ಬಳ್ಳಾರಿಯಲ್ಲಿ ಕೆಐಒಸಿಎಲ್‌ ಗಣಿಗಾರಿಕೆ ಶೀಘ್ರ ಆರಂಭ

By Kannadaprabha NewsFirst Published Oct 4, 2019, 11:37 AM IST
Highlights

ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್‌)ಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿದೆ. ಅನುಮತಿ ದೊರಕಿದ ಮೇಲೆ ವಾರ್ಷಿಕವಾಗಿ 2 ಮೆಟ್ರಿಕ್‌ ಟನ್‌ ಮೇಲ್ದರ್ಜೆಗೇರಿಸುವ ಕಚ್ಚಾ ಅದಿರು ಮತ್ತು ವಾರ್ಷಿಕ 2 ಮೆಟ್ರಿಕ್‌ ಟನ್‌ ಅದಿರನ್ನು ಉಂಡೆ ಕಟ್ಟುವ ಸ್ಥಾವರಕ್ಕೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ.

ಮಂಗಳೂರು(ಅ.04): ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್‌)ಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿದ್ದು, ಸರ್ಕಾರದ ಶಾಸನಬದ್ಧ ಅನುಮತಿಗಾಗಿ ಕಳುಹಿಸಲಾಗಿದೆ ಎಂದು ಕಂಪೆನಿಯ ಸಿಎಂಡಿ ಎಂ.ವಿ. ಸುಬ್ಬರಾವ್‌ ತಿಳಿಸಿದ್ದಾರೆ.

ಈ ಕುರಿತು ಈಗಾಗಲೇ ವಿವರವಾದ ಅಧ್ಯಯನ ವರದಿಯನ್ನು ಪರಿಸರ ಸಂರಕ್ಷಣೆ ಮತ್ತು ಅರಣ್ಯ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಸಾರ್ವಜನಿಕ ವಿಚಾರಣೆಯನ್ನೂ ನಡೆಸಲಾಗಿದೆ. ಸರ್ಕಾರದ ಅನುಮತಿ ದೊರಕಿದ ಮೇಲೆ ವಾರ್ಷಿಕವಾಗಿ 2 ಮೆಟ್ರಿಕ್‌ ಟನ್‌ ಮೇಲ್ದರ್ಜೆಗೇರಿಸುವ ಕಚ್ಚಾ ಅದಿರು ಮತ್ತು ವಾರ್ಷಿಕ 2 ಮೆಟ್ರಿಕ್‌ ಟನ್‌ ಅದಿರನ್ನು ಉಂಡೆ ಕಟ್ಟುವ ಸ್ಥಾವರಕ್ಕೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಇಸ್ವಾತ್‌ನೊಂದಿಗೆ ಒಪ್ಪಂದ:

ಕೆಐಒಸಿಎಲ್‌ ಕಂಪೆನಿಗೆ ಕಚ್ಚಾವಸ್ತು ಪೂರೈಕೆ ಮತ್ತು ಮಾರುಕಟ್ಟೆವ್ಯವಹಾರಗಳಲ್ಲಿ ಕೈಜೋಡಿಸಿರುವ ರಾಷ್ಟ್ರೀಯ ಇಸ್ವಾತ್‌ ನಿಗಮದೊಂದಿಗೆ ವಾರ್ಷಿಕ 2 ಮೆ.ಟನ್‌ ಸಾಮರ್ಥ್ಯದ ಕಬ್ಬಿಣದುಂಡೆಗಳ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಂಟಿ ಉದ್ದಿಮೆಯ ಕರಾರುಪತ್ರಕ್ಕೆ ಶೀಘ್ರದಲ್ಲೇ ಒಪ್ಪಂದ ಮಾಡಲಾಗುವುದು ಎಂದರು.

