ಆತಂಕಗೊಂಡು ICU ಕಾಯ್ದಿರಿಸಬೇಡಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ

By Kannadaprabha NewsFirst Published Apr 27, 2021, 12:22 PM IST
Highlights

 ಐಸಿಯು ಮತ್ತು ವೆಂಟಿಲೇಟರ್‌ ಕೊರತೆ ಇದೆ. ಆದ್ದರಿಂದ ಯಾರೂ ಕೂಡ ಅನಗತ್ಯವಾಗಿ ಆತಂಕಕ್ಕೆ ಒಳಗಾಗಿ ಐಸಿಯು ಕಾಯ್ದಿರಿಸಿಕೊಳ್ಳುವುದು ಬೇಡ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. 

ಮೈಸೂರು (ಏ.27):  ಜಿಲ್ಲೆಯಲ್ಲಿ ಆಕ್ಸಿಜಿನೇಟೆಡ್‌ ಹಾಸಿಗೆಯ ಕೊರತೆ ಇಲ್ಲ. ಬದಲಿಗೆ ಐಸಿಯು ಮತ್ತು ವೆಂಟಿಲೇಟರ್‌ ಕೊರತೆ ಇದೆ. ಆದ್ದರಿಂದ ಯಾರೂ ಕೂಡ ಅನಗತ್ಯವಾಗಿ ಆತಂಕಕ್ಕೆ ಒಳಗಾಗಿ ಐಸಿಯು ಕಾಯ್ದಿರಿಸಿಕೊಳ್ಳುವುದು, ಆಕ್ಸಿಜನಿಟೇಡ್‌ ಹಾಸಿಗೆ ಮೀಸಲಿಟ್ಟುಕೊಳ್ಳುವುದನ್ನು ಮಾಡಬಾರದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ   ಮಾತನಾಡಿದ ಅವರು, ಏಪ್ರಿಲ್‌ ಮೊದಲ ವಾರದಿಂದ ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ಆರಂಭವಾಗಿದೆ ಎಂದು ಅಂದಾಜಿಸಲಾಗಿದೆ. ಮಾಚ್‌ರ್‍ನಲ್ಲಿ 100ಕ್ಕಿಂತ ಕಡಿಮೆ ಪ್ರಕಣ ದಾಖಲಾಗುತ್ತಿತ್ತು. ಈಗ 700 ರಿಂದ ಒಂದು ಸಾವಿರದವರೆಗೆ ಸೋಂಕಿತರು ಕಂಡುಬರುತ್ತಿದ್ದಾರೆ. ಮೊದಲ ಅಲೆಯಲ್ಲಿನ ಲಕ್ಷಣದ ಜೊತೆಗೆ ಬೇರೆ ಬೇರೆ ಲಕ್ಷಣಗಳೂ ಕಂಡುಬರುತ್ತಿದೆ. ಶೇ. 15 ರಿಂದ 20ರಷ್ಟುಪರೀಕ್ಷೆಯಲ್ಲಿ ನೆಟೆಟಿವ್‌ ಫಲಿತಾಂಶ ಬರುತ್ತಿದೆ. ಆದರೆ ಕೋವಿಡ್‌ ಲಕ್ಷಣ ಇದ್ದರೆ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.

 

ಕೊರೋನಾ 2ನೇ ಅಲೆಯು ಬಹಳ ವೇಗವಾಗಿ ಹರಡುತ್ತಿದೆ. ಪ್ರತಿದಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗೆ ಜನ ಹೆಚ್ಚು ಮಂದಿ ಬರುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದು ಔಷಧ ಲಭ್ಯವಾಗುತ್ತಿಲ್ಲ, ಬೆಡ್‌ ಕೊರತೆ, ಆಕ್ಸಿಜನ್‌ ಕೊರತೆ ಎಂಬ ಭಯವಿದೆ. ಆದರೆ ರೆಮಿಡಿಸಿವರ್‌ಗೆ ಸರ್ಕಾರಿ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಕೊರತೆ ಇಲ್ಲ. ಜಿಲ್ಲೆಯಲ್ಲಿ 140 ಖಾಸಗಿ ಆಸ್ಪತ್ರೆಗಳಿದ್ದು, ಈ ಪೈಕಿ 35 ಆಸ್ಪತ್ರೆ ಮಾತ್ರ ಎಸ್‌ಎಎಸ್‌ಟಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿವೆ. ಮೇ 1 ರಿಂದ ಈ ಕೊರತೆ ಸುಧಾರಣೆ ಆಗಲಿದೆ. ಮುಂಚೆಯೇ ಹೆಸರು ನೋಂದಾಯಿಸಿಕೊಂಡು ಬಂದರೆ ರೆಮಿಡಿಸಿವರ್‌ ಕೊರತೆ ಇರುವುದಿಲ್ಲ ಎಂದು ಅವರು ವಿವರಿಸಿದರು.

