ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್‌ ಕೃಷಿ ಮಾದರಿ ಯೋಗ್ಯ!

Kannadaprabha News   | Asianet News
Published : Jan 20, 2020, 07:52 AM IST
ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್‌ ಕೃಷಿ ಮಾದರಿ ಯೋಗ್ಯ!

ಸಾರಾಂಶ

ಕೃಷಿ ವಿವಿಯಲ್ಲಿ ರೈತರ ಗಮನ ಸೆಳೆಯುತ್ತಿದೆ ಈ ಕೃಷಿ ಮಾದರಿ| ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಯಶಸ್ವಿ ಕೃಷಿ| ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ| ಮೇಳಕ್ಕೆ ಇಂದು ತೆರೆ|

ಬಸವರಾಜ ಹಿರೇಮಠ

ಧಾರವಾಡ(ಜ.20): ಹತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಐದಾರು ವರ್ಷಗಳ ಕಾಲ ಬರಗಾಲ ಎದುರಿಸಿ ರೈತರು ಕೃಷಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಕೃಷಿಯಿಂದ ವಿಮುಖರಾಗುತ್ತಿರುವ ರೈತ ಸಮುದಾಯಕ್ಕೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಮರು ಜೀವ ಕೊಡುವ ಉದ್ದೇಶದಿಂದ ಈ ಬಾರಿ ಇಸ್ರೇಲ್‌ ಕೃಷಿ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.

ಇದಕ್ಕೆ ಪೂರಕವಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ಬಾರಿ ಇಸ್ರೇಲ್‌ ಕೃಷಿ ಮಾದರಿಯೇ ವಿಶೇಷವಾಗಿ ಬಿಂಬಿಸಲಾಗಿದೆ. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಈ ಮಾದರಿಯನ್ನು ತಾತ್ಕಾಲಿಕವಾಗಿ ಸೃಷ್ಟಿಸಲಾಗಿದ್ದು ಇಡೀ ರೈತರ ಗಮನ ಸೆಳೆಯುತ್ತಿದೆ. ಇಸ್ರೇಲ್‌ ಕೃಷಿ ಮಾದರಿ ಎಂದರೇನು? ಹೇಗೆ ಅಳವಡಿಸಿಕೊಳ್ಳುವುದು? ಖರ್ಚು-ವೆಚ್ಚ ಈ ಎಲ್ಲ ಮಾಹಿತಿ ಇಲ್ಲಿ ಲಭ್ಯ.

ಮೇಳಕ್ಕೆ ಆಗಮಿಸುವ ಎಲ್ಲ ರೈತರು ಕುತೂಹಲದಿಂದ ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಅಂದಾಜು 2.77 ಲಕ್ಷ ಮೊತ್ತದ ಎರಡು ಯಂತ್ರಗಳನ್ನು ಕೃವಿವಿಯಿಂದಲೇ ಅಳವಡಿಸಿ ತಂತ್ರಜ್ಞಾನ ಕುರಿತು ಮಾಹಿತಿ ನೀಡಲಾಗುತ್ತಿದೆ. ಈ ತಂತ್ರಜ್ಞಾನ ಅಳವಡಿಸಿಕೊಂಡು ತೋಟಗಾರಿಕೆ ಹಾಗೂ ಕೃಷಿ ಎರಡೂ ಮಾದರಿಯ ಬೆಳೆಗಳನ್ನು ಬೆಳೆಯಬಹುದು. ಇದರಿಂದ ಶೇ. 60 ರಷ್ಟು ನೀರು ಉಳಿತಾಯವಾಗುವುದಲ್ಲದೇ, ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಉತ್ತಮ ಇಳುವರಿಯನ್ನೂ ಪಡೆಯಬಹುದಾಗಿದೆ ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.

ಈ ತಂತ್ರಜ್ಞಾನ ಬಳಸಿ ಹನಿ ಹಾಗೂ ತುಂತುರು ನೀರಾವರಿ ಮೂಲಕ ಬೆಳೆಗಳನ್ನು ಬೆಳೆಯಬಹುದು. ಯಾವ ಬೆಳೆಗಳಿಗೆ ಎಷ್ಟುಪ್ರಮಾಣದಲ್ಲಿ ನೀರು ನೀಡಬೇಕು ಎಂಬ ಮಾಹಿತಿಯನ್ನು ಯಂತ್ರದಲ್ಲಿ ಪ್ರೋಗ್ರಾಂ ಮೂಲಕ ಅಳವಡಿಸಿದರೆ ಸಾಕು, ನಂತರದಲ್ಲಿ ಮೊಬೈಲ್‌ ಆ್ಯಪ್‌ ಮೂಲಕ ಮನೆಯಲ್ಲೇ ಕುಳಿತು ನೀರು ಹಾಯಿಸಬಹುದು. ಈ ವಿಧಾನದಿಂದ ಅಡಕೆ, ಪೇರು, ಪಪ್ಪಾಯಿ, ಸಪೋಟ, ಕಬ್ಬು, ಹೆಸರು ಸೇರಿದಂತೆ ಎಲ್ಲ ಬೆಳೆಗಳನ್ನೂ ಬೆಳೆಯಬಹುದು.

ಕೈ ಬೀಸಿ ಕರೆಯುತ್ತಿದೆ ಧಾರವಾಡ ಕೃಷಿ ಮೇಳ: ಗಮನ ಸೆಳೆದ ಜಾನುವಾರು ಪ್ರದರ್ಶನ

ಸಾಮಾನ್ಯವಾಗಿ ಮುಂಬೈ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟ ಜಿಲ್ಲೆಯಲ್ಲಿ ಬೆಳೆಯುವ ಕಬ್ಬಿಗೆ ಅಪಾರ ಪ್ರಮಾಣದ ನೀರಿನ ಅಗತ್ಯವಿದೆ. ಈ ತಂತ್ರಜ್ಞಾನ ಬಳಕೆಯಿಂದ ಕಬ್ಬು ಬೆಳೆಯಲು ಶೇ. 60ರಷ್ಟುನೀರು ಉಳಿಕೆ ಮಾಡಬಹುದು. ಇದಲ್ಲದೆ ಈ ತಂತ್ರಜ್ಞಾನದಿಂದ ಪೋಲಾಗುವ ನೀರು ತಡೆಯಬಹುದಲ್ಲದೆ, ಎಷ್ಟುಬೇಕಾದಷ್ಟುಎಕರೆವರೆಗೂ ಬಳಕೆ ಮಾಡಬಹುದು. ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹೆಕ್ಟೇರ್‌ ಪ್ರದೇಶಕ್ಕೆ ಅಂದಾಜು . 2.5 ಲಕ್ಷ ಖರ್ಚು ಬರಲಿದೆ. ಇದರಿಂದ ಅಂತರ್ಜಲ ಮಟ್ಟ ಸಹ ಏರಿಕೆಯಾಗಲಿದೆ ಎಂದು ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶಶಿಧರ ಜಿ.ಬಿ.ಮಾಹಿತಿ ನೀಡಿದರು.

ಈ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಂಡಲ್ಲಿ ಸರ್ಕಾರದಿಂದ ಶೇ. 90 ರ ವರೆಗೆ ಸಬ್ಸಿಡಿ ಸಿಗಲಿದೆ. ಇಂತಹ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ನೀರಿನಲ್ಲೇ ಉತ್ತಮ ಬೆಳೆ ಪಡೆಯಬಹುದು. ಕೇವಲ ಮೇಳದಲ್ಲಿ ಮಾತ್ರವಲ್ಲದೆ ಇತರ ದಿನಗಳಲ್ಲೂ ಈ ಕುರಿತು ಕೃವಿವಿಯಲ್ಲಿ ಮಾಹಿತಿ ನೀಡಲಾಗುವುದು ಎನ್ನುತ್ತಾರೆ ಅವರು.

ಈ ಬಗ್ಗೆ ಮಾತನಾಡಿದ ಕೃಷಿ ವಿವಿ ಕುಲಪತಿ ಡಾ. ಎಂ.ಬಿ. ಚೆಟ್ಟಿ ಅವರು, ಈ ಬಾರಿಯ ಕೃಷಿ ಮೇಳವನ್ನು ಪ್ರತಿ ಹನಿ ಸಮೃದ್ಧ ತೆನಿ ಘೋಷವಾಕ್ಯ ಇಟ್ಟುಕೊಂಡಿರುವುದೇ ಇಸ್ರೇಲ್‌ ಮಾದರಿ ಕೃಷಿ ಸಲುವಾಗಿ. ಒಟ್ಟಾರೆ ನೀರು ನಿರ್ವಹಣೆ ಹಾಗೂ ಈ ಮೂಲಕ ಉತ್ತಮ ಬೆಳೆ ಪಡೆದು ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ವಿವಿ ಬಾಗಿಲು ಯಾವತ್ತೂ ತೆರೆದಿದ್ದು ಯಾವ ಬೆಳೆ ಬಗ್ಗೆ ಸಹ ಮಾಹಿತಿ ಪಡೆಯಬಹುದು ಎಂದು ಹೇಳಿದ್ದಾರೆ.
 

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು