Ramanagara: ನೆರೆ ಸಂತ್ರ​ಸ್ತ​ರಿಗೆ 1 ಲಕ್ಷ ಪರಿ​ಹಾರ ನೀಡಿ: ಇ​ಬ್ರಾ​ಹಿಂ

By Govindaraj SFirst Published Sep 6, 2022, 1:25 AM IST
Highlights

ನೆರೆ ಹಾನಿ ಕುಟುಂಬಗಳಿಗೆ ನೀಡು​ತ್ತಿ​ರುವ 10 ಸಾವಿರ ಪರಿ​ಹಾರ ಯಾವು​ದಕ್ಕೂ ಸಾಲು​ವು​ದಿಲ್ಲ. ಕನಿಷ್ಠ 1 ಲಕ್ಷ ರು. ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆಗ್ರಹಿಸಿದರು. 

ರಾಮನಗರ (ಸೆ.06): ನೆರೆ ಹಾನಿ ಕುಟುಂಬಗಳಿಗೆ ನೀಡು​ತ್ತಿ​ರುವ 10 ಸಾವಿರ ಪರಿ​ಹಾರ ಯಾವು​ದಕ್ಕೂ ಸಾಲು​ವು​ದಿಲ್ಲ. ಕನಿಷ್ಠ 1 ಲಕ್ಷ ರು. ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆಗ್ರಹಿಸಿದರು. ನೆರೆ ಹಾನಿ ಪ್ರದೇ​ಶ​ಗ​ಳಿಗೆ ಭೇಟಿ ನೀಡು​ವು​ದಕ್ಕೂ ಮುನ್ನ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ನೆರೆ ಸಂತ್ರ​ಸ್ತ​ರಿಗೆ ಪರಿ​ಹಾರ ವಿತ​ರ​ಣೆ​ಯಲ್ಲಿ ಸರ್ಕಾ​ರದ ವಿಳಂಬ ಧೋರಣೆ ಸರಿ​ಯಲ್ಲ. ಸಂತ್ರ​ಸ್ತರು ಬದುಕು ಕಟ್ಟಿ​ಕೊ​ಳ್ಳಲು ಸರ್ಕಾರ ಸಹ​ಕಾರ ನೀಡ​ಬೇಕು. ನಗರದ ಟಿಪ್ಪು ನಗರದಲ್ಲಿ ಸೀರಹಳ್ಳಕ್ಕೆ ಹಾಲಿ ಸೇತುವೆ ಕೆಡವಿ, ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ 1.5 ಕೋಟಿ ರು. ಮಂಜೂರು ಮಾಡಿಸಿದ್ದಾರೆ. 

ನೆರೆ ಹಾನಿಗೊಳಗಾಗಿರುವ ಕುಟುಂಬಗಳಿಗೆ ಭಯ ಬೇಡ. ಇದು ತತ್ಕಾಲಿಕ ಕಷ್ಟ. 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದ್ದು, ಎಲ್ಲಾ ನೆರೆ ಸಂತ್ರಸ್ತರಿಗೂ ಮನೆ ಕಟ್ಟಿಕೊಡಲಿದೆ ಎಂದು ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ನಾವು, ನಮ್ಮ ವಿರುದ್ಧ ಅವರು ದೂಷಿಸುವುದರಿಂದ ಏನು ಉಪಯೋಗ ಇಲ್ಲ. ಇದು ಆ ಸಮಯವೂ ಅಲ್ಲ. ಈಗ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕಾಗಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಈ ವಿಚಾರದಲ್ಲಿ ಶ್ರಮಿಸುತ್ತಿದ್ದಾರೆ. ಅನ್ಯ ಪಕ್ಷಗಳು ಅವರ ಜೊತೆ ಕೈ ಜೋಡಿಸಬೇಕು ಎಂದು ತಿಳಿ​ಸಿದರು.

ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಮಳೆ: ಜಮೀನುಗಳು ಜಲಾವೃತ

ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಮೂರನೇ ವ್ಯಕ್ತಿಯಿಂದ ತನಿಖೆ ಮಾಡಿಸುವಂತೆ ಸಲಹೆ ಕೊಟ್ಟಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಹೆದ್ದಾರಿ ಕಂಟ್ರಾಕ್ಟರ್‌ ಅವರ (ಪ್ರತಾಪ್‌ ಸಿಂಹ) ಚಿಕ್ಕಪ್ಪನಾ? ಕಾಮಗಾರಿ ಸರಿಯಾಗಿದ್ದರೆ, ನೀರೇಕೆ ನಿಂತಿತ್ತು? ಮುಖ್ಯಮಂತ್ರಿಗಳೇ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಪ್ರತಾಪ್‌ ಸಿಂಹ ಕಂಟ್ರಾಕ್ಟರ್‌ ಪರ ಮಾತನಾಡುತ್ತಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸುತ್ತಿರುವಂತೆ ಈ ಕಾಮಗಾರಿಯಲ್ಲೂ ಶೇ.40 ಸತ್ಯ ಎನಿಸುತ್ತಿದೆ ಎಂದರು.

