ಕೊಡಗು: ವನ್ಯಜೀವಿ - ಮಾನವ ಸಂಘರ್ಷಕ್ಕೆ ಸಿಕ್ಕೀತೆ ಶಾಶ್ವತ ಪರಿಹಾರ?

By Kannadaprabha NewsFirst Published May 19, 2023, 5:42 AM IST
Highlights

ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿ ಹಾಗೂ ವಿರಾಜಪೇಟೆ ಎರಡೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವನ್ಯಜೀವಿ - ಮಾನವ ಸಂಘರ್ಷ ಹೆಚ್ಚುತ್ತಲೇ ಇದೆ. ಇದರಿಂದ ಅಮಾಯಕ ಕಾರ್ಮಿಕರು ಆನೆ, ಹುಲಿ ದಾಳಿಯಿಂದ ಮೃತಪಡುತ್ತಿದ್ದಾರೆ. ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರು. ಪರಿಹಾರ ನೀಡಲಾಗುತ್ತಿದೆ. ಆದರೂ ಇದಕ್ಕೆ ಶಾಶ್ವತ ಪರಿಹಾರ ಅಗತ್ಯ.

ಸವಾಲಿನ ಹಾದಿ

ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ (ಮೇ.19) : ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿ ಹಾಗೂ ವಿರಾಜಪೇಟೆ ಎರಡೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವನ್ಯಜೀವಿ - ಮಾನವ ಸಂಘರ್ಷ ಹೆಚ್ಚುತ್ತಲೇ ಇದೆ. ಇದರಿಂದ ಅಮಾಯಕ ಕಾರ್ಮಿಕರು ಆನೆ, ಹುಲಿ ದಾಳಿಯಿಂದ ಮೃತಪಡುತ್ತಿದ್ದಾರೆ. ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರು. ಪರಿಹಾರ ನೀಡಲಾಗುತ್ತಿದೆ. ಆದರೂ ಇದಕ್ಕೆ ಶಾಶ್ವತ ಪರಿಹಾರ ಅಗತ್ಯ.

ಕೊಡಗಿನ ಮಡಿಕೇರಿ ವಿಧಾನಸಭಾ ಕ್ಷೇತ್ರ(Madikeri assembly constituency)ದಲ್ಲಿ ಡಾ. ಮಂಥರ್‌ ಗೌಡ(Dr Manthar gowda), ವಿರಾಜಪೇಟೆ ವಿಧಾನಸಭಾ ಕ್ಷೇತ್ರ(Virajapete assembly constituency)ದಲ್ಲಿ ಎ.ಎಸ್‌. ಪೊನ್ನಣ್ಣ(AS Ponnanna MLA) ಅವರು ನೂತನ ಶಾಸಕರಾಗಿದ್ದು, ಕೊಡಗಿನಲ್ಲಿ ವನ್ಯಜೀವಿ - ಮಾನವ ಸಂಘರ್ಷ(Wildlife - Human Conflict)ದ ಮುಕ್ತಿಗೆ ಕ್ರಮ ಕೈಗೊಳ್ಳಬೇಕಿದೆ.

ಕೊಡಗು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಆನೆ, ಹುಲಿ, ಕಾಡೆಮ್ಮೆ ಹಾವಳಿ ಹೆಚ್ಚಾಗಿದೆ. ಆಹಾರಕ್ಕಾಗಿ ನಾಡಿಗೆ ಬರುವ ವನ್ಯಪ್ರಾಣಿಗಳು ಮಾನವನ ಮೇಲೆ ಏಕಾಏಕಿ ದಾಳಿ ಮಾಡುತ್ತದೆ. ಇದರಿಂದ ಅಮಾಯಕರು ಜೀವವನ್ನು ಕಳೆದುಕೊಳ್ಳುತ್ತಾರೆ. ಪ್ರತಿ ವರ್ಷ ಆನೆ ದಾಳಿಯಿಂದ ಅಂದಾಜು 6ಕ್ಕೂ ಅಧಿಕ ಮಂದಿ ಸಾವನಪ್ಪುತ್ತಾರೆ. ಹೀಗೆ ಮೃತಪಟ್ಟವರಿಗೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ ಶಾಶ್ವತ ಪರಿಹಾರಕ್ಕೆ ಯಾವುದೇ ಸರ್ಕಾರಗಳು ಈ ವರೆಗೆ ಕ್ರಮ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.

Karnataka assembly election results: ನ್ಯಾಯವಾದಿ, ವೈದ್ಯರು ಕೊಡಗಿನ ನೂತನ ಶಾಸಕರು...

ಇದೀಗ ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್‌ ಸರ್ಕಾರ ಬಂದಿದ್ದು, ಕೊಡಗು ಜಿಲ್ಲೆಯಲ್ಲಿ ಇಬ್ಬರು ಯುವ ಶಾಸಕರು ಆಯ್ಕೆಗೊಂಡಿದ್ದಾರೆ. ಇಬ್ಬರು ಶಾಸಕರು ಕೂಡ ಜಿಲ್ಲೆಯ ಪ್ರಮುಖ ಸಮಸ್ಯೆ ಆಗಿರುವ ಕಾಡಾನೆ, ಹುಲಿ ಹಾವಳಿ ಬಗ್ಗೆ ಕಾಳಜಿ ವಹಿಸಿ ಸರ್ಕಾರದೊಂದಿಗೆ ವ್ಯವಹರಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಶೀಘ್ರವೇ ಕಾರ್ಯಪ್ರವೃತ್ತರಾಗಬೇಕಿದೆ.

