ರೈತರ ಬೆಳೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ

By Suvarna NewsFirst Published Aug 12, 2021, 10:18 PM IST
Highlights

* ರೈತರಿಗೆ ಪರಿಹಾರದ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ
* ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಭೇಟಿಯಾದ  ಸಚಿವ ಮುರುಗೇಶ್ ಆರ್ ನಿರಾಣಿ.
* ಪರಿಹಾರ ಹೆಚ್ಚಳ ಮಾಡಿದರೆ, ಸಾವಿರಾರು ರೈತರಿಗೆ ಅನುಕೂಲ
* ಕೇಂದ್ರದಿಂದ ಸೂಕ್ತ ನ್ಯಾಯ ಒದಗಿಸುವ ಭರವಸೆ.

ನವದೆಹಲಿ( ಆ.12-) ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಯ ಪ್ರವಾಹದಿಂದಾಗಿ ಕೃಷಿ ಭೂಮಿಯು ಫಲವತ್ತತೆಯನ್ನು ಕಳೆದುಕೊಂಡಿದ್ದು ರೈತರಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಚಿವ ಮುರುಗೇಶ್ ಆರ್ ನಿರಾಣಿ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಗುರುವಾರ ನವದೆಹಲಿಯಲ್ಲಿ  ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರದ್ಲಾಂಜೆ ಅವರನ್ನು ಭೇಟಿಯಾದ  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ  ನಿರಾಣಿ ಅವರು ತಕ್ಷಣವೇ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಜಮಖಂಡಿ ತಾಲ್ಲೂಕಿನ ಉಪವಿಭಾಗದಲ್ಲಿ ಕೃಷ್ಣ ನದಿಯಿಂದ ಪದೇ ಪದೇ ಪ್ರವಾಹ ಉಂಟಾಗುವ ಕಾರಣ,ರೈತರ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತದೆ. ಪರಿಣಾಮ ಸರಿಯಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.

ಒಂದು ಕಡೆ ರೈತರು ಪ್ರವಾಹದಿಂದ ತಮ್ಮ ಬೆಳೆಗಳನ್ನು ನಾಶವಾದರೆ ಮತ್ತೊಂದು ಕಡೆ ಕೃಷಿ ಜಮೀನು ಫಲವತ್ತತೆಯನ್ನು ಕಳೆದುಕೊಂಡಿದ್ದರಿಂದ  ಮಣ್ಣು ಸವಕಳಿಗೆ ಬಂದಿದೆ. ಇದರಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕೃಷ್ಣಾ ನದಿ ಪ್ರವಾಃಕ್ಕೆ ಸಿಲುಕಿದವರ ಬದುಕು ಹೇಗಿದೆ?

ತಾಲ್ಲೂಕಿನ ಒಟ್ಟು 14051 ಹೆಕ್ಟೇರ್ ಪ್ರದೇಶದಲ್ಲಿ 5994 ಪ್ರದೇಶವು ಸವಕಳಿಗೆ ತುತ್ತಾಗಿದೆ. ಪ್ರಸ್ತುತ 1 ಹೆಕ್ಟೇರ್ ಗೆ  65000 ರೂ.  ಪರಿಹಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಪ್ರದೇಶದಲ್ಲಿ ಸಣ್ಣ, ಅತಿ ಸಣ್ಣ ಮತ್ತು ಕಡಿಮೆ ಆದಾಯ ಹೊಂದಿರುವ ರೈತರಿದ್ದು, ಕೃಷಿಯೇ ಜೀವನದ ಆಧಾರವಾಗಿದೆ. ಸರಕಾರ ನೀಡುತ್ತಿರುವ ಪರಿಹಾರದ ಮೊತ್ತ ಜೀವನ ನಿರ್ವಾಹಣೆಗೆ ಸಾಕಾಗದ ಕಾರಣ, ಪರಿಹಾರದ ಮೊತ್ತ ಹೆಚ್ಚಳವಾಗಬೇಕಾದ  ಅಗತ್ಯವಿದೆ ಎಂದು ಮನವಿಮಾಡಿಕೊಂಡರು.

ಪರಿಶೀಲಿಸಿ ಸೂಕ್ತ ಕ್ರಮ:  ಸಚಿವ ನಿರಾಣಿ ಅವರ ಮನವಿಗೆ ಸೂಕ್ತವಾಗಿ ಸ್ಪಂದಿಸಿದ  ಶೋಭಾ ಕರದ್ಲಾಂಜೆ ಅವರು, ರೈತರ ಹಿತಕಾಪಾಡಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂಬ ಭರವಸೆಯನ್ನು ನೀಡಿದ್ದಾರೆ.
ಪ್ರತಿವರ್ಷ ಮಳೆಗಾಲದ   ವೇಳೆ ಕೃಷ್ಣ ನದಿಯ ಪ್ರವಾಹ  ಹಾಗೂ ಹಿನ್ನೀರಿನ ಕಾರಣ ಪ್ರವಾಹ ಉಂಟಾಗಿ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರೈತರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಸದ್ಯದಲ್ಲಿಯೇ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸೂಕ್ತ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.

click me!