
ರಾಜೇಶ್ ಶೆಟ್ಟಿ
ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ. ಆ ಕತೆಯನ್ನು ಅವರು ನಿರಾಳವಾಗಿ ಹೇಳಿದ್ದಾರೆ. ತನ್ನ ತಪ್ಪುಗಳು ಮನವರಿಕೆಯಾಗಲು ಪ್ರತಿಯೊಬ್ಬರಿಗೂ ಯಾವುದೋ ಒಂದು ಸನ್ನಿವೇಶ ಎದುರಾಗುತ್ತದೆ. ಗಾಂಧೀಜಿಯ ಬದುಕಲ್ಲಿ ಎಂಥಾ ಸನ್ನಿವೇಶ ಎದುರಾಗಿತ್ತು ಅನ್ನುವುದು ಮತ್ತು ಅದರಿಂದ ಹೇಗೆ ಬದಲಾದರು ಎಂಬ ಕತೆ ಎಲ್ಲರಿಗೂ ಸ್ಫೂರ್ತಿದಾಯಕ.
ನಿರ್ದೇಶಕರು ಎಷ್ಟುಗಾಢವಾಗಿ ಕತೆಗೆ ನಿಷ್ಠರಾಗಿದ್ದಾರೆ ಎಂದರೆ ಮೋಹನದಾಸ ಸಿಗರೇಟು ಸೇದುವುದು, ಮಾಂಸ ತಿನ್ನುವ ಸನ್ನಿವೇಶಗಳನ್ನು ತೀವ್ರವಾಗಿ ತೋರಿಸಿ ತೋರಿಸಿ ನೋಡುಗನ ಮನಸ್ಸಲ್ಲೂ ಪಾಪಪ್ರಜ್ಞೆ ಮೂಡಿಸುತ್ತಾರೆ. ಮೋಹನದಾಸನಿಗೆ ಮನಪರಿವರ್ತನೆಯಾದರೆ ನೋಡುಗನಿಗೆ ಅಯ್ಯೋ ಪಾಪ ಅನ್ನಿಸುತ್ತದೆ. ಅಷ್ಟರ ಮಟ್ಟಿಗೆ ಸಿನಿಮಾ ಪ್ರಭಾವಶಾಲಿ. ಗಾಂಧೀಜಿಯ ಕತೆಯನ್ನು ಹೊಸ ಕಾಲಕ್ಕೆ ಹೇಳುವುದು ಮುಖ್ಯ. ಮೋಹನದಾಸ ಗಾಂಧೀಜಿಯಾಗಿದ್ದು ಹೇಗೆ ಎಂಬ ಒಳನೋಟ ಮಕ್ಕಳಿಗೂ ದೊಡ್ಡವರಿಗೂ ಎಲ್ಲರಿಗೂ ಅರಿವಾಗಬೇಕು. ಆ ಹಿನ್ನೆಲೆಯಲ್ಲಿ ಈ ಪ್ರಯತ್ನ ಶ್ಲಾಘನೀಯ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದ ಚಿತ್ರಗಳಲ್ಲೇ ಇದು ತಾಂತ್ರಿಕವಾಗಿ ಬಹಳ ಮುಂದುವರಿದಿರುವ ಸಿನಿಮಾ. ಕತೆಯನ್ನು ಕಟ್ಟಿಕೊಡುವುದಕ್ಕೆ ನಿರ್ದೇಶಕರು ಇಲ್ಲಿ ಗ್ರಾಫಿಕ್ಸ್, ಅನಿಮೇಷನ್, ಗ್ರೀನ್ಮ್ಯಾಟ್ ತಂತ್ರಜ್ಞಾನ ಹೀಗೆ ಅನೇಕ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದಾರೆ. ಕತೆಯನ್ನು ಸಮರ್ಥವಾಗಿ ಹೇಳಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಬಳಸುವ ನಿರ್ದೇಶಕರ ಕಸುಬುದಾರಿಕೆ ಇಲ್ಲಿ ಗಮನಾರ್ಹ.
ತಾರಾಗಣ: ಸಮರ್ಥ, ಪರಮಸ್ವಾಮಿ, ಶ್ರುತಿ, ಅನಂತ ಮಹಾದೇವನ್, ದತ್ತಣ್ಣ
ನಿರ್ದೇಶನ: ಪಿ.ಶೇಷಾದ್ರಿ
ರೇಟಿಂಗ್: 3
ಇದೊಂದು ಕಲಾವಿದರ ಸಿನಿಮಾ. ಪರಮ್ಸ್ವಾಮಿ, ಸಮಥ್ರ್ ಹೊಂಬಾಳ್ ಎಂಬ ಇಬ್ಬರು ಬಾಲಕರು ಅದ್ಭುತವಾಗಿ ಮೋಹನದಾಸನನನ್ನು ಕಣ್ಣೆದುರಿಗೆ ತರುತ್ತಾರೆ. ಶ್ರುತಿ, ಅನಂತ ಮಹಾದೇವನ್, ಮೋಹನದಾಸ್ ಗೆಳೆಯರ ಪಾತ್ರಧಾರಿಗಳಾದ ಸೂರ್ಯ ಸಾತಿ, ಅಭಯಂಕರ್, ಶ್ರೀರಾಮ್, ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶಶಿಕುಮಾರ್, ಕೃಷ್ಣಮೂರ್ತಿ ಮುಂತಾದವರದು ಕೂಡ ನೆನಪಲ್ಲಿ ಉಳಿಯುವ ನಟನೆ. ಛಾಯಾಗ್ರಾಹಕರಾಗಿ ಜಿ.ಎಸ್ ಭಾಸ್ಕರ್, ಸಂಗೀತ ನಿರ್ದೇಶಕರಾಗಿ ಪ್ರವೀಣ್ ಗೋಡ್ಕಿಂಡಿಯವರ ಕೊಡುಗೆ ಈ ಸಿನಿಮಾದ ಶಕ್ತಿ. ಉಳಿದಿದ್ದು ಅವರವರ ಪ್ರಾಪ್ತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.