ವಿವಿಧ ಸ್ಥಾವರ ನಿರ್ಮಾಣ:

ಸುಮಾರು 2 ಲಕ್ಷ ಟನ್‌ ಸಾಮರ್ಥ್ಯದ ಡಕ್ಟೈಲ್‌ ಐಯರ್ನ್‌ ಸ್ಪನ್‌ ಪೈಪ್‌ (ಡಿಐಎಸ್‌ಪಿ) ಸ್ಥಾವರ ಮತ್ತು 1.8 ಲಕ್ಷ ಟನ್‌ ಉತ್ಪಾದನಾ ಸಾಮರ್ಥ್ಯದ ಕೋಕ್‌ ಓವನ್‌ ಸ್ಥಾವರ ಸ್ಥಾಪನೆಗೆ ಡಿಸೆಂಬರ್‌ ಒಳಗೆ ಮೂಲ ಕೆಲಸಗಳನ್ನು ಪೂರ್ತಿಗೊಳಿಸಲಾಗುವುದು. ಅಲ್ಲದೆ, 10 ಮೆ.ವ್ಯಾ. ಸಾಮರ್ಥ್ಯದ ವಿದ್ಯುಚ್ಚಕ್ತಿ ಉತ್ಪಾದನಾ ಘಟಕವನ್ನೂ ಸ್ಥಾಪಿಸುವ ಉದ್ದೇಶವಿದೆ. ಇವೆಲ್ಲವೂ ಆರಂಭವಾದರೆ 500ರಷ್ಟುಉದ್ಯೋಗಗಳು ಸೃಷ್ಟಿಯಾಗಲಿವೆ. ಪರಿಸರ ಸಂರಕ್ಷಣಾ ಇಲಾಖೆಯವರು ಈ ಎಲ್ಲ ಉದ್ದೇಶಿತ ಸ್ಥಾವರಗಳ ಅಧ್ಯಯನ ವರದಿಯನ್ನು ಕೆಎಸ್‌ಪಿಸಿಬಿಗೆ ಸಲ್ಲಿಸಿದ್ದು, ಅಕ್ಟೋಬರ್‌ 2ನೇ ವಾರದಲ್ಲಿ ಸಾರ್ವಜನಿಕ ವಿಚಾರಣೆ ನಡೆಯಲಿದೆ ಎಂದರು.

2012 ಕೋಟಿ ರು. ವಹಿವಾಟು:

2018-19ನೇ ಸಾಲಿನಲ್ಲಿ ಕೆಐಒಸಿಎಲ್‌ ಸುಮಾರು 2012.68 ಕೋಟಿ ರು. ವಹಿವಾಟು ನಡೆಸಿದ್ದು, 184.12 ಕೋಟಿ ರು. ಲಾಭ ದಾಖಲಿಸುವ ಮೂಲಕ ಶೇ.114ರಷ್ಟುಹೆಚ್ಚಿನ ಗುರಿ ಸಾಧನೆ ಮಾಡಲಾಗಿದೆ. ತೆರಿಗೆ ಪಾವತಿ ಬಳಿಕ 111.86 ಕೋಟಿ ರು. ನಿವ್ವಳ ಲಾಭ ಗಳಿಸಿದೆ. 2005ರಲ್ಲಿ ಕುದುರೆಮುಖ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಅತಿ ಹೆಚ್ಚು ಉಂಡೆ ಕಬ್ಬಿಣ ಅಂದರೆ 1.52 ಮಿಲಿಯನ್‌ ಟನ್‌ಗಳಷ್ಟುರಫ್ತು ಮಾಡಲಾಗಿದೆ ಎಂದು ವಿವರಿಸಿದರು.

ಯುಕೆ ಮಾರುಕಟ್ಟೆಪ್ರವೇಶ:

ಕಿರಂದೂಲ್‌- ಬಚೇಲಿಯಿಂದ ಕಚ್ಚಾ ಕಬ್ಬಿಣದ ಅದಿರು ತರಲು ಸಾಗಾಟ ವೆಚ್ಚ ಹೆಚ್ಚಾದರೂ ಕಂಪೆನಿಯು ಉತ್ತಮ ಲಾಭಾಂಶ ಪಡೆದಿದೆ. ಜಾಗತಿಕವಾಗಿ ಜಪಾನ್‌, ಕೊರಿಯಾ, ಮಲೇಷ್ಯಾ, ಚೀನಾ ದೇಶಗಳಲ್ಲಿ ಸ್ಥಿರ ಮಾರುಕಟ್ಟೆಗಳನ್ನು ವಿಸ್ತರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಈಗ ಯುನೈಟೆಡ್‌ ಕಿಂಗ್‌ಡಮ್‌ನ ಮಾರುಕಟ್ಟೆಯನ್ನೂ ಪ್ರವೇಶಿಸಿದೆ ಎಂದು ಎಂ.ವಿ. ಸುಬ್ಬರಾವ್‌ ತಿಳಿಸಿದರು.

