ನೆಟ್ಕಲ್ ಕುಡಿವ ನೀರಿನ ಯೋಜನೆ ಟ್ರಯಲ್ ರನ್ : 465 ಕೋಟಿ ರು.ವೆಚ್ಚ

By Kannadaprabha NewsFirst Published Jun 24, 2024, 12:42 PM IST
Highlights

ಜಿಲ್ಲಾ ಕೇಂದ್ರವಾದ ರೇಷ್ಮೆನಗರಿ ರಾಮನಗರಕ್ಕೆ ಕುಡಿಯುವ ನೀರು ಪೂರೈಸುವ ನೆಟ್ಕಲ್ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ವಾರದಿಂದ ಪ್ರಾಯೋಗಿಕ ನೀರಿನ ಸರಬರಾಜು (ಟ್ರಯಲ್ ರನ್) ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಪ್ರತಿ ಮನೆಯಲ್ಲಿ ಕಾವೇರಿ ಹರಿಯಲಿದ್ದಾಳೆ.

 -ಎಂ.ಅಫ್ರೋಜ್ ಖಾನ್

 ರಾಮನಗರ :  ಜಿಲ್ಲಾ ಕೇಂದ್ರವಾದ ರೇಷ್ಮೆನಗರಿ ರಾಮನಗರಕ್ಕೆ ಕುಡಿಯುವ ನೀರು ಪೂರೈಸುವ ನೆಟ್ಕಲ್ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ವಾರದಿಂದ ಪ್ರಾಯೋಗಿಕ ನೀರಿನ ಸರಬರಾಜು (ಟ್ರಯಲ್ ರನ್) ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಪ್ರತಿ ಮನೆಯಲ್ಲಿ ಕಾವೇರಿ ಹರಿಯಲಿದ್ದಾಳೆ.

Latest Videos

ಕನಕಪುರ ಮತ್ತು ಮಳವಳ್ಳಿ ಗಡಿ ಪ್ರದೇಶದಲ್ಲಿರುವ ನೆಟ್ಕಲ್ (ಬ್ಯಾಲೆನ್ಸಿಂಗ್ ರಿಸರ್ವ್ ವೈರ್) ಸಮತೋಲನ ಜಲಾಶಯದಿಂದ ರಾಮನಗರ ಸುಮಾರು 68 ಕಿ.ಮೀ. ದೂರದಲ್ಲಿದೆ. ಈಗ ಅರಳಾಳುಸಂದ್ರದ (30 ಕಿ.ಮೀ)ವರೆಗೆ ಹರಿದು ಬಂದಿರುವ ಕಾವೇರಿ ನೀರು, ನಾಲ್ಕೈದು ದಿನಗಳಲ್ಲಿ ರಾಮನಗರ ಟೌನ್ ತಲುಪಲಿದೆ.

ಮೊದಲ 10ರಿಂದ 15 ದಿನಗಳ ಕಾಲ ಯೋಜನೆಗಾಗಿ ಅಳವಡಿಸಿರುವ ಪೈಪ್‌ಗಳಲ್ಲಿರುವ ಮಡ್ಡಿಯನ್ನು ನೀರು ಹರಿಸಿ ಹೊರ ತೆಗೆಯಲಾಗುವುದು. ಮೊದಲು ಒಂದು ವಾರಗಳ ಕಾಲ ಹಳೇ ಪೈಪ್‌ಲೈನ್ ಮೂಲಕವೇ ಮನೆಗಳಿಗೆ ನೀರು ಸರಬರಾಜಾಗಲಿದ್ದು, ಆನಂತರ ಹೊಸದಾಗಿ ಸಂಪರ್ಕ ನೀಡಿರುವ ಪೈಪ್‌ಲೈನ್ ಗಳ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. ಈ ಎಲ್ಲ ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾಗಿ ನೆಟ್ಕಲ್ ಯೋಜನೆಯಲ್ಲಿ ಕಾವೇರಿ ಹರಿಯಲು ಒಂದು ತಿಂಗಳು ಬೇಕಾಗಿದೆ.

ಈ ಯೋಜನೆ ಅಡಿಯಲ್ಲಿ ಕೆಲವೆಡೆ ಪೈಪ್‌ಲೈನ್ ಅಳವಡಿಸಲು ಜಮೀನು ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅಲ್ಲಲ್ಲಿ ಸಣ್ಣಪುಟ್ಟ ಕೆಲಸ ಸೇರಿ ಒಟ್ಟು 1 ಕಿ.ಮೀ.ನಷ್ಟು ಕಾಮಗಾರಿ ವಿಳಂಬವಾಗಿತ್ತು. ಎಲ್ಲ ತೊಡಕುಗಳು ನಿವಾರಣೆಯಾಗಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ.ಯೋಜನೆಯ ಮಾರ್ಗದಲ್ಲಿ ಬರುವ ಚನ್ನಪಟ್ಟಣದ 12 ಎನ್ ರೂಟ್ ಹಳ್ಳಿಗಳಿಗೆ ಕೊಳಾಯಿ ಪಾಯಿಂಟ್ ಕೂಡ ಅಳವಡಿಸಲಾಗಿದೆ.

