ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ,  ಪ್ರಧಾನಿ ಭೇಟಿಗೆ ಅವಕಾಶ ಕೋರಿದ ಮುಸ್ಲಿಂ ವೇದಿಕೆ

By Gowthami KFirst Published Sep 1, 2022, 9:37 AM IST
Highlights

 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ.2ರಂದು ಮಂಗಳೂರಿಗೆ ಆಗಮಿಸುತ್ತಿದ್ದು,  ಈ ಮಧ್ಯೆ ಫಾಜಿಲ್ ಹತ್ಯೆ ತಾರತಮ್ಯದ ವಿರುದ್ದ ಪ್ರಧಾನಿ ಭೇಟಿಗೆ ಅವಕಾಶ ನೀಡಬೇಕೆಂದು, ಮುಸ್ಲಿಮ್ ಸಂಘಟನೆ ಆಗ್ರಹಿಸಿದೆ.

ಮಂಗಳೂರು (ಸೆ.1):  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ.2ರಂದು ಮಂಗಳೂರಿಗೆ ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ಎಲ್ಲಾ ಸಿದ್ದತೆಗಳು ನೆರವೇರಿದೆ. ಈ ಮಧ್ಯೆ ಫಾಜಿಲ್ ಹತ್ಯೆ ತಾರತಮ್ಯದ ವಿರುದ್ದ ಪ್ರಧಾನಿ ಭೇಟಿಗೆ ಅವಕಾಶ ನೀಡಬೇಕೆಂದು, ಮುಸ್ಲಿಮ್ ಸಂಘಟನೆ ಆಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅಹವಾಲು ಸಲ್ಲಿಕೆಗೆ‌ ಜಿಲ್ಲಾಡಳಿತ ಅವಕಾಶ ಕೊಡಬೇಕು ಎಂದು ಮುಸ್ಲಿಂ ಐಕ್ಯತಾ ವೇದಿಕೆ ಕಾನೂನು ಸಲಹೆಗಾರ ಉಮರ್ ಫಾರೂಕ್ ಮನವಿ ಸಲ್ಲಿಸಿದ್ದಾರೆ.  ಹತ್ಯೆಗೀಡಾದ ಪ್ರವೀಣ್ ನೆಟ್ಟಾರು (Praveen Nettaru Murder case) ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ. ಆದರೆ ಮಸೂದ್‌‌ ಮತ್ತು ಫಾಜಿಲ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿಲ್ಲ. ಸಿಎಂ ಬೊಮ್ಮಾಯಿ ‌ಮತ್ತು‌ ಗೃಹ ಸಚಿವರು ಅವರ ಮನೆಗೂ ಭೇಟಿ ‌ನೀಡಿಲ್ಲ. ಪ್ರವೀಣ್ ‌ಕೇಸ್ NIA ಗೆ ವಹಿಸಿದ್ರೂ ಫಾಜಿಲ್, ಮಸೂದ್ ‌ಕೇಸ್ ಕೊಟ್ಟಿಲ್ಲ. ಇದನ್ನ ‌ಪ್ರಧಾನಿ ಮೋದಿಯವರಿಗೆ‌ ಮನವರಿಕೆ ಮಾಡಬೇಕಿದೆ. ಸರ್ಕಾರದ ತಾರತಮ್ಯದ ವಿರುದ್ದ ಸೆ.9 ರಂದು ಬೃಹತ್ ‌ಪ್ರತಿಭಟನೆ ನಡೆಸಲಿದ್ದೇವೆ, ಎಂದೂ ಎಚ್ಚರಿಸಿದ್ದಾರೆ. 

ಮಂಗಳೂರಿನಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಹವಾ!
ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಮೇಳೈಸಲಿದೆ ಮೋದಿ ಹಬ್ಬ. ವಿಧಾನಸಭಾ ಚುನಾವಣೆಗೆ ಮಂಗಳೂರಿನಿಂದಲೇ ಮೋದಿ ರಣ ಕಹಳೆ ಮೊಳಗಿಸಲಿದ್ದು, ಬರೋಬ್ಬರಿ 3800 ಕೋಟಿ ರೂ. ಯೋಜನೆಗೆ‌ ಪ್ರಧಾನಿ ‌ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ‌ಮತ್ತು ರಾಜ್ಯ ಸರ್ಕಾರದ ‌ಫಲಾನುಭವಿಗಳ ಸಮಾವೇಶದಲ್ಲಿ ಮೋದಿ ಮಾತನಾಡನಾಡಲಿದ್ದಾರೆ. ನವಮಂಗಳೂರು ಬಂದರು ಹಾಗೂ MRPLನ ಸಾವಿರ ಕೋಟಿ ಯೋಜನೆಗಳಿಗೆ‌ ಮೋದಿ ಚಾಲನೆ ನೀಡಲಿದ್ದಾರೆ. ಜರ್ಮನ್ ತಂತ್ರಜ್ಞಾನ (German Technology) ‌ಬಳಸಿ 30 ಎಕರೆ ಮೈದಾನದಲ್ಲಿ ‌ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. 1.50 ಲಕ್ಷಕ್ಕೂ ಮಿಕ್ಕಿ ಫಲಾನುಭವಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. 

