ರೈತರೇ ಆಧುನಿಕ, ವೈಜ್ಞಾನಿಕ ಕೃಷಿಯತ್ತ ಚಿತ್ತ ಹರಿಸಿ: ಸಚಿವ ಬಿ.ಸಿ.ಪಾಟೀಲ್‌

By Govindaraj SFirst Published Sep 20, 2022, 12:58 AM IST
Highlights

ಅಜ್ಜ ನೆಟ್ಟಆಲದ ಮರಕ್ಕೆ ಜೋತು ಬೀಳುವ ಬದಲು ರೈತರು ಹೊಸ ಹೊಸ ಪ್ರಯೋಗಗಳ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ನಿರತರಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಧಾರವಾಡ (ಸೆ.20): ಅಜ್ಜ ನೆಟ್ಟಆಲದ ಮರಕ್ಕೆ ಜೋತು ಬೀಳುವ ಬದಲು ರೈತರು ಹೊಸ ಹೊಸ ಪ್ರಯೋಗಗಳ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ನಿರತರಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಕೃಷಿ ವಿಶ್ವವಿದ್ಯಾಲಯದಲ್ಲಿ ‘ರೈತರ ಆದಾಯ ದ್ವಿಗುಣಕ್ಕೆ ತಾಂತ್ರಿಕತೆಗಳು’ ಘೋಷವಾಕ್ಯದಡಿ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರ, ಕೃಷಿ ಇಲಾಖೆ ರೈತರಿಗೆ ಅಗತ್ಯವಾಗಿ ಬೀಜ-ಗೊಬ್ಬರ, ಕೃಷಿ ತಾಂತ್ರಿಕತೆಗಳು ಹಾಗೂ ಸಲಹೆಗಳನ್ನು ನೀಡುತ್ತದೆ. ಹಿಂದಿನಿಂದಲೂ ನೀಡುತ್ತಲೇ ಬಂದಿದೆ. ರೈತರು ಸಾಂಪ್ರದಾಯಿಕ ಪದ್ಧತಿಯಿಂದ ಸುಧಾರಿತ, ತಂತ್ರಜ್ಞಾನ, ಯಂತ್ರೋಪಕರಣಗಳ ಆಧಾರಿತ ಕೃಷಿ ಮಾಡಬೇಕು. ಪ್ರಸ್ತುತ ಕೃಷಿಯಲ್ಲಿ ಕ್ರಾಂತಿ ಆಗುತ್ತಿದೆ. ಕೃಷಿಕ ಸಹ ಸೂಟು-ಬೂಟು ಹಾಕಿಕೊಳ್ಳುವ ಮೂಲಕ ಬಡ ರೈತನಾಗುವ ಬದಲು ಉದ್ಯಮಿ ಆಗುವ ನಿಟ್ಟಿನಲ್ಲಿ ಯುವ ರೈತರು ಕನಸು ಕಾಣಬೇಕು. ತಾನು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಆದಾಯವನ್ನು ದುಪ್ಪಟ್ಟು ಮಾಡಿಕೊಂಡ ರೈತರು ಕಣ್ಣೆದುರು ಇದ್ದಾರೆ. ಅವರನ್ನು ಮಾದರಿಯನ್ನಾಗಿಟ್ಟುಕೊಂಡು ರೈತರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಧಾರವಾಡ 71ರ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಭಿನ್ನಮತ!

