ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!

By Web DeskFirst Published Oct 1, 2019, 12:22 PM IST
Highlights

ಶಿಕ್ಷಕ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ಕೃಷಿಯಲ್ಲೂ ಸಾಧನೆ ಮಾಡಿರುವವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚುಂಚನೂರ ಗ್ರಾಮದ ಮಾರುತಿ ಭೀಮಪ್ಪ ಸರನ್ನವರ. ಇವರಿಗೆ ಚಿಕ್ಕಂದಿನಿಂದಲೇ ವ್ಯವಸಾಯದಲ್ಲಿ ಆಸಕ್ತಿ. ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಹಾಗೂ ವಾರದ ಕೊನೆಯಲ್ಲಿ ಇವರು ಅಪ್ಪಟ ಕೃಷಿಕರಾಗಿ ಹೊಲದಲ್ಲಿ ದುಡಿಯುತ್ತಿರುತ್ತಾರೆ. ಉಳಿದ ಸಮಯ ಶಾಲೆಯಲ್ಲಿ ಮಕ್ಕಳಿಗೆ ಮಾಡುತ್ತಾರೆ.

ಮೇಷ್ಟ್ರ ಹೊಲದಲ್ಲಿ ಚೆಂಡು ಹೂ ಘಮ

ಗುಲಾಬಿ, ಸೇವಂತಿಗೆ, ಮಲ್ಲಿಗೆ, ಸುಗಂಧರಾಜ ಮುಂತಾದ ಕೃಷಿಗಳಿಗೆ ಹೋಲಿಸಿದರೆ ಕಡಿಮೆ ರೋಗ ತರುವ ಹೂವು ಚೆಂಡು. ಇತರ ಹೂವುಗಳಿಗೆ ಹೋಲಿಸಿದರೆ ಖರ್ಚು ಕಡಿಮೆ. ನೀರಾವರಿ ವ್ಯವಸ್ಥೆಯಿದ್ದರೆ ಹಾಕಿದ ಬಂಡವಾಳದ ಮೂರು ಪಟ್ಟು ಆದಾಯ ಗಳಿಸಬಹುದು. ಈ ಮಾಹಿತಿ ಸಿಕ್ಕಿದ್ದೇ ಸರನ್ನವರ ಅವರು, ಚೆಂಡು ಹೂವು ಬೆಳೆಯಲು ನಿರ್ಧರಿಸಿದರು. ಉತ್ತಮ ತಳಿಯಾದ ಎಲ್‌-3 ಹೈಬ್ರಿಡ್‌ ಚೆಂಡು ಹೂವಿನ ಬೀಜಗಳನ್ನು ಹಾಗೂ ಕೀಟಗಳ ನಿಯಂತ್ರಣಕ್ಕಾಗಿ ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ಪಡೆದು, ಬೆಳೆಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು.

ಬೇಕಾಬಿಟ್ಟಿ ನೆಟ್ಟ ಗಿಡದಿಂದ ವಾರಕ್ಕೆ 2000 ರು. ಆದಾಯ

3 ಎಕರೆ 35 ಗುಂಟೆ ಹೊಲವನ್ನು ಉಳುಮೆ ಮಾಡಿ, ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಿದ ನಂತರ ಜೂನ್‌ ತಿಂಗಳಿನಲ್ಲಿ ಚೆಂಡು ಹೂವಿನ ಬೀಜಗಳನ್ನು ಬಿತ್ತಿದರು. ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರ ಬಿಟ್ಟು ಹಾಗೂ ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರ ಬಿಟ್ಟು ಕೃಷಿ ಮಾಡಿದರು. ಹೊಲದಲ್ಲಿ ಬೋರವೆಲ್‌ ಇದೆ. ವಾರಕ್ಕೊಮ್ಮೆ ನೀರು ಹಾಯಿಸುತ್ತಾರೆ. ವಾರಕ್ಕೆ ಒಂದು ಸಲ ಕಂಪನಿ ಕೊಡುವ ಟಾನಿಕ್‌ ಹಾಗೂ ಔಷಧಗಳನ್ನು ಸಿಂಪಡಿಸುತ್ತಾರೆ.

ಜುಲೈ ಕೊನೆಯ ವಾರದಲ್ಲಿ ಚೆಂಡು ಗಿಡಗಳು ಮೊಗ್ಗು ನೀಡಲು ಆರಂಭಿಸುತ್ತವೆ. ಇವರು ಕೃಷಿ ಮಾಡಿದ 2 ತಿಂಗಳಲ್ಲಿ ಹೊಲದಲ್ಲಿ ಚೆಂಡು ಹೂವು ಅರಳಿತು. ಮೊದಲನೆ ವಾರದಲ್ಲಿ ಒಂದೂವರೆ ಟನ್‌ ಹೂವು ಸಿಗುತ್ತವೆ. 2ನೇ ವಾರದಲ್ಲ 3 ಟನ್‌, 3ನೇ ವಾರದಲ್ಲಿ 5ಟನ್‌, 4ನೇ ವಾರದಲ್ಲಿ 8ಟನ್‌ ಹೀಗೆ ಉತ್ತಮವಾಗಿ ಬೆಳೆ ಬರುತ್ತಿದೆ.

ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!

ಸುಲಭ ಮಾರುಕಟ್ಟೆ

ಪ್ರತಿ ವಾರವು ಕಂಪನಿಯವರೇ ಹೊಲಕ್ಕೆ ಬಂದು ಕಟಾವು ಮಾಡಿದ ಚೆಂಡು ಹೂವುಗಳನ್ನು ತೆಗೆದುಕೊಳ್ಳುತ್ತಾರೆ. ಪ್ರತಿ ಕೆ.ಜಿ.ಗೆ ರೂ.10/-ರಂತೆ ಮಾರುತಿಯವರ ಖಾತೆಗೆ ಜಮೆ ಆಗುತ್ತದೆ. ಹೀಗಾಗಿ ಮಾರುಕಟ್ಟೆಯ ಸಮಸ್ಯೆಯೇ ಬರುವುದಿಲ್ಲ. ‘ಆದರೂ ಹೂವಿನ ಕೃಷಿಯಲ್ಲಿ ಮಾರುಕಟ್ಟೆಮತ್ತು ಬೇಡಿಕೆಯ ಬಗ್ಗೆ ತಿಳಿದಿರಬೇಕಾದುದು ಅತೀ ಅವಶ್ಯ. ಬೇಡಿಕೆ ಇರುವ ಹಂತದಲ್ಲಿ ಹೂವು ಕಟಾವಿಗೆ ಬಂದರೆ ಮಾತ್ರ ಬೆಳೆಗಾರ ಲಾಭ ಗಳಿಸಲು ಸಾಧ್ಯ’ ಎನ್ನುತ್ತಾರೆ ಸರಣ್ಣವರ.

ಹೂವು ಕೃಷಿ ಮಾಡುವ ಸಮಯದಲ್ಲಿ 10 ಸಾವಿರ ರು. ಖರ್ಚು ಮಾಡಿರುವ ಮಾರುತಿ ಅವರು ಪ್ರತಿ ವಾರ ಹೂವು ಕಟಾವು ಮಾಡುವ ಸಂದರ್ಭದಲ್ಲಿ ಅಂದಾಜು ಹತ್ತು ಸಾವಿರ ರೂಪಾಯಿಗಳಷ್ಟುಖರ್ಚು ಮಾಡುತ್ತಾರೆ. ಒಟ್ಟಾರೆ ಚೆಂಡು ಹೂವು ಬೆಳೆದ ನಾಲ್ಕು ತಿಂಗಳ ಅವಧಿಯಲ್ಲಿ ಖರ್ಚು ಕಳೆದು ಮೂರು ಲಕ್ಷ ರೂಪಾಯಿ ಆದಾಯಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಭೂಮಿಗೆ ಪ್ರಿಯವಾದ ಚೆಂಡು ಹೂವು ನೆಲದ ಫಲವತ್ತತೆ ಹೆಚ್ಚಿಸಿ ಬೆಳೆದ ರೈತನಿಗೂ ಹೆಚ್ಚಿನ ಆದಾಯ ನೀಡುವಲ್ಲಿ ಸಂಶಯವೇ ಇಲ್ಲ.

ಎಲ್ಲಿದೆ ಜಮೀನು?

ಮುನವಳ್ಳಿ ಮತ್ತು ಕಟಕೋಳ ಮಧ್ಯೆ ಚುಂಚನೂರ ಗ್ರಾಮ ಇದೆ. ಇಲ್ಲಿಂದ 2ಕಿ.ಮೀ. ಅಂತರದಲ್ಲಿ ಹನುಮಸಾಗರದ ಕಡೆಗೆ ಹೋಗುವ ರಸ್ತೆಯ ಬಲಬದಿಗೆ ಇರುವ ಕೆಂಪಾರ್ತಿನಟ್ಟಿಯಲ್ಲಿ ಲಕ್ಷಾನುಗಟ್ಟಲೇ ಚೆಂಡು ಹೂಗಳು ಬರಮಾಡಿಕೊಳ್ಳುತ್ತವೆ. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ತಮ್ಮ ಶಾಲೆಯನ್ನು ಸ್ಮಾರ್ಟ್‌ ಶಾಲೆಯನ್ನು ಮಾಡಿದ್ದಲ್ಲದೇ ಕೃಷಿಯಲ್ಲಿ ತೊಡಗಿ ಸಾಧಿಸಿರುವುದು ಅಚ್ಚರಿಯ ಸಂಗÜತಿ. ಅದ್ಭುತ ಸಾಧನೆ ಮಾಡಿದ ಮಾರುತಿ ಸರಣ್ಣನವರ ಅವರನ್ನು ಅಭಿನಂದಿಸಲೇ ಬೇಕು. ಸಂಪರ್ಕಿಸಲು ಮೊಬೈಲ್‌ ಸಂಖ್ಯೆ; 9972565425

click me!