ಕಲ್ಲುಗಣಿ ಗುತ್ತಿಗೆ ಉತ್ಪನ್ನ ಸಾಗಣಿಕೆ ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಜಿಲ್ಲಾಧಿಕಾರಿ ವೆಂಕಟೇಶ್

By Govindaraj SFirst Published Sep 30, 2023, 10:03 PM IST
Highlights

ಬೇರೆ ಜಿಲ್ಲೆಗಳಿಂದ ಬರುವ ವಾಹನಗಳು ಸೇರಿದಂತೆ ಜಿಲ್ಲೆಯಲ್ಲಿನ ಕಲ್ಲುಗಣಿ ಗುತ್ತಿಗೆಗಳ ವಾಹನಗಳಲ್ಲಿ ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.
 

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಸೆ.30): ಬೇರೆ ಜಿಲ್ಲೆಗಳಿಂದ ಬರುವ ವಾಹನಗಳು ಸೇರಿದಂತೆ ಜಿಲ್ಲೆಯಲ್ಲಿನ ಕಲ್ಲುಗಣಿ ಗುತ್ತಿಗೆಗಳ ವಾಹನಗಳಲ್ಲಿ ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಟ್ ಸಮಿತಿ ಸಭೆ, ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ನಿಯಂತ್ರಣ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ದಾವಣಗೆರೆ ಜಿಲ್ಲೆಯ ಪಕ್ಕದ ವಿಜಯನಗರ, ಹಾವೇರಿ ಹಾಗೂ ಇತರ ಜಿಲ್ಲೆಗಳಿಂದ ದಾವಣಗೆರೆ ಜಿಲ್ಲೆಗೆ ಆಗಮಿಸುವ ಕಲ್ಲು ಗಣಿ ಗುತ್ತಿಗೆಗಳ ಟ್ರ್ಯಾಕ್ಟರ್, ಲಾರಿ ಇನ್ನಿತರ ಯಾವುದೇ ವಾಹನವಾಗಿರಲಿ ಅದರಲ್ಲಿ ಜಿ.ಪಿ.ಎಸ್ ಅನ್ನು ಹೊಂದಿರಬೇಕು, ಜಿ.ಪಿ.ಎಸ್ ಇಲ್ಲದಿರುವ ವಾಹನಗಳಲ್ಲಿ ಸಾಗಾಣಿಕೆ ಕಲ್ಲು, ಮರಳು ಕಂಡುಬಂದರೆ ದಂಡ ವಿಧಿಸಲಾಗುವುದು ಎಂದರು. ಅನಧಿಕೃತ ಕಲ್ಲು ಗಣಿಗಾರಿಕೆ, ಸಾಗಾಣಿಕೆಗಳು ಹೆಚ್ಚಾಗಿ ಜಿಲ್ಲೆಯ ಹೊನ್ನಾಳಿ, ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ರಚಿತವಾಗಿರುವ ಚಾಲಿತ ತನಿಖಾ ದಳಗಳನ್ನು ಹೆಚ್ಚು ಜಾಗೃತವಹಿಸುವಂತೆ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಮರಳು ಬ್ಲಾಕ್‍ಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಮಣ್ಣನ್ನು ಹೊರ ತೆಗೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದರು. 