ಕೃಷಿ ಎಂದರೆ ನಷ್ಟವಲ್ಲ ಬರೀ ಲಾಭವೇ ಇದೆ ಎಂದು ತೋರಿಸಿಕೊಳ್ಳುವ ರೈತರು ನೀವಾಗಬೇಕು. ಅದಕ್ಕಾಗಿ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ. ಕೃಷಿ ಕೂಲಿಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ರೈತರು ತಂತ್ರಜ್ಞಾನ ಆಧಾರಿತ ಕೃಷಿಯತ್ತ ಚಿತ್ತ ಹರಿಸಲೇಬೇಕು. ಕೃಷಿಯನ್ನು ಕೀಳರಿಮೆಯಾಗಿ ಕಾಣದೇ ಕೃಷಿಯಲ್ಲಿ ಚಿನ್ನ ತೆಗೆಯುವ ಉದಾಹರಣೆ ನಮ್ಮ ಎದುರಿಗಿದೆ. ಅಂತಹವರನ್ನು ಹುಡುಕಿ ಕೃಷಿ ವಿವಿಗಳು ಶ್ರೇಷ್ಠ ಕೃಷಿಕರೆಂಬ ಪ್ರಶಸ್ತಿ ನೀಡುತ್ತಿವೆ. ಅತಿವೃಷ್ಟಿಅಥವಾ ಬರದಿಂದ ರೈತರು ಯಾವುದೇ ಕಾರಣಕ್ಕೂ ಹತಾಶರಾಗಬಾರದು. ಪ್ರಸಕ್ತ ಕರ್ನಾಟಕಕ್ಕೆ ಅತಿವೃಷ್ಟಿಶಾಪವಾಗಿದೆ. ಮಳೆ, ನೆರೆ-ಪ್ರವಾಹದಿಂದ ರಾಜ್ಯದ ರೈತರ ಬೆಳೆಗಳು ನೀರುಪಾಲಾಗಿವೆ. ಆ. 20ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿ ಅನುಸಾರ .400 ಕೋಟಿ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ರೈತರೊಂದಿಗೆ ಸದಾ ಸರ್ಕಾರ ಇರಲಿದ್ದು ಭಯ ಬೇಡ ಎಂದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಎಲ್ಲ ಕ್ಷೇತ್ರದ ಜನರು ಮನೆಯಲ್ಲಿದ್ದರು. ಆದರೆ, ಜಗಕ್ಕೆ ಅನ್ನ ನೀಡುವ ರೈತ ಮಾತ್ರ ಹೊಲಕ್ಕೆ ಹೋದ ಪರಿಣಾಮ ಲಾಕ್‌ಡೌನ್‌ ವರ್ಷವೂ ಅತ್ಯಧಿಕ ಆಹಾರ ಉತ್ಪಾದನೆ ಮಾಡಲಾಗಿದೆ. ಇದೀಗ ಅತಿಯಾದ ಮಳೆಯ ಮಧ್ಯೆಯೂ ರೈತರು ಬೆಳೆ ತೆಗೆಯುತ್ತಿದ್ದು, ರೈತರ ಪರವಾಗಿ ಯಾವತ್ತೂ ಸರ್ಕಾರ ಕೆಲಸ ಮಾಡಲಿದೆ ಎಂಬ ಭರವಸೆ ನೀಡಿದರು. ಸಮಾರಂಭದಲ್ಲಿ ಏಳು ಜಿಲ್ಲೆಯ ಶ್ರೇಷ್ಠ ಕೃಷಿಕ-ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಯಲು ಸೀಮೆ ಅಭಿವೃದ್ಧಿ ಪ್ರಾಧಿ​ಕಾರ ಅಧ್ಯಕ್ಷ ತವನಪ್ಪ ಅಷ್ಟಗಿ, ಕುಲಪತಿ ಡಾ. ಆರ್‌. ಬಸವರಾಜಪ್ಪ, ಕುಲಸಚಿವ ಶಿವಾನಂದ ಕರಾಳೆ, ವಿಸ್ತರಣಾಧಿಕಾರಿ ಡಾ. ಹೂಗಾರ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರು ಇದ್ದರು.

ಆಹಾರ ಭದ್ರತೆಗೆ ಬೀಜ ಭದ್ರತೆಯೂ ಬೇಕು: ಬಿ.ಸಿ.ಪಾಟೀಲ್

ಪ್ರಧಾನಮಂತ್ರಿ ಕಿರು ಉದ್ಯಮದಲ್ಲಿ ರಾಜ್ಯದ ಸುಮಾರು 11 ಲಕ್ಷ ರೈತರು ಉದ್ಯೋಗ ಆರಂಭಿಸಿ, ಅನೇಕರಿಗೆ ಉದ್ಯೋಗ ನೀಡಿದ್ದಾರೆ. ದೇಶದಲ್ಲಿ ಯೋಜನೆ ಸದ್ಬಳಕೆ ಮಾಡಿಕೊಂಡ ರಾಜ್ಯಗಳಲ್ಲಿ ಕರ್ನಾಟಕ ಅಗ್ರಗಣ್ಯ ಸ್ಥಾನದಲ್ಲಿದ್ದು, ಇದಕ್ಕೆ ಕೇಂದ್ರದ ಪ್ರಶಸ್ತಿಯೂ ಬಂದಿದೆ. ವೈಜ್ಞಾನಿಕ ಚಿಂತನೆ, ತಂತ್ರಜ್ಞಾನ ಬಳಕೆ, ಉತ್ಪಾದನೆ, ಸಂಸ್ಕೃರಣೆ, ಮಾರಾಟದಿಂದ ಕೃಷಿ ಲಾಭದ ಉದ್ಯಮ ಮಾಡಬಹುದು.
-ಬಿ.ಸಿ. ಪಾಟೀಲ, ಕೃಷಿ ಸಚಿವರು

click me!