Davangere ಕಳೆದ ಮುಂಗಾರು ಹಂಗಾಮಿನಲ್ಲಿ ಮಾಡಿಸಿದ ವಿಮಾ ಹಣ ಬಾಕಿ

By Suvarna NewsFirst Published May 9, 2022, 2:06 PM IST
Highlights
  • ದಾವಣಗೆರೆ ಜಿಲ್ಲೆಯಲ್ಲೇ 6.26 ಕೋಟಿ ಹಣ ಪ್ರೀಮಿಯಂ ಜಮೆ
  • ಹೊಸ ಮುಂಗಾರು ಕೃಷಿಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆಂಬ ಚಿಂತೆಯಲ್ಲಿ ರೈತ ಸಮುದಾಯ
  • ವಿಳಂಬಕ್ಕೆ ತಾಂತ್ರಿಕ ದೋಷ ಕಾರಣ ಎಂದ ಕೃಷಿ ಇಲಾಖೆ ಅಧಿಕಾರಿಗಳು

ವರದಿ - ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಮೇ:9): ಈ ಬಾರಿ  ಉತ್ತಮ ಮುಂಗಾರು ನಿರೀಕ್ಷೆ ಹಿನ್ನಲೆಯಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಪೂರೈಸಲು ಸರಕಾರ ಸಿದ್ಧತೆಯನ್ನೇನೋ ಮಾಡಿಕೊಂಡಿದೆ. ಆದರೆ, ಹಿಂದಿನ ವರ್ಷ ಸುರಿದ ಮುಂಗಾರು ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸಿದ ಲಕ್ಷಾಂತರ ರೈತರಿಗೆ ಇನ್ನೂ ಸಿಕ್ಕಿಲ್ಲ ಬೆಳೆ ವಿಮೆ.ಇದರಿಂದ  ಹೊಸ ಮುಂಗಾರು ಕೃಷಿಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆಗೆ ರೈತ ಸಮುದಾಯ ಬಿದ್ದಿದೆ.

ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿದಾಗ ಸಂಕಷ್ಟಕ್ಕೆ ಸಿಲುಕುವ ರೈತನಿಗೆ ಒಂದಿಷ್ಟು ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸರಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ರೂಪಿಸಿದೆ. ರಾಜ್ಯದ ಲಕ್ಷಾಂತರ ರೈತರು ಈ ಯೋಜನೆಯಡಿ ವಿಮೆ ಮಾಡಿಸಿದ್ದರು. ರಾಜ್ಯದಲ್ಲಿ ಕಳೆದ ವರ್ಷ ಮುಂಗಾರು ಅಬ್ಬರಿಸಿ ಅತಿವೃಷ್ಟಿಯಾಗಿ ಬೆಳೆಗಳು ನೆಲ ಕಚ್ಚಿ ಅಪಾರ ನಷ್ಟ ಆಯಿತು. ಈ ವೇಳೆ ವಿಮೆ ಮಾಡಿಸಿದ್ದ ರೈತರಿಗೆ ಆಸರೆ ಆಗಬೇಕಿದ್ದ ಬೆಳೆ ವಿಮೆ ಮತ್ತೆ ಮುಂಗಾರು ಬಂದರು ಇನ್ನೂ ಹಂಚಿಕೆ ಆಗಿಲ್ಲ. ಕಂಪನಿಗಳು ಇನ್ನೂ ವಿಮೆ ಹಣ ಹಂಚಿಕೆ ಮಾಡಿಲ್ಲ. ಹಾಗಾಗಿ ಈ ಯೋಜನೆ ಬಗ್ಗೆಯೂ ರೈತರು ಭ್ರಮ ನಿರಸನಕ್ಕೆ ಒಳಗಾಗುತ್ತಿದ್ದು, ವಿಮೆ ಮಾಡಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ.

ಭತ್ತದ ಬೆಳೆಗೆ ವಿಮೆ ಹಣ ಹಂಚಿಕೆ ಸಮಸ್ಯೆ ಆಗಿದೆ: ಅತಿವೃಷ್ಟಿಯಾಗಿ ಭತ್ತ  ನೀರಿನಲ್ಲಿ ಮುಳುಗಿದರೂ ವಿಮೆ ಪಾವತಿ ಆಗುವುದಿಲ್ಲ. ಅದಕ್ಕೆ ಅವಕಾಶ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಬೆಳೆ ಹಾಳು ನೈಜ ಪ್ರಕರಣ ಇರಬಹುದು. ಆದರೆ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಮಳೆ ಇರುವುದರಿಂದ ಭತ್ತ ನೀರಿನಲ್ಲಿ ಮುಳುಗುವುದು ಸಹಜ. ಇಲ್ಲಿ ಕೊಟ್ಟರೆ, ಆ ರಾಜ್ಯಗಳು ಕೇಳುತ್ತವೆ, ಕಂಪನಿಗಳು ಸ್ಪಂದಿಸುವುದಿಲ್ಲ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

Bidar ದಲಿತರು ಹಿಂದೂಗಳೇ ನಮ್ಮನ್ಯಾಕೆ ನೀವು ಜೊತೆ ಸೇರಿಸಿಕೊಳ್ಳಲ್ಲ; ಖರ್ಗೆ

ವಿಳಂಬಕ್ಕೆ ತಾಂತ್ರಿಕ ದೋಷ ಕಾರಣ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು: ರೈತರು ತಮ್ಮ ಜಮೀನಲ್ಲಿನ ಬೆಳೆಗಳ ಬಗ್ಗೆ ಫೋಟೊ ತೆಗೆದು ವಿಮಾ ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದ್ದಾರೆ. ರೈತರು ಅಪ್‌ಲೋಡ್ ಮಾಡಿರುವ ಫೋಟೋಗಳಲ್ಲಿ ಬೆಳೆಗಳ ಚಿತ್ರ ಸ್ಪಷ್ಟವಾಗಿ ಕಾಣದೆ ತಾಂತ್ರಿಕ ಸಮಸ್ಯೆಯಾಗಿ ವಿಮೆ ಹಣ ಹಂಚಿಕೆ ಮಾಡಲು ಆಗುತ್ತಿಲ್ಲ. ಹಾಗಾಗಿ ವಿಮೆ ಹಂಚಿಕೆ ತಡವಾಗಿದೆ. ಇನ್ನು 15 ದಿನದಲ್ಲಿ ವಿಮೆ ಬರಲಿದೆ ಎಂದು ಕಂಪನಿಗಳು ಹೇಳುತ್ತಿವೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಬೆಳೆ ವಿಮೆ ಮಾಡಿಸುವವರ ಸಂಖ್ಯೆ: ಬೆಳೆ ವಿಮೆ ಹಂಚಿಕೆ ತಡವಾಗುತ್ತಿರುವುದು, ಕೆಲವೊಂದು ವರ್ಷ ವಿಮೆ ಹಣ ಬಾರದೆ ಇರುವುದು, ಬಂದರೂ ಹಾಳಾದ ಬೆಳೆಗೂ ವಿಮೆ ಪರಿಹಾರದ ಹಣಕ್ಕೂ ತಾಳ ಮೇಳ ಆಗದೆ ಇರುವುದರಿಂದ ಈ ಬೆಳೆ ವಿಮೆ ಮೇಲೆ ರೈತ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾನೆ. ಹಾಗಾಗಿ ಪ್ರತಿ ವರ್ಷ ಬೆಳೆವಿಮೆ ಮಾಡಿಸುವವರ ಸಂಖ್ಯೆಯೂ ಕಡಿಮೆ ಆಗುತ್ತಿರುವುದನ್ನು ಅಂಕಿ ಸಂಖ್ಯೆ ಹೇಳುತ್ತವೆ.

Tumakuru ಶ್ರೀರಾಮ ಸೇನೆ ಕರೆ ನೀಡಿದ ಸುಪ್ರಭಾತ ಸ್ತುತಿಗೆ ನೀರಸ ಪ್ರತಿಕ್ರಿಯೆ

ಪ್ರೀಮಿಯಂ ರೂಪದಲ್ಲಿ ಜಮೆ ಆದ ಹಣ 6.26 ಕೋಟಿ: ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಲಕ್ಷ ರೈತರು 12,67,972 ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆದಾರರಾಗಿದ್ದಾರೆ. ರೈತರು, ರಾಜ್ಯ ಮತ್ತು ಕೇಂದ್ರದ ವಿಮೆ ಹಣದ ಪಾಲು ಸೇರಿ ಕೋಟ್ಯಂತರ ರೂ. ಪ್ರೀಮಿಯಂ ರೂಪದಲ್ಲಿ ವಿಮಾ ಕಂಪನಿಗೆ ಜಮೆ ಆಗಿದೆ. ದಾವಣಗೆರೆ ಜಿಲ್ಲೆ ಒಂದರಲ್ಲಿಯೇ 21,514 ರೈತರು ಬೆಳೆ ವಿಮೆ ಮಾಡಿಸಿದ್ದು, ಇದರ ಬಾಬ್ತು ಒಟ್ಟು 6.26 ಕೋಟಿ ರೂ.ಗಳನ್ನು ವಿಮಾ ಕಂಪನಿಗಳಿಗೆ ಜಮೆ ಆಗಿದೆ.

ಕಷ್ಟಕಾಲಕ್ಕೆಂದು ವಿಮೆ ಮಾಡಿಸಲಾಗುತ್ತದೆ. ಆದರೆ, ಕೃಷಿ ವಿಮೆಯಲ್ಲಿ ಈ ಆಶಯ ಇಲ್ಲವಾಗಿದೆ. ವಿಳಂಬ ಸರಿಯಲ್ಲ. ಜತೆಗೆ ಇದು ಪರೋಕ್ಷತೆರಿಗೆಯಂತಾಗಿ ರೈತರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ರೈತ ಮುಖಂಡ  ತೇಜಸ್ವಿ ಪಟೇಲ್ . ದಾವಣಗೆರೆ ಜಿಲ್ಲೆಯಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ನಲುಗಿದ್ದು ಯಾವ ಬೆಳೆಯು ರೈತರ ಕೈಹಿಡಿಯುತ್ತಿಲ್ಲ.ಜಗಳೂರು ತಾಲ್ಲೂಕಿನಲ್ಲಿ ರಾಗಿ ಬೆಳೆದ ದೊಡ್ಡ ಹಿಡುವಳಿದಾರರು ಬೆಂಬಲ ಬೆಲೆಯಿಂದ‌ ಹೊರಗೆ ಇದ್ದು ಬೆಳೆದ ಬೆಲೆಗೆ ಸೂಕ್ತ ದರ ಸಿಕ್ಕಿಲ್ಲ ಎಂಬ ಅಸಮಾಧಾನ ಇದೆ. ಇನ್ನೊಂದು ಕಡೆ ಈರುಳ್ಳಿಗು ಬೆಂಬಲ ಬೆಲೆ ಕೊಡಿ ಎಂದು ರೈತರು ಹೋರಾಟ ನಡೆಸಿದ್ದಾರೆ‌. ಹೀಗೆ ಬೇಕು‌ ಬೇಡ ಗಳ ನಡುವೆ ರೈತರ ಜೀವನ ಸಾಗಿದ್ದು ವ್ಯವಸಾಯದ ಬದುಕು ಬಲು ದುಸ್ತರವಾಗಿದೆ.

click me!