ಅಯ್ಯೋ ಹುಡುಗ್ರೂ ಸುರಕ್ಷಿತರಲ್ಲ: ಬಾಲಕನ ಮೇಲೆ ರೇಪ್!

By Web DeskFirst Published Sep 20, 2018, 10:05 PM IST
Highlights

ಬಾಲಕನ ಮೇಲೆ ಯುವಕರಿಂದ ಅತ್ಯಾಚಾರ! ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮ! ತೋಟಕ್ಕೆ ಕರೆದೊಯ್ದು ಅತ್ಯಾಚಾರ ಮಾಡುತ್ತಿದ್ದ ಪಾಪಿಗಳು! ಯಾರಿಗೂ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದ ದುರುಳರು!
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ

ಖಾನಾಪೂರ(ಸೆ.20): ನಾಲ್ಕನೇ ತರಗತಿ ಓದುತ್ತಿರುವ 9 ವರ್ಷದ ಬಾಲಕನ ಮೇಲೆ ಅದೇ ಗ್ರಾಮದ ಇಬ್ಬರು ಯುವಕರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ನೊಂದಿರುವ ಬಾಲಕ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಜಿಲ್ಲಾಸ್ಪತ್ರೆಯ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಪೋಷಕರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಘಟನೆಯ ವಿವರ:
ಇಟಗಿ ಗ್ರಾಮದ ಬಡ ಕುಟುಂಬದ ಬಾಲಕ ತನ್ನ ಮನೆಯಿಂದ ಗ್ರಾಮದ ಹೊರವಲಯದಲ್ಲಿರುವ ಶಾಲೆಗೆ ನಿತ್ಯ ಹೋಗುತ್ತಿದ್ದ. ಆತ ಶಾಲೆಗೆ ಹೋಗುವ ಅಥವಾ ಶಾಲೆಯಿಂದ ವಾಪಸಾಗುವ ಮಾರ್ಗಮಧ್ಯದಲ್ಲಿ ಆತನನ್ನು ಅಡ್ಡಗಟ್ಟುತ್ತಿದ್ದ ಗ್ರಾಮದ ಇಬ್ಬರು ಯುವಕರು ಆತನಿಗೆ ತಿಂಡಿ-ತಿನಿಸಿನ ಆಮಿಷವೊಡ್ಡಿ ಊರ ಹೊರವಲಯದ ತೋಟವೊಂದಕ್ಕೆ ಕರೆದೊಯ್ಯುತ್ತಿದ್ದರು.

ತೋಟದ ನಿರ್ಜನ ಪ್ರದೇಶದಲ್ಲಿ ಆತನ ಮೇಲೆ ಅನೈಸರ್ಗಿಕ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಬಾಲಕನನ್ನು ಮನೆಗೆ ಅಥವಾ ಶಾಲೆಗೆ ಬಿಟ್ಟು ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಕಳೆದ ವಾರ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ಬಾಲಕನನ್ನು ಅಡ್ಡಗಟ್ಟಿದ ಆರೋಪಿಗಳು ಆತನ ಮೇಲೆ ಪೈಶಾಚಿಕ ರೀತಿಯಲ್ಲಿ ದೌರ್ಜನ್ಯ ಎಸಗಿ ಬಳಿಕ ಬಾಲಕನನ್ನು ಮನೆಗೆ ತಲುಪಿಸಿದ್ದರು.

ಮನೆಗೆ ಬಂದ ಬಳಿಕ ನಿತ್ರಾಣಗೊಂಡ ಬಾಲಕನಿಗೆ ಮರುದಿನ ವಿಪರೀತ ಜ್ವರ ಕಾಣಿಸಿಕೊಂಡು ಕೈ ಕಾಲುಗಳನ್ನು ಆಡಿಸದ ಪರಿಸ್ಥಿತಿ ತಲೆದೋರಿತ್ತು. ಇದನ್ನು ಗಮನಿಸಿದ ಬಾಲಕನ ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರಿಗೆ ಆತನ ಮೇಲೆ ದೌರ್ಜನ್ಯ ನಡೆದ ಬಗ್ಗೆ ಸಂಶಯ ಮೂಡಿದೆ. 

ಕೂಡಲೇ ವೈದ್ಯರು ಬಾಲಕನಿಗೆ ಆದ ತೊಂದರೆಯ ಬಗ್ಗೆ ಬಾಲಕನಿಂದಲೇ ಮಾಹಿತಿ ಪಡೆದು ಕೂಡಲೇ ಈ ವಿಷಯವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವೈದ್ಯರಿಂದ ಘಟನೆಯ ಮಾಹಿತಿ ದೊರೆಯುತ್ತಲೇ ಗ್ರಾಮಕ್ಕೆ ತೆರಳಿದ ಮಕ್ಕಳ ರಕ್ಷಣಾ ಘಟಕದವರು ದೌರ್ಜನ್ಯಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆತನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕನ ಮೇಲೆ ದೌರ್ಜನ್ಯ ಎಸಗಿದ ಯುವಕರ ವಿರುದ್ಧ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

click me!