ಇಂದಿನಿಂದ ನಗರದ 110 ಹಳ್ಳಿಗೆ ಕಾವೇರಿ: ಡಿ.ಕೆ.ಶಿವಕುಮಾರ್ ವಿಶೇಷ ಸಂದರ್ಶನ

Published : Oct 16, 2024, 06:29 AM IST
ಇಂದಿನಿಂದ ನಗರದ 110 ಹಳ್ಳಿಗೆ ಕಾವೇರಿ: ಡಿ.ಕೆ.ಶಿವಕುಮಾರ್ ವಿಶೇಷ ಸಂದರ್ಶನ

ಸಾರಾಂಶ

ಭಾರತದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಬೆಂಗಳೂರು ಜಾಗತಿಕ ನಗರ, ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಉದ್ಯಾನ ನಗರಿ. 

ವಿಶ್ವನಾಥ ಮಲೆಬೆನ್ನೂರು

ಬೆಂಗಳೂರು (ಅ.16): ಭಾರತದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಬೆಂಗಳೂರು ಜಾಗತಿಕ ನಗರ, ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಉದ್ಯಾನ ನಗರಿ. ಆದರೆ, ಕಳೆದ ವರ್ಷ ಕಂಡ ಬರ ಪರಿಸ್ಥಿತಿ ನಗರದಲ್ಲಿ ಜಲಕ್ಷಾಮ ನಿರ್ಮಿಸಿತ್ತು. ಬೆಂಗಳೂರಿನಲ್ಲಿ ನೀರಿಲ್ಲ. ನಮ್ಮಲ್ಲಿಗೆ ಬನ್ನಿ ಎಂದು ಹೈದರಾಬಾದ್‌ನ ಪ್ರಮುಖರೇ ಹೇಳಿಕೆ ನೀಡುವ ಮಟ್ಟಕ್ಕೆ ಈ ಜಲಕ್ಷಾಮ ಬಿಂಬಿತವಾಗಿತ್ತು. 

ನಗರದ ವರ್ಚಸ್ಸಿಗೆ ಧಕ್ಕೆ ತಂದ ಈ ಬೆಳವಣಿಗೆ ಮತ್ತೆಂದೂ ಉಂಟಾಗಬಾರದು ಎಂದು ಕಾವೇರಿ 5ನೇ ಹಂತದಲ್ಲಿ ಹೆಚ್ಚುವರಿ 775 ಎಂಎಲ್‌ಡಿ ನೀರು ಪೂರೈಕೆ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೆ ಸಿದ್ಧಗೊಳಿಸಲಾಗಿದೆ. ಬುಧವಾರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಈ ಹಿನ್ನೆಲೆಯಲ್ಲಿ ಯೋಜನೆಯ ಮಹತ್ವ ಹಾಗೂ ಅನುಷ್ಠಾನದ ವೇಳೆ ಎದುರಾದ ಸವಾಲುಗಳನ್ನು ನಿಭಾಯಿಸಿದ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ 'ಕನ್ನಡಪ್ರಭ'ಕ್ಕೆ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್

• ಕಾವೇರಿ 5ನೇ ಹಂತದಿಂದ ಯಾರಿಗೆ ಲಾಭ?
ಬೆಂಗಳೂರಿಗೆ ಈವರೆಗೆ 1,450 ಎಂಎಲ್‌ಡಿ ಕಾವೇರಿ ನೀರನ್ನು ನಗರದ ಮೂರನೇ ಎರಡು ಭಾಗದ ಜನರಿಗೆ ಪೂರೈಕೆ ಮಾಡಲಾಗುತ್ತಿತ್ತು. ಕಾವೇರಿ 5ನೇ ಹಂತದಿಂದ ಹೆಚ್ಚುವರಿ 175 ಎಂಎಲ್‌ಡಿ ನೀರು ಲಭ್ಯವಾಗಲಿದ್ದು, ನಗರದ ಇನ್ನೂ ಶೇ.33ರಷ್ಟು ಜನರಿಗೆ, ಅಂದರೆ, 50 ಲಕ್ಷ ಜನರಿಗೆ ಕಾವೇರಿ ನೀರು ಲಭ್ಯವಾಗಲಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 2008ರಲ್ಲಿ ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿಯ 7 ವಿಧಾನಸಭಾ ಕ್ಷೇತ್ರದ ಜನರ ಬಹುದಿನದ ಬೇಡಿಕೆ ಈ ಮೂಲಕ ಸಹಕಾರಗೊಳ್ಳುತ್ತಿದೆ.

• ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ)ಯಲ್ಲಿ ಬುಧವಾರ ಚಾಲನೆ ಕೊಟ್ಟರೆ ಬೆಂಗಳೂರಿಗೆ ಯಾವಾಗ ನೀರು ಸಿಗಲಿದೆ?
ಯೋಜನೆಗೆ ಚಾಲನೆ ನೀಡುತ್ತಿದ್ದತೆ ಯಾವುದೇ ವಿಳಂಬ ಇಲ್ಲದೇ ಬುಧವಾರದಿಂದಲೇ ಬೆಂಗಳೂರಿನ 110 ಹಳ್ಳಿ ವ್ಯಾಪ್ತಿಯ ಜನರಿಗೆ ಕಾವೇರಿ ನೀರು ಲಭ್ಯವಾ ಗಲಿದೆ. ಈಗಾಗಲೇ ಸಾಕಷ್ಟು ಬಾರಿ ಪ್ರಾಯೋಗಿಕವಾಗಿ ಕಾವೇರಿ ನೀರು ಪೂರೈಕೆ ಮಾಡಲಾಗಿದೆ. ಯಶಸ್ವಿಯಾದ ಬಳಿಕ ಇದೀಗ ಚಾಲನೆ ನೀಡಲಾಗುತ್ತಿದೆ.

• ಕಾವೇರಿ 5 ಹಂತದ ಯೋಜನೆಯ ವೆಚ್ಚ ಎಷ್ಟು?
ಯೋಜನಾ ವೆಚ್ಚ 5 ಸಾವಿರ ಕೋಟಿ ರು. ಆಗಿದ್ದು, ಈ ಪೈಕಿ ಎಂಜಿನಿಯರಿಂಗ್‌ ಕಾಮಗಾರಿಗೆ ಅಧಿಕೃತವಾಗಿ 4,336 ಕೋಟಿ ರು. ವೆಚ್ಚ ಮಾಡಲಾಗಿದೆ. ಭೂ ಸ್ವಾಧೀನ, ವಿವಿಧ ಕಾರ್ಯಗಳು ಸೇರಿದಂತೆ ಒಟ್ಟಾರೆ 5 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ. ಇದಕ್ಕೆ ಜೈಕಾದಿಂದ ಕಡಿಮೆ ಬಡ್ಡಿಯನ್ನು ಸಾಲ ಸೌಲಭ್ಯ ಪಡೆಯಲಾಗಿದೆ.

• ಯೋಜನೆ ವಿಳಂಬಕ್ಕೆ ಕಾರಣ ಏನು?
ಇದು 2014ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಗೊಂಡ ಯೋಜನೆಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಲಕ್ಷ್ಯ ಮಾಡಲಾಗಿತ್ತು. ಹಲವು ಕಡೆ ಸಣ್ಣ ಸಣ್ಣ ಸಮಸ್ಯೆಗಳಿಂದ ಇಡೀಯೋಜನೆನೆನೆಗುದಿಗೆ ಬಿದ್ದಿತ್ತು. ಅಧಿಕಾರಿಗಳ ಮೇಲೆ ಬಿಟ್ಟರೆ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ಇರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದರಿಂದ ಎತ್ತಿನಹೊಳೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದೀಗ ಕಾವೇರಿ 5ನೇ ಹಂತ ಯೋಜನೆ ಪೂರ್ಣಗೊಂಡಿದೆ. ಛಲದಿಂದ ಕೆಲಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಆ ಕೆಲಸವನ್ನು ನಾವು ಮಾಡಿದ್ದೇವೆ.

• 500 ಮೀಟರ್ ಎತ್ತರದಲ್ಲಿರುವ ಬೆಂಗಳೂರಿಗೆ ಕಾವೇರಿ ನೀರಿನ ಪೂರೈಕೆ ಹೇಗೆ?
ಕಾವೇರಿಯಿಂದಸುಮಾರು 500 ಮೀಟರ್ ಎತ್ತರದಲ್ಲಿರುವ ಬೆಂಗಳೂರಿಗೆ ನೀರು ಪೂರೈಕೆ ಮಾಡುವುದು ಸಾಹಸದ ಕೆಲಸವಾಗಿದೆ. ಆ ಕೆಲಸವನ್ನು ಬೆಂಗಳೂರು ಜಲಮಂಡಳಿ ಮಾಡುತ್ತಿದೆ. ಹಾಗಾಗಿ, ಬೆಂಗಳೂರಿಗರು ಕಾವೇರಿ ನೀರನ್ನು ಪೂಜೆ ಮಾಡಿ ಸ್ವೀಕಾರ ಮಾಡಿಕೊಳ್ಳಬೇಕಿದೆ. ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ ಸೇರಿದಂತೆ * ಒಟ್ಟು ಮೂರು ಹಂತದಲ್ಲಿ ನೀರು ಪಂಪಿಂಗ್ ಸ್ಟೇಷನ್ ನಿರ್ಮಾಣ ಮಾಡಿಕೊಂಡು ಪೂರೈಕೆ ವ್ಯವಸ್ಥೆ
ಮಾಡಲಾಗಿದೆ.

