5ನೇ ಬಾರಿಗೆ ಚಿಕ್ಕಮಗಳೂರಲ್ಲಿ ಸಿ.ಟಿ.ರವಿ ಅದೃಷ್ಟ ಪರೀಕ್ಷೆ..!

By Kannadaprabha NewsFirst Published Mar 15, 2023, 10:00 AM IST
Highlights

ಕ್ಷೇತ್ರದ ಇತಿಹಾಸದ ಪುಟಗಳನ್ನು ಒಂದೊಂದಾಗಿ ತಿರುವು ಹಾಕಿದರೆ, ಇಲ್ಲಿ ಕಾಂಗ್ರೆಸ್‌ ಗೆದ್ದಿದ್ದೇ ಹೆಚ್ಚು. 15 ಚುನಾವಣೆಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಎರಡನೇ ಸ್ಥಾನದಲ್ಲಿರೋದು ಬಿಜೆಪಿ. 2004ರಿಂದ ಬಿಜೆಪಿಯ ಈ ಅಶ್ವಮೇಧದ ಕುದುರೆ ಇಂದಿಗೂ ಅಖಾಡದಲ್ಲಿ ನಿಂತಿದೆ. ಈ ಬಾರಿ ಈ ಕುದುರೆಯನ್ನು ಕಟ್ಟಿಹಾಕಬೇಕೆಂಬುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಿಶ್ಚಯಿಸಿವೆ. ಜೆಡಿಎಸ್‌ ಈಗಾಗಲೇ ಅಭ್ಯರ್ಥಿಯನ್ನೂ ಘೋಷಣೆ ಮಾಡಿದೆ.

ಆರ್‌.ತಾರಾನಾಥ್‌

ಚಿಕ್ಕಮಗಳೂರು(ಮಾ.15):  ಸತತ ನಾಲ್ಕು ಬಾರಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಪ್ರತಿನಿಧಿಸುತ್ತಿರುವ ಕ್ಷೇತ್ರ ಚಿಕ್ಕಮಗಳೂರು. ತಮ್ಮ ವಾಗ್ಝರಿ ಮೂಲಕವೇ ಗಮನ ಸೆಳೆದಿರುವ ಸಿ.ಟಿ.ರವಿ ಅವರಿಗೆ ಈ ಬಾರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮಬಲದ ಟಕ್ಕರ್‌ ನೀಡಲು ಸಜ್ಜಾಗಿದೆ.

ಕ್ಷೇತ್ರದ ಇತಿಹಾಸದ ಪುಟಗಳನ್ನು ಒಂದೊಂದಾಗಿ ತಿರುವು ಹಾಕಿದರೆ, ಇಲ್ಲಿ ಕಾಂಗ್ರೆಸ್‌ ಗೆದ್ದಿದ್ದೇ ಹೆಚ್ಚು. 15 ಚುನಾವಣೆಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಎರಡನೇ ಸ್ಥಾನದಲ್ಲಿರೋದು ಬಿಜೆಪಿ. 2004ರಿಂದ ಬಿಜೆಪಿಯ ಈ ಅಶ್ವಮೇಧದ ಕುದುರೆ ಇಂದಿಗೂ ಅಖಾಡದಲ್ಲಿ ನಿಂತಿದೆ. ಈ ಬಾರಿ ಈ ಕುದುರೆಯನ್ನು ಕಟ್ಟಿಹಾಕಬೇಕೆಂಬುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಿಶ್ಚಯಿಸಿವೆ. ಜೆಡಿಎಸ್‌ ಈಗಾಗಲೇ ಅಭ್ಯರ್ಥಿಯನ್ನೂ ಘೋಷಣೆ ಮಾಡಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಸದ್ಯ ಆಲದ ಮರದಂತೆ ಗಟ್ಟಿಯಾಗಿ ಬೇರು ಬಿಟ್ಟಿದೆ. ಇದನ್ನು ಅಲುಗಾಡಿಸಿದರೆ ಪ್ರಯೋಜನವಿಲ್ಲ, ಉರುಳಿಸಬೇಕಾದರೆ ಬಿರುಗಾಳಿಯೇ ಬೀಸಬೇಕೆಂಬುದು ಕಾಂಗ್ರೆಸ್‌ ಅಭಿಪ್ರಾಯ.

ಯಾದಗಿರಿ: ಬಿಜೆಪಿಯ ಮಾಲಕರೆಡ್ಡಿ ಪುತ್ರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಾ?

ಬಿಎಸ್‌ವೈ ಅಲೆ: 

ಕಾಫಿನಾಡಲ್ಲಿ ಕಮಲ ಅರಳಲು ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ಈ ಮಾತನ್ನು ಯಾವ ಪಕ್ಷವೂ ತಳ್ಳಿ ಹಾಕುವಂತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂಬುದು ಲಿಂಗಾಯತ ಸಮುದಾಯದ ಬಹುದಿನದ ಕನಸಾಗಿತ್ತು. ಈ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ 2004ರ ವಿಧಾನಸಭಾ ಚುನಾವಣೆಯಲ್ಲಿ ಬೀಸಿದ ಅಲೆ 2018ರವರೆಗೆ ನಿರಂತರವಾಗಿ ಬೀಸಿತು. ಇದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಿ.ಟಿ.ರವಿ ಅವರ ಕೈಹಿಡಿಯಿತೆಂಬ ಮಾತನ್ನು ಯಾರೂ ಅಲ್ಲಗಳೆಯುವುದಿಲ್ಲ.

