ಕರಾವಳಿಯ ಎಲ್ಲ ಹತ್ಯೆ ಕೇಸ್‌ ಎನ್‌ಐಎಗೆ ವಹಿಸಿ: ಎಚ್‌ಡಿಕೆ

By Govindaraj SFirst Published Jul 31, 2022, 5:15 AM IST
Highlights

ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ರಾಜ್ಯ ಬಿಜೆಪಿ ಸರ್ಕಾರ, ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್‌ಐಎ ತನಿಖೆಗೆ ವಹಿಸಲು ಯಾಕೆ ಹಿಂಜರಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರು (ಜು.31): ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ರಾಜ್ಯ ಬಿಜೆಪಿ ಸರ್ಕಾರ, ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್‌ಐಎ ತನಿಖೆಗೆ ವಹಿಸಲು ಯಾಕೆ ಹಿಂಜರಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರ್ಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಯಾಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ‘ಡಬಲ್‌ ಎಂಜಿನ್‌ ಸರ್ಕಾರ ಡಬಲ್‌ ಗೇಮ್‌’ ಆಡುತ್ತಿದೆ. 

ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ ಬಿಜೆಪಿ ಪಕ್ಷ, ತನಗೆ ಅಧಿಕಾರ ತಂದು ಕೊಟ್ಟಯುವಕರ ಜೀವಗಳಿಗೆ ಗ್ಯಾರಂಟಿ ಕೊಡದಷ್ಟುದುರ್ಬಲವಾಗಿದೆ ಎಂದು ಟೀಕಿಸಿದ್ದಾರೆ. ಪ್ರತಿ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಂಗಳೂರಲ್ಲಿ ಜನರಿಗೆ ಕೊಟ್ಟಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ ಶಾಂತಿ ಕಾಪಾಡಿ ಎನ್ನುವ ಮಾತು ಬಂತಾ? ಬರಲಿಲ್ಲ! ನೆಮ್ಮದಿಗಾಗಿ ಕಿಂಚಿತ್‌ ಕ್ರಮ ವಹಿಸಿದಿರಾ? ಅದೂ ಇಲ್ಲ. ಹಿಂಸೆಗೆ ಇನ್ನಷ್ಟುತುಪ್ಪ ಸುರಿದು ಬಂದರು. 

ಬೀದರ್ ನಲ್ಲಿ ಜೆಡಿಎಸ್ ಪಕ್ಷ ಸಂಘಟನೆ; ಈ ಬಾರಿ ಬಿಜೆಪಿ ಆಟ ನಡೆಯಲ್ಲ -ಹೆಚ್‌ಡಿಕೆ

ಎನ್‌ಐಎ ತನಿಖೆಗೆ ವಹಿಸಿದ ಎಷ್ಟುಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ? ಒಂದೂ ಇಲ್ಲ. ಎನ್‌ಐಎಗೆ ಒಪ್ಪಿಸಿದ ಮೇಲೆ ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟಸಂದೇಶವೇನು? ಸ್ವತಃ ಗೃಹ ಸಚಿವರಾಗಿದ್ದ ಅವರು, ಮುಖ್ಯಮಂತ್ರಿಯಾದ ಮೇಲೆ ತಮ್ಮ ಅಧೀನದ ಪೊಲೀಸ್‌ ವ್ಯವಸ್ಥೆಯನ್ನೇ ನಂಬುತ್ತಿಲ್ಲ, ಇದಲ್ಲವೇ ವಿಪರ್ಯಾಸ!ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ದಕ್ಷ ಪೊಲೀಸ್‌ ಅಧಿಕಾರಿಗಳು ಇಲ್ಲವೇ? ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು. 

ರಾಜ್ಯ ಬಿಜೆಪಿ ಸರ್ಕಾರಕ್ಕೆ ಅದು ಬೇಕಿಲ್ಲ. ಸಮರ್ಥ ಅಧಿಕಾರಿಗಳನ್ನು ನಂಬದೆ ಎನ್‌ಐಎಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ಸಮಾಧಿ ಕಟ್ಟಲು ಹೊರಟಿದೆ. ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಿದಿರಾ? ಇಲ್ಲ, ಚುನಾವಣೆ ವರ್ಷವಲ್ಲ, ಕೊಲೆಗಳೇ ಹೆಚ್ಚೆಚ್ಚು ಆಗಬೇಕು. ಅವರ ಮತಪೆಟ್ಟಿಗೆ ಕೊಬ್ಬಬೇಕು. ನೆತ್ತರಧಾರೆ ಹರಿದಷ್ಟೂಭರ್ಜರಿ ಮತ ಧಾರೆ! ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಹತ್ಯೆಯಾದವರ ಮನೆಗೆ ಸದ್ಯದಲ್ಲಿಯೇ ಭೇಟಿ ನೀಡುತ್ತೇನೆ: ಇತ್ತೀಚೆಗೆ ಹತ್ಯೆಯಾದ ಮೂರು ಜನರ ಮನೆಗಳಿಗೆ ನಾನು ಸದ್ಯದಲ್ಲಿ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ. ಬಜರಂಗದಳ ಇರಲಿ, ಹಿಂದುತ್ವದ ಸಿದ್ದಾಂತ ಇಟ್ಟುಕೊಂಡು ಹೋರಾಟ ಮಾಡುವವರೆ ಇರಲಿ. ಮುಸ್ಲಿಂ ಸಂಘಟನೆಗಳೇ ಇರಲಿ ತಾವುಗಳು ತಮ್ಮ ಸಂಘಟನೆಯ ಶಕ್ತಿ ತುಂಬಿಸಿಕೊಳ್ಳುವ ಸಲುವಾಗಿ ಅಮಾಯಕರ ಜೀವನದೊಂದಿಗೆ ಚಲ್ಲಾಟವಾಡಬೇಡಿ ಎಂದು ಎಲ್ಲಾ ಸಂಘಟನೆಗಳಿಗೆ ತಿಳಿಸುತ್ತೇನೆ. ಎನ್ಐಎಗೆ ವರ್ಗಾಯಿಸಿದ ಎಷ್ಟೋ ಕೇಸ್ ಗಳು ನಾಲ್ಕೈದು ವರ್ಷಗಳು ಕಳೆದರು ಕೂಡ ತನಿಖೆಯ ಮಾಹಿತಿ 

ಸರ್ಕಾರದ ಭ್ರಷ್ಟ ವ್ಯವಸ್ಥೆಯ ನಡುವೆಯೂ ಕೂಡ ನ್ಯಾಯಯುತವಾಗಿ ಕೆಲಸ ಮಾಡುವ ತನಿಖೆ ನಡೆಸುವ ಅಧಿಕಾರಿಗಳು ಇದ್ದಾರೆ. ನಮ್ಮ ಪೊಲೀಸ್ ಇಲಾಖೆಯಲ್ಲಿಯೇ ಬಹಳಷ್ಟು ಅಧಿಕಾರಿಗಳು ಇದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕಾಗಿತ್ತು. ಆದರೇ ಅದನ್ನು ಈ ಸರ್ಕಾರ ಮಾಡುತ್ತಿಲ್ಲ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಪ್ರಮುಖ ಕೇಸ್ ಗಳನ್ನು ಎನ್ಐಎಗೆ ನೀಡುತ್ತಿದೆ. ಇಲ್ಲಿನ ಪ್ರಾಮಾಣಿಕ ಅಧಿಕಾರಿಗಳಿಗೆ ತನಿಖೆಗೆ ವಹಿಸಿ ನಿಸ್ಪಷ್ಯಪಾತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು.  

50 ಸ್ಥಾನ ಗೆಲ್ಲೋದು ನನಗೆ ಕಷ್ಟವೇ ಅಲ್ಲ, ಆದ್ರೆ ಪೂರ್ಣ ಅಧಿಕಾರ ಕೊಡಿ: ಹೆಚ್‌ಡಿಕೆ ಮನವಿ

ಸಂಘಗಳನ್ನು, ಸಂಘಟನೆಗಳನ್ನು ನಿಷೇಧ ಮಾಡಿ ಎಂದು ನಾನು ಹೇಳುವುದಿಲ್ಲ. ಜನಸಾಮಾನ್ಯರ ಜೀವನದ ಜೊತೆಗೆ ಚಲ್ಲಾಟವಾಡಬೇಡಿ. ನಿಮ್ಮ ದುಡಿಮೆಯ ಮೇಲೆ ನಿಮ್ಮ ಶಕ್ತಿ ರೂಪಿಸಿಕೊಳ್ಳಿ ಎಂದು ಹೇಳುತ್ತೇನೆ. ಹಿಜಾಬ್ ಘಟನೆಯನ್ನು ದೊಡ್ಡದಾಗಿ ಮಾಡಲಾಗಿದೆ ಎಂದು ಕುಮಾರಸ್ವಾಮಿರವರು ಹೇಳಿದರು. ಕಾರ್ಯಕರ್ತರ ವಿಷಯದಲ್ಲಿ ಈಶ್ವರಪ್ಪರವರು ಹೇಳಿರುವುದು ಯುವಕರನ್ನು ಗುಲಾಮಗಿರಿಯೆಡೆಗೆ ತೆಗೆದುಕೊಂಡು ಹೋಗುವ ರೀತಿಯಲ್ಲಿದೆ. ಅದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಕಾಂಗ್ರೆಸ್ ನಾಯಕರು ಕಲ್ಲು, ಮೊಟ್ಟೆ, ಮೆಟ್ಟು ಹೇಳಿಕೆಗಳನ್ನು ಬಿಟ್ಟು ಜನರು ನೆಮ್ಮದಿಯಿಂದ ಬದುಕಲು ಬಿಡಬೇಕು ಎಂದು ಕುಮಾರಸ್ವಾಮಿರವರು ಹೇಳಿದರು.

click me!