6 ವರ್ಷಗಳ ಬಳಿಕ ಯೋಜನೆ ಪೂರ್ಣ :

2018-19ರಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನೆಟ್ಕಲ್ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿತ್ತು. 2022ರೊಳಗೆ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಕೊರೋನಾ ಕಾರಣ ವಿಳಂಬವಾಯಿತು. 6 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದೆ.

ಈಗ ಹಾಲಿ ಶಿಂಷಾ ನದಿ ನೀರನ್ನು ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ) ಯಿಂದ ರಾಮನಗರ ಮತ್ತು ಚನ್ನಪಟ್ಟಣ ಎರಡೂ ನಗರಗಳಿಗೆ 18 ಎಂಎಲ್ ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ರಾಮನಗರಕ್ಕೆ ಕೇವಲ 6 - 7 ಎಂಎಲ್ ಡಿ ನೀರು ಮಾತ್ರ ಪೂರೈಕೆಯಾಗುತ್ತಿದೆ. ಆದರೀಗ 1.40 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲಾ ಕೇಂದ್ರ ರಾಮನಗರಕ್ಕೆ 18 ರಿಂದ 20 ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ವೃಷಭಾವತಿ, ಅರ್ಕಾವತಿ, ಕಾವೇರಿ ಜಲಮೂಲ ಹಾಗೂ ಕೊಳವೆ ಬಾವಿಗಳ ಮೂಲ ಸೇರಿ ಕೇವಲ 12 ಎಂಎಲ್ ಡಿಯಷ್ಟು ನೀರಿನ ಲಭ್ಯತೆ ಮಾತ್ರ ಇದೆ.

ದೂರದೃಷ್ಟಿ ಯೋಜನೆ:

ಮುಂದಿನ 30 ವರ್ಷಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಾಮನಗರಕ್ಕಾಗಿ ಪ್ರತ್ಯೇಕವಾಗಿಯೇ ನೆಟ್ಕಲ್ ಯೋಜನೆ ರೂಪಿಸಲಾಗಿದೆ. ಇದರ ಯೋಜನಾ ವೆಚ್ಚ 456 ಕೋಟಿ ರುಪಾಯಿಗಳಾಗಿದೆ. ಈ ಯೋಜನೆ ಜಾರಿಯಾದ ಮೇಲೆ ಹಾಲಿ ಯೋಜನೆಯನ್ನು ಚನ್ನಪಟ್ಟಣಕ್ಕೆ ಸೀಮಿತಗೊಳಿಸುವ ಚಿಂತನೆ ನಡೆದಿದೆ.

ಕನಕಪುರ ಮತ್ತು ಮಳವಳ್ಳಿ ಗಡಿ ಪ್ರದೇಶದಲ್ಲಿರುವ ನೆಟ್ಕಲ್ (ಬ್ಯಾಲೆನ್ಸಿಂಗ್ ರಿಸರ್ವ್ ವೈರ್) ಸಮತೋಲನ ಜಲಾಶಯದಿಂದ ರಾಮನಗರ ಸುಮಾರು 68 ಕಿ.ಮೀ ದೂರದಲ್ಲಿದೆ. ನೆಟ್ಕಲ್ ಜಲಾಶಯಕ್ಕೆ ಶಿವ ಸಮುತೋಲನ ಜಲಾಶಯದಿಂದ ನೀರು ಹರಿದು ಬರಲಿದೆ. ಆನಂತರ ನೆಟ್ಕಲ್ ಜಲಾಶಯದಿಂದ ಗುರುತ್ವಾಕರ್ಷಣೆ ಬಲದ ಆಧಾರದಲ್ಲಿ 10 ಕಿ.ಮೀ ದೂರದ ಟಿ.ಕೆ.ಹಳ್ಳಿಯಲ್ಲಿರುವ ಶುದ್ಧೀಕರಣ ಘಟಕಕ್ಕೆ ಬೃಹತ್ ಗಾತ್ರದ ಪೈಪ್ ಲೈನ್ ಮೂಲಕ ಹರಿಯಲಿದೆ.

