Heavy Rainfall: ಧರೆ​ಗು​ರು​ಳಿದ ಮಣ್ಣಿನ ಮನೆ​ಗಳು

By Kannadaprabha NewsFirst Published Sep 3, 2022, 12:35 PM IST
Highlights

ಪ್ರತಿವರ್ಷ ವಿವಿಧ ಯೋಜನೆಗಳಲ್ಲಿ ಸಾವಿರಾರು ಮನೆಗಳು ಬಂದಿವೆ ಎಂದು ಸರ್ಕಾರ ಹೇಳುತ್ತಿದ್ದರು, ಅದೆಷ್ಟು ಕುಟುಂಬಗಳು ಈಗಲೂ ಮಣ್ಣಿನ ಮನೆಯಲ್ಲಿ ವಾಸಿಸುತ್ತಿವೆ. ಅದಕ್ಕೆ. ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಭಾರಿ ಮಳೆಗೆ ಮಣ್ಣಿನ ಮನೆಗಳು ಕುಸಿದು ಬಿದ್ದಿದ್ದು. ಬಡ ಕುಟುಂಬ ಮಳೆಯಲ್ಲೇ ದಿನದೂಡುವಂತಾಗಿದೆ. 

ಡಂಬಳ (ಸೆ.3) : ಹೋಬಳಿಯ ಗ್ರಾಮಗಳಲ್ಲಿ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹಲವು ಮಣ್ಣಿನ ಮನೆಗಳು ಬಿದ್ದು ಮನೆ ಕಳೆದುಕೊಂಡು ಪರಿತಪಿಸುವಂತಾದರೆ, ಕೆರೆ ಕೋಡಿಯ ನೀರು ಹಲವು ಜಮೀನುಗಳಿಗೆ ನುಗ್ಗಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಕಡಿತಗೊಂಡಿವೆ. ಕಪ್ಪತ್ತಗುಡ್ಡದ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆ ಕೆರೆಯ ಕೋಡಿಯ ಹರಿವು ಹೆಚ್ಚಾಗಿದ್ದರಿಂದ ಮುಂಜಾನೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಬಂದಾಗಿದ್ದಲ್ಲದೆ ರಸ್ತೆಗಳು ಕಿತ್ತು ಹೋಗಿ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಡಂಬಳ ಮಾರ್ಗವಾಗಿ ಪೇಠಾ ಆಲೂರ, ವೆಂಕಟಾಪುರ, ಹಳ್ಳಿಕೇರಿ, ಹಳ್ಳಿಗುಡಿಗೆ ತೆರಳುವ ರಸ್ತೆಯ ಮಾರ್ಗವಾಗಿ ಬರುವ ಹಳ್ಳದ ಬ್ರಿಡ್ಜ್‌ ಮೇಲೆ ಅಪಾರ ಪ್ರಮಾಣದ ನೀರು ಹರಿಯುವುದರ ಮೂಲಕ ಹಳ್ಳಗಳು ನದಿಯಂತೆ ಕಂಡು ಬಂದವು.

ಕುಂಭದ್ರೋಣ ಮಳೆಗೆ ಕಪ್ಪತ್ತಗುಡ್ಡ ಕುಸಿತ

ರೈತರ ಬೆಳೆಗಳು ನೀರಿನಲ್ಲಿ: ರೈತರು(Farmers) ಬೆಳೆದು ನಿಂತ ಸೂರ್ಯಕಾಂತಿ ಬೆಳೆ(sunflower crop,), ಈರುಳ್ಳಿ, ಶೇಂಗಾ, ಹತ್ತಿ, ಗೋವಿನಜೋಳ, ಬಾಳೆ ತೋಟಗಳಿಗೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ಜಲಾವೃತವಾಗಿವೆ. ಡಂಬಳ ಹೋಬಳಿಯ ಡಂಬಳ, ಡೋಣಿ, ಡೋಣಿ ತಾಂಡಾ, ಅತ್ತಿಕಟ್ಟಿ, ಚಿಕ್ಕವಡ್ಡಟ್ಟಿ, ಹಿರೇವಡ್ಡಟ್ಟಿ, ಮುರಡಿ ತಾಂಡಾ, ಯಕ್ಲಾಸಪುರ, ಹೈತಾಪುರ, ಮೇವುಂಡಿ, ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪುರ, ಕದಾಂಪುರ, ಶಿವಾಜಿನಗರ ಗ್ರಾಮಗಳಲ್ಲಿನ ಬಹುತೇಕ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಳೆಗೆ ಬಿದ್ದ ಮಣ್ಣಿನ ಮನೆಗಳು ಡಂಬಳ ಗ್ರಾಮ(Dambala )ದ ಸಿದ್ದವ್ವ ಸಿದ್ದಪ್ಪ ಪಾರಪ್ಪನವರ, ಅರ್ಜುನಪ್ಪ ಜಂತ್ಲಿ, ಹುಗ್ಗಪ್ಪ ಹುಗ್ಗಭೋವಿ, ಕುಬೇರಪ್ಪ ಪಾರಪ್ಪನವರ ಮನೆಗಳು ಬಿದ್ದಿವೆ. ಕೆಲವರು ಮನೆ ಕಳೆದುಕೊಂಡ ಪರಿಣಾಮ ರಾತ್ರಿ ಇಡೀ ಬೇರೆ ಮನೆಗಳಲ್ಲಿ ದೇವಾಲಯಗಳಲ್ಲಿ ಕಾಲ ಕಳೆಯುವಂತಾಗಿದೆ. ಕೆಲವರಿಗೆ ಬಾಡಿಗೆ ಮನೆಗಳು ಸಿಗದೆ ತಮ್ಮ ಜಮೀನುಗಳಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ. ಬಿದ್ದಮನೆಗಳ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಲೆಕ್ಕಾಧಿಕಾರಿ ಮಂಜುನಾಥ ತಳವಾರ, ಸಹಾಯಕ ಧರ್ಮಣ್ಣ, ಸುರೇಶ ಪಗಡದಿನ್ನಿ ಪರಿಶೀಲಿಸಿದರು.

ಡಂಬಳದ ಮಾಳಿಂಗರಾಯ ಬಡಾವಣೆಯಲ್ಲಿ ಚರಂಡಿಯ ಮೇಲೆ ಶೌಚಾಲಯ, ಕಟ್ಟೆಕಟ್ಟಿಕೊಂಡಿದ್ದು, ಕೆಲ ಮನೆಗಳಲ್ಲಿ ನೀರು ನುಗ್ಗುವುದರ ಮೂಲಕ ಗಲಾಟೆಗೆ ಕಾರಣವಾಗಿದೆ. ಗ್ರಾಮದ ಹಲವು ಬಡಾವಣೆಗಳಲ್ಲಿ ಗಟಾರಗಳ ಮೇಲೆ ರಸ್ತೆಗೆ ಚಾಚಿಕೊಂಡು ಕಟ್ಟೆಗಳನ್ನು ಕಟ್ಟಿದ್ದರಿಂದಾಗಿ ಮನೆಗಳಿಗೆ ನೀರು ನುಗ್ಗುವಂತಾಗಿದೆ. ಇವುಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಿಳಿಸಿದರೂ ತೆರವುಗೊಳಿಸುತ್ತಿಲ್ಲ ಎನ್ನುತ್ತಾರೆ ಬಡಾವಣೆಯ ಬಸುರಾಜ ಯಲಭೋವಿ.

Heavy Rain: ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆ: ಒಂದು ಬಲಿ

.30 ಸಾವಿರ ಸಾಲ ಮಾಡಿ ಬೆಳೆದಿದ್ದ ಸೂರ್ಯಪಾನ ಬೆಳೆ ಕಟಾವಿಗೆ ಬಂದಿತ್ತು. ಮಳೆಯಿಂದ ನೆಲಕ್ಕೆ ಬಿದ್ದು ನೀರ ನಿಂತ ಹಾಳಾಗಾಕತ್ತತೀ, ಮಳೆದೇವ ನಿಲ್ಲಬೇಕು, ಹಿಂಗ್‌ ಮಳಿ ಹತ್ತಿದರ ಪೂರಾ ಬೆಳಿನ್‌ ಹಾಳಾಗಿ ಸಾಲ ತೀರುಸೋದ ಕಷ್ಟಐತಿರಿ.

ಕುಬೇರಪ್ಪ ಬಾಳಪ್ಪ ಕೊಳ್ಳಾರ ಡಂಬಳ ಗ್ರಾಮದ ರೈತ

 

click me!