ಕೊಚ್ಚಿ ಕಾರ್ಯಕ್ರಮ ‌ಮುಗಿಸಿ ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ಮೋದಿ ಆಗಮಿಸಲಿದ್ದು, ಏರ್‌ಪೋರ್ಟ್‌ನಲ್ಲಿ ಇಳಿದು ಹೆಲಿಕಾಪ್ಟರ್ ಮೂಲಕ ನವಮಂಗಳೂರು ‌ಬಂದರು ಹೆಲಿಪ್ಯಾಡ್‌ನಲ್ಲಿ‌ ಲ್ಯಾಂಡ್ ಆಗುತ್ತಾರೆ. ಹೆಲಿಪ್ಯಾಡಿನಿಂದ ಸಮಾವೇಶದ ಮೈದಾನಕ್ಕೆ 2 ಕಿ.ಮೀ ರಸ್ತೆ ಮೂಲಕ ಸಾಗಿ ತಲುಪುತ್ತಾರೆ ಮೋದಿ.  ಎಸ್‌ಪಿಜಿ ಮತ್ತು ಸಾವಿರಾರು ಪೊಲೀಸ್ ಭದ್ರತೆಯಲ್ಲಿ ಮೋದಿ ಸಮಾವೇಶ ನಡೆಯಲಿದ್ದು, ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ 9 ಕಡೆ ಸಂಚಾರ ಬದಲಾವಣೆ, 11 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಅಧಿಕೃತ ‌ಕಾರ್ಯಕ್ರಮದಲ್ಲಿ ಕೇಸರಿ ಪಡೆ ಶಕ್ತಿ ಪ್ರದರ್ಶನ ಮಾಡಲಿದೆ. 2 ಸಾವಿರಕ್ಕೂ ಅಧಿಕ ಬಸ್ ಗಳಲ್ಲಿ ಬರಲಿದ್ದಾರೆ ಲಕ್ಷಾಂತರ ಜನರು. ಮಧ್ಯಾಹ್ನ 1 ಗಂಟೆಗೆ ಆಗಮಿಸಿ 2.30ಕ್ಕೆ ವಾಪಾಸ್ ‌ಆಗಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಮಂಗಳೂರು: ಪ್ರಧಾನಿ ಕಾರ್ಯಕ್ರಮಕ್ಕೆ 1 ಲಕ್ಷ ಜನ, ಮೋದಿಗೆ ಪರಶುರಾಮ ಪುತ್ಥಳಿ ಉಡುಗೊರೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ನಳಿನ್ ಕುಮಾರ್ ಸೇರಿ ಹಲವು ರಾಜ್ಯ ನಾಯಕರು ಭಾಗಿಯಾಗಲಿದ್ದು, ಮೋದಿ ಸ್ವಾಗತಕ್ಕೆ ನಡೀತಿದೆ ಭರ್ಜರಿ ತಯಾರಿ. ಭದ್ರತೆ, ಸಿದ್ದತೆ ಮೂಲಕ ಮೋದಿ ಬರಮಾಡಿಕೊಳ್ಳಲು ಜಿಲ್ಲಾಡಳಿತ ‌ಮತ್ತು ಬಿಜೆಪಿ ಸಜ್ಜಾಗಿದೆ.  ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ  ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಮಂಗಳೂರು ತಾಲೂಕು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು, ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ, ಭಟ್ಕಳ ವ್ಯಾಪ್ತಿಯಲ್ಲಿ ನಿಗಮದ ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ.

ನಮ್ಮ ಕುಡ್ಲದಲ್ಲಿ ನಮೋ, ಪ್ರಧಾನಿ ಸಮಾವೇಶಕ್ಕೆ 2 ಸಾವಿರ ಬಸ್‌ ವ್ಯವಸ್ಥೆ!

ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹಕರಿಸುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಮಾವೇಶ ಸ್ಥಳಕ್ಕೆ ಉಭಯ ಜಿಲ್ಲೆಗಳಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಕರೆ ತರಲು 2 ಸಾವಿರ ಬಸ್ ವ್ಯವಸ್ಥೆ ಮಾಡಲಾಗಿದ್ದು, ಟ್ರಾಫಿಕ್ ಸಮಸ್ಯೆ ಹಿನ್ನೆಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ‌ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೈದಾನದ ಸುತ್ತಲಿನ 500 ಮೀಟರ್‌ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

click me!