ಸೃಜನಶೀಲರು ಅಧಿಕಾರಿಗಳಿಗೆ ಹತ್ತಿರ ಇರಬೇಕೇ?

By Kannadaprabha NewsFirst Published May 7, 2023, 4:27 PM IST
Highlights

ಆರ್ಚ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಅನುಭವಿಸಿದ ಕಷ್ಟದ ಬಗ್ಗೆ, ಬಾಸ್‌ಗಳ ಕಿರುಕುಳದ ಬಗ್ಗೆ ಬರೆದಿರುವ ಲೇಖನ ಇಲ್ಲಿದೆ.

-ವೆಂಕಟಾಚಲಪತಿ

1996ರ ಸಮಯದಲ್ಲಿ ವಿ.ಐ.ಟಿ.ಎಂ ಆರ್ಚ್‌ ವಿಭಾಗದ ಸತೀಶ್‌ ಪಂಡಿತ್‌ ದೆಹಲಿಗೆ ವರ್ಗಾವಣೆಯಾದರು. ಮೆಕ್ಯಾನಿಕಲ್‌ ವರ್ಕ್ಶಾಪ್‌ ಮುಖ್ಯಸ್ಥರಾದ ಟಿ.ಕೆ. ರಾಯ್‌ ಆರ್ಚ್‌ ಸೆಷನ್‌ನ ಇನ್‌ಚಾರ್ಜ್ ಆಗಿ ಬಂದರು. ನಂತರ ನನಗೆ ಕಷ್ಟದ ದಿನ ಪ್ರಾರಂಭವಾಯಿತು. ಟಿ.ಕೆ. ರಾಯ್‌ ತುಂಬಾ ಕೆಟ್ಟಸ್ವಭಾವದವರು. ಎಲ್ಲರನ್ನೂ ಕಟುವಾಗಿ ನೋಡುವ ಸ್ವಭಾವದವರು. ಯಾವಾಗಲೂ ಕಿರಿಕಿರಿ. ಸುಮ್ಮನೆ ಮೆಮೋಗಳನ್ನು ನೀಡುತ್ತಾ ಬಂದರು. ಹೀಗೆ ದಿನಗಳು ಕಳೆಯುತ್ತಿದ್ದವು. ಆಫೀಸ್‌ನ ರುಟೀನ್‌ ಕೆಲಸಗಳಲ್ಲಿ ಮೋಟಿವ್‌ಪವರ್‌ ಗ್ಯಾಲರಿ ರಿನೋವೇಶನ್‌ ಕೆಲಸದಲ್ಲಿ 40 ಅಡಿ * 8 ಅಡಿ ಅಳತೆಯ ಅರ್ಲಿ ಹಾಗೂ ಪ್ರಸೆಂಟ್‌ ಇಂಜಿನ್‌ಗಳು ಹಾಗೂ ವಾಹನಗಳಿಗೆ ಸಂಬಂಧಿಸಿದ ಮ್ಯೂರಲ್‌ ಫೈಬರ್‌ ಗ್ಲಾಸಿನಲ್ಲಿ ಮಾಡಿದೆ. ಶಿವನಸಮುದ್ರದ ಡೈರಾಮಾ, ಮ್ಯಾನ್‌ ಪವರ್‌ ಹೀಗೆ ಕೆಲವು ಡೈರಾಮಾಗಳ ರಿನೋವೇಶನ್‌ ಕೆಲಸಗಳು ನಡೆದವು.

