
ಶಿವಾನಂದ ಮಲ್ಲನಗೌಡರ
ಬ್ಯಾಡಗಿ (ಮೇ.7) : ಈ ಬಾರಿ ಬ್ಯಾಡಗಿ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲ ತಂತ್ರ ಪ್ರಯೋಗಿಸುತ್ತಿದ್ದರೆ, ಕಾಂಗ್ರೆಸ್ನ ಬಸವರಾಜ ಶಿವಣ್ಣವರ ಈ ಬಾರಿ ಗೆದ್ದು ಸಾಮರ್ಥ್ಯ ಸಾಬೀತಿಗೆ ಮುಂದಾಗಿದ್ದಾರೆ.
ಬಿಜೆಪಿ(BJP)ಯಿಂದ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮರು ಆಯ್ಕೆ ಬಯಸಿದ್ದರೆ, ಮಾಜಿ ಶಾಸಕ ಬಸವರಾಜ ಶಿವಣ್ಣನವರ ಎರಡನೇ ಬಾರಿ ಅವಕಾಶಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಪೈಪೋಟಿಗಿಳಿದಿದ್ದಾರೆ. ವಿರೂಪಾಕ್ಷಪ್ಪ ಲಿಂಗಾಯತ (ಪಂಚಮಸಾಲಿ) ಸಮುದಾಯ ಮತ್ತು ಬಸವರಾಜ ಶಿವಣ್ಣನವರ ಕುರುಬ ಸಮುದಾಯಕ್ಕೆ ಸೇರಿದವರು.
ಜಾರಕಿಹೊಳಿ ಸಾಹೇಬ್ರು ಜನರ ಕೈಗೆ ಸಿಗುವುದು ವಿರಳ : ಅಮಿತ್ ಶಾ ಲೇವಡಿ
ಪರಿಶಿಷ್ಟಜಾತಿಗೆ ಮೀಸಲು ಕ್ಷೇತ್ರವಾಗಿದ್ದ ಬ್ಯಾಡಗಿ 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡ ಬಳಿಕ ಪ್ರಸ್ತುತ ಇದು ನಾಲ್ಕನೇ ಸಾರ್ವತ್ರಿಕ ಚುನಾವಣೆ. ಇದರಲ್ಲಿ 2 ಬಾರಿ ಬಿಜೆಪಿ, ಒಂದು ಬಾರಿ ಕಾಂಗ್ರೆಸ್ ವಿಜಯಶಾಲಿಯಾಗಿವೆ.
ಶಿವಣ್ಣನವರಗೆ ಮಿಶ್ರಫಲ:
ಒಮ್ಮೆ ಸೋತು ಒಮ್ಮೆ ಗೆದ್ದ ಬಸವರಾಜ ಶಿವಣ್ಣನವರ 3ನೇ ಬಾರಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಅನುಭವಿ ರಾಜಕಾರಣಿ ಎಂಬ ಹೆಗ್ಗಳಿಕೆ ಪಡೆದಿರುವ ಅವರು ಜನತಾದಳದ ಸರ್ಕಾರ ಹಾಗೂ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಮಂತ್ರಿಮಂಡಲದಲ್ಲಿ ಇಂಧನ ಮತ್ತು ಪರಿಸರ ಖಾತೆ ಸಚಿವರಾಗಿದ್ದರು. ರಾಜಕಾರಣದ ಎಲ್ಲ ಪಟ್ಟುಗಳನ್ನು ಕಲಿತಿರುವ ಶಿವಣ್ಣನವರ ಸಂಘಟನೆಯಲ್ಲಿ ಬಹಳ ಮುಂದು. 2008ರ ಮೊದಲ ಅವಕಾಶದಲ್ಲಿ ಸೋತರೂ ಸಹ ಛಲಬಿಡದ ಶಿವಣ್ಣನವರ 2013 ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಬಿಜೆಪಿಯ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಗೆಲುವಿಗೆ ಸಹಕರಿಸಬಹುದು ಎಂಬ ಲೆಕ್ಕಾಚಾರ ಅವರದು.
ಅಭಿವೃದ್ಧಿಯೇ ಶ್ರೀರಕ್ಷೆ:
ವಿರೂಪಾಕ್ಷಪ್ಪ ಬಳ್ಳಾರಿ ಮೊದಲ ಬಾರಿ ಶಾಸಕರಾದರೂ ಸಹ ಕೇವಲ ಮೂರುವರೆ ವರ್ಷದ ಅವಧಿಯಲ್ಲಿ . 2500 ಕೋಟಿ ಅನುದಾನ ಬ್ಯಾಡಗಿ ಮತಕ್ಷೇತ್ರ ಅಭಿವೃದ್ಧಿಗೆ ದೊರೆತಿದೆ. ತಮ್ಮ ಸ್ವಗ್ರಾಮ ಮೋಟೆಬೆನ್ನೂರಿನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಗಿತಗೊಳಿಸುವ ಮೂಲಕ ರೈತರ ಹಿತಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದ ಲ್ಲದೇ . 459 ಕೋಟಿ ವೆಚ್ಚದಲ್ಲಿ ಆಣೂರು ಮತ್ತು ಬುಡಪನಹಳ್ಳಿ ಏತನೀರಾವರಿ ಯೋಜನೆಗಳ ಅನುಷ್ಠಾನ, ಎಸ್ಸಿ ಮತ್ತು ಎಸ್ಟಿಮೀಸಲಾತಿ ಪ್ರಮಾಣ ಹೆಚ್ಚಳ ಮತ್ತು ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಇತ್ಯಾದಿ ಅಂಶಗಳು ಬಿಜೆಪಿ ಗೆಲುವಿಗೆ ಸಹಕರಿಸುವ ವಿಶ್ವಾಸದಲ್ಲಿ ಕಮಲ ಪಡೆಯಿದೆ.
ಒಳೇಟಿನ ಭಯ:
ಸದರಿ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿದ್ದು ಕುರುಬ, ಮುಸ್ಲಿಂ, ಎಸ್ಸಿ, ಎಸ್ಟಿ, ಒಬಿಸಿ ನಂತರದ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ. ಸ್ವಪಕ್ಷದಲ್ಲಿನ ಬಂಡಾಯ ಮೇಲ್ನೋಟಕ್ಕೆ ಶಮನಗೊಂಡಿದ್ದರೂ ಆಂತರಿಕ ಭಿನ್ನಮತ ಎರಡು ಪಕ್ಷಗಳಲ್ಲಿ ಹೊಗೆಯಾಡುತ್ತಿದೆ. ಸ್ವಪಕ್ಷೀಯರ ಒಳಏಟುಗಳನ್ನು ಎರಡೂ ಪಕ್ಷಗಳು ಸರಿ ಪಡಿಸಿಕೊಂಡರಷ್ಟೇ ಗೆಲುವು ಸಾಧ್ಯವೆಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.
ಬಜರಂಗದಳ ಬ್ಯಾನ್ ಮಾಡ್ತೇವೆ ಎಂದು ಕುಣಿತ್ತಿದ್ದ ಕಾಂಗ್ರೆಸ್ ವರಸೆ ಬದಲಿಸಿದೆ: ಓವೈಸಿ ಗರಂ
ನೇರ ಪೈಪೋಟಿ:
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹುತೇಕ ನೇರ ಪೈಪೋಟಿ ಏರ್ಪಟ್ಟಿದೆ. ಇನ್ನುಳಿದಂತೆ, ಜೆಡಿಎಸ್ನಿಂದ ಸುನಿತಾ ಪೂಜಾರ, ಆಮ್ ಆದ್ಮಿ ಪಾರ್ಟಿಯಿಂದ ಎಂ.ಎನ್. ನಾಯಕ್ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಲೋಹಿತ್ ನಾಮದೇವ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿಶ್ವನಾಥರೆಡ್ಡಿ ರಡ್ಡೇರ, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ಸಯ್ಯದ್ಫಾಹಿಮ್ ಗುಡಗೇರಿ ಅಭ್ಯರ್ಥಿಗಳನ್ನು ಕಣದಲ್ಲಿದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.