ತುಮಕೂರು : ಜಿಲ್ಲೆಯಲ್ಲಿ 3 ತಿಂಗಳಲ್ಲಿ 54 ಪೋಕ್ಸೋ ಪ್ರಕರಣಗಳು

By Kannadaprabha NewsFirst Published Dec 16, 2023, 8:49 AM IST
Highlights

ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ 54 ಪೋಕ್ಸೋ ಪ್ರಕರಣಗಳು ದಾಖಲಾಗಿ ಎಫ್ಐಆರ್ ಆಗಿವೆ. ಅದರಲ್ಲಿ 5 ಪ್ರಕರಣಗಳು ಅಪ್ರಾಪ್ತ ಬಾಲಕಿಯರ ಮೇಲಾದ ದೌರ್ಜನ್ಯ ಪ್ರಕರಣಗಳು. ಉಳಿದ ಪ್ರಕರಣಗಳು ಅಂತರಜಾತಿ ವಿವಾಹ, ಬಾಲ್ಯ ವಿವಾಹ, ಅಪ್ರಾಪ್ತರ ವಿವಾಹವಾಗಿದೆ. ಮಾನವ ಮೌಲ್ಯಗಳಿಗೆ ಬೆಲೆ ಕೊಟ್ಟಾಗ ದೌರ್ಜನ್ಯ ಮುಕ್ತ ಸಮಾಜವನ್ನು ಕಾಣಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ತಿಳಿಸಿದರು.

  ತುಮಕೂರು :  ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ 54 ಪೋಕ್ಸೋ ಪ್ರಕರಣಗಳು ದಾಖಲಾಗಿ ಎಫ್ಐಆರ್ ಆಗಿವೆ. ಅದರಲ್ಲಿ 5 ಪ್ರಕರಣಗಳು ಅಪ್ರಾಪ್ತ ಬಾಲಕಿಯರ ಮೇಲಾದ ದೌರ್ಜನ್ಯ ಪ್ರಕರಣಗಳು. ಉಳಿದ ಪ್ರಕರಣಗಳು ಅಂತರಜಾತಿ ವಿವಾಹ, ಬಾಲ್ಯ ವಿವಾಹ, ಅಪ್ರಾಪ್ತರ ವಿವಾಹವಾಗಿದೆ. ಮಾನವ ಮೌಲ್ಯಗಳಿಗೆ ಬೆಲೆ ಕೊಟ್ಟಾಗ ದೌರ್ಜನ್ಯ ಮುಕ್ತ ಸಮಾಜವನ್ನು ಕಾಣಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರ ಮತ್ತು ಮಹಿಳಾ ಅಧ್ಯಯನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಐಕ್ಯೂಎಸಿ, ವಿ.ವಿ. ಕಾಲೇಜು ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ: ತಡೆ ಹೇಗೆ? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

Latest Videos

2013ರಲ್ಲಿ ಜಾರಿಯಾದ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆ ಕಾಯಿದೆ 1997 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ವಿಶಾಖ ಪ್ರಕರಣದ ಮಾರ್ಗಸೂಚಿಗಳನ್ನು, ಕಾಯಿದೆಯ ಹಿನ್ನೆಲೆಯನ್ನು ಪ್ರತಿಯೊಬ್ಬ ಹೆಣ್ಣು ತಿಳಿಯಬೇಕು. ರಾಜಸ್ಥಾನದ ಗುಜ್ಜರ್‌ ಕುಟುಂಬದ ಹೆಣ್ಣುಮಗಳಾದ ಬನ್ವಾರೀ ದೇವಿಯ ಮೇಲಾದ ಸಾಮೂಹಿಕ ಅತ್ಯಾಚಾರದಿಂದ ಹೊರಬಂದ ತೀರ್ಪಿನಿಂದಾಗಿ ಮಹಿಳೆಯರ ಹಿತರಕ್ಷಣೆಗೆ ಕಾನೂನು ಭದ್ರಕೋಟೆಯನ್ನು ರಚಿಸಿತು ಎಂದು ತಿಳಿಸಿದರು.