ಇನ್ನು 2-3 ವರ್ಷಗಳಲ್ಲಿ ಸುಮಾರು 3,500 ಕೋಟಿ ರು. ಬಂಡವಾಳದೊಂದಿಗೆ ಹೊಸ ವ್ಯಾಪಾರ ವಲಯ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ದಸರಾ ವೇಷ ಧರಿಸಿ ಕೊರಗರ ಅವಹೇಳನ ಮಾಡಿದ್ರೆ ಶಿಕ್ಷೆ

ಸೌರಶಕ್ತಿ ಆಧಾರಿತ ವಿದ್ಯುತ್‌ ಉತ್ಪಾದನೆಯ ನಿಟ್ಟಿನಲ್ಲಿ ಈಗಾಗಲೇ ಬಿಎಫ್‌ಯು ಘಟಕದ ಬಳಿ 1.3 ಮೆ.ವಾ. ಸಾಮರ್ಥ್ಯದ ಸೌರವಿದ್ಯುತ್‌ ಘಟಕ ಕಾರ್ಯಾರಂಭಗೊಂಡಿದೆ. 2019-20ನೇ ಸಾಲಿನಲ್ಲಿ 5 ಮೆ.ವ್ಯಾ. ಸೌರವಿದ್ಯುತ್‌ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೆಐಒಸಿಎಲ್‌ ಮ್ಯಾನೇಜರ್‌ (ಎಚ್‌ಆರ್‌ ಮತ್ತು ಆಡಳಿತ) ಮುರುಗೇಶ್‌ ಇದ್ದರು.

2.24 ಮಿಲಿಯನ್‌ ಟನ್‌ ಉಂಡೆ ಕಬ್ಬಿಣ:

2018-19ನೇ ಸಾಲಿನಲ್ಲಿ ಕೆಐಒಸಿಎಲ್‌ ಕಂಪೆನಿಯು ಒಟ್ಟು 2.24 ಮಿಲಿಯನ್‌ ಟನ್‌ ಉಂಡೆ ಕಬ್ಬಿಣವನ್ನು ಉತ್ಪಾದಿಸಿದ್ದು, ಇದರಲ್ಲಿ 2.21 ಮಿ.ಟನ್‌ ಉಂಡೆ ಕಬ್ಬಿಣವನ್ನು ಮಾರುಕಟ್ಟೆಗೆ ರವಾನಿಸಲಾಗಿದೆ. 1.52 ಮಿ.ಟನ್‌ ರಫ್ತಾಗಿದೆ. 2005ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಕಂಪೆನಿ ಉತ್ಪಾದಿಸಿದ ಉಚ್ಚ ಶ್ರೇಣಿಯ ಉಂಡೆ ಕಬ್ಬಿಣ ಇದಾಗಿದೆ. ಇದರಿಂದಾಗಿ ಕಂಪೆನಿಯು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿದೆ, ಉತ್ತಮ ಲಾಭಾಂಶವೂ ಬರುತ್ತಿದೆ. ಜಾಗತಿಕ ಮಾರುಕಟ್ಟೆಯೊಂದಿಗೆ ಕರಾವಳಿಯ ಸ್ಥಳೀಯ ಮಾರುಕಟ್ಟೆಯ ಬೇಡಿಕೆಯನ್ನೂ ನಿಭಾಯಿಸಲಾಗುತ್ತಿದೆ ಎಂದು ಎಂ.ವಿ. ಸುಬ್ಬರಾವ್‌ ತಿಳಿಸಿದರು.

ಗಬ್ಬೆದ್ದು ನಾರುತ್ತಿದ್ದ ಕೊಟ್ಟಾರ ಮೇಲ್ಸೇತುವೆ ಅಡಿಭಾಗಕ್ಕೆ ಹೊಸಲುಕ್..! 100 ಕ್ಕೂ ಹೆಚ್ಚು ಆಸನ

click me!