ಗೆದ್ದ ಸಂಭ್ರಮದಲ್ಲಿ ಕಾರ್ಯಕರ್ತರಿಗೆ ಹೋಳಿಗೆ ಊಟ ಹಾಕಿಸಿದ ಈಶ್ವರಪ್ಪ

By Web DeskFirst Published Jun 16, 2019, 4:17 PM IST
Highlights

ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟ ಹಾಕಿಸಿದರು.

ಕೊಪ್ಪಳ, (ಜೂ.16): ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ‌ ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಕಾರ್ಯಕರ್ತರಿಗೆ ಭರ್ಜರಿ ಹೋಳಿಗೆ ಊಟ ಹಾಕಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಪರ ಪ್ರಚಾರಕ್ಕಾಗಿ ಕೊಪ್ಪಳಕ್ಕೆ ಆಗಮಿಸಿದ ವೇಳೆ ಕಾಂಗ್ರೆಸ್ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳ‌ ಅಂತರದಿಂದ ಗೆಲುವು ಸಾಧಿಸಿದರೆ ಹೋಳಿಗೆ ಊಟ ಹಾಕಿಸುವುದಾಗಿ ಹೇಳಿದ್ದರು. 

ಕಾರ್ಯಕರ್ತರಿಗೆ ನೀಡಿದ ಭರವಸೆಯಂತೆ ಕೊಪ್ಪಳ‌ ಸಮೀಪದ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಹೋಳಿಗೆ ಊಟ ಹಾಗೂ ನೂತನ ಸಂಸದರಿಗೆ ಸನ್ಮಾನ ಮಾಡಿದರು.

ಭೂರಿ ಭೋಜನದಲ್ಲಿ  ಹೋಳಿಗೆ, ತುಪ್ಪ ಜತೆಗೆ ಖಡಕ್ ರೊಟ್ಟಿ, ಚಪಾತಿ, ಬದನೆ ಕಾಯಿ ಪಲ್ಯ, ದಾಲ್, ಅನ್ನ, ಸಾಂಬಾರ್, ಕೆಂಪು ಚಟ್ನಿ, ಉಪ್ಪಿನಕಾಯಿ, ಶೇಂಗಾಪುಡಿ ಇತ್ತು.

ಸುಮಾರು 200 ಜನ ಮಹಿಳಾ ಬಾಣಸಿಗರು 4 ಸಾವಿರ ಹೋಳಿಗೆ ತಯಾರಿಸಿದ್ದು, 6 ಸಾವಿರ ಜನ ಕಾರ್ಯಕರ್ತರು ಹೋಳಿಗೆ ಊಟ ಸವಿದರು.

click me!