ಚಿಕ್ಕಮಗಳೂರು: ಬೆಳೆ ಮಾತ್ರವಲ್ಲ, ಕೃಷಿಭೂಮಿಯೂ ನಾಶ 182 ಕೋಟಿಗೂ ಅಧಿಕ ನಷ್ಟ

By Kannadaprabha NewsFirst Published Aug 27, 2019, 12:14 PM IST
Highlights

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದಾಗಿ ಕೃಷಿ ಮಾತ್ರವಲ್ಲದೆ ಕೃಷಿ ಭೂಮಿಯೂ ನಾಶವಾಗಿದೆ. ಮತ್ತೊಮ್ಮೆ ಕೃಷಿ ಮಾಡೋಣ ಅನ್ನೋ ಸೆಕೆಂಡ್ ಛಾನ್ಸ್‌ನ್ನೂ ಬೆಳೆಗಾರರು ಕಲೆದುಕೊಂಡಿದ್ದಾರೆ. ಜಿಲ್ಲೆಯ ಕೃಷಿ ಭೂಮಿಯ ತುಂಬಾ ಪ್ರವಾಹದಿಂದಾಗಿ ಮರಳು ತುಂಬಿಕೊಂಡಿದೆ. ಹೂಳು ತುಂಬಿದ ಭೂಮಿಯಲ್ಲಿ ಬೀಜ ಬಿತ್ತನೆ ನಡೆಸುವುದು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು(ಆ.27): ಈ ಬಾರಿಯ ಮಳೆ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡಿದೆ. ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ ಬಿತ್ತನೆಯಾಗಿದ್ದು ಶೇ. 23 ರಷ್ಟಮಾತ್ರ, ಈಗ ಶೇ.58ಕ್ಕೆ ಏರಿದೆ. ಆದರೆ, ಮುಂದಿನ ಭವಿಷ್ಯ ಕಷ್ಟದಲ್ಲಿದೆ. ಅತಿವೃಷ್ಟಿಯಿಂದ ಬೆಳೆಯನ್ನು ಕಳೆದುಕೊಂಡಿರುವ ರೈತರಿಗೆ ಸರ್ಕಾರ ನೀಡುವ ಪರಿಹಾರ ಕವಡೆ ಕಾಸು. ಇದರಿಂದ ಜೀವನ ಸುಧಾರಿಸಲು ಸಾಧ್ಯವಿಲ್ಲ.

ಜಿಲ್ಲೆಯ 5 ಮಲೆನಾಡಿನ ತಾಲೂಕುಗಳಲ್ಲಿ ಭಾರೀ ಮಳೆಯಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು, ಹಳ್ಳಗಳು ತುಂಬಿ ಹರಿದಿದ್ದು, ಇವುಗಳ ಪಾತ್ರದಲ್ಲಿರುವ ತೋಟಗಳು, ಭತ್ತದ ಗದ್ದೆಗಳು ಜಲಾವ್ರತವಾಗಿವೆ. ಕೆಲವೆಡೆ ಹೂಳು ತುಂಬಿದೆ. ಅಲ್ಲಿ ಬಿತ್ತನೆ ಮಾಡಲು ಸಾಧ್ಯವಿಲ್ಲ.

ಹೂಳು ತುಂಬಿದ ಕೃಷಿಭೂಮಿ:

ಜಿಲ್ಲೆಯ 761.25 ಹೆಕ್ಟೇರ್‌ ಪ್ರದೇಶ ಹೂಳಿನಿಂದ ತುಂಬಿದೆ. ಕೃಷಿ ಮತ್ತು ತೋಟಗಾರಿಕೆ ಭೂಮಿಗೆ ಹಾನಿಯಾಗಿದೆ. ಕೃಷಿಗೆ ಸೇರಿದ 331 ಹೆಕ್ಟೇರ್‌, 430 ಹೆಕ್ಟೇರ್‌ ತೋಟಗಳು ಹಾಳಾಗಿದ್ದು, .92 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 102, ಶೃಂಗೇರಿ ತಾಲೂಕಿನಲ್ಲಿ 53, ಕೊಪ್ಪ 72, ಎನ್‌.ಆರ್‌.ಪುರ 65 ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ 39 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಹೂಳು ತುಂಬಿದೆ. ಇದರಿಂದ 40 ಲಕ್ಷ ರುಪಾಯಿ ನಷ್ಟವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 304 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ಭೂ ಕುಸಿತ:

ಜಿಲ್ಲೆಯ 5 ತಾಲೂಕಿನ 507 ಹೆಕ್ಟೇರ್‌ ಪ್ರದೇಶ ಭೂ ಕುಸಿತದಿಂದ ಹಾನಿಯಾಗಿದ್ದು, ಸುಮಾರು 61 ಲಕ್ಷ ರುಪಾಯಿ ನಷ್ಟಸಂಭವಿಸಿದೆ. ಕೃಷಿಯ 19 ಹೆಕ್ಟೇರ್‌, 303 ಹೆಕ್ಟೇರ್‌ ತೋಟಗಾರಿಕೆ, 185 ಹೆಕ್ಟೇರ್‌ ಕಾಫಿ ಬೆಳೆ ಭೂಕುಸಿತದಿಂದ ಹಾಳಾಗಿದೆ. 2654 ಹೆಕ್ಟೇರ್‌ ಭತ್ತದ ಗದ್ದೆಗಳಿಗೆ ಹಾನಿ ಸಂಭವಿಸಿದೆ. ಇದರಲ್ಲಿ ಚಿಕ್ಕಮಗಳೂರು ತಾಲೂಕಿನ 101, ಕೊಪ್ಪ 185, ಮೂಡಿಗೆರೆ 1986, ಎನ್‌.ಆರ್‌.ಪುರ 250, ಶೃಂಗೇರಿ ತಾಲೂಕಿನಲ್ಲಿ 132 ಹೆಕ್ಟೇರ್‌ ಪ್ರದೇಶಕ್ಕೆ ಹಾನಿ ಸಂಭವಿಸಿದೆ.

ಕವಡೆ ಕಾಸಿನ ಪರಿಹಾರ:

ಜಿಲ್ಲೆಯ ಅತಿವೃಷ್ಟಿಪೀಡಿತ 4 ತಾಲೂಕುಗಳಲ್ಲಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯ ಪ್ರಕಾರ ಪರಿಹಾರ ನೀಡಲಾಗುತ್ತಿದೆ. ಅದರಂತೆ 1 ಹೆಕ್ಟೇರ್‌ ಕೃಷಿ ಭೂಮಿ ಹಾಳಾಗಿದ್ದರೆ .6800 ಹೂಳು ತುಂಬಿದ್ದರೆ 1 ಹೆಕ್ಟೇರ್‌ಗೆ .12,200 ತಾತ್ಕಾಲಿಕ ಪರಿಹಾರ ನೀಡಲಾಗುವುದು. ಸಾವಿರಾರು ರು. ವೆಚ್ಚ ಮಾಡಿ ಬೆಳೆದಿರುವ ಫಸಲು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸರ್ಕಾರ ಕೊಡುವ ಅಲ್ಪ ಪರಿಹಾರದಲ್ಲಿ ರೈತರ ಬದುಕು ಕಸನಗೊಳ್ಳಲು ಸಾಧ್ಯವಿಲ್ಲ.

-ಆರ್‌.ತಾರಾನಾಥ್‌

click me!