ಮಣ್ಣು ಇಲ್ಲದಿದ್ದರೆ ಯಾವ ಸಸ್ಯವೂ ಉಳಿಯುವುದಿಲ್ಲ

Published : Dec 03, 2023, 09:41 AM IST
 ಮಣ್ಣು ಇಲ್ಲದಿದ್ದರೆ ಯಾವ ಸಸ್ಯವೂ ಉಳಿಯುವುದಿಲ್ಲ

ಸಾರಾಂಶ

ಮಣ್ಣು ಇಲ್ಲದಿದ್ದರೆ ಭೂಮಿಯ ಮೇಲೆ ಯಾವ ಜೀವಿ, ಸಸ್ಯ ಸಂಕುಲವೂ ಉಳಿಯಲು ಸಾಧ್ಯವಿಲ್ಲ. ರಮೇಶ್ ನಾಯ್ಕ್ ಅವರ ಪ್ರಯತ್ನ ಶ್ಲಾಘನೀಯ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.

ತುಮಕೂರು :  ಮಣ್ಣು ಇಲ್ಲದಿದ್ದರೆ ಭೂಮಿಯ ಮೇಲೆ ಯಾವ ಜೀವಿ, ಸಸ್ಯ ಸಂಕುಲವೂ ಉಳಿಯಲು ಸಾಧ್ಯವಿಲ್ಲ. ರಮೇಶ್ ನಾಯ್ಕ್ ಅವರ ಪ್ರಯತ್ನ ಶ್ಲಾಘನೀಯ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.

ನಗರದ ಸಿದ್ದಗಂಗಾ ಮಠದಲ್ಲಿ ಇನಿಸಿಎಟಿವ್ ಫಾರ್ ಸಸ್ಟೇನಬಲ್ ಅಗ್ರಿಕಲ್ಚರ್ ಅಂಡ್ ಎನ್‌ವಿರಾನ್‌ಮೆಂಟ್‌ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್ ಆಫ್ ಸಾಯಿಲ್-2023ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮಣ್ಣು ಅತ್ಯಂತ ಅಮೂಲ್ಯವಾದುದ್ದು, ಇಂತಹ ಮಣ್ಣನ್ನು ಸಂರಕ್ಷಿಸುವ ಕೆಲಸದಲ್ಲಿ ಭಾಗಿಯಾದವರನ್ನು ಗುರುತಿಸಿ ಚಾಂಪಿಯನ್ ಆಫ್ ಸಾಹಿಲ್ ಪ್ರಶಸ್ತಿ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ವಕೀಲ ರಮೇಶ್ ನಾಯಕ್ ಮುನ್ನುಡಿ ಬರೆದಿದ್ದಾರೆ ಎಂದರು.

ಭೂಮಿಯ ಆರೋಗ್ಯದ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ. ಮಣ್ಣನ್ನು ನಂಬಿ ಕೋಟ್ಯಾಂತರ ಜೀವರಾಶಿಗಳಿವೆ. ಹೆಚ್ಚಿನ ಇಳುವರಿ ಆಸೆಗೆ ಬಿದ್ದು, ಹೆಚ್ಚು ರಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ದಿನದಿಂದ ದಿನಕ್ಕೆ ಕೆಡುತ್ತಿದೆ. ಪ್ರತಿಯೊಂದು ತಕ್ಷಣವೇ ಬೇಕು ಎಂಬ ಪ್ರವೃತ್ತಿ ಎಲ್ಲರಲ್ಲಿಯೂ ಇದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಡಬೇಕಿದೆ. ಜನರ ಜೊತೆಗೆ, ಮಣ್ಣಿನ ಆರೋಗ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಿದೆ. ಈ ನಿಟ್ಟಿನಲ್ಲಿ ವಕೀಲ ರಮೇಶ್‌ ನಾಯಕ್ ಅವರ ಕಾರ್ಯ ಶ್ಲಾಘನೀಯ ಎಂದು ಸಿದ್ದಲಿಂಗಸ್ವಾಮೀಜಿ ತಿಳಿಸಿದರು.

ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸಿದ್ದಗಂಗಾ ಮಠದಲ್ಲಿ ಕಲಿಯುತ್ತಿರುವ ನೀವುಗಳೇ ಪುಣ್ಯವಂತರು. ನಿಮ್ಮ ತಂದೆ, ತಾಯಿ ಎಲ್ಲೋ ಇದ್ದಾರೆ.ಆದರೆ ಸ್ವಾಮೀಜಿಗಳು ನಿಮ್ಮನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ.ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಅವುಗಳ ಸದುಪಯೋಗ ಪಡೆದುಕೊಂಡು ನೀವು ಸಹ ದೊಡ್ಡದಾದ ಗುರಿಯೊಂದಿಗೆ ಜೀವನ ನಡೆಸುವಂತೆ ಮೊದಲ ಗಗನಯಾತ್ರಿ ನಿಲಂ ಅಮ್‌ಸ್ಟ್ರಾಂಗ್ ಅವರ ಜೀವನವನ್ನು ಉದಾಹರಣೆಯಾಗಿಸಿ ಸಲಹೆ ನೀಡಿದರು.

