ಶ್ರೀಲಂಕಾದಲ್ಲಿ ಕಾಣಿಸಿಕೊಳ್ಳುವ ಅಪರೂಪದ  ಕಾಮನ ಬಿಲ್ಲು ಜೇಡ ಗಜೇಂದ್ರಗಡದಲ್ಲಿ ಪತ್ತೆ

By Kannadaprabha NewsFirst Published Aug 22, 2022, 2:34 PM IST
Highlights

ಸಾಲ್ಟಿಸಿಡೇ ಕುಟುಂಬಕ್ಕೆ ಸೇರಿದ ಸ್ಟೆನಾಲೂರಿಲಸ್‌ ಲೆಸರ್ಟಿ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಜೇಡಗಳ ಪ್ರಭೇದ ಜಿಲ್ಲೆಯ ಗಜೇಂದ್ರಗಡದ ಬೆಟ್ಟಗಳಲ್ಲಿ ಪತ್ತೆಯಾಗಿದೆ.

ಕನ್ನ​ಡ​ಪ್ರಭ ವಾರ್ತೆ ಗದಗ

ಸಾಲ್ಟಿಸಿಡೇ ಕುಟುಂಬಕ್ಕೆ ಸೇರಿದ ಸ್ಟೆನಾಲೂರಿಲಸ್‌ ಲೆಸರ್ಟಿ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಜೇಡಗಳ ಪ್ರಭೇದ ಜಿಲ್ಲೆಯ ಗಜೇಂದ್ರಗಡದ ಬೆಟ್ಟಗಳಲ್ಲಿ ಪತ್ತೆಯಾಗಿದೆ. ಅದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನೆಗೆ(ಜಿಗಿ)ಯುತ್ತದೆ. ಆದ್ದರಿಂದ ನೆಗೆ ಜೇಡ ಎಂಬ ಹೆಸರಿದೆ. 5 ಎಂಎಂನಿಂದ 6 ಎಂಎಂ ಗಾತ್ರ ಹೊಂದಿರುತ್ತವೆ. ಹೆಣ್ಣು ಜೇಡ ಗಂಡು ಜೇಡಕ್ಕಿಂತ ಸ್ವಲ್ಪ ದೊಡ್ಡದಿರುತ್ತದೆ.

Latest Videos

ಈ ಜೇಡವು ದಕ್ಷಿಣ ಭಾರತ ಮತ್ತು ಶ್ರೀಲಂಕಾ ದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಜೀವ ವೈವಿಧ್ಯ ಸಂಶೋಧಕ ಮಂಜುನಾಥ, ಪರಿಸರ ಸಂರಕ್ಷಕ ಸಂಗಮೇಶ ಕಡಗದ, ಶರಣು ಗೌಡರ, ಮೌನೇಶ ಮೇಲ್ಮನಿ ಹಾಗೂ ಚಂದ್ರು ಚವಡಿ ಈ ಜೇಡದ ಇರುವಿಕೆಯನ್ನು ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ ಗುರುತಿಸಿದ್ದಾರೆ. ಇದರ ದೇಹದ ಮೈ ಬಣ್ಣವು ಆಕರ್ಷಕವಾಗಿದ್ದು, ಗಂಡು ಜೇಡಗಳ ಮುಖದ ಮುಂಭಾಗದಲ್ಲಿ ಆಕರ್ಷಕ ಕೆಂಪು ಮತ್ತು ನೀಲಿ ಸಮತಲ ಪಟ್ಟಿಗಳನ್ನು ಹೊಂದಿದ್ದು, ಕಾಮನ ಬಿಲ್ಲಿನ ವರ್ಣ ಸಂಯೋಜನೆಯಂತಿದ್ದು  ಕಾಮನಬಿಲ್ಲಿನ ಜೇಡ ಎನ್ನಬಹುದು. ಹೆಣ್ಣು ಜೇಡಗಳಲ್ಲಿ ಈ ಪಟ್ಟಿಗಳು ಮಂದ ವರ್ಣದಿಂದ ಕೂಡಿರುತ್ತ​ವೆ.