ಕೊರೋನಾ ರಿಪೋರ್ಟ್‌ ಮಾರಾಟ: ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸುಧಾಕರ್ ಪ್ರತಿಕ್ರಿಯೆ

ದಿನಕ್ಕೆ 1000 ಕೇಸ್‌ ಇದ್ದರೆ ಶೇ. 10 ರಿಂದ 20 ಮಂದಿಗೆ ಮಾತ್ರ ಬೆಡ್‌ ಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ 3 ಸಾವಿರ, ಸರ್ಕಾರಿ ಆಸ್ಪತ್ರೆಯಲ್ಲಿ 2 ಸಾವಿರ ಇದೆ. ಜಯದೇವ ಆಸ್ಪತ್ರೆಯೂ ಸೇರಿದರೆ ಒಟ್ಟು 7 ಸಾವಿರ ಬೆಡ್‌ ಇದೆ. ಆಕ್ಸಿಜನ್‌ ಹಾಸಿಗೆ ಮತ್ತು ಅನಗತ್ಯವಾಗಿ ಬೆಡ್‌ಗಳನ್ನು ಮೀಸಲಿಟ್ಟುಕೊಳ್ಳಲಾಗುತ್ತಿದೆ. ಆದರೆ ಆಕ್ಸಿಜಿನೇಟೆಡ್‌ ಹಾಸಿಗೆ ಕೊರತೆ ಇಲ್ಲ. ಆಕ್ಸಿಜಿನೇಟ್‌ ಬೆಡ್‌ 155 ಖಾಸಗಿ, ಕೆ.ಆರ್‌. ಆಸ್ಪತ್ರೆಯಲ್ಲಿ 150 ಆಕ್ಸಿಜನೇಟೆಡ್‌ ಬೆಡ್‌ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 10 ವೆಂಟಿಲೇಟರ್‌ ಮಾತ್ರ ಲಭ್ಯವಿದೆ. ಖಾಸಗಿಯಲ್ಲಿ ಒಂದು ಮಾತ್ರವಿದೆ. ವೆಂಟಿಲೇಟರ್‌ ಅವಲಂಬಿಸಿ ದಾಖಲಾದ ರೋಗಿಗಳ ಪೈಕಿ ಶೇ. 0.5 ಮಾತ್ರ ಉಳಿಯುವ ಸಾಧ್ಯತೆ ಇರುತ್ತದೆ. ಮಂಡಕಳ್ಳಿಯಲ್ಲಿನ ಕೋವಿಡ್‌ ಕೇಂದ್ರದಲ್ಲಿ 650 ಸಾಮಾನ್ಯ ಬೆಡ್‌ಗಳಿವೆ. ಅಲ್ಲಿ ಆಕ್ಸಿಜನೇಟೆಡ್‌ ಬೆಡ್‌ಗಳಿಲ್ಲ. ಸಣ್ಣ ವಯಸ್ಸಿನವರು ಆಕ್ಸಿಜನ್‌ ಬೇಕು, ಐಸಿಯು ಬೇಕು ಎಂದು ಕೇಳುತ್ತಿದ್ದಾರೆ. ಬರಿ ಮೈಸೂರು ಜಿಲ್ಲೆಯ ರೋಗಿಗಳು ಮಾತ್ರ ಇದ್ದರೆ 7 ಸಾವಿರ ಬೆಡ್‌ ಸಾಕಾಗುತ್ತಿತ್ತು. ಆದರೆ ಬೇರೆ ಕಡೆಯಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಕೊರೋನಾ ಸೋಂಕಿನ ಲಕ್ಷಣ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧ ಪಡಯಬಹುದು. ಶೇ. 90 ರಿಂದ 95ರಷ್ಟುಮಂದಿ ಮನೆಯಲ್ಲಿಯೇ ಗುಣವಾಗುತ್ತಿದ್ದಾರೆ. ರೋಗಿಗಳು ಸಾಧ್ಯವಾದರೆ ಪಲ್ಸ್‌ ಆಕ್ಸಿಮೀಟರ್‌ ಇಟ್ಟುಕೊಳ್ಳಬೇಕು. ಪ್ರತಿ 2 ಗಂಟೆಗೊಮ್ಮೆ ಪರೀಕ್ಷಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಬೆಡ್‌ ಬೇಕು ಎಂಬ ಆತಂಕ ಬೇಡ. ದೇಹಕ್ಕೆ 94ಕ್ಕಿಂತ ಆಕ್ಸಿಜ್‌ ಪ್ರಮಾಣ ಕಡಿಮೆ ಇದ್ದರೆ ಮಾತ್ರ ಆಸ್ಪತ್ರೆ ಸೇರಬೇಕು. ಒಂದು ವಾರದಲ್ಲಿ 700 ಆಕ್ಸಿಜಿನೇಟೆಡ್‌ ಹಾಸಿಗೆ ಸಿದ್ಧವಾಗುತ್ತಿದೆ. ಟ್ರಾಮ ಸೆಂಟರ್‌ನ 200 ಆಕ್ಸಿಜನೇಟೆಡ್‌ ಬೆಡ್‌ಗಳ ಪೈಕಿ 60ರಲ್ಲಿ ಮಾತ್ರ ಜನರಿದ್ದಾರೆ. ಕೆ.ಆರ್‌. ಆಸ್ಪತ್ರೆಯಲ್ಲಿ ಸರ್ಜಿಕಲ್‌ ಬ್ಲಾಕ್‌, ಸ್ಟೋನ್‌ ಬಿಲ್ಡಿಂಗ್‌, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೇರಿ 250 ಆಕ್ಸಿಜಿನೇಟೆಡ್‌ ಹಾಸಿಗೆ, ಟ್ರಾಮಾದಲ್ಲಿ 200, ಪಿಕೆಟಿಬಿಯಲ್ಲಿ 100 ಆಕ್ಸಿಜನೇಟೆಡ್‌ ಹಾಸಿಗೆ ಸಿದ್ಧತೆ ಆಗುತ್ತಿದೆ ಎಂದರು.