ಟಿ.ಕೆ.ಹಳ್ಳಿಯಲ್ಲಿ ಸಂಸ್ಕರಿಸಿದ ನೀರನ್ನು ಸದ್ಯಕ್ಕೆ 800 ಎಚ್ ಪಿನಲ್ಲಿ ಪಂಪ್ ಮಾಡುವ ಮೂಲಕ ಗುರುವಿನಪುರ ಮತ್ತು ಅಲ್ಲಿಂದ ಅರಳಾಳುಸಂದ್ರದವರೆಗೆ 29 ಕಿ.ಮೀ ಉದ್ದದ 813 ಎಂಎಂ ಅಳತೆಯ ಬೃಹತ್ ಪೈಪ್ ಲೈನ್ ಅಳವಡಿಕೆ ಮಾಡಲಾಗಿದೆ.

ಅರಳಾಳುಸಂದ್ರದಲ್ಲಿ 37 ಎಂಎಲ್ ಡಿ ಸಾಮರ್ಥ್ಯದ ನೀರು ಸಂಸ್ಕರಣ ಘಟಕ ನಿರ್ಮಿಸಲಾಗಿದ್ದು, ಅಲ್ಲಿಂದ ರಾಮನಗರಕ್ಕೆ ಪೈಪ್ ಲೈನ್ ಮೂಲಕ ತಂದ ನೀರನ್ನು ಕೊತ್ತಿಪುರ 200 ಲಕ್ಷ ಮತ್ತು ಬೋಳಪ್ಪನಹಳ್ಳಿ 100 ಲಕ್ಷ ಲೀಟರ್ ಹೆಡ್ ಟ್ಯಾಂಕ್ ಗಳಲ್ಲಿ ಸಂಗ್ರಹವಾಗಲಿದೆ. ಅಲ್ಲಿಂದ ರಾಮನಗರಕ್ಕೆ ನೀರು ಸರಬರಾಜು ಆಗಲಿದೆ.ಜುಲೈ ತಿಂಗಳ ಅಂತ್ಯ ಅಥವಾ ಆಗಸ್ಟ್ ತಿಂಗಳಲ್ಲಿ ರಾಮನಗರ ಜನರ ಕುಡಿಯುವ ನೀರಿನ ಬವಣೆ ನೀಗಲಿದ್ದು, ದಿನದ 24 ಗಂಟೆಯೂ ನೀರು ಪೂರೈಕೆಯಾಗಲಿದೆ.

ಕೋಟ್ ...............

ನೆಟ್ಕಲ್ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಈ ಯೋಜನೆಯಡಿ ಟಿ.ಕೆ.ಹಳ್ಳಿ ಗ್ರಾಮದಲ್ಲಿ ಜಲಶುದ್ಧೀಕರಣ ಘಟಕ ನಿರ್ಮಿಸಿದ್ದು, ಆ ಘಟಕದಿಂದ ರಾಮನಗರ ನಗರಕ್ಕೆ ಪ್ರಾಯೋಗಿಕವಾಗಿ ನೀರನ್ನು ಪಂಪ್ ಮಾಡುವ ಕೆಲಸ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಯೋಜನೆಯನ್ನು ಚಾಲನೆ ನೀಡುವ ಮೂಲಕ ದಶಕಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ.

-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

ಬಾಕ್ಸ್ .................

2050ರ ವೇಳೆಗೆ 62 ಎಂಎಲ್ ಡಿಗೆ ಹೆಚ್ಚಳ !

ನೆಟ್ಕಲ್ ಕುಡಿಯುವ ನೀರಿನ ಯೋಜನೆ ಸದ್ಯಕ್ಕೆ 25 ಎಂಎಲ್ ಡಿ ನೀರು ಪೂರೈಸುವ ಸಾಮರ್ಥ್ಯ ಹೊಂದಿದೆ. 2050ರ ವೇಳೆಗೆ ಇದೇ ಯೋಜನೆಯನ್ನು 62 ಎಂಎಲ್ ಡಿಗೆ ಹೆಚ್ಚಳ ಮಾಡಿಕೊಳ್ಳಲು ಅವಕಾಶವಿದೆ. 2ಸಾವಿರ ಎಚ್ ಪಿ ವರೆಗೂ ನೀರನ್ನು ಪಂಪ್ ಮಾಡಬಹುದಾಗಿದೆ. ಅಲ್ಲದೆ, ಪೈಪ್ ಲೈನ್ ಹಾದು ಹೋಗಿರುವ ಮಾರ್ಗ ಮಧ್ಯದಲ್ಲಿನ ಚನ್ನಪಟ್ಟಣದ 12 ಹಳ್ಳಿಗಳಿಗೂ ನೀರು ಪೂರೈಕೆಯಾಗಲಿದೆ.

ಬಾಕ್ಸ್ ................

ಈಗ ವಾರಕ್ಕೊಮ್ಮೆ ನೀರು !

ಪ್ರಸ್ತುತ ರಾಮನಗರ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಸರಾಸರಿ 8 ರಿಂದ 10ದಿನಕ್ಕೊಮ್ಮೆ ಜಲ ಮಂಡಳಿ ನೀರು ಸರಬರಾಜು ಮಾಡುತ್ತಿದೆ. ಕೆಲವೊಮ್ಮೆ 15 ದಿನಗಳಿಗೊಮ್ಮೆ ನೀರು ಪೂರೈಸುತ್ತಿದೆ. ಟಿ.ಕೆ.ಹಳ್ಳಿ ಜಲಾಶಯದಿಂದ ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ 18 ಎಂಎಲ್ ಡಿ ನೀರು ಸರಬರಾಜು ಆಗುತ್ತಿದೆ. ರಾಮನಗರಕ್ಕೆ ನೀರು ಕೊರತೆ ಇರುವ ಕಾರಣ 1 ರಿಂದ 10ನೇ ವಾರ್ಡುಗಳಿಗೆ ಅರ್ಕಾವತಿ ನದಿ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ.

ಬಾಕ್ಸ್ .................

ನೀರಿನ ಬಿಲ್ ಪೂರ್ಣ ಪಾವತಿಸಿದವರಿಗಷ್ಟೇ ಕಾವೇರಿ ನೀರು!

ನೆಟ್ಕಲ್ ಯೋಜನೆ ಚಾಲನೆಗೊಂಡ ಬಳಿಕ ಹಾಲಿ ಇರುವ ಟಿ.ಕೆ.ಹಳ್ಳಿ ಗ್ರಾಮದಲ್ಲಿರುವ ಶಿಂಷಾ ನದಿ ಹಾಗೂ ಬೆಂಗಳೂರು ಜಲಮಂಡಳಿಯ ಬ್ಯಾಕ್ ವಾಷ್ ನೀರಿನ ಮೂಲದ ಕುಡಿಯುವ ನೀರು ಸರಬರಾಜನ್ನು ರಾಮನಗರ ನಗರಕ್ಕೆ ಸ್ಥಗಿತಗೊಳಿಸಲಾಗುವುದು. ಚಾಲ್ತಿಯಲ್ಲಿರುವ ಪಿವಿಸಿ ವಿತರಣಾ ಕೊಳವೆ ಮಾರ್ಗ ಹಾಗೂ ಗೃಹ ಸಂಪರ್ಕ ಮತ್ತು ಕೊಳವೆಬಾವಿ ಮೂಲದ ಕುಡಿಯುವ ನೀರು ಸರಬರಾಜಿನ ಮಾರ್ಗಗಳ ನೀರು ಸರಬರಾಜನ್ನು ಸ್ಥಗಿತಗೊಳಿಸಿ, ನೆಟ್ಕಲ್ ಜಲಾಶಯ ಮೂಲದ ಯೋಜನೆಯಡಿ ಕೈಗೊಂಡಿರುವ ಎಚ್‌ಡಿಪಿಇ ಕೊಳವೆ ಮಾರ್ಗ ಮತ್ತು ಎಂಡಿಪಿಇ ಕೊಳವೆ ಮಾರ್ಗದ ಗೃಹಸಂಪರ್ಕ ಕೊಳವೆ ಮಾರ್ಗಗಳಲ್ಲಿ ಮಾತ್ರ ನೀರಿನ ಮಾಪಕ ಅಳವಡಿಸಿ, ನೀರನ್ನು ಶೀಘ್ರದಲ್ಲೇ ಸರಬರಾಜು ಮಾಡಲಾಗುವುದು.ಪ್ರಸ್ತುತ ಗೃಹಸಂಪರ್ಕದ ನೀರಿನ ಕಂದಾಯದ ಬಿಲ್ಲಿನ ಪೂರ್ಣ ಮೊತ್ತವನ್ನು ಮಂಡಳಿಗೆ ಪಾವತಿಸಿ, ರಶೀದಿಯನ್ನು ಒದಗಿಸಿದ ನಂತರ, ನೆಟ್ಕಲ್ ಜಲಾಶಯ ಮೂಲದ ಗೃಹಸಂಪರ್ಕವನ್ನು ನೀಡಲಾಗುವುದು ಎಂದು ಚನ್ನಪಟ್ಟಣ ಉಪ ವಿಭಾಗದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

23ಕೆಆರ್ ಎಂಎನ್ 3,4,5,6.ಜೆಪಿಜಿ

3,4,5.ನೆಟ್ಕಲ್ ಕುಡಿಯುವ ನೀರು ಸರಬರಾಜು ಯೋಜನೆ ಚಿತ್ರಗಳು

(ಈ ಫೋಟೋ ಕೋಟ್‌ಗೆ ಬಳಸಿ)

6.ಇಕ್ಬಾಲ್ ಹುಸೇನ್

click me!