ಮನೆ ಸೌಂದರ್ಯದ ಜೊತೆ ಮನಸ್ಸಿಗೂ ಕಿರಿ ಕಿರಿ ಮಾಡೋ ಬಲೆಗೆ ಹೇಳಿ ಗುಡ್ ಬೈ!

ಪರಿಸರ ಸಮತೋಲನದಲ್ಲಿ ಜೇಡಗಳ ಪಾತ್ರ

ರೈತರಿಗೆ ಪೀಡಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಜೇಡ ಜೈವಿಕ ಕೀಟ ನಿಯಂತ್ರಕಗಳಾಗಿವೆ. ಬೇಟೆ ಮತ್ತು ಭಕ್ಷಕದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಪ್ರಭೇದದ ಜೇಡಗಳಲ್ಲಿರುವ ವಿಷ (ವೆನಮ್‌)ವನ್ನು ವೈದ್ಯಕೀಯ ಕ್ಷೇತ್ರಗಳಲ್ಲಿ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಧ್ಯಯನದ ಪ್ರಕಾರ ಪ್ರತಿದಿನ ಒಂದು ಜೇಡ ತನ್ನ ದೇಹದ ತೂಕಕ್ಕಿಂತ ನಾಲ್ಕುಪಟ್ಟು ಆಹಾರ ಸೇವಿಸುತ್ತವೆ. ಅಂದರೆ ಒಂದು ಎಕರೆ ನೈಸರ್ಗಿಕ ಆವಾಸದಲ್ಲಿ ಸುಮಾರು 1ಲಕ್ಷ ವಿವಿಧ ಜೇಡಗಳು ವಾಸಿಸುತ್ತವೆ. ಇವುಗಳು ಪ್ರತಿನಿತ್ಯ 4-5 ಕೀಟಗಳನ್ನು ತಿನ್ನುತ್ತವೆ. ಹೀಗೆ ವಾರ್ಷಿಕವಾಗಿ ಸರಾಸರಿ 800 ಮಿಲಿಯನ್‌ ಕೀಟಗಳನ್ನು ಭಕ್ಷಿಸುವುದರ ಮೂಲಕ ರೈತನ ಮಿತ್ರನಾಗಿವೆ.

ಕಿವಿಯಲ್ಲಿ ಕಚಗುಳಿ: ಹೆಡ್‌ಫೋನ್ ಒಳಗಿತ್ತು ಡೆಡ್ಲಿ ಸ್ಪೈಡರ್..!

ವಿಭಿನ್ನ ಜೇಡಗಳನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ಚಿಟ್ಟೆಗಿಂತಲೂ ಸುಂದರ ವರ್ಣಗಳನ್ನು ಕಾಣಬಹುದು. ಪ್ರತಿ ಜೀವಿಯು ಪ್ರಕೃತಿಯ ಭಾಗ. ನಾವು ಸಹ ಪ್ರಕೃತಿಯ ಭಾಗ. ಪರಿಸರದ ಪ್ರತಿ ಜೀವಿಗಳ ಸಂಖ್ಯೆ ನಿರ್ದಿಷ್ಟ ಅನುಪಾತದಲ್ಲಿದ್ದಾಗ ಆರೋಗ್ಯಕರ ಪರಿಸರ ಉಳಿಯುತ್ತದೆ ಎನ್ನುತ್ತಾರೆ ಗದಗ ಉಪಸಂರಕ್ಷಣಾಧಿಕಾರಿ ಪರಿಮಳಾ. ಗಜೇಂದ್ರಗಡ ಬೆಟ್ಟಗಳು ಸಮೃದ್ಧ ಜೀವವೈವಿಧ್ಯ ತಾಣವಾಗಿದ್ದು, ಪ್ರತಿ ಜೀವಿಯು ಆಹಾರ ಸರಪಳಿಯಲ್ಲಿ ಮಹತ್ವದ ಪಾತ್ರ ವಹಿಸಿ ಪರಿಸರ ಸಮತೋಲನ ಕಾಪಾಡುತ್ತವೆ. ಸಾರ್ವಜನಿಕರಲ್ಲಿ ಈ ಕುರಿತು ಮಹತ್ವದ ಅರಿವು ಮೂಡಿಸಲಾಗುತ್ತಿದೆ ಎಂದು ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ನಾಯಕ ಹೇಳಿದರು. 

click me!