• ಹಾಗಾದರೆ, ಮುಂದಿನ ಎಷ್ಟು ವರ್ಷ ಬೆಂಗಳೂರಿಗೆ ನೀರಿನ ಸಮಸ್ಯೆ ಇರಲ್ಲ?
ಬೆಂಗಳೂರಿನ ಬೆಳವಣಿಗೆ ದೃಷ್ಟಿಯಲ್ಲಿ ಇಟ್ಟುಕೊಂಡು ಹಂತ ಹಂತವಾಗಿ ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈವರೆಗೆ ಕಾವೇರಿ 4 ಹಂತದಲ್ಲಿ 1,450 ಎಂಎಲ್‌ಡಿ ಪೂರೈಕೆ ಮಾಡಲಾಗುತ್ತಿದೆ. ಇದೀಗ 5ನೇ ಹಂತದ ಮೂಲಕ ಹೆಚ್ಚುವರಿ 775 ಎಂಎಲ್‌ಡಿ ನೀರು ಪೂರೈಕೆಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ 10 ವರ್ಷಕ್ಕೆ ಒಟ್ಟಾರೆ 5 ಹಂತದಲ್ಲಿ 2,225 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಈ ನೀರಿನಿಂದ ಬೆಂಗಳೂರು ನಗರವನ್ನು ನಿರ್ವಹಣೆ ಮಾಡಬಹುದಾಗಿದೆ. ಭವಿಷ್ಯದ ದೃಷ್ಟಿಯಿಂದ ಕಾವೇರಿಯಲ್ಲಿ ಹೆಚ್ಚುವರಿ 6 ಟಿಎಂಸಿ ನೀರು ಬೆಂಗಳೂರು ನಗರಕ್ಕೆ ಮೀಸಲಿಡುವುದಕ್ಕೆಸಂಬಂಧಿಸಿದಂತೆಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

• ನಗರಕ್ಕೆ ಕಾವೇರಿಯಿಂದ ನೀರು ತರುವುದೊಂದೇ ಪರಿಹಾರವೇ?
ಅದೊಂದೇ ಪರಿಹಾರವಲ್ಲ. ಬೆಂಗಳೂರು ನಗರದಲ್ಲಿ ಸಾಕಷ್ಟು ಕೆರೆಗಳಿವೆ. ಬೇಸಿಗೆ ಅವಧಿಯಲ್ಲಿ ಕೆರೆಗಳು ಬತ್ತಿ ಹೋಗಿದ್ದರಿಂದ ಅಂತರ್ಜಲ ಮಟ್ಟ ಕುಸಿದು ಕಾವೇರಿ ನೀರಿನ ಪೂರೈಕೆ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದ್ದರಿಂದ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ನಗರದ 15 ಸಾವಿರ ಕೊಳವೆ ಬಾವಿಗಳ ಪೈಕಿ ಸುಮಾರು 7 ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲಾ ಕೆರೆಗಳನ್ನು ಸುಸ್ಥಿರವಾಗಿಟ್ಟು ಕೊಳ್ಳುವ ಮೂಲಕ ಅಂತರ್ಜಲ ವೃದ್ಧಿ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಿದ್ದೇನೆ.