ಮಾಜಿ ಸಚಿವ ಡಾ.ಬಿ.ಟಿ.ಲಲಿತ ನಾಯಕ್ ಮಾತನಾಡಿ, ಸಿದ್ದಗಂಗಾ ಮಠ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ ಮತ್ತು ವಿದ್ಯೆಯನ್ನು ನೀಡುವ ಮೂಲಕ ಒಳ್ಳೆಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ. ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಸ್ಪರ ಸಹೋದರರಂತೆ ಬದುಕಿ ಬಾಳುತ್ತಿರುವುದು, ಒಂದು ಮಿನಿ ಭಾರತವನ್ನು ನೋಡಿದ ಅನುಭವ ಕೊಡುತ್ತದೆ. ಸಣ್ಣದಾಗಿ ಆರಂಭಗೊಂಡ ಮಠ ಇಂದು ಬೃಹದಾಕಾರ ಬೆಳೆದಿದೆ. ಇದರ ಹಿಂದೆ ಹಿರಿಯ ಶ್ರೀ ಡಾ. ಶಿವಕುಮಾರಸ್ವಾಮೀಜಿ ಶ್ರಮವಿದೆ. ಸ್ವಾಮೀಜಿಗಳ ಆಶ್ರಯದಲ್ಲಿರುವ ನೀವುಗಳು ಉತ್ತಮ ಸಮಾಜ ನಿರ್ಮಿಸುವ ಸಂಕಲ್ಪ ಮಾಡೋಣ ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು.

ವಕೀಲ ರಮೇಶ್‌ ನಾಯ್ಕ್ ಮಾತನಾಡಿ, ಮಣ್ಣು ನಮ್ಮೆಲ್ಲರ ಆಧಾರ. ಇಂದು ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ಕುಟುಂಬದ ಹಿನ್ನೆಲೆ ಕೃಷಿಯೇ ಆಗಿರುತ್ತದೆ. ಹಾಗಾಗಿ, ಮಣ್ಣು ರಕ್ಷಣೆ ಮಾಡಿದರೆ ಮಾತ್ರ ನಾವು ಭವಿಷ್ಯದಲ್ಲಿ ಬದುಕಲು ಸಾಧ್ಯ ಎಂದರು.

ಮಣ್ಣಿಗೆ ಯಾವುದೇ ತೊಂದರೆಯಾಗದ ರೀತಿ ಕೃಷಿ ಮಾಡಿದವರನ್ನು ಗುರುತಿಸಿ, ಚಾಂಪಿಯನ್ ಆಫ್ ಸಾಯಿಲ್ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ.

ಪ್ರಶಸ್ತಿ 10 ಸಾವಿರ ರು. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಬಾರಿ ರೈತರಾದ ಲಕ್ಷ್ಮೀಶ್ ಮತ್ತು ಬೈರಲಿಂಗಯ್ಯ ಇಬ್ಬರಿಗೂ ಈ ಬಾರಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನಕ್ಕೆ ವೇದಿಕೆ ಒದಗಿಸಿಕೊಟ್ಟ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಮಠದ ಆಡಳಿತ ಮಂಡಳಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕದರನಹಳ್ಳಿ ತಾಂಡದ ರೈತರಾದ ಲಕ್ಷ್ಮೀಶ್ ಮತ್ತು ಬೈರಲಿಂಗಯ್ಯ ಅವರಿಗೆ 2023ನೇ ಸಾಲಿನ ಚಾಂಪಿಯನ್ ಆಫ್ ಸಾಯಿಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಹೈಕೋರ್ಟ್ ವಕೀಲರಾದ ಹಾಲೇಶ್. ಆರ್.ಜಿ. ವೇದಿಕೆಯಲ್ಲಿದ್ದರು.

PREV
Read more Articles on
click me!

Recommended Stories

Bloom Avenue Greening Project: ಬೆಂಗಳೂರು ರಸ್ತೇಲಿ ವರ್ಷವಿಡೀ ಅರಳಲಿವೆ ಬಣ್ಣದ ಹೂಗಳು!
ಬೈರಕುಪ್ಪ ಸೇತುವೆ: ಕರ್ನಾಟಕ-ಕೇರಳ ಸಂಪರ್ಕ, ದಶಕದ ಕನಸಿಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮರುಜೀವ!