ಅನ್‌ಲಾಕ್‌ ಆಗಿ ವಾರ ಕಳೆದರೂ, ಜನರ ಲಾಕ್‌ಡೌನ್‌ ಇನ್ನೂ ಮುಗಿದಿಲ್ಲ.!

By Kannadaprabha NewsFirst Published Jun 15, 2020, 11:02 AM IST
Highlights

ಕೊರೋನಾ ಲಾಕ್‌ಡೌನ್‌ ಅನ್‌ಲಾಕ್‌ ಆಗಿ ವಾರ ಕಳೆದರೂ ಜಿಲ್ಲೆಯಲ್ಲಿ ಜನಜೀವನ ಇನ್ನೂ ಪೂರ್ತಿ ಅನ್‌ಲಾಕ್‌ ಆಗಿಲ್ಲ. ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ, ಆದರೆ ಆರ್ಥಿಕವಾಗಿ ಕಂಗೆಟ್ಟಿರುವ ಜನರು ಮಾತ್ರ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಹಿಂಜರಿಯುತ್ತಿದ್ದಾರೆ.

ಉಡುಪಿ (ಜೂ. 15):  ಕೊರೋನಾ ಲಾಕ್‌ಡೌನ್‌ ಅನ್‌ಲಾಕ್‌ ಆಗಿ ವಾರ ಕಳೆದರೂ ಜಿಲ್ಲೆಯಲ್ಲಿ ಜನಜೀವನ ಇನ್ನೂ ಪೂರ್ತಿ ಅನ್‌ಲಾಕ್‌ ಆಗಿಲ್ಲ. ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ, ಆದರೆ ಆರ್ಥಿಕವಾಗಿ ಕಂಗೆಟ್ಟಿರುವ ಜನರು ಮಾತ್ರ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಹಿಂಜರಿಯುತ್ತಿದ್ದಾರೆ.

ಕೊರೋನಾ ಸೋಂಕು ಹರಡುವ ಭೀತಿಯ ಜೊತೆಗೆ ಜನರು ಸರಿಯಾದ ಉದ್ಯೋಗ, ಸಂಪಾದನೆ ಇಲ್ಲದೆ ಅನಗತ್ಯವಾಗಿ ಬಸ್ಸುಗಳಲ್ಲಿ ಓಡಾಟಕ್ಕೆ, ಹೊಟೇಲು ಬಾರುಗಳಲ್ಲಿ ಊಟಕ್ಕೆ, ಮಾಲು - ಮಳಿಗೆಗಳಲ್ಲಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಅಗತ್ಯ ವಸ್ತುಗಳು, ದಿನಸಿ ಅಂಗಡಿ ವ್ಯವಹಾರಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿನ ವ್ಯಪಾರ ನಡೆಯುತ್ತಿದೆ. ಆದರೆ ಹೊಟೇಲು, ರೆಸ್ಟೊರೆಂಟುಗಳಲ್ಲಿ ಮಾತ್ರ ಶೇ.25 ರಷ್ಟೂವ್ಯಾಪಾರ ನಡೆಯುತ್ತಿಲ್ಲ. ಬಹಳ ತರಾತುರಿಯಲ್ಲಿ ಆರಂಭವಾದ ಸೆಲೂನ್‌ಗಳಲ್ಲಿಯೂ ಗ್ರಾಹಕರು ಹೋಗುತ್ತಿಲ್ಲ. ಬಾರುಗಳಲ್ಲಿಯೂ ಕುಳಿತು ಉಣ್ಣುವ - ಕುಡಿಯುವವರು ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆ ಇದೆ.

ಭಕ್ತರಲ್ಲಿ ದರ್ಶನಾಪೇಕ್ಷೆ ಇಲ್ಲ: ಸರ್ಕಾರ ಭಕ್ತರ ಆಪೇಕ್ಷೆ ಎಂಬ ನೆಪ ಹೇಳಿ ಮುಜರಾಯಿ ದೇವಾಲಯಗಳನ್ನು ತೆರೆದಿದೆ, ಆದರೆ ಬಹುತೇಕ ಭಕ್ತರಿಗೆ ಮಾತ್ರ ದೇವಾಲಯಕ್ಕೆ ಹೋಗುವ ಆಪೇಕ್ಷೆ ಇನ್ನೂ ಬಂದಿಲ್ಲ. ಖಾಸಗಿ ದೇವಾಲಯಗಳಲ್ಲಿಯೂ ನಿತ್ಯ ಪೂಜೆಯಷ್ಟೇ ನಡೆಯುತ್ತಿದೆಯೇ ಹೊರತು ಯಾವುದೇ ಸೇವೆ, ಹರಕೆಗಳು ನಡೆಯುತ್ತಿಲ್ಲ. ಉಡುಪಿಯ ಕೃಷ್ಣ ಮಠದಲ್ಲಿಯೂ ಇನ್ನೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿಲ್ಲ.

ಉಡುಪಿ: ಮುಂದುವರಿದ ‘ಮಹಾ’ಮಾರಿ, 21 ಮಂದಿಗೆ ಸೋಂಕು

ನಮ್ಮ ರಾಜ್ಯಕ್ಕಿಂತ ಹೆಚ್ಚು, ಕೇರಳ, ತಮಿಳುನಾಡಿನಿಂದ ಸೇರಿ ನಿತ್ಯ ಏಳೆಂಟು ಸಾವಿರ ಭಕ್ತರು ಭೇಟಿ ನೀಡುವ ಕೊಲ್ಲೂರು ದೇವಾಲಯಕ್ಕೆ ಇದೀಗ ನಿತ್ಯ ಒಂದು ಸಾವಿರದಷ್ಟೂಭಕ್ತರು ಬರುತ್ತಿಲ್ಲ. ಮೊನ್ನೆ ಶುಕ್ರವಾರ ಮಾತ್ರ ಸ್ವಲ್ಪ ಹೆಚ್ಚು ಜನರಿದ್ದರು ಎನ್ನುತ್ತಾರೆ ಅಲ್ಲಿನ ಅಧಿಕಾರಿಗಳು.