ಪರಿಹಾರ ಮಾತ್ರ ಸಾಕೇ? : ಆನೆ ಹಾಗೂ ಹುಲಿ ದಾಳಿಯಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪ್ರಸ್ತುತ 15 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತಿದೆ. ಈ ಹಿಂದೆ 7 ಲಕ್ಷ ರು. ನೀಡಲಾಗುತ್ತಿತ್ತು. ಈಗ ಪರಿಹಾರ ಹೆಚ್ಚಿಸಲಾಗಿದ್ದರೂ, ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಆದಷ್ಟುಕೂಡಲೇ ಪರಿಹರಿಸಬೇಕಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ವಿವಿಧ ಕಡೆಗಳಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದರೆ, ಸಿದ್ದಾಪುರ, ಚೆಟ್ಟಳ್ಳಿ ಮತ್ತಿತರ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.

ಅಧಿಕಾರಿಗಳ ಸಭೆ ಕರೆಯಬೇಕು: ಜಿಲ್ಲೆಯ ಜ್ವಲಂತ ಹಾಗೂ ಪ್ರಮುಖ ಸಮಸ್ಯೆಯಾಗಿರುವ ವನ್ಯಪ್ರಾಣಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಹಿರಿಯ ಅರಣ್ಯಾಧಿಕಾರಿಗಳನ್ನು ಒಳಗೊಂಡಂತೆ ಶಾಸಕರು ಕೂಡಲೇ ಸಭೆಯನ್ನು ಕರೆದು ಸಮಸ್ಯೆ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಬೇಕಿದೆ. ಆಗಿದಾಂಗ್ಗೆ ಸಭೆಯನ್ನು ಕರೆದು ಕೂಡಲೇ ಬಗೆಯರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಡಾನೆ ನಾಡಿಗೆ ಬಂದ ಸಂದರ್ಭಗಳಲ್ಲಿ ಅವುಗಳನ್ನು ಕಾಡಿಗೆ ಅಟ್ಟಲಾಗುತ್ತದೆ. ಆದರೆ ಮತ್ತೆ ಆನೆಗಳು ನಾಡಿನತ್ತ ಮುಖ ಮಾಡುತ್ತದೆ. ಇದು ಜಿಲ್ಲೆಯಲ್ಲಿ ನಡೆಯುವ ನಿರಂತರ ಪ್ರಕ್ರಿಯೆಯಾಗಿದೆ.

ಪರಿಣಾಮಕಾರಿ ವೈಜ್ಞಾನಿಕ ಕ್ರಮ ಅಗತ್ಯ

ಕೊಡಗಿನಲ್ಲಿ ಕಾಡಾನೆ ಹಾವಳಿಯನ್ನು ತಡೆಗೆಟ್ಟುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೂಡ ಆನೆ ಹಾವಳಿ ನಿಂತಿಲ್ಲ. ದಶಕಗಳಿಂದಲೂ ಇದು ಬಗೆಹರಿಯದ ಸಮಸ್ಯೆಯಾದಂತಿದೆ. ಆನೆ ನಾಡಿಗೆ ಬರದಂತೆ ಕಂದಕ, ಸೋಲಾರ್‌ ಬೇಲಿ, ಹ್ಯಾಂಗಿಂಗ್‌ ಸೋಲಾರ್‌ ಫೈನ್ಸ್‌, ರೈಲ್ವೆ ಹಳಿ ಬ್ಯಾರಿಕೇಡ್‌ ಸೇರಿ ಹಲವು ಯೋಜನೆಗಳನ್ನು ಮಾಡಲಾಗಿದೆ. ಆದರೆ ಇದು ಯಾವುವೂ ಪ್ರಯೋಜನವಾಗಿಲ್ಲ. ರೈಲ್ವೆ ಹಳಿ ಬ್ಯಾರಿಕೇಡ್‌ ನಿಂದ ಸ್ವಲ್ಪ ಆನೆ ಹಾವಳಿ ನಿಯಂತ್ರಸಬಹುದಾಗಿದೆ. ಇದಕ್ಕೆ ಕೋಟ್ಯಾಂತರ ರುಪಾಯಿ ವೆಚ್ಚವಾಗುತ್ತದೆ. ಈಗಾಗಲೇ ಸರ್ಕಾರದಿಂದ 100 ಕೋಟಿ ರು. ಯಷ್ಟುಅನುದಾನ ಆನೆ ಹಾವಳಿ ತಡೆಗಟ್ಟಲು ಬಂದರೂ ಕೂಡ ಬಹುತೇಕ ಕಡೆಗಳಲ್ಲಿ ಮಾಡಲು ಇನ್ನಷ್ಟುಅನುದಾನದ ಅವಶ್ಯಕತೆಯಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕ ಮಾದರಿಯಲ್ಲಿ ಪರಿಣಾಮಕಾರಿಯಾದ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಹೊಣೆ ನಾನೇ ಹೊರುತ್ತೇನೆಂದ ಮಾಜಿ ಶಾಸಕ ಕೆ.ಜಿ.ಬೋಪಯ್ಯ

click me!