• 110 ಹಳಿ ಜನರು ಕಾವೇರಿ ಸಂಪರ್ಕಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಏನು ಮಾಡುತ್ತೀರಾ?
ಕಾವೇರಿ ನೀರಿನ ಪೂರೈಕೆ ಆಗದ ಕಾರಣಕ್ಕೆ ಈವರೆಗೆ ಕೇವಲ 55 ಸಾವಿರ ಮಾತ್ರ ಸಂಪರ್ಕ ಪಡೆದುಕೊಂಡಿದ್ದಾರೆ. ಯೋಜನೆಗೆ ಚಾಲನೆ ಸಿಕ್ಕರೆ ಜನರಿಗೆ ವಿಶ್ವಾಸ ಬರಲಿದೆ. ಆಗ ಹೆಚ್ಚಿನ ಸಂಖ್ಯೆಯಲ್ಲಿ ಸಂಪರ್ಕ ಪಡೆಯುವುದಕ್ಕೆ ಮುಂದಾಗಲಿದ್ದಾರೆ. ಒಟ್ಟು 4 ರಿಂದ 5 ಲಕ್ಷ ಹೊಸ ಸಂಪರ್ಕ ನೀಡುವ ಗುರಿಯನು ಹಾಕಿಕೊಂಡಿದ್ದೇವೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರವಾರು ಒಂದೊಂದು ಕಾರ್ಯಕ್ರಮ ನಡೆಸಲಾಗುವುದು.

• 110 ಹಳ್ಳಿ ವ್ಯಾಪ್ತಿಯಲ್ಲಿ ನೀರಿನ ಹೊಸ ಸಂಪರ್ಕಕ್ಕೆ ಆಫರ್ ಏನಾದರೂ ಇದೆಯೇ?
110 ಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಹೊಸ ಸಂಪರ್ಕ ನೀಡಲು ಅಭಿಯಾನ ನಡೆಸಲಾಗುವುದು. ಸಹಾಯ ಕೇಂದ್ರ ಆರಂಭಿಸಲಾಗುವುದು. ಆದರೆ, ಹೊಸ ಸಂಪರ್ಕ ಪಡೆಯುವವರಿಗೆ ಸಬ್ಸಿಡಿ ನೀಡುವ ಬಗ್ಗೆ ಈವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು. ನೀರಿನ ಸೋರಿಕೆ ಮತ್ತು ಕಳ್ಳತನ ತಡೆಗೆ ಏನು ಕ್ರಮ? ಬೆಂಗಳೂರಿನಲ್ಲಿ ನೀರಿನ ಸೋರಿಕೆ ಮತ್ತು ಕಳ್ಳತನ ಇದೆ ಎಂದು ಒಪ್ಪಿಕೊಳ್ಳುತ್ತೇನೆ. ಗೃಹ ಬಳಕೆಗೆಂದು ಸಂಪರ್ಕ ಪಡೆದು ವಾಣಿಜ್ಯ ಬಳಕೆ ಮಾಡುತ್ತಿದ್ದಾರೆ. ಕೆಲವು ಕಡೆ ಮೀಟರ್ ಇಲ್ಲದೇ ನೀರು ಪಡೆಯುತ್ತಿದ್ದಾರೆ. ಸೋರಿಕೆ ತಡೆ ತಟ್ಟುವುದಕ್ಕೆ ಕೊಳವೆ ಬದಲಾವಣೆ ಮಾಡಬೇಕಾದ ಅಗತ್ಯವಿದ್ದು, ತಕ್ಷಣ ರಸ್ತೆ ಅಗೆದು ಕೊಳವೆ ಅಳವಡಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಕಾವೇರಿ 5ನೇ ಹಂತದ ಯೋಜನೆಯ ನೀರಿನಲ್ಲಿ ಸೋರಿಕೆ ಮತ್ತು ಕಳ್ಳತನಕ್ಕೆ ಯಾವುದೇ ಅವಕಾಶವಿಲ್ಲ.

• ನೀರಿನ ಬಿಲ್ ಬಾಕಿ ವಸೂಲಿಗೆ ಕ್ರಮ ಏನು?
ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡ ಕೆಲವರು ಕೋಟ್ಯಂತರರು. ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. ಅವರಿಂದ ವಸೂಲಿಗೆ ಪ್ರತ್ಯೇಕ ಅಭಿಯಾನ ನಡೆಸಲಾಗುವುದು. ಪಾವತಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