ರಾಜಕಾರಣವು ಚುನಾವಣೆಗೆ ಮಾತ್ರ ಮೀಸಲಾಗಿರಲಿ: ಸಚಿವ ಬೈರತಿ ಸುರೇಶ್‌

ಉಪವಿಭಾಗಾಧಿಕಾರಿ ದುರ್ಗಾಶ್ರೀ ಮಾತನಾಡಿ ಪಟ್ಟಾ ಅಥವಾ ಸರ್ಕಾರಿ ಜಮೀನುಗಳಲ್ಲಿ ನಿಯಮದಂತೆ 3 ಅಡಿ ಮಣ್ಣನ್ನು ತೆಗೆಯಲು ಅವಕಾಶವಿದೆ. ಆದರೆ ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 10 ಅಡಿಗಿಂತ ಆಳವಾಗಿ ಮಣ್ಣನ್ನು ಅಗೆದಿರುವುದು ಕಂಡು ಬಂದಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಜಿಲ್ಲಾಧಿಕಾರಿಯವರು ಹರಿಹರ ತಾಲ್ಲೂಕಿನಲ್ಲಿ ಇಟ್ಟಿಗೆ ತಯಾರಿಸುವ ಘಟಕಗಳಿದ್ದು, ಅವರು ಇಟ್ಟಿಗೆ ತಯಾರಿಸಲು ಅವಶ್ಯಕವಾದ ಮಣ್ಣನ್ನು ತೆಗೆದುಕೊಳ್ಳಲು ನಿರ್ದಿಷ್ಟವಾದ ಗೋಕಟ್ಟೆ, ಕೆರೆ ಪ್ರದೇಶಗಳನ್ನು ನಿಗಧಿಪಡಿಸಿ ಹಾಗೂ ನಗರ ಪ್ರದೇಶದ ಪಟ್ಟಾ ಜಾಗಗಳಲ್ಲಿ 3 ಅಡಿ ಮಣ್ಣನ್ನು ಹಾಗೂ ಕೆರೆ ಪ್ರದೇಶಗಳಲ್ಲಿ 3 ಅಡಿಗಿಂತ ಹೆಚ್ಚು ಮಣ್ಣನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಲು ತಿಳಿಸಿದರು.

ವಾಹನದ ಸಾಮಥ್ರ್ಯಕ್ಕೆ ಅನುಗುಣವಾಗಿ ಕಲ್ಲು, ಮಣ್ಣು ಖನಿಜಗಳನ್ನು ಲೋಡ್ ಮಾಡದೇ, ಹೆಚ್ಚಿನ ಪ್ರಮಾಣದಲ್ಲಿ ಕಲ್ಲು, ಮಣ್ಣು ಇತರೆ ಖನಿಜಗಳನ್ನು ಸಾಗಿಸುವ ವಾಹನಗಳನ್ನು ಪರಿಶೀಲಿಸಿ, ಅಂತಹ ವಾಹನಗಳ ಮೇಲೆ ನಿಯಮಾನುಸಾರ ದಂಡ ವಿಧಿಸಿ ಎಂದರು. ಈಗಾಗಲೇ ಜಿಲ್ಲೆಯ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ತ್ವರಿತವಾಗಿ ವಿಲೇವಾರಿ ಮಾಡಲು ತಿಳಿಸಿದರು. ಹಿರಿಯ ಭೂ ವಿಜ್ಞಾನಿ ರಶ್ಮಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 11 ಕಲ್ಲು ಪುಡಿ ಮಾಡುವ ಘಟಕಗಳಿದ್ದು, ಅದರಲ್ಲಿ 6 ಘಟಕಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. 

ರೈತರ ಹೊಲ-ಗದ್ದೆಗಳಿಗೆ ನೀರಿಲ್ಲ: ತಮಿಳುನಾಡಿಗೆ ಕಾವೇರಿ ನೀರನ್ನು ನಿಲ್ಲಿಸುವಂತೆ ಕರವೇ ಒತ್ತಾಯ

ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಕ್ರಷರ್ ಚಾಲನೆ ಮಾಡಲು ಸುರಕ್ಷಿತ ವಲಯವೆಂದು ಘೋಷಿಸಬೇಕಾಗಿರುವ ಅರ್ಜಿಯ ಕುರಿತು ಜಂಟಿ ತಪಾಸಣೆ ನಡೆಸಿದ್ದು, ಜಂಟಿ ಸ್ಥಳ ತನಿಖಾ ವರದಿ ಸಲ್ಲಿಕೆಯಾಗಿರುತ್ತದೆ. ರೈಲ್ವೆ ಕಾಮಗಾರಿಗಾಗಿ ಅನುಮತಿ ಕೋರಿ ಜಿಲ್ಲೆಯ ಆನಗೋಡು, ಹಾಲವರ್ತಿ, ಹುಣಸೆಕ್ಕಟ್ಟೆ ಮತ್ತು ಚಟ್ಟೋಬನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸರ್ಕಾರಿ ಪ್ರದೇಶದಲ್ಲಿ ತಾತ್ಕಾಲಿಕ ಮೊಬೈಲ್ ಕ್ರಷರ್ ಘಟಕ ಸ್ಥಾಪನೆಗೆ ಮೆ. ಅಶೋಕ ಬಿಲ್ಡ್ ಕಾನ್ ಲಿಮಿಟೆಡ್‍ನಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮಲ್ಲನಾಯ್ಕ್, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಭೂ ವಿಜ್ಞಾನಿ ವಿನಯಾ ಬಣಕಾರ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ.ಎಸ್ ಉಪಸ್ಥಿತರಿದ್ದರು.

click me!