ವರುಣನಿಗೆ ಕಾದು ಕಂಗಾಲಾದ ಕಲ್ಪತರು ನಾಡಿನ ರೈತರು

Published : Aug 29, 2023, 08:09 AM IST
 ವರುಣನಿಗೆ ಕಾದು ಕಂಗಾಲಾದ ಕಲ್ಪತರು ನಾಡಿನ ರೈತರು

ಸಾರಾಂಶ

ತಾಲೂಕಿನ ಜನರ ಹಾಗೂ ಜಾನುವಾರುಗಳ ಪ್ರಮುಖ ಆಹಾರ ಬೆಳೆ ರಾಗಿ ಬೆಳೆಯಾಗಿದ್ದು ರಾಗಿ ಬಿತ್ತನೆ ಸಮಯ ಮೀರುತ್ತಿದ್ದರೂ ವರುಣ ಕೃಪೆ ತೋರುತ್ತಿಲ್ಲದ ಕಾರಣ ತಾಲೂಕಿನಾದ್ಯಂತ ಭೀಕರ ಬರದ ಛಾಯೆ ಆವರಿಸುತ್ತಿರುವುದರಿಂದ ರೈತರು ಮಳೆರಾಯನಿಗಾಗಿ ದೇವರಲ್ಲಿ ಮೊರೆ ಇಡುತ್ತಿರುವುದು ಕಂಡು ಬರುತ್ತಿದೆ.

 ಬಿ. ರಂಗಸ್ವಾಮಿ

 ತಿಪಟೂರು :  ತಾಲೂಕಿನ ಜನರ ಹಾಗೂ ಜಾನುವಾರುಗಳ ಪ್ರಮುಖ ಆಹಾರ ಬೆಳೆ ರಾಗಿ ಬೆಳೆಯಾಗಿದ್ದು ರಾಗಿ ಬಿತ್ತನೆ ಸಮಯ ಮೀರುತ್ತಿದ್ದರೂ ವರುಣ ಕೃಪೆ ತೋರುತ್ತಿಲ್ಲದ ಕಾರಣ ತಾಲೂಕಿನಾದ್ಯಂತ ಭೀಕರ ಬರದ ಛಾಯೆ ಆವರಿಸುತ್ತಿರುವುದರಿಂದ ರೈತರು ಮಳೆರಾಯನಿಗಾಗಿ ದೇವರಲ್ಲಿ ಮೊರೆ ಇಡುತ್ತಿರುವುದು ಕಂಡು ಬರುತ್ತಿದೆ.

ಕಲ್ಪತರು ನಾಡಿಗೆ ಮುಂಗಾರು ಮಳೆ ಈ ವರ್ಷ ಕೈಕೊಟ್ಟಿರುವುದರಿಂದ ಪ್ರಮುಖ ವಾಣಿಜ್ಯ ಬೆಳೆ ತೆಂಗು ಸೇರಿದಂತೆ ಇಲ್ಲಿನ ಖುಷ್ಕಿ ಪ್ರದೇಶದ ಮುಖ್ಯ ಬೆಳೆಗಳಾದ ರಾಗಿ, ಜೋಳ, ತೊಗರಿ, ಹೆಸರು, ಉದ್ದು, ಎಳ್ಳು, ಹರಳು ಸೇರಿದಂತೆ ಯಾವೊಂದೂ ಬೆಳೆಗಳನ್ನು ರೈತರು ಬೆಳೆಯಲಾಗುತ್ತಿಲ್ಲ. ಜೂನ್‌ನಿಂದ ಈವರೆಗೂ ಉತ್ತಮ ಮಳೆ ಬಾರದ್ದರಿಂದ ಯಾವ ಕೆರೆಕಟ್ಟೆಗಳಿಗೂ ನೀರು ಬಂದಿಲ್ಲ. ಇಲ್ಲಿ ಹೆಚ್ಚು ರೈತರು ಪಶುಸಂಗೋಪನೆಯನ್ನೇ ಉಪ ಕಸುಬಾಗಿಸಿಕೊಂಡಿರುವುದÜರಿಂದ ಜಾನುವಾರಗಳ ಮೇವಿಗೆ ತೀವ್ರ ಸಂಕಷ್ಟಎದುರಾಗಿದ್ದು ಮುಂದೇನು ಎನ್ನುವಂತಾಗಿದೆ.

ತಡವಾದ ರಾಗಿ ಬಿತ್ತನೆ:

ಈ ಬಾರಿ ಮುಂಗಾರು ಮಳೆಗಳು ಕೈಕೊಟ್ಟಪರಿಣಾಮ ಜುಲೈ 2ನೆ ವಾರದಲ್ಲಿ ಸುಮಾರಾಗಿ ಸುರಿದಿದ್ದ ಮಳೆಗೆ ತಾಲೂಕಿನ ಅರ್ಧದಷ್ಟುರೈತರು ರಾಗಿ ಬಿತ್ತನೆ ಮಾಡಿದ್ದು ಹುಟ್ಟಿಬಂದಿರುವ ಈ ಪೈರುಗಳಿಗೂ ಮಳೆ ಇಲ್ಲದೇ ಒಣಗುತ್ತಿವೆ. ಇದೇ ಅವಧಿಯಲ್ಲಿ್ಲ ಹದಮಳೆ ಬಾರದಿರುವ ಪ್ರದೇಶಗಳ ಸಾಕಷ್ಟುರೈತರು ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಒಣ ಭೂಮಿಗೆ ರಾಗಿ ಬಿತ್ತನೆ ಮಾಡಿದ್ದು ಮಳೆ ಕೈಕೊಟ್ಟಕಾರಣ ರಾಗಿ ಮೊಳಕೆಯೇ ಆಗಿಲ್ಲ. ಇನ್ನೂ ಶೇ.40ರಷ್ಟುರೈತರು ಇವತ್ತು, ನಾಳೆ ಮಳೆ ಬರಬಹುದೆಂದು ಬಿತ್ತನೆಗೆ ಸಜ್ಜಾಗಿ ಕಾಯುತ್ತಿದ್ದು ಮಳೆರಾಯ ಮಾತ್ರ ಕೃಪೆ ತೋರದಿರುವುದು ರೈತರಲ್ಲಿ ದೊಡ್ಡ ಆತಂಕ ಉಂಟು ಮಾಡಿರುವುದು ಕಂಡು ಬರುತ್ತಿದೆ.

ಹಣವೂ ಇಲ್ಲ, ಬೆಳೆಯೂ ಇಲ್ಲ:

ಒಟ್ಟಾರೆ ಈ ಬಾರಿ ರಾಗಿ ಬಿತ್ತನೆಗೆ ರೈತರು ಸಾಲ ಮಾಡಿಕೊಂಡು ಉಳುಮೆ, ಗೊಬ್ಬರ, ಬೀಜ ಹಾಗೂ ಬಿತ್ತನೆಗೆಂದು ಸಾವಿರಾರು ರೂಪಾಯಿ ಕಳೆದುಕೊಳ್ಳುವಂತಾಗಿದೆ. ಒಂದು ಕಡೆ ಹಣವೂ ಇಲ್ಲ. ಅತ್ತ ಬೆಳೆಯೂ ಇಲ್ಲ. ಕೂಡಲೆ ಮಳೆ ಬಾರದಿದ್ದರೆ ನಾವು ಜೀವನ ಮಾಡುವುದು ಹಾಗೂ ಜಾನುವಾರುಗಳ ಉಳಿಸಿಕೊಂಡು ಪಶುಸಂಗೋಪನೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಮುಳುಗಿದ್ದು ಈ ಚಿಂತೆಯಿಂದ ಸದ್ಯಕ್ಕೆ ರೈತರು ಪಾರಾಗಬೇಕಾದರೆ ಶೀಘ್ರ ದೊಡ್ಡ ಮಟ್ಟದಲ್ಲಿ ವರುಣನ ಕೃಪೆ ಆಗಬೇಕಿದೆ.

ಮಳೆಯ ಕೊರತೆಯಿಂದ ಈ ವರ್ಷ ರಾಗಿ ಬಿತ್ತನೆ ಕುಂಠಿತವಾಗಿದ್ದು, ತಾಲೂಕಿನಲ್ಲಿ ಶೇ.50ರಷ್ಟು$ಬಿತ್ತನೆಯಾಗಿದ್ದು, ಬಿತ್ತನೆಯ ಪ್ರಮಾಣ ಇನ್ನೂ ಸಾಕಷ್ಟಿದೆ. ಈಗಲೂ ಮಳೆಯಾದರೆ ಕೆಲ ಅಲ್ಪಾವಧಿ ರಾಗಿ ತಳಿಗಳನ್ನು ಬಿತ್ತಬಹುದಾಗಿದ್ದು ಅಂದುಕೊಂಡಂತೆ ಮಳೆ ಬಂದರೆ ಅಲ್ಪಾವಧಿ ರಾಗಿ ತಳಿಗಳನ್ನು ಬಿತ್ತನೆ ಮಾಡಿಸಲು ನಮ್ಮ ಇಲಾಖೆ ಕಾಯುತ್ತಿದೆ.

- ಚನ್ನಕೇಶವಮೂರ್ತಿ ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.

ಪಶುಸಂಗೋಪನೆಯನ್ನೇ ನೆಚ್ಚಿಕೊಂಡು ಪ್ರತೀ ವರ್ಷವೂ ನಾವು ರಾಗಿ ಬೆಳೆಯುತ್ತೇವೆ. ರಾಗಿ ಹುಲ್ಲು ನಮಗೆ ಮುಖ್ಯವಾಗಿರುವುದರಿಂದ ರಾಗಿ ಬಿತ್ತನೆ ಮಾಡಲು ಭೂಮಿ ಹದಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರೂ ಮಳೆ ಬರುತ್ತಿಲ್ಲ.

- ಮುರುಳಿ, ರೈತ, ಮಲ್ಲೇನಹಳ್ಳಿ,

PREV
Read more Articles on
click me!

Recommended Stories

Bloom Avenue Greening Project: ಬೆಂಗಳೂರು ರಸ್ತೇಲಿ ವರ್ಷವಿಡೀ ಅರಳಲಿವೆ ಬಣ್ಣದ ಹೂಗಳು!
ಬೈರಕುಪ್ಪ ಸೇತುವೆ: ಕರ್ನಾಟಕ-ಕೇರಳ ಸಂಪರ್ಕ, ದಶಕದ ಕನಸಿಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮರುಜೀವ!