Karnataka Glory Rational Festival: ಕನ್ನಡ ಭಾವನಾತ್ಮಕ ಸಂಬಂಧ ಬೆಸೆಯುವ ಭಾಷೆ: ಸಿಎಂ ಬೊಮ್ಮಾಯಿ

By Kannadaprabha NewsFirst Published Dec 26, 2021, 10:47 AM IST
Highlights

*  ಕರ್ನಾಟಕ ವೈಭವ ವೈಚಾರಿಕ ಹಬ್ಬ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
*  ಕನ್ನಡ ಭಾಷೆ ವೈಶಿಷ್ಟಪೂರ್ಣವಾಗಿದ್ದು ಅನ್ಯ ಭಾಷೆಗಳಿಂದ ವಿಭಿನ್ನವಾಗಿದೆ
*  ಸಂಘರ್ಷ ಮತ್ತು ಹೋರಾಟದಲ್ಲಿಯೂ ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡ ಕರ್ನಾಟಕ
 

ರಾಣಿಬೆನ್ನೂರು(ಡಿ.26):  ಕನ್ನಡವು(Kannada) ಬದುಕು ರೂಪಿಸುವ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಭಾಷೆಯಾಗಿದ್ದು, ಪ್ರತಿ ಶಬ್ದದಲ್ಲಿಯೂ ಭಾವನೆಗಳು ವ್ಯಕ್ತವಾಗುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.  ಪರಿವರ್ತನ ಸಂಸ್ಥೆ ವತಿಯಿಂದ ನಗರದ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಕಾಲೇಜ್‌ನ ಆವರಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಕರ್ನಾಟಕ ವೈಭವ ವೈಚಾರಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ ವೈಶಿಷ್ಟಪೂರ್ಣವಾಗಿದ್ದು ಅನ್ಯ ಭಾಷೆಗಳಿಂದ ವಿಭಿನ್ನವಾಗಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಕನ್ನಡ ಭಾರತದ(India) ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ರಾಜ್ಯದ(Karnataka) ತಲಾವಾರು ಆದಾಯ ಶೇ. 30ರಷ್ಟಿದ್ದು ಶೇ.70ರಷ್ಟು ಜನ ಅದರ ವ್ಯಾಪ್ತಿಯಿಂದ ದೂರವಿದ್ದಾರೆ. ಹೀಗಾಗಿ ಜಿಡಿಪಿ(GDP) ಹೆಚ್ಚಾಗುತ್ತಿಲ್ಲ. ಇದನ್ನು ಬದಲಾಯಿಸಲು ಎಸ್ಸಿ, ಎಸ್ಟಿಹಾಗೂ ಓಬಿಸಿಯವರಿಗೆ ಆದ್ಯತೆ ನೀಡಿ ಶಿಕ್ಷಣ(Education) ನೀಡಲಾಗುವುದು. ನಮ್ಮ ಸರ್ಕಾರ(BJP Government) ಜನರಿಗೆ ಎಲ್ಲ ರೀತಿಯ ಸೌಲಭ್ಯ ನೀಡಲು ಬದ್ಧವಾಗಿದ್ದು, ರಾಜ್ಯದಲ್ಲಿ ಎಸ್ಸಿ, ಎಸ್ಟಿ ಹಾಗೂ ಓಬಿಸಿ ಹೆಣ್ಣುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತರಬೇಕು. ಜತೆಗೆ ಪ್ರತಿಯೊಬ್ಬರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ತಂತ್ರಾಂಶ ಬಳಕೆ ಮಾಡುವಂತಾಗಬೇಕು. ಉದ್ಯೋಗ ಹೆಚ್ಚಳ ಆಗಬೇಕು. ಈ ಮೂರು ಆದರೆ ಮಾತ್ರ ಕರ್ನಾಟಕ ವೈಭವ ಆಗಲಿದೆ ಎಂದು ತಿಳಿಸಿದ್ದಾರೆ. 

ಸಂಕ್ರಾಂತಿಯೊಳಗೆ ದೊಡ್ಡ ಅವಘಡ ಸಂಭವಿಸಲಿದೆ, ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ

ಮೋದಿಯವರು(Narendra Modi) ಹೊಸ ಶಿಕ್ಷಣ ನೀತಿ ಮಾಡಿರುವುದು ಬಹಳ ಅನುಕೂಲವಾಗಿದೆ. ಇದರಿಂದ ಪ್ರತಿಯೊಬ್ಬರೂ ತಮ್ಮ ಭಾಷೆಯಲ್ಲಿ ವಿದ್ಯಾಭ್ಯಾಸ ಪಡೆದುಕೊಳ್ಳಲು ಹಾಗೂ ಪರಿಣಾಮಕಾರಿ ಶಿಕ್ಷಣ ಪಡೆಯಲು ಉಪಯೋಗವಾಗಲಿದೆ. ಕನ್ನಡ ನಾವು ಬಹಳ ಸಮೃದ್ಧಿಯಿಂದ ಕೂಡಿದೆ. ಆದರೆ, ಬೇರೆ ಬೇರೆ ರಾಜ್ಯದಲ್ಲಿ ಮನುಷ್ಯರು ಮನುಷ್ಯರಾಗಿ ಉಳಿದಿಲ್ಲ. ಸಮಾಜದಲ್ಲಿ ಶೋಷಣೆ ತುಂಬಿದೆ. ಮಾನವೀಯ ಮೌಲ್ಯ ಕಳೆದು ಹೋಗಿವೆ. ಕೊಲೆ, ಸುಲಿಗೆ ತಾಂಡವಾಡುತ್ತಿವೆ. ಆದರೆ, ನಮ್ಮ ನಾಡು ಮಾನವೀಯ ಮೌಲ್ಯ, ಸುಸಂಸ್ಕೃತ, ಸಂಸ್ಕಾರಯುತದಿಂದ ಕೂಡಿದೆ. ಕನ್ನಡ ನಾಡಿನಲ್ಲಿ ಹತ್ತು ಕೃಷಿ ವಲಯಗಳಿವೆ. ಭಾರತದ ಯಾವ ರಾಜ್ಯದಲ್ಲೂ ಇದು ಇಲ್ಲ. ವರ್ಷದ 12 ತಿಂಗಳು ಬೇರೆ ಬೇರೆ ಸಮಯಕ್ಕೆ ಹೊಂದಿಕೊಂಡು ಇಲ್ಲಿ ಬೆಳೆ ಬೆಳೆಯುವ ಕೃಷಿ(Agriculture) ವಲಯಗಳಿವೆ. ನಾವು ಎಷ್ಟುಸುಸಂಸ್ಕೃತರಿದ್ದೆವೋ ಎಷ್ಟೇ ಸ್ವಾಭಿಮಾನಿ, ಹೋರಾಟಗಾರರೂ ಇದ್ದೇವೆ. ಇದೆಲ್ಲವನ್ನು ಕರ್ನಾಟಕ ವೈಭವ ವೈಚಾರಿಕ ಹಬ್ಬದ ಮೂಲಕ ಹೊಸ ಪೀಳಿಗೆಗೆ ತಿಳಿಸುವ ಪ್ರಯತ್ನ ನಡೆಯುತ್ತಿವೆ. ಇವರು ಹೊಸ ಇತಿಹಾಸ ಸೃಷ್ಟಿಸುವ ಬೀಜ ಬಿತ್ತುತ್ತಿದ್ದಾರೆ ಎಂದರು.

ಆಶಯ ಭಾಷಣ ಮಾಡಿದ ಪ್ರಜ್ಞಾಪ್ರವಾಹ ದಕ್ಷಿಣ ಮಧ್ಯಕ್ಷೇತ್ರ ಸಂಯೋಜಕ ರಘುನಂದನ ಮಾತನಾಡಿ, ಕರ್ನಾಟಕವು ಭಾಷಾ ಸಾಮರಸ್ಯಕ್ಕೆ ಅತಿ ದೊಡ್ಡ ಉದಾಹರಣೆಯಾಗಿದ್ದು, ಸಂಘರ್ಷ ಮತ್ತು ಹೋರಾಟದಲ್ಲಿಯೂ ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಶೈವ ಮತ್ತು ವೈಷ್ಣವರ ಸಮನ್ವಯದ ನಾಡಾಗಿದೆ. ದೇಶದ ಸ್ವರಾಜ್ಯ ಹೋರಾಟದಲ್ಲಿ ಕರ್ನಾಟಕ ಬಹುಮುಖ್ಯ ಪಾತ್ರ ವಹಿಸಿದೆ. ರಾಣಿ ಅಬ್ಬಕ್ಕ ಪೊರ್ಚುಗೀಸರನ್ನು 32 ವರ್ಷಗಳ ಕಾಲ ತಡೆದಿದ್ದರೆ ಕಿತ್ತೂರು ಚೆನ್ನಮ್ಮ ಬ್ರಿಟಿಷರಿಗೆ(British) ಸೋಲಿನ ರುಚಿ ತೋರಿಸಿದ್ದರು. ನಮಗೆ ಕನ್ನಡದ ಬಗ್ಗೆ ಹೆಮ್ಮೆಯಿರಬೇಕೆ ಹೊರತು ಇಂಗ್ಲಿಷ್‌ ಬಗ್ಗೆ ಮಾನಸಿಕ ಗುಲಾಮಗಿರಿ ಸಲ್ಲದು. ಕರ್ನಾಟಕ ವೈಭವದ ಸ್ಮರಣೆಯು ಭವಿಷ್ಯದ ಪೀಳಿಗೆಗೆ ಪ್ರೇರಣಾದಾಯಕವಾಗಿದೆ. ವರ್ಷಪೂರ್ತಿ ಕರ್ನಾಟಕ ವೈಭವದ ಕಾರ್ಯಕ್ರಮಗಳನ್ನು ನಾಡಿನೆಲ್ಲೆಡೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

Basavaraj Bommai: ಸಿಎಂ ಬದಲಾವಣೆಗೆ ಸ್ವಪಕ್ಷೀಯ ನಾಯಕರ ಹೇಳಿಕೆಗಳು ಪುಷ್ಟಿ

ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣಮಧ್ಯ ಕ್ಷೇತ್ರದ ಸಂಯೋಜಕ ರಘುನಂದನ, ಪರಿವರ್ತನ ರಾಣಿಬೆನ್ನೂರ ಅಧ್ಯಕ್ಷ ಡಾ. ಎಸ್‌.ಜಿ. ವೈದ್ಯ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರಿನ ದೃಷ್ಟಿರಂಗ ತಂಡದಿಂದ ರಕ್ತಧ್ವಜ ನಾಟಕ ಪ್ರದರ್ಶನ, ಜ್ಯೋತಿ ಹೆಗ್ಗೋಡು ತಂಡದ ಡೊಳ್ಳು ಕುಣಿತ, ಮುಕುಂದರಡ್ಡಿ ಬಣಕಾರ ತಂಡದ ವೀರಗಾಸೆ ಹಾಗೂ ಮಮತಾ ನಾಡಿಗೇರ ತಂಡದ ಭರತನಾಟ್ಯ ಸಭಿಕರ ಮನಸೂರೆಗೊಂಡವು.
 

click me!