ಗಲಾಟೆ, ಮೆಮೋಗಳ ಮಧ್ಯೆ ನನಗೆ ತುಂಬಾ ಮುಜುಗರವಾಗುತ್ತಿತ್ತು. ನನಗೆ ಗಿರಿಜಮ್ಮ, ಶಶಿಧರ್‌ ಮತ್ತು ಮಂಜುನಾಥ್‌ ಅವರ ಸಹಕಾರವಿದ್ದುದ್ದರಿಂದ ಮೆಮೋಗಳಿಗೆ ಉತ್ತರ ನೀಡುತ್ತಿದ್ದೆ. ಹೀಗೆ ಆಫೀಸ್‌ನಲ್ಲಿ ಕೆಲಸ ಮಾಡುವವರು ಹೊರಗೆ ಕೆಲಸ ಮಾಡಬಾರದು ಎಂಬ ನಿಯಮದಿಂದ ಎಲ್ಲೂ ಕೆಲಸ ತೆಗೆದುಕೊಳ್ಳಬಾರದಿತ್ತು. ಅಲ್ಲದೆ ಮಾಧ್ಯಮಗಳಲ್ಲಿ ಪ್ರಚಾರ ಬಂದರೆ ಅದನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಈ ಎಲ್ಲಾ ಒತ್ತಡಗಳಲ್ಲೂ ಕೆಲಸ ಮಾಡುತ್ತಿದ್ದೆ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಶಿಲ್ಪಕಲೆಯಲ್ಲಿನ ಸಾಧನೆಗಾಗಿ ನನಗೆ 1997ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿತು. 1997ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಇದರಿಂದ ಪತ್ರಿಕಾ ಮಾಧ್ಯಮಗಳಲ್ಲಿ ಟಿ.ವಿಗಳಲ್ಲಿ ಪ್ರಚಾರ ಹೆಚ್ಚಾಗಿ ಸಿಕ್ಕಿತು. ಇದನ್ನು ಗಮನಿಸಿದ ವಿ.ಐ.ಟಿ. ಮ್ಯೂಜಿಯಂನ ಅಧಿಕಾರಿಗಳು ಸಹಿಸದಾದರು. ನನಗೆ ಹೆಚ್ಚು ಕಿರುಕುಳ ಕೊಡಲಾರಂಭಿಸಿದರು. ನನ್ನ ಸಹಪಾಠಿಗಳಲ್ಲಿ ಕೆಲವರಿಗೆ ಆಫೀಸ್‌ನಲ್ಲಿ ತೊಂದರೆಗಳನ್ನು ಕೊಡುತ್ತಿದ್ದರು ಹಾಗೂ ಮೆಮೊಗಳನ್ನು ನೀಡುತ್ತಿದ್ದರು. ಅಷ್ಟರಲ್ಲಿ ಡ್ರೈವರ್‌ ರಾಜೇಂದ್ರ ಕುಮಾರ್‌ ಅಡ್ಮಿನ್‌ ಬಳಗದ ಮತ್ತೊಬ್ಬರು ನವನೀತ್‌ ರಾವ್‌, ನಾನು ಸೇರಿಕೊಂಡು ನಮಗೆಲ್ಲ ಆಫೀಸ್‌ಗೆ ಬರದಿರಲು ಅಮಾನತ್ತು ನೀಡಿತ್ತು. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಅನಂತಕುಮಾರ್‌ ಅಂದಿನ ಹ್ಯೂಮನ್‌ ರಿಸೋರ್ಸ್‌ ಆ್ಯಂಡ್‌ ಕಲ್ಚರಲ್‌ ಮಂತ್ರಿಗಳಾಗಿದ್ದರು. (ನಮ್ಮ ಮ್ಯೂಜಿಯಂ ಕೂಡ ಅವರ ಅಧೀನದಲ್ಲೇ ಬರುತ್ತಿತ್ತು). ಅವರ ಬಳಿ ಸಾಕಷ್ಟುಬಾರಿ ಹೋಗಿ ನಮ್ಮ ತೊಂದರೆಗಳನ್ನು ತೋಡಿಕೊಂಡೆವು.

ಅವರ ಪಿ.ಎ ಆಗಿದ್ದ ವಿಶ್ವೇಶ್ವರ ಭಟ್ಟರು ನಮಗೆ ಸಹಕರಿಸಿದರು. ನಂತರದಲ್ಲಿ ಡಾ ಚಿದಾನಂದಮೂರ್ತಿ ಮತ್ತು ಎ.ಎಸ್‌. ಮೂರ್ತಿ ಮಂತ್ರಿಗಳನ್ನು ಕಾಣಲು ಕರೆದುಕೊಂಡು ಬಂದು ಮಂತ್ರಿಗಳ ಸಮ್ಮುಖದಲ್ಲಿ ವಿ.ಐ.ಟಿ.ಎಂ.ನಲ್ಲಿ ನಡೆಯುತ್ತಿರುವ ತೊಂದರೆಗಳು, ಅಧಿಕಾರಿಗಳು ಈ ಭಾಗದ ಸಹೋದ್ಯೋಗಿಗಳಿಗೆ ನೀಡುತ್ತಿದ್ದ ತೊಂದರೆಗಳನ್ನು ವಿವರಿಸಿದಾಗ ಅವರು ಒಂದು ನಿರ್ಧಾರಕ್ಕೆ ಬಂದರು. ಮ್ಯೂಜಿಯಂನ ಅಧಿಕಾರಿಗಳಲ್ಲಿ ಯಾರನ್ನು ಟ್ರಾನ್ಸ್‌ಫರ್‌ ಮಾಡಬೇಕು, ವಿ.ಐ.ಟಿ.ಎಂ.ಗೆ ಯಾರನ್ನು ಕರೆಸಬೇಕು, ಅಡ್ಮಿನ್‌ ಆಫೀಸರ್‌ ಆಗಿದ್ದ ನಂದಕುಮಾರ್‌ ಅವರನ್ನು ಕಲ್ಕತ್ತಾಕ್ಕೆ, ಡೈರಕ್ಟರ್‌ ಅನ್ನು ಬೇರೆಡೆಗೆ ಟ್ರಾನ್ಸ್‌ಫರ್‌ ಮಾಡಿ ವಾಸುದೇವ್‌ ಭಟ್ಟಅವರನ್ನು ನಾಗಪುರದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿ ಆದೇಶ ನೀಡಿದರು. ಮತ್ತೆ ಕೇಂದ್ರದಲ್ಲಿ ಬಿ.ಜೆ.ಪಿ. ಸರ್ಕಾರ ಒಂದು ಅಧಿಕಾರ ಕಳೆದುಕೊಂಡಿತು. ಅಡ್ಮಿನ್‌ ಅಫೀಸರ್‌ ನಂದಕುಮಾರ್‌ ಮತ್ತೆ ಬೆಂಗಳೂರಿಗೆ ವರ್ಗಾವಣೆಯಾದರು. ನಮ್ಮ ಕೇಸ್‌ ಹಾಗೆಯೇ ಮುಂದುವರೆಯಿತು.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಕರ್ನಾಟಕದ ಉದ್ಯೋಗಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಕೂಗು ಕೇಳಿ ಕನ್ನಡ ಶಕ್ತಿಕೇಂದ್ರದ ಡಾ ಚಿದಾನಂದಮೂರ್ತಿ ಹಾಗೂ ಎ.ಎಸ್‌. ಮೂರ್ತಿ ಅವರು ನಮ್ಮನ್ನು ಬೆಂಬಲಿಸಿ ನಿಂತರು. ಇವರಲ್ಲದೆ ಕಲಾವಿದ ಜಾನ್‌ ದೇವರಾಜ್‌ ಅವರು ‘ಪೋಸ್ಟರ್‌’ಗಳನ್ನು ಬರೆದು ಕಲಾವಿದರ ಗುಂಪು ಕೂಡಿಸಿ ಮ್ಯೂಜಿಯಂ ಮುಂದೆ ಸತ್ಯಾಗ್ರಹ ಮಾಡಿ ನಮ್ಮನ್ನು ಬೆಂಬಲಿಸಿದರು. ಇದೆಲ್ಲ ಮ್ಯೂಜಿಯಂ ಅಧಿಕಾರಿಗಳಿಗೆ ಮುಜುಗರದೊಂದಿಗೆ ಖೇದವುಂಟುಮಾಡಿತು. ಇದಕ್ಕೆಲ್ಲ ಅಂಜದೆ ನಾನು ನನ್ನ ಕೆಲಸಗಳನ್ನು ಮುಂದುವರೆಸಿಕೊಂಡು ಬಂದೆ.