ಚಿಕ್ಕಮಗಳೂರು ಕ್ಷೇತ್ರದಲ್ಲಿ 2,19,581 ಮತದಾರರಿದ್ದಾರೆ. ಇವರಲ್ಲಿ ಲಿಂಗಾಯತ ಸಮುದಾಯದ ಮತಗಳೇ ಹೆಚ್ಚು. ಈ ಕಾರಣಕ್ಕಾಗಿ 2004ರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿರುವ ಕೆ.ಬಿ.ಮಲ್ಲಿಕಾರ್ಜುನ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಆದರೆ, ಆಗ ಯಡಿಯೂರಪ್ಪ ಅವರ ಅಲೆ ಇದ್ದ ಕಾರಣ ಲಿಂಗಾಯತ ಸಮುದಾಯದವರು ಬಿಜೆಪಿಗೆ ಮತ ಕೊಟ್ಟರು.

ಬದಲಾದ ಕಾಲ: 

ಲಿಂಗಾಯತ ಸಮುದಾಯದ ಆಶಯದಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಬಿಜೆಪಿಯ ಉನ್ನತ ಹುದ್ದೆಯನ್ನೂ ಅಲಂಕರಿಸಿದ್ದರು. ಆದರೆ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಈ ಬಾರಿ ಲಿಂಗಾಯತ ಸಮುದಾಯದ ಆಯ್ಕೆ ಕುತೂಹಲ ಮೂಡಿಸಿದೆ. 2004ರಲ್ಲಿ ಕೈ ಹಿಡಿದ ಈ ಸಮುದಾಯ 2023ರ ಚುನಾವಣೆಯಲ್ಲಿ ಕೈ ಹಿಡಿಯುತ್ತಾ ಎಂಬುದು ಮಾತ್ರ ನಿಗೂಢ. ಆದ್ದರಿಂದಲೇ ಕಾಂಗ್ರೆಸ್‌ ಪಕ್ಷ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಿಗೆ ಈ ಬಾರಿ ಗಾಳ ಹಾಕಲು ಕ್ಷೇತ್ರದಲ್ಲಿ ಅಂತಿಮ ಸರ್ವೆ ನಡೆಸುತ್ತಿದೆ. ಬಿ.ಎಚ್‌.ಹರೀಶ್‌, ಎಚ್‌.ಡಿ. ತಮ್ಮಯ್ಯ, ಸತೀಶ್‌ ಮಹಡಿಮನೆ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿವೆ.

ಸಿ.ಟಿ.ರವಿ ಅವರ ಆಪ್ತ, ಲಿಂಗಾಯತ ಸಮುದಾಯಕ್ಕೆ ಸೇರಿರುವ ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಡಿ.ತಮ್ಮಯ್ಯ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರಿಂದ ಈ ಬಾರಿಯ ಲಿಂಗಾಯತರ ಮತ ಯಾರಿಗೆ ಎಂಬುದು ಮಾತ್ರ ಕುತೂಹಲ ಮೂಡಿಸಿದೆ.

ಸತೀಶ್‌ ಜಾರಕಿಹೊಳಿ ಗೆಲುವಿನ ಓಟಕ್ಕೆ ಬಿಜೆಪಿ ಪಡೆ ಬ್ರೇಕ್‌ ಹಾಕುತ್ತಾ?

ಕ್ಷೇತ್ರದ ಹಿನ್ನೆಲೆ: 

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 15 ಬಾರಿ ಚುನಾವಣೆ ನಡೆದಿದೆ. ಈ ಪೈಕಿ ಕಾಂಗ್ರೆಸ್‌ 7 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 4, ಪಕ್ಷೇತರ 2, ಜನತಾಪಕ್ಷ 1 ಹಾಗೂ ಪ್ರಜಾ ಸೋಶಿಯಲ್‌ ಪಾರ್ಟಿ 1 ಬಾರಿ ಗೆಲುವು ಸಾಧಿಸಿದೆ. ಹಾಲಿ ಶಾಸಕ ಸಿ.ಟಿ.ರವಿ ಅವರು 2004ರಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ಈ ಬಾರಿ 5ನೇ ಬಾರಿಗೆ ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ.

ಜಾತಿ ಲೆಕ್ಕಾಚಾರ: 

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2,19,581 ಮತದಾರರು ಇದ್ದಾರೆ. ಈ ಪೈಕಿ ಲಿಂಗಾಯತ ಸಮುದಾಯಕ್ಕೆ ಸೇರಿದವರು 45,000, ಕುರುಬ ಸಮುದಾಯ 26,000, ಪರಿಶಿಷ್ಟಜಾತಿ/ಪರಿಶಿಷ್ಟವರ್ಗ 42,000, ಮುಸ್ಲಿಂ/ಕ್ರಿಶ್ಚಿಯನ್‌ 30,000, ದೇವಾಂಗ- 12,000, ಒಕ್ಕಲಿಗರು 14,000 ಹಾಗೂ ಉಳಿದ ಹಿಂದುಳಿದ ಜಾತಿಗೆ ಸೇರಿದ ಮತದಾರರು ಇದ್ದಾರೆ.

click me!