• ಕಾವೇರಿ 6 ಹಂತದ ಯೋಜನೆ ಸಿದ್ಧತೆ ಎಲ್ಲಿಗೆ ಬಂದಿದೆ?
ಕಾವೇರಿ 6ನೇ ಹಂತದ ಹೆಚ್ಚುವರಿ ನೀರು ಪೂರೈಕೆಗೆ ಎರಡು ಯೋಜನೆ ನಿರ್ಮಿಸಿಕೊಳ್ಳಲಾಗಿದೆ. ಒಂದು ಈಗ ಚಾಲನೆಯಲ್ಲಿರುವ ಕಾವೇರಿ ಕೊಳವೆ ಪಕ್ಕದಲ್ಲಿ ಹೆಚ್ಚುವರಿ ಕೊಳವೆ ಅಳವಡಿಕೆ ಮಾಡಿಕೊಂಡು ನೀರು ತರುವುದು. ಮೊತ್ತೊಂದು ಕೆ.ಆರ್.ಸಾಗರದಿಂದ ಕೊಳವೆ ಅಳವಡಿಕೆ ಮಾಡಿಕೊಂಡು ನೀರು ತರುವುದು. ಈಗಾಗಲೇ ವಿಕೃತ ಯೋಜನೆ ಸಿದ್ಧವಾಗಿದೆ.

• ಶರಾವತಿ ಯೋಜನೆ ಪ್ರಸ್ತಾಪ ಏನಾಯಿತು?
ಸದ್ಯಕ್ಕೆ ಕಾವೇರಿ ನೀರನ್ನು ಮಾಡಿಕೊಳ್ಳುವ ಬಗ್ಗೆ ಚಿಂತನೆ ಇದೆ. ಶರಾವತಿ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಬಗ್ಗೆ ಆಲೋಚನೆ ಮಾಡಿಲ್ಲ. ಇನ್ನು ಎತ್ತಿನ ಹೊಳೆ ಯೋಜನೆಯಿಂದ ಹೆಚ್ಚುವರಿ 2.5 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಆ ನೀರನ್ನು ಬೆಂಗಳೂರಿನ ಕುಡಿಯುವುದಕ್ಕೆ ಬಳಕೆ ಮಾಡಿಕೊಳ್ಳಬಹು ದಾಗಿದೆ. ಇನ್ನು ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಬಳಕೆ ಮಾಡಿಕೊಳ್ಳಬಹುದಾಗಿದೆ. ಕಾವೇರಿ 5ನೇ ಹಂತದ ಯೋಜನೆಗೆಚಾಲನೆಬಳಿಕಆಲೋಚನೆಮಾಡಲಾಗುವುದು. ತಿಪ್ಪಗೊಂಡನಹಳ್ಳಿಯ ನೀರಿನ ಪೂರೈಕೆ ಈಗಾಗಲೇ ಪ್ರಾಯೋಗಿಕವಾಗಿ ಆರಂಭಗೊಂಡಿದೆ.

• ಹೆಚ್ಚುವರಿ ನೀರಿನ ಸಂಸ್ಕರಣೆ ಹೇಗೆ?
ಹೊಸದಾಗಿ ಸೇರ್ಪಡೆಯಾಗುತ್ತಿರುವ 775 ಎಂಎಲ್‌ಡಿ ನೀರಿನಲ್ಲಿ ಶೇ.80 ರಷ್ಟು 500 ಎಂಎಲ್‌ಡಿ ಕೊಳಚೆ ನೀರ ಸಂಸ್ಕರಣೆಗೆ 14 ಎಸ್‌ಟಿಪಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದು ಅಲ್ಲದೇ 9 ಎಸ್‌ಟಿಪಿಗಳನ್ನು ಸ್ಥಾಪನೆ ಮಾಡುವುದಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಕಾವೇರಿ 6ನೇ ಹಂತ ಅನುಷ್ಠಾನ ಮಾಡಲಾಗುವುದು.

ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ

• ಮಳೆ ನೀರು ಕೊಯ್ದು ಅಳವಡಿಕೆ ಆಗುತ್ತಿಲ್ಲ ಏಕೆ?
ಈಗಾಗಲೇ ಮಳೆ ಕೊಯ್ದು ಪದ್ಧತಿ ಅಳವಡಿಕೆ ಮಾಡಿಕೊಳ್ಳುವಂತೆ ನಗರದ ಜನರಿಗೆ ಸೂಚಿಸಲಾಗುತ್ತಿದೆ. ಕೆಲವು ಕಡೆ ಉಪಯೋಗ ಮಾಡಿಕೊಳ್ಳಲಾಗುತ್ತಿದೆ. ಕೆಲವು ಕಡೆ ಉಪಯೋಗ ಆಗುತ್ತಿಲ್ಲ. ಮಳೆ ನೀರನ್ನು ಭೂಮಿ ಒಳಗೆ ಇಂಗಿಸುವ ಕೆಲಸ ಆಗಬೇಕು. ಈ ಬಗ್ಗೆ ಜನರು ಜಾಗೃತಗೊಳ್ಳಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