ಮಹಾರಾಷ್ಟ್ರ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಕಾರಣ?

By Kannadaprabha NewsFirst Published Mar 7, 2020, 10:35 AM IST
Highlights

ಗಡಿ ಭಾಗದ ಸರ್ಕಾರ ಮರಾಠಿಪರ ಸಂಘಟನೆಗಳಿಗೆ ನೆರವು ನೀಡಿದ ಮಹಾರಾಷ್ಟ್ರ ಸರ್ಕಾರ| ಅನುದಾನ ನೀಡಿ ಭಾಷಾ ಸಾಮರಸ್ಯ ನಡುವೆ ಕಂದಕ ಸೃಷ್ಟಿಸುವ ಮಹಾರಾಷ್ಟ್ರ ಯತ್ನ|

ಶ್ರೀಶೈಲ ಮಠದ 

ಬೆಳಗಾವಿ(ಮಾ.07): ಮರಾಠಿ ಭಾಷಿಕರ ಓಲೈಕೆಗೆ ಮಹಾರಾಷ್ಟ್ರ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಚೊಚ್ಚಲ ಬಜೆಟ್‌ನಲ್ಲಿ ಕರ್ನಾಟಕ ಗಡಿಭಾಗದಲ್ಲಿರುವ ಮರಾಠಿ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆ ಹಾಗೂ ಮರಾಠಿ ಪತ್ರಿಕೆಗಳಿಗೆ ಬರೋಬ್ಬರಿ 10 ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಗಡಿಭಾಗದ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಟಿಸಲು ಯತ್ನ ಮಾಡುತ್ತಿದೆ. 
ಮಾತ್ರವಲ್ಲ, ಸ್ಥಳೀಯರಲ್ಲಿ ಮತ್ತೆ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೆಲಸಕ್ಕೆ ಮಹಾ ಸರ್ಕಾರ ಅಣಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಾತ್ರವಲ್ಲ, ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರ ಸ್ಥಳೀಯ ಕನ್ನಡ ಪರ ಸಂಘಟನೆಗಳ ಮುಖಂಡರ ಆಕ್ರೋಶಕ್ಕೂ ಕಾರಣವಾಗಿದೆ. 

ಮರಾಠಿ ಪ್ರೇಮ ಮೆರೆಯಲು ಅನುದಾನದ ಅಸ್ತ್ರವನ್ನು ಶಿವಸೇನೆ ಮತ್ತೆ ಪ್ರಯೋಗಿಸಿರುವುದಕ್ಕೆ ಕನ್ನಡಿಗರು ಸಹಜವಾಗಿ ಆಕ್ರೋಶಿತಗೊಂಡಿದ್ದಾರೆ. ವಿಚಿತ್ರವೆಂದರೆ ಮರಾಠಿ ಸಂಘ ಸಂಸ್ಥೆಗಳಾಗಲಿ, ಶಿಕ್ಷಣ ಸಂಸ್ಥೆಗಳಾಗಿ ಅನುದಾನ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿಲ್ಲ. ಸ್ವತಃ ಮಹಾರಾಷ್ಟ್ರ ಸರ್ಕಾರವೇ ಮರಾಠಿಪರ ಸಂಘಟನೆಗಳಿಗೆ ನೆರವು ನೀಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹಾರಾಷ್ಟ್ರ ಸರ್ಕಾರ ಕನ್ನಡ ನೆಲದಲ್ಲಿರುವ ಮರಾಠಿ ಸಂಸ್ಥೆಗಳಿಗೆ ಅನುದಾನ ನೀಡಿರುವ ಔಚಿತ್ಯವಾದರೂ ಏನು ಎನ್ನುವ ಪ್ರಶ್ನೆ ಇಲ್ಲಿನ ಸಂಘಟನೆಗಳದ್ದು. ಗಡಿ ಜಿಲ್ಲೆಯಲ್ಲಿ ಉಭಯ ಭಾಷಿಗರು ಭಾಷಾ ಸಾಮರಸ್ಯದಿಂದ ಇದ್ದಾರೆ. ಅವರ ಮನದಲ್ಲಿ ಮತ್ತೆ ಕನ್ನಡ, ಮರಾಠಿ ಧೋರಣೆ ನಿಲುವನ್ನು ಒತ್ತಡ ಪೂರ್ವಕವಾಗಿ ಹೇರುವ ಉದ್ದೇಶವಾದರೂ ಏನು ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ. 