14 ದಿನ ಜನತಾ ಕರ್ಫ್ಯೂ, ಏನಿರತ್ತೆ, ಏನಿರಲ್ಲ..? ಕಂಪ್ಲೀಟ್ ಡಿಟೇಲ್ಸ್ ...

ಹಾಲಿಗೆ ಖಾಲಿ ಇದೆ ಎಂದು ಅವುಗಳನ್ನು ಮೀಸಲಿಟ್ಟುಕೊಳ್ಳುವುದು ಸರಿಯಲ್ಲ. ಅಗತ್ಯ ಇರುವವರಿಗೆ ಆಕ್ಸಿಜನೇಟೆಡ್‌, ವೆಂಟಿಲೇಟರ್‌ ಹಾಸಿಗೆ ಸಿಗಬೇಕು. ನಮ್ಮ ಜಿಲ್ಲೆಗೆ 12 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಬೇಕಾಗುತ್ತದೆ. ಮುಂದೆ 20 ರಿಂದ 25 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಬೇಕಾಗುತ್ತದೆ. ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲಿ ಈ ಹಿಂದೆ ಸಣ್ಣವರು, ವೃದ್ಧರಿಗೆ ಬೇಗ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಎಲ್ಲರೂ ಮನೆಯಲ್ಲಿಯೇ ಪ್ರಾಣಾಯಾಮ ಮಾಡಬೇಕು. ಒಳ್ಳೆಯ ಆಹಾರ ಸೇವಿಸಬೇಕು. ಪ್ರತಿದಿನ ಸುಮಾರು 7 ಸಾವಿರ ಮಂದಿ ಪರೀಕ್ಷೆ ಮಾಡುತ್ತಿದ್ದೆವು. ಎಂಎಂಸಿಆರ್‌ಐ ಮತ್ತು ಸಿಎಫ್‌ಟಿಆರ್‌ಐಗೆ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿಯೂ ಇಬ್ಬರಿಗೆ ಪಾಸಿಟಿವ್‌ ಬಂದ ಪರಿಣಾಮ ಫಲಿತಾಂಶ ತಡವಾಗಿದೆ. ಪಾಸಿಟಿವ್‌ ವರದಿಗಳನ್ನು ಮಾತ್ರ ಬೇಗೆ ನೀಡಲಾಗಿದೆ. ಆದರೆ ನೆಗೆಟಿವ್‌ ವರದಿ ಬಂದಿಲ್ಲ ಎಂದು ಅವರು ತಿಳಿಸಿದರು.