1997ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ವತಿಯಿಂದ ಮಂಗಳೂರಿನ ಸಮ್ಮರ್‌ ಸ್ಯಾಂಡ್‌ ಬೀಚ್‌ನಲ್ಲಿ ಹಿಂದುಳಿದ ಅಲ್ಪಸಂಖ್ಯಾತ ಕಲಾವಿದರಿಗಾಗಿ ಟೆರ್ರಾಕೊಟಾ ಮಾಧ್ಯಮದಲ್ಲಿ ಶಿಬಿರ ನಡೆಯಿತು. ಈ ಶಿಬಿರದ ನಿರ್ದೇಶಕನಾಗಿ ಶಿಲ್ಪಕಲಾ ವಿದ್ಯಾರ್ಥಿಗಳಿಂದ ಒಳ್ಳೆಯ ಕ್ರಿಯಾತ್ಮಕ ಶಿಲ್ಪಗಳನ್ನು ಮಾಡಿಸಿದೆ. ಸಮ್ಮರ್‌ ಸ್ಯಾಂಡ್‌ ಬೀಚ್‌ನಲ್ಲಿ ನಡೆದ ಶಿಬಿರ ನೋಡಲು ಬಂದಿದ್ದ ಶಿಲ್ಪಿಗಳೊಬ್ಬರ ಪರಿಚಯ ನನಗಾಯಿತು. ಅವರೇ ಮೇರಿ ಮರ್ಲಿನ್‌. ಇವರು ಟೆರ್ರಾಕೋಟಾ ಜ್ಯೂವೆಲ್ಲರಿ ಕೂಡ ಮಾಡುತ್ತಿದ್ದರು. ತಂದೆ ತಾತನ ಕಾಲದಿಂದ ಸುಮಾರು 150 ವರ್ಷಗಳ ಇತಿಹಾಸವಿರುವ ಟೆರ್ರಾಕೋಟಾ ಕ್ರಿಶ್ಚಿಯನ್‌ ಶಿಲ್ಪಗಳನ್ನು ಮಾಡುತ್ತಿದ್ದರು. ಮೆಡೋನಾ ಆ್ಯಂಡ್‌ ಚೈಲ್ಡ್‌, ಮದರ್‌, ಕ್ರೈಸ್ಟ್‌ ಹೀಗೆ ಸಾವಿರಾರು ಕ್ರಿಶ್ಚಿಯನ್‌ ಸಂಪ್ರದಾಯಕ್ಕೆ ಸೇರಿದ ಶಿಲ್ಪಗಳನ್ನು ಮಾಡುತ್ತಿದ್ದರು. ಈ ಟೆರ್ರಾಕೋಟಾ ಶಿಲ್ಪಗಳನ್ನು ಅವರು ಮಾಡುವ ವಿಧಾನ ನನಗೆ ಬಹಳ ಆಶ್ಚರ್ಯವಾಗಿ ಕಂಡಿತು. ಮಣ್ಣಿನ ಒಂದೇ ಬ್ಲಾಕ್‌ ಮಾಡಿ ಅದು ಅರ್ಧ ಒಣಗಿದ ಮೇಲೆ ಯಾವ ಶಿಲ್ಪ ಮಾಡಲು ನಿರ್ಧರಿಸಿದ್ದರೋ ಅದರ ಮಣ್ಣಿನ ಮೂರ್ತಿಯನ್ನು ಕೆತ್ತಿ ತೆಗೆದು ಸಿದ್ಧವಾದ ಮೇಲೆ

ಮೂರ್ತಿಯನ್ನು ಅರ್ಧಕ್ಕೆ ಸೀಳಿ ಶಿಲ್ಪದ ಒಳಭಾಗ ಅರ್ಧ ಇಂಚಿನಷ್ಟುದಪ್ಪ ಉಳಿಸಿಕೊಂಡು ಒಳಭಾಗವನ್ನು ತೆಗೆದು, ಮಣ್ಣಿನ ‘ಸ್ಲಿಪ್‌’ ಅನ್ನು ಸೀಳಿದ ಜಾಗಕ್ಕೆಲ್ಲ ಲೇಪಿಸುತ್ತಿದ್ದರು. ಶಿಲ್ಪದ ಎರಡು ಭಾಗವನ್ನು ಜೋಡಿಸಿ ಫಿನಿಷಿಂಗ್‌ ಮಾಡಿಕೊಂಡು ಮಣ್ಣಿನ ಶಿಲ್ಪ ಒಣಗಿದ ಮೇಲೆ ಸುಮಾರು 700 ಸೆಂ. ಬಿಸಿಯಲ್ಲಿ ಇಟ್ಟಾಗ ಅದು ‘ಟೆರ್ರಾಕೊಟಾ’ ಶಿಲ್ಪವಾಗುತ್ತಿತ್ತು. ನಂತರ ಬಣ್ಣಗಳನ್ನು ಲೇಪಿಸಿ, ಚಚ್‌ರ್‍ಗಳಿಗೂ ಬೇಕಾದವರಿಗೂ ಮಾಡಿಕೊಡುತ್ತಿದ್ದರು. ಅದ್ಭುತ ತಂತ್ರಗಾರಿಕೆ; ಇದನ್ನು ಗಮನಿಸಬೇಕು.

