ಹೆಚ್ಚಾದ ಮಳೆ - ಕೆಆರ್‌ಎಸ್‌ಗೆ ಹೆಚ್ಚಿದ ಒಳ ಹರಿವು

Published : May 27, 2024, 12:13 PM IST
ಹೆಚ್ಚಾದ ಮಳೆ - ಕೆಆರ್‌ಎಸ್‌ಗೆ ಹೆಚ್ಚಿದ ಒಳ ಹರಿವು

ಸಾರಾಂಶ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಪ್ರಸ್ತುತ ಅಣೆಕಟ್ಟೆಗೆ 3,365 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಶುಕ್ರವಾರ ಕೆಆರ್‌ಎಸ್‌ ಜಲಾಶಯಕ್ಕೆ 2,509 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

 ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಪ್ರಸ್ತುತ ಅಣೆಕಟ್ಟೆಗೆ 3,365 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಶುಕ್ರವಾರ ಕೆಆರ್‌ಎಸ್‌ ಜಲಾಶಯಕ್ಕೆ 2,509 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ಶನಿವಾರ ಬೆಳಗ್ಗೆ ಅದರ ಪ್ರಮಾಣ 3,365 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಈಗ ನೀರಿನ ಮಟ್ಟ 82.30 ಅಡಿ ಇದೆ. 11.837 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯಿಂದ 528 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಭಾರಿ ಕುಸಿದಿದ್ದ ನೀರಿನ ಮಟ್ಟ

ಮಂಡ್ಯ (ಮೇ.19): ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹಾಲಿ ಜಲಾಶಯದಲ್ಲಿ 80.25 ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. 2016ರಲ್ಲಿ ಇದೇ ದಿನ ಜಲಾಶಯದಲ್ಲಿ 81.88 ಅಡಿ ನೀರು ಸಂಗ್ರಹವಾಗಿತ್ತು.

ಹಿಂದಿನ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಲಿಲ್ಲ. ಮಳೆ ಕೊರತೆಯಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 114 ಅಡಿ ತಲುಪುವುದಕ್ಕಷ್ಟೇ ಶಕ್ತವಾಯಿತು. ಸುಪ್ರೀಂಕೋರ್ಟ್, ಪ್ರಾಧಿಕಾರಗಳ ಆದೇಶಗಳಂತೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ್ದರಿಂದ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳಲು ಕಷ್ಟಪಡುವಂತಾಯಿತು.

ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ 80.25 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಅಣೆಕಟ್ಟೆಗೆ 1560 ಕ್ಯುಸೆಕ್‌ನಷ್ಟು ಒಳಹರಿವಿದ್ದರೆ 155 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 18 ಮೇ 2023ರಲ್ಲಿ 86.14 ಅಡಿ ನೀರಿದ್ದರೆ, 684 ಕ್ಯುಸೆಕ್ ಒಳಹರಿವು, 181 ಕ್ಯುಸೆಕ್ ಹೊರಹರಿವಿತ್ತು. 18 ಮೇ 2022ರಲ್ಲಿ ಅಣೆಕಟ್ಟೆಯಲ್ಲಿ 100.16 ಅಡಿ ನೀರು ಸಂಗ್ರಹವಾಗಿ ರೈತರು ಮತ್ತು ಸಾರ್ವಜನಿಕರಲ್ಲಿ ನಿರಾಳಭಾವ ಮೂಡಿಸಿತ್ತು. ಅಂದು ಜಲಾಶಯಕ್ಕೆ 2825 ಕ್ಯುಸೆಕ್ ಒಳಹರಿವು, 1437 ಕ್ಯುಸೆಕ್ ಹೊರಹರಿವಿತ್ತು. 18 ಮೇ 2021ರಲ್ಲಿ ಅಣೆಕಟ್ಟೆಯಲ್ಲಿ 87 ಅಡಿಯಷ್ಟು ನೀರಿದ್ದರೆ 675 ಕ್ಯುಸೆಕ್ ಒಳಹರಿವು, 3743 ಕ್ಯುಸೆಕ್ ಹೊರಹರಿವು ದಾಖಲಾಗಿತ್ತು. 18 ಮೇ 2020ರಲ್ಲಿ 65.18 ಅಡಿ ನೀರಿದ್ದು, 136 ಕ್ಯುಸೆಕ್ ಒಳಹರಿವು, 3856 ಕ್ಯುಸೆಕ್ ಹೊರಹರಿವಿತ್ತು. 18 ಮೇ 2016ರಲ್ಲಿ 81.88 ಅಡಿ ನೀರು ಸಂಗ್ರಹವಾಗಿ 142 ಕ್ಯುಸೆಕ್ ಒಳಹರಿವು, 351 ಕ್ಯುಸೆಕ್ ಹೊರಹರಿವು ದಾಖಲಾಗಿತ್ತು.

ಆರು ವರ್ಷಗಳಿಂದ ಬೇಸಿಗೆಯಲ್ಲೂ ಜಲಾಶಯದಲ್ಲಿ ಉತ್ತಮ ನೀರಿನಮಟ್ಟ ಕಾಯ್ದುಕೊಂಡಿದ್ದ ಕೆಆರ್‌ಎಸ್ ಈ ವರ್ಷ ಕಳಾಹೀನ ಸ್ಥಿತಿ ತಲುಪಿದೆ. ಜಲಾಶಯದಲ್ಲಿ 10.867 ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಕುಡಿಯುವುದಕ್ಕೆ ಸಾಕಾಗುವಷ್ಟು ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹವಾಗಿದೆ.

2016 ರಿಂದ 2022ರವರೆಗೆ ಪೂರ್ವ ಮುಂಗಾರು ಉತ್ತಮವಾಗಿತ್ತು. ಆ ಸಮಯದಲ್ಲಿ ಜಲಾಶಯದ ನೀರಿನ ಮಟ್ಟವೂ ಸಮಾಧಾನಕರವಾಗಿತ್ತು. ಈ ಬಾರಿ ಅಣೆಕಟ್ಟೆಯಲ್ಲಿ 80.25 ಅಡಿಯಷ್ಟು ಮಾತ್ರ ನೀರಿದೆ. ಈ ಬಾರಿಯ ಬೇಸಿಗೆಯಲ್ಲಿ ಕಂಡೂ ಕೇಳರಿಯದಷ್ಟು ರಣಬಿಸಿಲು ಹಾಗೂ ಉಷ್ಣಹವೆಯಿಂದ ಭೂಮಿಯ ತಾಪವೂ ಹೆಚ್ಚಿದೆ. ಇದರಿಂದ ಕೇರಳ, ಕೊಡಗು ಭಾಗದಲ್ಲಿ ಹೆಚ್ಚು ಮಳೆಯಾದರೂ ಭೂಮಿ ಹೆಚ್ಚಾಗಿ ನೀರನ್ನು ಹೀರಿಕೊಳ್ಳುತ್ತಿರುವುದರಿಂದ ಒಳಹರಿವಿನಲ್ಲಿ ಏರಿಕೆಯಾಗದಂತಾಗಿದೆ. ಇದು ರೈತರ ನಿರಾಸೆಗೂ ಕಾರಣವಾಗಿದೆ.

ಕಳೆದೊಂದು ವಾರದಿಂದ ಪೂರ್ವ ಮುಂಗಾರು ಚುರುಕುಗೊಂಡಿರುವುದರಿಂದ ರೈತರು ಭೂಮಿಯನ್ನು ಉಳುಮೆ ಮಾಡುವ ಮೂಲಕ ಬಿತ್ತನೆಗೆ ಹದಗೊಳಿಸುತ್ತಿದ್ದಾರೆ. ಕೆರೆ-ಕಟ್ಟೆಗಳು ಖಾಲಿಯಾಗಿದ್ದರಿಂದ ಬಹುತೇಕ ರೈತರು ಕೆರೆಯ ಮಣ್ಣನ್ನು ಜಮೀನುಗಳಿಗೆ ಸಾಗಿಸಿಕೊಂಡು ಕೃಷಿ ಚಟುವಟಿಕೆಗೆ ಚುರುಕು ನೀಡುವುದಕ್ಕೆ ಸಿದ್ಧರಾಗಿದ್ದಾರೆ. ಹಲವರು ಹೊಸದಾಗಿ ಕೊಳವೆ ಬಾವಿಗಳನ್ನು ತೆಗೆಸುವುದರೊಂದಿಗೆ ಬೆಳೆಗೆ ನೀರಿನ ಸೌಕರ್ಯವನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಮುಂಗಾರು ಮಳೆಯ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕೃಷಿಯಲ್ಲಿ ತೊಡಗಿಕೊಳ್ಳುವುದಕ್ಕೆ ಉತ್ಸುಕಾಗಿದ್ದಾರೆ. ಉತ್ತಮ ಮಳೆ, ಅಣೆಕಟ್ಟೆ ಭರ್ತಿಯಾಗುವುದು, ನಾಲೆಗಳಿಗೆ ನೀರು ಬಿಡುಗಡೆಯಾಗುವ ದಿನಗಳಿಗಾಗಿ ಎದುರುನೋಡುತ್ತಿದ್ದಾರೆ.

PREV
Read more Articles on
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