ದಾವಣಗೆರೆ: ಭದ್ರಾ ನಾಲೆಗೆ ಮೊದಲು 100 ದಿನ ನೀರು ಬಿಡಿ, ಸಂಸದ ಸಿದ್ದೇಶ್ವರ ತಾಕೀತು

By Kannadaprabha NewsFirst Published Sep 22, 2023, 11:30 PM IST
Highlights

ಈಗ 40 ದಿನಗಳ ಕಾಲ ನೀರು ಹರಿಸಿ, ಏಕಾಏಕಿ ನೀರು ನಿಲುಗಡೆ ಮಾಡಿದ್ದು ಖಂಡನೀಯ. ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳುವ ಮುನ್ನವೇ ಯೋಚನೆ ಮಾಡಬೇಕಾಗಿತ್ತು. ಈಗ ರೈತರು ಭತ್ತ ನಾಟಿ ಮಾಡಿ, ಔಷಧಿ, ಗೊಬ್ಬರ ಇತ್ಯಾದಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಸುಮಾರು 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಈಗ ನೀರು ಹರಿಸದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ 

ದಾವಣಗೆರೆ(ಸೆ.22): ಭದ್ರಾ ಜಲಾಶಯದಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡಿದ್ದ 100 ದಿನ ಕಾಲ ನೀರು ಹರಿಸಬೇಕೆಂಬ ತೀರ್ಮಾನದಂತೆ ನಾಲೆಗೆ ಮೊದಲು 100 ದಿನ ನೀರು ಹರಿಸಿ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಾಕೀತು ಮಾಡಿದ್ದಾರೆ.

ನಾಲೆಗೆ ನೀರು ಹರಿಸುವ ವಿಚಾರವಾಗಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಹಿಂದೆ 100 ದಿನ ನೀರು ಬಿಡಲು ತೀರ್ಮಾನಿಸಲಾಗಿತ್ತು. ಅದೇ ಆದೇಶವನ್ನು ಯಥಾವತ್ ಪಾಲಿಸಬೇಕಾದ್ದು ಅಧಿಕಾರಿಗಳ ಕರ್ತವ್ಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆ: ಮುಂದುವರಿದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹೋರಾಟ, 35 ಕ್ಕೂ ಹೆಚ್ಚು ರೈತರ ಬಂಧನ

ಈಗ 40 ದಿನಗಳ ಕಾಲ ನೀರು ಹರಿಸಿ, ಏಕಾಏಕಿ ನೀರು ನಿಲುಗಡೆ ಮಾಡಿದ್ದು ಖಂಡನೀಯ. ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳುವ ಮುನ್ನವೇ ಯೋಚನೆ ಮಾಡಬೇಕಾಗಿತ್ತು. ಈಗ ರೈತರು ಭತ್ತ ನಾಟಿ ಮಾಡಿ, ಔಷಧಿ, ಗೊಬ್ಬರ ಇತ್ಯಾದಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಸುಮಾರು 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಈಗ ನೀರು ಹರಿಸದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರೈತರ ಹಿತ ಕಾಯಲಿ

ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸುವುದೊಂದೇ ಪರಿಹಾರವೂ ಅಲ್ಲ. ಅದರ ಬದಲಾಗಿ ಸರ್ಕಾರವು ಭದ್ರಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಲಿ. ಅದನ್ನು ಬಿಟ್ಟು, ನಾಲೆಗೆ ನೀರು ನಿಲ್ಲಿಸುವುದೊಂದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸುವುದು ಬೇಡ. ರೈತರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡಲಿ. ಕೃಷಿಯ ಬಗ್ಗೆ ಅನುಭವವೇ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗಬಹುದೆಂಬುದಕ್ಕೆ ಕಾವೇರಿ ಮತ್ತು ಭದ್ರಾ ಡ್ಯಾಂಗಳ ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಎಡಬಿಡಂಗಿ ನಿಲುವುಗಳೇ ನಿದರ್ಶನವಾಗಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕಿಡಿಕಾರಿದ್ದಾರೆ.

ಅಧಿಕಾರಿಗಳು ಯಾವುದೇ ಸಬೂಬು ಹೇಳದೇ, ಮೊದಲು ನೀರಾವರಿ ಸಲಹಾ ಸಮಿತಿಯ ಆದೇಶದಂತೆ ಭದ್ರಾ ನಾಲೆಗಳಲ್ಲಿ 100 ದಿನ ಕಾಲ ಸತತ ನೀರು ಹರಿಸಿ, ರೈತರ ಬಗ್ಗೆ ಕಾಳಜಿ ಮೆರೆಯಬೇಕು. ಇಲ್ಲದಿದ್ದರೆ, ರೈತರ ಹಿತ ಕಾಯಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.  

click me!