ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಬೇಡ: ಗುಣಧರನಂದಿ ಶ್ರೀಗಳು

By Kannadaprabha NewsFirst Published Aug 3, 2023, 2:15 AM IST
Highlights

ನಾನು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದ್ಡು, ಅವರು ನನಗೆ ಪದೇ ಪದೆ ತೊಂದರೆ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ: ಜೈನಮುನಿ ಗುಣಧರನಂದಿ ಶ್ರೀಗಳು 

ಹುಬ್ಬಳ್ಳಿ(ಆ.03):  ಸೌಜನ್ಯ ಹತ್ಯೆ ಪ್ರಕರಣ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡುವ ಕಾರ್ಯ ನಡೆಯುತ್ತಿರುವುದು ಖಂಡನಾರ್ಹ ಎಂದು ವರೂರಿನ ನವಗ್ರಹ ತೀರ್ಥಕ್ಷೇತ್ರದ ಜೈನಮುನಿ ಗುಣಧರನಂದಿ ಶ್ರೀಗಳು ಹೇಳಿದರು. 

ಕರ್ನಾಟಕ ಶಾಂತಿಯ ತೋಟ. ಆದರೆ, ಇಂಥ ರಾಜ್ಯದಲ್ಲಿ ಹಿಂಸಾ ಕೃತ್ಯ ನಡೆಯುತ್ತಿರುವುದು ತೀವ್ರ ಆತಂಕಕಾರಿ. ಅಹಿಂಸಾ ತತ್ವದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದರು.

ಸೌಜನ್ಯ ಕೇಸ್‌: ಭಕ್ತರು ಗೊಂದಲಕ್ಕೆ ಈಡಾಗದಂತೆ ಡಾ.ಹೆಗ್ಗಡೆ ಮನವಿ

ಕೆಲ ವರ್ಷಗಳ ಹಿಂದಿನ ಸೌಜನ್ಯ ಹತ್ಯೆ ಘಟನೆಯಿಂದ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಪೊಲೀಸರು ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸಿ ಕಾನೂನು ಮೂಲಕ ಶಿಕ್ಷೆ ವಿಧಿಸಲಿ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆದರೆ, ಈ ವಿಷಯವನ್ನಿಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಯಾರೇ ಆಗಲಿ ಅಪಪ್ರಚಾರ ಮಾಡಿದರೆ ಸಹಿಸಲ್ಲ. ಹೆಗ್ಗಡೆ ಅವರು ಅಪರಾಧಿಯಾಗಿದ್ದರೆ ಕಾನೂನು ಮೂಲಕ ಶಿಕ್ಷೆಯಾಗಲಿ. ವಿಚಾರಣೆಗಾಗಿ ತನಿಖಾ ಸಂಸ್ಥೆ ಇದೆ. ನಮಗೆ ಗೃಹ ಸಚಿವರು, ಪೊಲೀಸರ ಮೇಲೆ ನಂಬಿಕೆ ಇದೆ. ಒಳ್ಳೆ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಅವರ ಮೇಲೆ ಸಂಪೂರ್ಣ ನಂಬಿಕೆಯಿದೆ. ಸೌಜನ್ಯಗೆ ನ್ಯಾಯ ಸಿಗಬೇಕು, ಆದರೆ, ಮುಖವಾಡ ಹೊತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡಬಾರದು ಎಂದರು.

ನಾನು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದ್ಡು, ಅವರು ನನಗೆ ಪದೇ ಪದೆ ತೊಂದರೆ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ. ಅವಶ್ಯವಿದ್ದಲ್ಲಿ ಸೌಜನ್ಯ ಹತ್ಯೆ ಪ್ರಕರಣ ಮರು ತನಿಖೆಗೆ ಸರ್ಕಾರ ಕ್ರಮಕೈಗೊಳ್ಳಲಿ. ಅವರು ದೋಷಿ ಎಂದಾದರೆ ಕಾನೂನು ರೀತಿ ಕ್ರಮ ಕೈಗೊಂಡು ಶಿಕ್ಷೆಯಾಗಲಿ. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಅವರ ಘನತೆಗೆ ಚ್ಯುತಿ ತರುವ ಕಾರ್ಯ ಕೈಗೊಳ್ಳುವವರ ಮೇಲೆ ಸರ್ಕಾರ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

click me!