ಕನಸು ಸಾಕಾರಗೊಂಡ ಸಂತಸದಲ್ಲಿ ಪೈಲೆಟ್ ಪ್ರದೀಪ್ ಕೃಷ್ಣನ್! ಚೆನ್ನೈ-ಸಿಂಗಾಪೂರ್ ಇಂಡಿಗೋ ವಿಮಾನದ ಪೈಲೆಟ್ ಪ್ರದೀಪ್ ಕೃಷ್ಣನ್! ಅಜ್ಜಿ, ತಾಯಿ, ಸಹೋದರಿ ಆಶೀರ್ವಾದ ಪಡೆದ ಪ್ರದೀಪ್ ಕೃಷ್ಣನ್! ಪ್ರದೀಪ್ ಮೊದಲ ದಿನದ ಕರ್ತವ್ಯದ ವೇಳೆ ಅದೇ ವಿಮಾನದಲ್ಲಿದ್ದ ಕುಟುಂಬ
ಚೆನ್ನೈ(ನ.21): ವಿಮಾನ ಮುನ್ನಡೆಸಬೇಕಿದ್ದ ಪೈಲೆಟ್ ಕಾಕ್ ಪೀಟ್ ಬಿಟ್ಟು ಪ್ರಯಾಣಿಕರು ಕೂರುವ ಸೀಟಿನತ್ತ ಧಾವಿಸಿ ಬಂದರೆ ಹೇಗಾಗಬೇಡ ನೀವೇ ಹೇಳಿ. ಇಂತದ್ದೇ ಘಟನೆಯೊಂದು ಚೆನ್ನೈ-ಸಿಂಗಾಪೂರ್ ಇಂಡಿಗೋ ವಿಮಾನದಲ್ಲಿ ನಡೆದಿದೆ.
ಅರೆ! ಪೈಲೆಟ್ ತನ್ನ ಸೀಟು ಬಿಟ್ಟು ಪ್ರಯಾಣಿಕರತ್ತ ಬಂದಿದ್ದೇಕೆ ಅಂತೀರಾ?. ಚೆನ್ನೈ-ಇಂಡಿಗೋ ವಿಮಾನದ ಪೈಲೆಟ್ ಆಗಿರುವ ಪ್ರದೀಪ್ ಕೃಷ್ಣನ್ ಅದೇ ಮೊದಲ ಬಾರಿಗೆ ವಿಮಾನವನ್ನು ಚಲಾಯಿಸಲಿದ್ದರು. ಅಂತೆಯೇ ಪೈಲೆಟ್ ಪ್ರದೀಪ್ ಕೃಷ್ಣನ್ ಅವರ ತಾಯಿ, ಅಜ್ಜಿ ಮತ್ತು ಸಹೋದರಿ ಕೂಡ ಅದೇ ವಿಮಾನದಲ್ಲಿದ್ದರು.
ತಮ್ಮ ಮೊದಲ ದಿನದ ಕರ್ತವ್ಯದ ವೇಳೆ ಅದೇ ವಿಮಾನದಲ್ಲಿದ್ದ ತಾಯಿ, ಅಜ್ಜಿ ಹಾಗೂ ಸಹೋದರಿಯ ಆಶೀರ್ವಾದ ಪಡೆದು ಪ್ರದೀಪ್ ವಿಮಾನ ಚಾಲನೆ ಮಾಡಿದರು. ಪ್ರದೀಪ್ ಕೃಷ್ಣನ್ ಅವರಿಗೆ ಚಿಕ್ಕಂದಿನಿಂದಲೂ ಪೈಲೆಟ್ ಆಗಬೇಕೆಂಬ ಆಸೆ. ಆತನ ಆಸೆಗೆ ನೀರೆರೆಯುತ್ತಿದ್ದ ತಾಯಿ ಮತ್ತು ಆತನ ಅಜ್ಜಿ, 'ನೀನು ಪೈಲೆಟ್ ಆಗಿ ವಿಮಾನ ಚಾಲನೆ ಮಾಡುವವರೆಗೂ ನಾವು ವಿಮಾನ ಹತ್ತುವುದಿಲ್ಲ' ಎಂದು ಶಪಥ ಮಾಡಿದ್ದರಂತೆ.
ಇದೇ ಕಾರಣಕ್ಕೆ ತಮ್ಮ ಮೊದಲ ವಿಮಾನ ಹಾರಾಟ ಆರಂಭಿಸುವ ಮುನ್ನ ತಾಯಿ ಮತ್ತು ಅಜ್ಜಿಯ ಆಶೀರ್ವಾದ ಪಡೆದ ಪ್ರದೀಪ್ ಕೃಷ್ಣನ್, ಸಹ ಪ್ರಯಾಣಿಕರಿಂದ ಮೆಚ್ಚುಗೆಯನ್ನೂ ಪಡೆದರು. ಇನ್ನು ಪ್ರದೀಪ್ ತಮ್ಮ ಕುಡುಂಬದವರ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಭಾರೀ ಜನಮನ್ನಣೆ ಗಳಿಸಿದೆ.