ಚಾಮರಾಜನಗರ: ಬಂಡೀಪುರದಲ್ಲಿ ಆನೆ ಹಾವಳಿ ತಡೆಯುವಲ್ಲಿ ರೈಲ್ವೆ ಬ್ಯಾರಿಕೇಡ್ ಸಕ್ಸಸ್..!

By Girish GoudarFirst Published Sep 8, 2023, 8:31 PM IST
Highlights

ಈ ರೈಲ್ವೆ ಬ್ಯಾರಿಕೇಡ್ ಹಾಕಲು ಹೆಚ್ಚು ದುಬಾರಿ ವೆಚ್ಚ ತಗುಲುತ್ತದೆ. ಒಂದು ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ಹಾಕಲು ಅಂದಾಜು ಒಂದೂವರೆ ಕೋಟಿ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಆನೆಗಳು ಹೆಚ್ಚಾಗಿ ಹೊರಗೆ ಬರುವ ಪ್ರದೇಶಗಳನ್ನು ಗುರುತಿಸಿ ಅಂತಹ ಜಾಗಗಳಲ್ಲಿ ಆನೆಗಳು ಕಾಡಿನಿಂದ ಹೊರಬಾರದಂತೆ ಅಧಿಕಾರಿಗಳು ಬ್ಯಾರಿಕೇಡ್ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. 

ವರದಿ- ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಸೆ.08):  ಕಾಡಂಚಿನ ಗ್ರಾಮಗಳಲ್ಲಿ ಆನೆಗಳು ಕಾಡು ಬಿಟ್ಟು ನಾಡಿಗೆ ಬಂದು ರೈತರ ಬೆಳೆಯನ್ನು ನಾಶ ಮಾಡುತ್ತಿದ್ವು. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಇಪಿಟಿ, ಸೋಲಾರ್ ಫೆನ್ಸ್ ಹಾಗೂ ರೈಲ್ವೆ ಬ್ಯಾರಿಕೇಡ್ ಮೊರೆ ಹೋಗಿತ್ತು. ಇದೀಗ ಅದ್ರಲ್ಲಿ ರೈಲ್ವೆ ಬ್ಯಾರಿಕೇಡ್ ಮಾನವನ ಜೊತೆಗೆ ಸಂಘರ್ಷ ತಪ್ಪಿಸುವಲ್ಲಿ ಯಶಸ್ಸು ಕಂಡಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಹೌದು, ಚಾಮರಾಜನಗರ ಜಿಲ್ಲೆ ಅಂದ್ರೆ ಅತಿ ಹೆಚ್ಚು ಕಾಡು ಹಾಗೂ ಕಾಡು ಪ್ರಾಣಿಗಳನ್ನು ಹೊಂದಿರುವ ಜಿಲ್ಲೆ. ಹೀಗಾಗಿ ಇಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಅದರಲ್ಲೂ ಕಾಡಾನೆಗಳ ದಾಳಿಯಂತೂ ಸರ್ವೇ ಸಾಮಾನ್ಯ. ಆಗಾಗ್ಗೆ ಕಾಡು ಬಿಟ್ಟು ನಾಡಿಗೆ ಬರುವ ಆನೆಗಳು ರೈತರು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತವೆ. ಅಲ್ಲದೇ ಕೆಲವೊಮ್ಮೆ ಮನುಷ್ಯರನ್ನೇ ತುಳಿದು ಸಾಯಿಸಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದಿದೆ.ಅಲ್ಲದೇ ರೈತರು ಕೂಡ ಅಕ್ರಮವಾಗಿ ವಿದ್ಯುತ್ ಹರಿಸಿ ವನ್ಯಪ್ರಾಣಿಗಳ ಸಾವಿಗೆ ಕಾರಣಾವಿರುವ ನಿದರ್ಶನ ಕೂಡ ಕಣ್ಣ ಮುಂದಿವೆ. ಹೀಗಾಗಿ ಆನೆಗಳು ಹೆಚ್ಚಾಗಿ ಕಾಡಿನಿಂದ ಆಚೆ ಬರುವ ಪ್ರದೇಶಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುತಿಸಿ ಅಂತಹ ಜಾಗದಲ್ಲಿ ರೈಲ್ವೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ.

ನಟ ಗಣೇಶ್‌ ಜಮೀನಿಗೆ ತೆರಳಲು ರೈತರಿಂದ ಅಡ್ಡಿ: ಮಾತಿನ ಚಕಮಕಿ

ಈಗಾಗ್ಲೇ ಬಂಡೀಪುರದ ಕುಂದುಕೆರೆ, ಹೆಡಿಯಾಲ ಸೇರಿದಂತೆ ಹಲವೆಡೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಮೂಲಕ ಕಾಡಾನೆ ಉಪಟಳಕ್ಕೆ ಬ್ರೇಕ್ ಬಿದ್ದಿದೆ ಅನ್ನೋದು ಅಧಿಕಾರಿಗಳ ನಂಬಿಕೆ. ಬಂಡೀಪುರದಲ್ಲಿ ಇಲ್ಲಿಯವರೆಗೂ 60 ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿದ್ದೂ ಈ ವರ್ಷ ಮತ್ತೆ 26 ಕಿಮೀ ನಿರ್ಮಿಸಲು ಒಪ್ಪಿಗೆ ಸಿಕ್ಕಿದೆ. ಇದರಿಂದ ಕಾಡಂಚಿನ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಮತ್ತಷ್ಟು ತಪ್ಪುತ್ತೆ ಅಂತಾರೆ.

ಇನ್ನೂ ಈ ರೈಲ್ವೆ ಬ್ಯಾರಿಕೇಡ್ ಹಾಕಲು ಹೆಚ್ಚು ದುಬಾರಿ ವೆಚ್ಚ ತಗುಲುತ್ತದೆ. ಒಂದು ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ಹಾಕಲು ಅಂದಾಜು ಒಂದೂವರೆ ಕೋಟಿ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಆನೆಗಳು ಹೆಚ್ಚಾಗಿ ಹೊರಗೆ ಬರುವ ಪ್ರದೇಶಗಳನ್ನು ಗುರುತಿಸಿ ಅಂತಹ ಜಾಗಗಳಲ್ಲಿ ಆನೆಗಳು ಕಾಡಿನಿಂದ ಹೊರಬಾರದಂತೆ ಅಧಿಕಾರಿಗಳು ಬ್ಯಾರಿಕೇಡ್ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ರೀತಿ ರೈಲ್ವೆ ಬ್ಯಾರಿಕೇಡ್ ಹಾಕಿರುವುದರಿಂದ ಕಾಡಂಚಿನ ಗ್ರಾಮಸ್ಥರು ಬೆಳೆದ ಬೆಳೆ ಆನೆ ದಾಳಿಯಿಂದ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. 

ಒಟ್ನಲ್ಲಿ ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆನೆ ಉಪಟಳ ಹೆಚ್ಚಾಗಿರುವ ಪ್ರದೇಶದಲ್ಲೂ ಕೂಡ ಮುಂದಿನ ದಿನಗಳಲ್ಲಿ ಈ ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ರೆ ಕಾಡುಪ್ರಾಣಿ ಮಾನವ ಸಂಘರ್ಷ ತಪ್ಪುತ್ತೆ. ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.

click me!