Dharwad: ಬ್ರಿಟಿಷ್‌ ಸರ್ಕಾರದಲ್ಲೇ ಸ್ಥಾಪಿತವಾದ ಡಿಮ್ಹಾನ್ಸ್‌ ಮೇಲ್ದರ್ಜೆಗೇರಿಸುವುದ್ಯಾವಾಗ?

Kannadaprabha News   | Asianet News
Published : Jan 15, 2022, 11:26 AM IST
Dharwad: ಬ್ರಿಟಿಷ್‌ ಸರ್ಕಾರದಲ್ಲೇ ಸ್ಥಾಪಿತವಾದ ಡಿಮ್ಹಾನ್ಸ್‌ ಮೇಲ್ದರ್ಜೆಗೇರಿಸುವುದ್ಯಾವಾಗ?

ಸಾರಾಂಶ

*  ಬಜೆಟ್‌ನಲ್ಲಿ ಘೋಷಣೆಯಾಗಿತ್ತು ಆದರೆ ಕೆಲಸ ಮಾತ್ರ ಶುರುವಾಗಿಲ್ಲ *  ತಕ್ಷಣವೇ ಶುರು ಮಾಡಿ: ನಾಗರಿಕರ ಒತ್ತಾಯ *  ದಕ್ಷಿಣ ಭಾರತದ ಎರಡನೆಯ ಅತಿ ಹಳೆಯ ಆಸ್ಪತ್ರೆ  

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜ.15):  ಬ್ರಿಟಿಷ್‌ ಸರ್ಕಾರದಲ್ಲೇ(British Government) ಸ್ಥಾಪಿತವಾದ ದಕ್ಷಿಣ ಭಾರತದ(South India) ಎರಡನೆಯ ಅತಿ ಹಳೆಯ ಆಸ್ಪತ್ರೆಯಾಗಿರುವ ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ವಿಜ್ಞಾನ ಸಂಸ್ಥೆಯ (DIMHANS) ಮೇಲ್ದರ್ಜೆಗೇರಿಸುವುದ್ಯಾವಾಗ? ಬರೀ ಬಜೆಟ್‌ನಲ್ಲಿ ಘೋಷಿಸಿದ ಯೋಜನೆ ಏನಾಯಿತು?

ಇದು ಉತ್ತರ ಕರ್ನಾಟಕದ(North Karnataka) ಜನತೆಯ ಪ್ರಶ್ನೆ. ಈ ಆಸ್ಪತ್ರೆ ಸ್ಥಾಪಿತವಾಗಿದ್ದು ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ. ಸ್ವತಂತ್ರ ಭಾರತದ ನಂತರ ಜಿಲ್ಲಾ ಶಸ್ತ್ರಚಿಕಿತ್ಸಕರ ಆಡಳಿತಕ್ಕೊಳಪಟ್ಟಿದ್ದ ಈ ಆಸ್ಪತ್ರೆ ಬಳಿಕ ಕಿಮ್ಸ್‌(KIMS) ಆಡಳಿತಕ್ಕೊಳಪಟ್ಟಿತು. ಇದೀಗ ಪ್ರತ್ಯೇಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. 200 ಹಾಸಿಗೆಯುಳ್ಳ ಈ ಮಾನಸಿಕ ಆರೋಗ್ಯ ಹಾಗೂ ನರರೋಗಳ ಆಸ್ಪತ್ರೆಯೂ ಉತ್ತರ ಕರ್ನಾಟಕದ ಪಾಲಿಗೆ ಕಿಮ್ಸ್‌ನಂತೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆಗೆ ಉತ್ತರ ಕರ್ನಾಟಕದ ವಿಜಯಪುರ, ಹಾವೇರಿ, ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೋಗಿಗಳು(Patients) ಬರುತ್ತಾರೆ. ಇದನ್ನು ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಬಹುವರ್ಷಗಳದ್ದು.

ಧಾರವಾಡ: ಸೋಂಕಿತರಿಗೆ ಡಿಮ್ಹಾನ್ಸ್‌ನಲ್ಲಿ ಟೆಲಿಫೋನಿಕ್‌ ಸೈಕೋ ಥೆರಪಿ

ಬಜೆಟ್‌ನಲ್ಲಿ ಘೋಷಣೆ:

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ(Government of Karnataka) ಕೂಡ ಕಳೆದ ಬಜೆಟ್‌ನಲ್ಲಿ(Budget) ಇದನ್ನು ಮೇಲ್ದರ್ಜೆಗೇರಿಸುವುದಾಗಿ ಘೋಷಣೆ ಕೂಡ ಮಾಡಿತ್ತು. 75 ಕೋಟಿಯಲ್ಲಿ ಆಸ್ಪತ್ರೆಯನ್ನು(Hospital) ಮೇಲ್ದರ್ಜೆಗೇರಿಸಲಾಗುವುದು. ಮಾನಸಿಕ ನರರೋಗಿಗಳ ಸುಸಜ್ಜಿತ ಚಿಕಿತ್ಸಾ ಸಂಸ್ಥೆಯನ್ನಾಗಿ ಮಾಡುವುದಾಗಿ ಘೋಷಿಸಿತ್ತು. ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದ ಸರ್ಕಾರ, ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 10 ಕೋಟಿ ಮೀಸಲಿಡುವುದಾಗಿ ಹೇಳಿತ್ತು.

ಟೆಂಡರ್‌ ಕರೆದರೂ ಬರುತ್ತಿಲ್ಲ:

ಈ ನಡುವೆ 10 ಕೋಟಿ ವೆಚ್ಚದ ಪ್ರಥಮ ಹಂತದ ಅಭಿವೃದ್ಧಿ ಕಾರ್ಯದ ಪೈಕಿ 7 ಕೋಟಿ ವೆಚ್ಚದಲ್ಲಿ ಎಂಆರ್‌ಐ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. ಅದಕ್ಕಾಗಿ ಒಂದು ಬಾರಿ ಟೆಂಡರ್‌ ಕೂಡ ಕರೆಯಲಾಗಿದೆ. ಆದರೆ ಒಬ್ಬರೇ ಒಬ್ಬರು ಟೆಂಡರ್‌ ಹಾಕಿರುವುದಂತೆ. ಒಬ್ಬರೇ ಟೆಂಡರ್‌ ಹಾಕಿದರೆ ಮತ್ತೊಮ್ಮೆ ಟೆಂಡರ್‌ ಕರೆಯುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಟೆಂಡರ್‌ ಕರೆಯಲಾಗಿದೆಯಂತೆ. ಈಗಲಾದರೂ ಯಾರಾದರೂ ಬರುತ್ತಾರೆಯೇ ಎಂಬುದನ್ನು ನೋಡಬೇಕಿದೆ ಎಂಬ ಸ್ಪಷ್ಟನೆ ಆಸ್ಪತ್ರೆ ಆಡಳಿತ ಮಂಡಳಿಯದ್ದು.

Covid 19 Spike: ಇಂದಿನಿಂದ 1-8ನೇ ಭೌತಿಕ ತರಗತಿ ಬಂದ್‌

ಇನ್ನುಳಿದ 3 ಕೋಟಿ ವೆಚ್ಚದಲ್ಲಿ ನ್ಯೂರಾಲಜಿ ಐಸಿಯು(ICU of Neurology), ವಾರ್ಡ್‌ಗಳ ಅಭಿವೃದ್ಧಿ, ಆಕ್ಸಿಜನ್‌ ಬೆಡ್‌, ವೆಂಟಿಲೇಟ​ರ್ಸ್‌ ಮತ್ತಿತರ ಉಪಕರಣ ಅಳವಡಿಕೆ, ಅಭಿವೃದ್ಧಿ ಕೆಲಸಗಳಾಗಬೇಕು. ಆದರೆ ಆ ಕೆಲಸವಿನ್ನೂ ಶುರುವಾಗಿಲ್ಲ. ಈ ಬಗ್ಗೆ ಕೇಳಿದರೆ, ಸರ್ಕಾರದಿಂದ ಮಾಹಿತಿ ಕೇಳಿದೆ. ನಮಗೇನು ಬೇಕು ಎಂಬ ಬೇಡಿಕೆಗಳ ಪಟ್ಟಿನೀಡಲಾಗಿದೆ. ಆದರೆ ಅಲ್ಲಿಂದ ಯಾವುದೇ ಬಗೆಯ ಹಣ ಬಿಡುಗಡೆಯಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸುತ್ತದೆ. ಕೋವಿಡ್‌ ಸಮಯದಲ್ಲಿ ಡಿಮ್ಹಾನ್ಸ್‌ ಮಾಡಿರುವ ಕಾರ್ಯ ಅತ್ಯದ್ಭುತ. ಸೈಕೋಥೆರಪಿ, ಕೋವಿಡ್‌ ಕೇರ್‌ ಸೆಂಟರ್‌(Covid Care Center) ಮೂಲಕ ಕೋವಿಡ್‌ ನಿಯಂತ್ರಣಕ್ಕೆ ತನ್ನದೇ ಆದ ಕೆಲಸ ನಿರ್ವಹಿಸಿದೆ. ಹೀಗಾಗಿ ಇದರ ಅಭಿವೃದ್ಧಿಗೆ ಮೀನಮೇಷ ಎಣಿಸದೇ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

ಸರ್ಕಾರ ಬಜೆಟ್‌ನಲ್ಲಿ ಈ ವರ್ಷ 10 ಕೋಟಿ ಕೊಡುವುದಾಗಿ ಘೋಷಿಸಿತ್ತು. ಅದರಲ್ಲಿ ಎಂಆರ್‌ಐಗೆ 7 ಕೋಟಿ ವೆಚ್ಚವಾಗುತ್ತದೆ. ಅದಕ್ಕಾಗಿ ಒಂದು ಬಾರಿ ಟೆಂಡರ್‌ ಕೂಡ ಕರೆಯಲಾಗಿತ್ತು. ಆದರೆ ಒಬ್ಬರೇ ಟೆಂಡರ್‌ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮರುಟೆಂಡರ್‌ ಕರೆದಿದೆ. ಇನ್ನೂ ಉಳಿದ ಅಭಿವೃದ್ಧಿ ಕೆಲಸಗಳಿನ್ನೂ ಶುರುವಾಗಿಲ್ಲ ಅಂತ ಡಿಮ್ಹಾನ್ಸ್‌ ನಿರ್ದೇಶಕ ಡಾ. ಮಹೇಶ ದೇಸಾಯಿ ತಿಳಿಸಿದ್ದಾರೆ. 

ಡಿಮ್ಹಾನ್ಸ್‌ ಮೇಲ್ದರ್ಜೆಗೇರಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ ಈ ವರೆಗೂ ಅದರ ಕೆಲಸ ಮಾತ್ರ ಶುರು ಮಾಡಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳಬೇಕು. ಸರ್ಕಾರದ ಘೋಷಣೆ ಬರೀ ಘೋಷಣೆಯಾಗಬಾರದಷ್ಟೇ ಅಂತ ನಾಗರಿಕ ಪ್ರಕಾಶಗೌಡ ಪಾಟೀಲ ಹೇಳಿದ್ದಾರೆ.  
 

PREV
Read more Articles on
click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