ಚರ್ಚು-ಮಸೀದಿಗಳೂ ತೆರೆದಿಲ್ಲ: ಜಿಲ್ಲೆಯಲ್ಲಿ ಚರ್ಚುಗಳು - ಮಸೀದಿಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಈ ತಿಂಗಳ ಕೊನೆಯವರೆಗೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದಲ್ಲಿ ಚರ್ಚುಗಳನ್ನು ತೆರೆಯದಿರುವುದಕ್ಕೆ ನಿರ್ಧರಿಸಿವೆ. ಆದರೆ ಗ್ರಾಮೀಣ ಭಾಗದಲ್ಲಿ ಕೆಲವು ಮಸೀದಿಗಳು ತೆರೆದಿದ್ದು, ಭಕ್ತರ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿವೆ. ಅಲ್ಲಿಯೂ ಮುಂಚಿನಷ್ಟುಜನರು ಬರುತ್ತಿಲ್ಲ. ನಗರ ಪ್ರದೇಶದ ಮಸೀದಿಗಳು ಇನ್ನೂ ಕೆಲವು ದಿನ ಕಾದು ನೋಡುವುದಕ್ಕೆ ನಿರ್ಧರಿಸಿವೆ.

ಮಾಲು, ಮಳಿಗೆಗೂ ಗ್ರಾಹಕರಿಲ್ಲ; ಉಡುಪಿಯಲ್ಲಿರುವ ಸಿಟಿ ಮಾಲ್‌ ಹಾಗೂ ಮಣಿಪಾಲದಲ್ಲಿರುವ ಕೆನರಾ ಮಾಲ್‌ಗಳನ್ನು ತೆರೆಯಲಾಗಿದೆ. ಆದರೆ ದರಲ್ಲಿರುವ ಬಟ್ಟೆಯಂಗಡಿಗಳಾಗಲಿ, ಫಾಸ್ವ್‌ಫುಡ್‌ ಶಾಪ್‌ಗಳಿಗಾಗಲೀ ಮೊದಲಿನಂತೆ ಗ್ರಾಹಕರು ಬರುತ್ತಿಲ್ಲ. ನಗರದಲ್ಲಿರುವ ದೊಡ್ಡ ಬಟ್ಟೆಮಳಿಗೆ, ಚಿನ್ನಾಭರಣ ಮಳಿಗೆಗಳತ್ತವೂ ಜನರು ಹೋಗುವುದಕ್ಕೆ ಹಿಂಜರಿಯುತ್ತಿದ್ದಾರೆ. ತಮ್ಮ ನಿತ್ಯದ ಖರ್ಚುವೆಚ್ಚಗಳಿಗಾಗುವಷ್ಟುವ್ಯಾಪಾರವಾಗುತ್ತಿಲ್ಲ ಎನ್ನುತ್ತಾರೆ ಚಿನ್ನಾಭರಣವೊಂದರ ವ್ಯವಸ್ಥಾಪಕರು.

ಬಸ್ಸುಗಳಲ್ಲಿ ಸಾಮಾಜಿಕ ಅಂತರವೇ ಇಲ್ಲ

ಜಿಲ್ಲೆಯಲ್ಲಿರುವ ಸುಮಾರು 280 ಬಸ್ಸುಗಳಲ್ಲಿ ಸುಮಾರು 80 ಬಸ್ಸುಗಳಷ್ಟೇ ಸಂಚಾರ ಆರಂಭಿಸಿವೆ. ಪೇಟೆಯಲ್ಲಿ ಉದ್ಯೋಗದಲ್ಲಿರುವ ನಿತ್ಯ ಪ್ರಯಾಣಿಕರು ಹೆದರುತ್ತಲೇ ಬಸ್ಸುಗಳ ಓಡಾಟ ಆರಂಭಿಸಿದ್ದಾರೆ. ಕೊರೋನಾ ಸೋಂಕು ಹರಡುವುದನ್ನು ತಡೆಯಲು, ಬಸ್ಸುಗಳಲ್ಲಿ ಅರ್ಧದಷ್ಟುಮಾತ್ರ ಪ್ರಯಾಣಿಕರನ್ನು ತುಂಬಿಸಬೇಕು, ಎಲ್ಲರೂ ಮಾÓ್ಕ… ಧರಿಸಿರಬೇಕು, ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌ ನೀಡಬೇಕು ಎಂಬಿತ್ಯಾದಿ ಸರ್ಕಾರದ ನಿಯಮಗಳು ಮೊದಲೆರೆಡು ದಿನಗಳಿಗಷ್ಟೇ ಸೀಮಿತವಾಗಿತ್ತು. ಈಗ ಬಸ್ಸಿನ ಸಿಬ್ಬಂದಿಗಳಿಗೆ ತಮ್ಮ ಪ್ರಯಾಣಿಕರ ಸುರಕ್ಷತೆ ತಮ್ಮ ಜವಾಬ್ದಾರಿ ಎಂಬುದೇ ಮರೆತುಹೋಗಿದೆ. ಬಹುತೇಕ ಬಸ್ಸುಗಳು ಫುಲ್‌ ಆಗಿ ಓಡಾಡುತ್ತಿವೆ, ಸ್ಯಾನಿಟೈಸರ್‌ ಬಳಕೆ ಕೂಡ ನಿಂತು ಹೋಗಿದೆ.

click me!