ಠಾಕ್ರೆ ವಿರುದ್ಧ ಪ್ರಧಾನಿ ಬಳಿ ನಿಯೋಗ ಹೋಗಲಿ:

ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಗಡಿಭಾಗದ ಮರಾಠಿ ಸಂಘ ಸಂಸ್ಥೆಗಳಿಗೆ ಅನುದಾನ ನೀಡಿರುವ ಕುರಿತು ನಮ್ಮ ಜನಪ್ರತಿನಿಧಿಗಳು ಮೌನವಹಿಸಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಒಂದಿಲ್ಲೊಂದು ನೆಪ ಮಾಡಿ ಮರಾಠಿ ಭಾಷಿಕರನ್ನು ತನ್ನತ್ತ ಸೆಳೆಯುವ ರಾಜಕೀಯ ತಂತ್ರ ರೂಪಿಸಿರುವುದು ಗುಟ್ಟಾಗಿ ಉಳಿದಿಲ್ಲ. ಕೂಡಲೇ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವ ಪಕ್ಷನಿಯೋಗವೊಂದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಗೆ ಕರೆದೊಯ್ಯುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತೆಪ್ಪಗೆ ಕುಳಿತುಕೊಳ್ಳುವಂತೆ ಮಾಡಬೇಕು. ಠಾಕ್ರೆ ಕನ್ನಡ ವಿರೋಧಿ ನೀತಿ ಮುಂದುವರಿಸಿದರೆ ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ. 

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೇಮಕ ಮಾಡಿದೆ. ಆದರೆ,ಕರ್ನಾಟಕ ಸರ್ಕಾರ ಮಾತ್ರ ಯಾವುದೇ ಸಚಿವರನ್ನು ನೇಮಕ ಮಾಡಿಲ್ಲ. ಬೆಳಗಾವಿ ಬಗ್ಗೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ಭಾವನೆ ತೋರುತ್ತಿದೆ ಎಂಬ ಅನುಮಾನ ಕನ್ನಡಿಗರನ್ನು ಕಾಡತೊಡಗಿದೆ. ರಾಜ್ಯ ಸರ್ಕಾರ ಗಡಿಭಾಗದಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಮಹಾಜನ ಆಯೋಗದ ವರದಿಯೇ ಅಂತಿಮ. ಒಂದಿಂಚೂ ಭೂಮಿಯನ್ನು ಕೊಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಗಡಿ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿವೇಶನದಲ್ಲಿ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರ ಸಾರ್ವಭೌಮತ್ವವನ್ನು ಮತ್ತೆ ಕೆದಕುವ ಕಾರ್ಯಕ್ಕೆ ಮಹಾ ಸರ್ಕಾರ ಕೈ ಹಾಕುವ ಯತ್ನಕ್ಕೂ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೂ ಕಾರಣವಾಗಿದೆ ಎಂಬವುದರಲ್ಲಿ ಎರಡು ಮಾತಿಲ್ಲ.

ಅನುದಾನ ನೀಡಿ ಭಾಷಾ ಸಾಮರಸ್ಯ ನಡುವೆ ಕಂದಕ ಸೃಷ್ಟಿಸುವ ಮಹಾರಾಷ್ಟ್ರ ಯತ್ನ

ವಿಚಿತ್ರವೆಂದರೆ ಮರಾಠಿ ಸಂಘ ಸಂಸ್ಥೆಗಳಾಗಲಿ, ಶಿಕ್ಷಣ ಸಂಸ್ಥೆಗಳಾಗಿ ಅನುದಾನ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿಲ್ಲ. ಸ್ವತಃ ಮಹಾರಾಷ್ಟ್ರ ಸರ್ಕಾರವೇ ಮರಾಠಿಪರ ಸಂಘಟನೆಗಳಿಗೆ ನೆರವು ನೀಡಿದೆ. ಮಹಾರಾಷ್ಟ್ರ ಸರ್ಕಾರ ಕನ್ನಡ ನೆಲದಲ್ಲಿರುವ ಮರಾಠಿ ಸಂಸ್ಥೆಗಳಿಗೆ ಅನುದಾನ ನೀಡಿರುವ ಔಚಿತ್ಯವಾದರೂ ಏನು ಎನ್ನುವ ಪ್ರಶ್ನೆ ಇಲ್ಲಿನ ಸಂಘಟನೆಗಳದ್ದು. ಗಡಿ ಜಿಲ್ಲೆಯಲ್ಲಿ ಉಭಯ ಭಾಷಿಗರು ಭಾಷಾ ಸಾಮರಸ್ಯದಿಂದ ಇದ್ದಾರೆ. ಅವರ ಮನದಲ್ಲಿ ಮತ್ತೆ ಕನ್ನಡ, ಮರಾಠಿ ಧೋರಣೆ ನಿಲುವನ್ನು ಒತ್ತಾಯ ಪೂರ್ವಕವಾಗಿ ಹೇರುವ ಉದ್ದೇಶವಾದರೂ ಏನು ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ.
 

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!