಾರಿಸಿವೆ. ಆದರೆ, ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಜನತಾ ಪರಿವಾರ ಈವರೆಗೆ ಇಲ್ಲಿ ಗೆದ್ದಿಲ್ಲ.1952 ರಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯ (ಕೆಎಂಪಿಪಿ) ಎಂ.ಎಸ್.ಗುರುಪಾದಸ್ವಾಮಿ ಗೆದ್ದಿದ್ದನ್ನು ಹೊರತುಪಡಿಸಿದರೆ 1996 ರವರೆಗೂ ಮೈಸೂರು ಕಾಂಗ್ರೆಸ್ಸಿನ ಭದ್ರಕೋಟೆ. ಮೈಸೂರನ್ನು ಆಳಿದ ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984ರಲ್ಲಿ ರಾಜಕಾರಣ ಪ್ರವೇಶ ಮಾಡಿದ ನಂತರ ‘ರಾಜರ ಕೋಟೆ’ಯಾಗಿತ್ತು. ಆದರೆ, 1998, 2004, 2014, 2019ರಲ್ಲಿ ಬಿಜೆಪಿ, ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ, ‘ಕಮಲ’ ಅರಳಿಸಿದೆ.

ಅಭ್ಯರ್ಥಿಗಳ ಕಿರು ಪರಿಚಯ:

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು ಯದುವಂಶದ 27ನೇ ಉತ್ತರಾಧಿಕಾರಿ. ಮೂಲ ಹೆಸರು ಯದುವೀರ್ ಗೋಪಾಲರಾಜ್ ಅರಸ್. ಹುಟ್ಟಿದ್ದು 1992 ರ ಮಾ.24. ತಂದೆ ಸ್ವರೂಪ್ ಆನಂದ್ ಗೋಪಾಲರಾಜ್ ಅರಸ್, ತಾಯಿ ತ್ರಿಪುರಸುಂದರಿ ದೇವಿ (ಲೀಲಾ). ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ ಹತ್ತನೇ ತರಗತಿ, ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ 12ನೇ ತರಗತಿ, ಬಳಿಕ ಅಮೆರಿಕದ ಬೋಸ್ಟನ್ ಮ್ಯಾಸಚೂಸೆಟ್ಸ್ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಪದವಿ ಓದಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ ಯದುವೀರ ಅವರನ್ನು ಪ್ರಮೋದಾದೇವಿ ಒಡೆಯರ್ ದತ್ತು ಸ್ವೀಕರಿಸಿದರು. ರಾಜಸ್ಥಾನದ ಡುಂಗರ್ಪುರ್ ರಾಜವಂಶಸ್ಥರಾದ ತ್ರಿಷಿಕಾ ಕುಮಾರಿ ಅವರೊಂದಿಗೆ ವಿವಾಹ ನೆರವೇರಿಸಿದರು. ಈ ದಂಪತಿಗೆ ಪುತ್ರ ಆದ್ಯವೀರ್ ನರಸಿಂಹರಾಜ ಒಡೆಯರ್ ಇದ್ದಾರೆ.

ಎಂ. ಲಕ್ಷ್ಮಣ:

ಬಿ.ಇ ಪದವೀಧರರು. ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ದಳವಾಯಿ ಶಾಲಾ ಕಟ್ಟಡದಲ್ಲಿದ್ದ ಕರ್ನಾಟಕ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಲ್ಲಿ ಪ್ರಾಂಶುಪಾಲರಾಗಿದ್ದರು. ನಂತರ, ಮೈಸೂರು ಪ್ರಜ್ಞಾವಂತ ನಾಗರಿಕರ ಒಕ್ಕೂಟ [ಎಸಿಐಸಿಎಂ] ಸ್ಥಾಪಿಸಿದ್ದರು. ಮೈಸೂರು ಅಜೆಂಡಾ ಟಾಸ್ಕ್ ಫೋರ್ಸ್ [ಎಂಎಟಿಎಫ್] ಸದಸ್ಯರಾಗಿದ್ದರು. ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಪಕ್ಷೇತರರಾಗಿ, ದಕ್ಷಿಣ ಪದವೀಧರ ಹಾಗೂ ಶಿಕ್ಷಕರ ಶಿಕ್ಷಕರಿಂದ ಒಟ್ಟು ಮೂರು ಬಾರಿ [ಒಮ್ಮೆ ಪಕ್ಷೇತರ, ಎರಡು ಬಾರಿ ಕಾಂಗ್ರೆಸ್] ಅಭ್ಯರ್ಥಿಯಾಗಿ ಸೋತಿದ್ದಾರೆ. ನಂತರ, ಕಾಂಗ್ರೆಸ್ ಸೇರ್ಪಡೆಯಾದರು. ಪ್ರಸ್ತುತ ಕೆಪಿಸಿಸಿ ವಕ್ತಾರರು.

ಎಂ. ಲಕ್ಷ್ಮಣ, ಸುನಿಲ್ ಬೋಸ್ ಗೆ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಬೆಂಬಲ

ಮತದಾರರು:

ಒಟ್ಟು- 20,72,337

  • ಪುರುಷರು- 10,17,120
  • ಮಹಿಳೆಯರು- 10,55,035
  • ಇತರರು- 182

2019ರ ಫಲಿತಾಂಶ:

  • ಪ್ರತಾಪ್ ಸಿಂಹ [ಬಿಜೆಪಿ]- 6,88,974
  • ಸಿ.ಎಚ್. ವಿಜಯಶಂಕರ್ [ಕಾಂಗ್ರೆಸ್]- 5,50,327
  • ಅಂತರ- 1,38,647
click me!