ಸರ್ಕಾರದ ನಿರ್ದೇಶದಂತೆ ಪ್ರಾಥಮಿಕ ಮತ್ತು ದ್ವತೀಯ ಸಂಪರ್ಕಿತರು ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಡೀ ರಾಜ್ಯದಲ್ಲಿ 57 ವ್ಯಾಕ್ಸಿನೇಷನ್‌ ಮಾಡಿದ್ದೇವೆ. ಮೇ ತಿಂಗಳಿಂದ 18- 44 ವರ್ಷದವರಿಗೂ ವ್ಯಾಕ್ಸಿನೇಷನ್‌ ಹಾಕಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಪಡೆಯಬೇಕು. ಲಸಿಕೆ ಈಡುವಿಕೆಯಲ್ಲಿ ಕೆಲವು ತಾಲೂಕುಗಳಲ್ಲಿ ಶೇ. 75ರಷ್ಟುಗುರಿ ಸಾಧಿಸಲಾಗಿದೆ. ನಗರಗಳಲ್ಲಿ ಶೇ. 47 ಮಾತ್ರ ಗುರಿ ಸಾಧಿಸಿದೆ. ಲಸಿಕೆಯಿಂದ ಜೀವ ರಕ್ಷಣೆ ಆಗುತ್ತಿದೆ. ಲಸಿಕೆ ಪಡೆದ ಕೆಲವರಿಗೆ ಸೋಂಕು ಬಂದಿದ್ದರೂ ಸಾವು ಸಂಭವಿಸಿಲ್ಲ. ಐಸಿಯುಗಳಲ್ಲಿ ಪ್ರತಿ ರೋಗಿಗೆ ಒಬ್ಬರು ನರ್ಸ್‌ ನೀಡಬೇಕು. ಆದರೆ ಈಗ ವೈದ್ಯರು ಮತ್ತು ನರ್ಸ್‌ಗಳ ಕೊರತೆ ಇರುವುದರಿಂದ 10 ರಿಂದ 20 ರೋಗಿಗಳಿಗೆ ಓರ್ವ ನರ್ಸ್‌ ನೀಡಲಾಗುತ್ತಿದೆ. ಆಸಕ್ತ ನರ್ಸ್‌ಗಳು ಮತ್ತು ವೈದ್ಯರು ಇದ್ದರೆ ಕೂಡಲೇ ಸಂಪರ್ಕಿಸಿದರೆ ಅವರ ಸೇವೆ ಬಳಸಿಕೊಳ್ಳಲಾಗುವುದು ಎಂದರು.

 

ಈಗ ವಾರ್‌ ರೂಂ. ತೆಗೆದಿದ್ದು, ಅಲ್ಲಿನ ದೂ. 0821- 2957711, 2957811 ಸಂಪರ್ಕಿಸಬಹುದು. ಯಾರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೋ ಅವರಿಗೆ ಇಲ್ಲಿಂದ ಕರೆ ಮಾಡಲಾಗುವುದು. ಇದರ ಜೊತೆಗೆ ಇಂದಿನಿಂದ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕೇಂದ್ರ ತೆರೆಯಲಾಗುತ್ತಿದ್ದು, ಆಸಕ್ತರು ಇದರ ದೂ. 0821- 2424111 ಸಂಪರ್ಕಿಸಬಹುದು. ತಾಲೂಕು ಮಟ್ಟದಲ್ಲಿ ಹೆಲ್ಪ್‌ಲೈನ್‌ ಮತ್ತು ಮತ್ತು ವಿಧಾನಸಭಾ ಕ್ಷೇತ್ರವಾರು ಹೆಲ್ಪ್‌ಲೈನ್‌ ತೆರೆಯಲಾಗಿದೆ ಎಂದು ಅವರು ವಿವರಿಸಿದರು.

click me!