ನಮ್ಮ ಆಫೀಸ್‌ನಲ್ಲಾಗುತ್ತಿದ್ದ ಕಿರಿಕಿರಿ, ತೊಂದರೆಗಳು, ಮೆಮೋಗಳಿಗೆ ಉತ್ತರಿಸಲು ನನ್ನ ಸಹಪಾಠಿ ಮಿತ್ರರಾದ ಕೇಶವ ಅಯ್ಯಂಗಾರ್‌, ಗಿರಿಜಮ್ಮ ಹಾಗೂ ಮಂಜುನಾಥ್‌ ನನ್ನ ಬೆನ್ನೆಲುಬಾಗಿ ನಿಂತರು. ನಾವು ಕೂಡ ಒಬ್ಬ ಅಡ್ವೊಕೇಟ್‌ ಅವರನ್ನು ನೇಮಿಸಿ ನನ್ನ ಪರವಾಗಿ ಉತ್ತರಿಸಲು ಏರ್ಪಡಿಸಿದ್ದೆವು. ನಾನು ಮಾಡಿದ ದೇವರಾಜ್‌ ಅರಸು ಮೂರ್ತಿಯ ಬಗ್ಗೆ ಆಫೀಸ್‌ ಪಡೆದಿದ್ದ ದಾಖಲೆಗಳಿಂದ ಅದು ತುಂಬಾ ಕಷ್ಟವಿದ್ದು ಹಾಗೂ ಹೀಗೂ ಒಂದು ವರ್ಷ ಕಾಲ ಕೇಸನ್ನು ಮುಂದುವರೆಸಿದರು.

ಇದಲ್ಲದೆ ದೆಹಲಿಯ ನ್ಯಾಷನಲ್‌ ಸೈನ್ಸ್‌ ಸೆಂಟರ್‌ನ ಕ್ಯೂರಿಯೇಟರ್‌ ಕೆನೆತ್‌ ಅವರನ್ನು ಎನ್‌ಕ್ವಯರಿ ಆಫೀಸರ್‌ ಆಗಿ ಕಳಿಸಿದರು. ನನ್ನ ಪರವಾಗಿ ವಿ.ಐ.ಟಿ.ಎಂ.ನ ಮಾಜಿ ಡೈರೆಕ್ಟರ್‌ ನಾಗರಾಜನ್‌ ವಾದಿಸಿದರು. ನನ್ನ ಪತ್ರ ವ್ಯವಹಾರಕ್ಕೆ ವಿ.ಐ.ಟಿ.ಎಂ. ಮಂಜುನಾಥ್‌ ಅವರು ಅನುವು ಮಾಡಿಕೊಟ್ಟರು. ಇವರನ್ನು ಎಂದೂ ಮರೆಯಲಾಗದು. ಇದೆಲ್ಲವನ್ನು ಗಮನಿಸಿದ ಕೋರ್ಟು ಮತ್ತು ಎನ್‌ಕ್ವಯರಿ ಆಫೀಸರ್‌ ರಿಪೋರ್ಚ್‌ನಿಂದ ನನಗೆ ಕಂಪಲ್ಸರಿ ರಿಟೈರ್‌ಮೆಂಟ್‌ ತೆಗೆದುಕೊಳ್ಳಬೇಕಾಯಿತು; 1999ರ ಅಕ್ಟೋಬರ್‌ ತಿಂಗಳ 16ಕ್ಕೆ ನನ್ನ ವಿ.ಐ.ಟಿ. ಮ್ಯೂಜಿಯಂನ ಋುಣ ತೀರಿತು. ನಾನು ನನ್ನ ಮುಂದಿನ ಯೋಜನೆ ರೂಪಿಸಲು ಸಜ್ಜಾದೆ.

click me!