ಕೃಷ್ಣ ಎನ್. ಲಮಾಣಿ
ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯವೇ 100.788 ಟಿಎಂಸಿ ಇದೆ. ಆದರೆ, 14 ದಿನಗಳಲ್ಲೇ 98.127 ಟಿಎಂಸಿ ನೀರು ನದಿಗೆ ಹರಿಬಿಡಲಾಗಿದೆ. ತುಂಗಭದ್ರಾ ಜಲಾಶಯದಿಂದ ಬಿಡುವ ನೀರು ನದಿ ಮೂಲಕ ಆಂಧ್ರಪ್ರದೇಶದ ಶ್ರೀಶೈಲಂ ನದಿಗೆ ತೆರಳಿ ಸಮುದ್ರ ಸೇರುತ್ತದೆ. ಮಳೆಗಾಲದಲ್ಲಿ ಭಾರೀ ಪ್ರಮಾಣದ ನೀರು ನದಿಗೆ ಬಿಡುವುದರಿಂದ ನೀರು ವ್ಯರ್ಥವಾಗಿ ಸಮುದ್ರ ಪಾಲಾಗುತ್ತಿದೆ. ಇದರ ಬದಲಿಗೆ ಕೊಪ್ಪಳದ ಗಂಗಾವತಿಯ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಿ 30 ಟಿಎಂಸಿ ನೀರು ಸಂಗ್ರಹ ಮಾಡಬಹುದು ಎಂಬುದು ರೈತರ ಆಗ್ರಹವಾಗಿದೆ.
3.5 ಲಕ್ಷ ಹೆಕ್ಟೇರ್ ನೀರಾವರಿತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಈ ಜಲಾಶಯದ ನೀರಿನಿಂದ ಭತ್ತ, ಕಬ್ಬು, ಬಾಳೆ, ಮೆಣಸಿನಕಾಯಿ, ಹತ್ತಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಇನ್ನು ಆಂಧ್ರಪ್ರದೇಶ, ತೆಲಂಗಾಣದಲ್ಲೂ 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ.
98.127 ಟಿಎಂಸಿ ನೀರು
ಜಲಾಶಯದ ಒಳ ಹರಿವಿನಲ್ಲಿ ಭಾರೀ ಏರಿಕೆ ಆದ ಹಿನ್ನೆಲೆಯಲ್ಲಿ ಜುಲೈ 22ರಂದು ಜಲಾಶಯದಿಂದ ನದಿಗೆ 0.147 ಟಿಎಂಸಿ ನೀರು ಹರಿದಿದೆ. ಜುಲೈ 23ರಂದು 0.617 ಟಿಎಂಸಿ, ಜುಲೈ 24ರಂದು 0.806 ಟಿಎಂಸಿ, ಜು. 25ರಂದು 1.437 ಟಿಎಂಸಿ, ಜು. 26ರಂದು 6.647 ಟಿಎಂಸಿ, ಜು. 27ರಂದು 9.493 ಟಿಎಂಸಿ, ಜು. 28ರಂದು 12.337 ಟಿಎಂಸಿ ನೀರು ನದಿಗೆ ಹರಿಬಿಡಲಾಗಿದೆ.ಜುಲೈ 29ರಂದು 12.788 ಟಿಎಂಸಿ, ಜು.30ರಂದು 7.388 ಟಿಎಂಸಿ, ಜು. 31ರಂದು 4.751 ಟಿಎಂಸಿ ನೀರು ನದಿಗೆ ಹರಿಸಲಾಗಿದೆ. ಇನ್ನೂ ಆಗಸ್ಟ್ ಒಂದರಂದು 12.648 ಟಿಎಂಸಿ ನೀರು ಹರಿಸಲಾಗಿದೆ. ಆ. 2ರಂದು 14.722 ಟಿಎಂಸಿ ಮತ್ತು ಆ.3ರಂದು 14.346 ಟಿಎಂಸಿ ನೀರು ನದಿ ಒಡಲು ಸೇರಿದೆ. ಬರೀ ಹದಿನಾಲ್ಕು ದಿನಗಳಲ್ಲೆ 98.127 ಟಿಎಂಸಿಯಷ್ಟು ನೀರು ನದಿ ಪಾಲಾಗಿದೆ.
ಇನ್ನೂ ಜಲಾಶಯದಿಂದ ಆಗಸ್ಟ್ 2ರಂದು ಒಂದೇ ದಿನ 14.722 ಟಿಎಂಸಿ ನೀರು ನದಿಗೆ ಬಿಡಲಾಗಿದೆ. ಆ. 3ರಂದು 14.346 ಟಿಎಂಸಿ ನೀರು ನದಿಗೆ ಹರಿಬಿಡಲಾಗಿದೆ. ಈ ಎರಡು ದಿನದಲ್ಲೆ 29 ಟಿಎಂಸಿಯಷ್ಟು ನೀರು ನದಿ ಒಡಲು ಸೇರಿದೆ.ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದ್ದರಿಂದ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತಿದೆ. ಈ ವರ್ಷ ಆಗಸ್ಟ್ 15ಕ್ಕೂ ಮುನ್ನವೇ ನದಿಗೆ ನೀರು ಹರಿಸಲಾಗಿದೆ. ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಈಗ 98.414 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಕಳೆದ ವರ್ಷ ಜಲಾಶಯದಲ್ಲಿ 83.180 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ಹತ್ತು ವರ್ಷಗಳ ಸರಾಸರಿಗೆ ಹೋಲಿಕೆ ಮಾಡಿದರೆ ಈ ವರ್ಷವೇ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇನ್ನೂ ಒಳ ಹರಿವು ಕೂಡ ಉತ್ತಮ ಸ್ಥಿತಿಯಲ್ಲಿದೆ.
ಸಮಾನಾಂತರ ಜಲಾಶಯ
ತುಂಗಭದ್ರಾ ಜಲಾಶಯದಿಂದ ನಿರಂತರವಾಗಿ ನದಿಗೆ ನೀರು ಹರಿಸಲಾಗಿದೆ. ಈ ನೀರೇ 98.127 ಟಿಎಂಸಿಯಷ್ಟಾಗಿದೆ. ಹಾಗಾಗಿ ಹೂಳಿನ ಸಮಸ್ಯೆ ಪರಿಹಾರಕ್ಕಾಗಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಬೇಕು. ಹೂಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.ಸಿ.ಎ. ಗಾಳೆಪ್ಪ, ವಿಜಯನಗರ ಜಿಲ್ಲಾಧ್ಯಕ್ಷರು, ರೈತ ಸಂಘ ಹಾಗೂ ಹಸಿರುಸೇನೆ.