2013ರ ಕಾಯಿದೆ ಪ್ರಕಾರ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಹಿತಕ್ಕಾಗಿ ಆಂತರಿಕ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಶೇ.50 ರಷ್ಟು ಮಹಿಳೆಯರು ಇರಬೇಕು. ಸಂಸ್ಥೆಯಲ್ಲಿ 10 ಕ್ಕಿಂತ ಕಡಿಮೆ ಮಹಿಳಾ ಉದ್ಯೋಗಿಗಳಿದ್ದಲ್ಲಿ ಸ್ಥಳೀಯ ಸಮಿತಿ ರಚಿಸಿ, ಜಿಲ್ಲಾಧಿಕಾರಿಗಳ ಉಸ್ತುವಾರಿಯಿರಬೇಕು. ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯವಾದಲ್ಲಿ ಸಮಿತಿಯ ಮುಖೇನ ಬಲಿಪಶುವಾದ ಹೆಣ್ಣುಮಗಳು ಲಿಖಿತರೂಪದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಬೇಕು. ಅಪರಾಧಿಗೆ 3 ವರ್ಷ ಜೈಲು, 50 ಸಾವಿರ ರು. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಯುವಜನತೆ ಲೋಭಗಳಿಗೆ ಮೋಸ ಹೋಗದೆ ಬದುಕನ್ನು ರೂಪಿಸಿಕೊಳ್ಳುವ ಮಾರ್ಗದಲ್ಲಿ ನಡೆಯಬೇಕು. ಮಹಿಳೆಯರ ಖಾಸಗಿ ಬದುಕನ್ನು ಚಿತ್ರೀಕರಿಸಿಕೊಳ್ಳುವುದು, ಧ್ವನಿ ಮುದ್ರಿಸಿಕೊಳ್ಳುವುದು ದೊಡ್ಡ ಅಪರಾಧ. ಅಪರಾಧಿಗಳಿಗೆ 7 ವರ್ಷ ಸಜೆ ಖಂಡಿತ. ಅಪ್ರಾಪ್ತ ಬಾಲಕಿಯರನ್ನು ಮದುವೆಯಾದಲ್ಲಿ ಅಪಹರಣ, ಅತ್ಯಾಚಾರದ ಪ್ರಕರಣ ದಾಖಲಾಗುತ್ತದೆ. ಅಂಥವರಿಗೆ 20 ವರ್ಷ ಸಜೆ ಹಾಗೂ ಬದುಕು ನಾಶವಾಗುತ್ತದೆ ಎಂದರು.

ಕೌಟುಂಬಿಕ ಕಲಹ, ಹಿಂಸೆಗಳಲ್ಲಿ ಯಾರದೋ ಒತ್ತಡಕ್ಕೆ ಸಿಲುಕಿ ಕ್ಷಣದಲ್ಲಿ ನಿರ್ಧರಿಸುವುದು, ಸಂಪೂರ್ಣ ವಿಷಯ ತಿಳಿಯದೆಯೇ ತೀರ್ಮಾನಕ್ಕೆ ಬರುವುದು, ವಿಚ್ಛೇದನಕ್ಕೆ ಮೊರೆಹೋಗುವುದು, ಒಬ್ಬರ ಮೇಲಿನ ಕೋಪಕ್ಕೆ ಇಡೀ ಕುಟುಂಬವನ್ನು ನ್ಯಾಯಾಲಯದ ಮೆಟ್ಟಿಲೇರಿಸುವುದೂ ಕೂಡ ಅಪರಾಧವೆ. ಮಕ್ಕಳಿಂದಾಗಿ ಪೋಷಕರು ಸಮಸ್ಯೆಗಳಿಗೆ ಸಿಲುಕುವುದು ಬೇಡ. ಕಾನೂನಿನ ದುರ್ಬಳಕೆ ತಪ್ಪು. ತೊಂದರೆ ಆಗಿರುವುದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.

ವಿವಿ ಕುಲಸಚಿವೆ ನಾಹಿದಾ ಜಮ್‌ ಜಮ್ ಮಾತನಾಡಿ, ಶಿಸ್ತಿನ, ಮೌಲ್ಯಗಳಿಂದ ಕೂಡಿದ ಬದುಕು ವಿದ್ಯಾರ್ಥಿಗಳದ್ದಾಬೇಕು. ಬದಲಾವಣೆಯನ್ನು ತರುವ ಯುವ ಸಮಾಜ ಎಡವಬಾರದು. ಹೆಣ್ಣಾಗಿ ಹುಟ್ಟವುದೇ ಸಾಧನೆಯಾಗಿದೆ. ಆದರೂ ಹೆಣ್ಣುಭ್ರೂಣ ಹತ್ಯೆಗಳ ಸಂಖ್ಯೆ ಏರುತ್ತಿದೆ. ಮಹಿಳೆಯರನ್ನು ಪ್ರೋತ್ಸಾಹಿಸುವ ಪ್ರಧಾನ ಸಮಾಜಬೇಕು ಎಂದು ಹೇಳಿದರು.

ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ ಉಪಸ್ಥಿತರಿದ್ದರು.

click me!