ಚಿಲ್ಲರೆ ಉದ್ಯಮ ರಕ್ಷಣೆಗೆ ಕೇಂದ್ರದಿಂದ ಹೊಸ ಕಾನೂನು ಸಂಭವ| ವಿಶೇಷ ಸಂದರ್ಭದಲ್ಲಿ ಮಾತ್ರ ಆಫರ್ಗಳನ್ನು ನೀಡಲು ಅವಕಾಶ| ಇ-ಕಾಮರ್ಸ್ ಕಂಪನಿಗಳಿಂದ ಗ್ರಾಹಕರಿಗೆ ನಿತ್ಯ ಭಾರೀ ರಿಯಾಯಿತಿ ನೀಡಿಕೆ| ಇದರಿಂದ ದೇಶಾದ್ಯಂತ ಇರುವ ಸಣ್ಣ ಸಣ್ಣ ವ್ಯಾಪಾರಿಗಳಿಗೆ ತೀವ್ರ ಹೊಡೆತ| ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರಕ್ಕೆ ಹಲವು ಬಾರಿ ವ್ಯಾಪಾರಿಗಳ ಮನವಿ| ಹಾಗಾಗಿ, ವ್ಯಾಪಾರ ಸಮತೋಲನ ಕಾಪಾಡುವಂತೆ ನಿಯಮ ಜಾರಿ ಸಾಧ್ಯತೆ
ನವದೆಹಲಿ[ಡಿ.19]: ಗ್ರಾಹಕರನ್ನು ತಮ್ಮತ್ತ ಸೆಳೆಯಲು ಉತ್ಪನ್ನಗಳಿಗೆ ಭಾರೀ ರಿಯಾಯಿತಿ ಘೋಷಿಸುವ ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಅದೇ ಮಾದರಿಯ ಆನ್ಲೈನ್ ವಹಿವಾಟು ತಾಣಗಳ ಆಫರ್ಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂಥ ರಿಯಾಯಿತಿ ಘೋಷಣೆಯು, ದೇಶದ ಸಾಂಪ್ರದಾಯಿಕ ಚಿಲ್ಲರೆ ಮಾರುಕಟ್ಟೆಉದ್ಯಮವನ್ನೇ ನುಂಗಿಹಾಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಇಂಥದ್ದೊಂದು ಕ್ರಮಕ್ಕೆ ನಿರ್ಧರಿಸಿದೆ.
ಇ ಕಾಮರ್ಸ್ ಕಂಪನಿಗಳು ಭಾರೀ ರಿಯಾಯಿತಿ ಘೋಷಿಸುವ ಮೂಲಕ ದೇಶದ ಸಾಂಪ್ರದಾಯಿಕ ವ್ಯಾಪಾರ ವ್ಯವಸ್ಥೆಯನ್ನೇ ನಾಶಪಡಿಸುತ್ತವೆ. ಅವು ಏಕಪಕ್ಷೀಯವಾಗಿ ಇಂಥ ರಿಯಾಯಿತಿ ಘೋಷಣೆ ಮಾಡುವ ಪರಿಣಾಮ, ಸಣ್ಣ ಸಣ್ಣ ಚಿಲ್ಲರೆ ವಹಿವಾಟುದಾರರು ವ್ಯಾಪಾರವನ್ನೇ ಕೈಬಿಡುವ ಸ್ಥಿತಿ ಎದುರಾಗಿದೆ. ಹೀಗಾಗಿ ಇಂಥ ಡಿಸ್ಕೌಂಟ್ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಅಖಿಲ ಭಾರತೀಯ ವ್ಯಾಪಾರಿ ಒಕ್ಕೂಟ, ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಆನ್ಲೈನ್ ಇ ಕಾಮರ್ಸ್ ವಹಿವಾಟು ತಾಣಗಳು ತಮ್ಮ ವೇದಿಕೆಯಲ್ಲಿ ಏಕಪಕ್ಷೀಯವಾಗಿ ದರ ಇಳಿಕೆ ಘೋಷಿಸುವಂತಿಲ್ಲ ಎಂಬ ವಿಷಯವನ್ನು ಇ ಕಾಮರ್ಸ್ ಕುರಿತ ಹೊಸ ಕರಡು ವರದಿಯಲ್ಲಿ ಸೇರಿಸಿದೆ. ಅಲ್ಲದೇ ರಿಯಾಯಿತಿ ಘೋಷಿಸುವುದಾದರೂ, ಅದನ್ನು ಪೂರ್ವ ನಿಗದಿತ ಸಮಯದಲ್ಲಿ ಮಾತ್ರವೇ ಘೋಷಿಸಬಹುದು ಎಂದು ಪ್ರಸ್ತಾಪಿಸಿದೆ. ಈ ಅಂಶವು, ಆನ್ಲೈನ್ ವಹಿವಾಟು ತಾಣಗಳು, ನಿತ್ಯವೂ ಭರ್ಜರಿ ರಿಯಾಯಿತಿ ಘೋಷಿಸುವ ಸಂಪ್ರದಾಯಕ್ಕೆ ಬ್ರೇಕ್ ಹಾಕಲಿದೆ ಎನ್ನಲಾಗಿದೆ.
ಹೀಗೆ ಇ ಕಾಮರ್ಸ್ ತಾಣಗಳ ರಿಯಾಯಿತಿಗೆ ಬ್ರೇಕ್ ಹಾಕುವುದರ ಜೊತೆಜೊತೆಗೇ ಇದೇ ವಲಯದ ಅಭಿವೃದ್ಧಿಗೆ ಹಲವು ಪೂರಕ ಯೋಜನೆಗಳನ್ನೂ ಕರಡು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