ಹೆದ್ದಾರಿ ಕಾಮಗಾರಿಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜು ಆಗ್ರಹ ಸರಿಯಾಗಿದೆ. ಹೆದ್ದಾರಿ ಕಳಪೆ ಕಾಮಗಾರಿ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ನಿಯೋಗ ದೆಹಲಿಗೆ ತೆರಳುತ್ತಿದ್ದೇವೆ. ದೂರು ಎನ್ನುವುದಕ್ಕಿಂತ ಹೆದ್ದಾರಿ ಕಳಪೆ ಕಾಮಗಾರಿಯನ್ನು ಸರಿಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಗುತ್ತಿಗೆ ಸಂಸ್ಥೆಯೂ ನಷ್ಟಪರಿ​ಹಾರ ಭರಿ​ಸಲಿ: ಬೆಂಗ​ಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕಳಪೆ ಕಾಮಗಾರಿಯಿಂದಾಗಿ ಅಪಾರ ಪ್ರಮಾಣದ ನೀರು ನಗರಕ್ಕೆ ನುಗ್ಗಿದೆ. ಹೀಗಾಗಿ ಇಲ್ಲಿ ನಷ್ಟವಾಗಿದೆ. ಸುಮಾರು 3 ಸಾವಿರ ಮನೆಗಳಿಗೆ ಹಾನಿಯಾಗಿದೆ. ರೇಷ್ಮೆ ನೂಲು ಘಟಕಗಳಿಗೆ ತೊಂದರೆಯಾಗಿದೆ. ಆದ್ದರಿಂದ ಹೆದ್ದಾರಿ ನಿರ್ಮಾಣ ಮಾಡಿರುವ ಗುತ್ತಿಗೆ ಸಂಸ್ಥೆಯೂ ನಷ್ಟಪರಿಹಾರ ಭರಿಸಬೇಕು ಎಂದು ಇಬ್ರಾಹಿಂ ಒತ್ತಾ​ಯಿ​ಸಿ​ದರು.

ಭಾರತ್‌ ಜೋಡೋ ಬದಲು ಕಾಂಗ್ರೆಸ್‌ ಜೋಡೋ ಹಮ್ಮಿ​ಕೊ​ಳ್ಳಲಿ: ಭಾರತ್‌ ಜೋಡೋ ಕಾರ್ಯಕ್ರಮಕ್ಕಿಂತ ಕಾಂಗ್ರೆಸ್‌ ಜೋಡೋ ಕಾರ್ಯಕ್ರಮ ಹಮ್ಮಿಕೊಳ್ಳುವುದು ಒಳಿತು. ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಎಐಸಿಸಿಗೆ ಸಲಹೆ ನೀಡಿದರು. ದಿನ ಒಬ್ಬೊಬ್ಬ ನಾಯ​ಕರು ಕಾಂಗ್ರೆಸ್‌ ಪಕ್ಷ ತೊರೆ​ಯು​ತ್ತಿ​ದ್ದಾರೆ. ಹೀಗಾಗಿ ಆ ಪಕ್ಷ ಭಾರತ ಜೋಡೋಗಿಂತ ಕಾಂಗ್ರೆಸ್‌ ಜೋಡೋ ಹಮ್ಮಿಕೊಂಡರೆ ಒಳಿತು. 

ಕ್ಷೇತ್ರದ ಶಾಸಕರು ಏನೂ ಮಾಡುತ್ತಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಕ್ಬಾಲ್‌ ಹುಸೇನ್‌ ಅವರು, ಡಿ.ಕೆ.ಶಿವಕುಮಾರ್‌ ಪಾರ್ಟ​ನರ್‌. ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್‌ ಸಿಗುತ್ತೆ. ಇಕ್ಬಾಲ್‌ ಅವರಿಗೆ ಸ್ವಂತ ಯೋಚನಾ ಶಕ್ತಿ ಇಲ್ಲ. ಡಿಕೆಶಿ ಹೇಳಿದಂತೆ ಕೇಳುತ್ತಾರೆ ಎಂದು ಕುಟುಕಿದರು. 2018ರ ಚುನಾವಣೆಯಲ್ಲಿ ಆದಂತೆ (ಮತ ಗಳಿಕೆ) ಈ ಬಾರಿ ಆಗುವು​ದಿಲ್ಲ. ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ರಾಮನಗರ ಮಾದರಿ ತಾಲೂಕಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ರಾಮನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಅಗತ್ಯ: ಎಚ್‌.ಡಿ.ಕುಮಾರಸ್ವಾಮಿ

ಪ್ರತಾಪ, ಸಿಂಹ ಎರಡೂ ಇದ್ದರೆ ಕಷ್ಟ ಆಗುತ್ತದೆ. ಒಂದು ಸಿಂಹ ಇರಬೇಕು, ಇಲ್ಲ ಪ್ರತಾಪ ಇರಬೇಕು. ಪ್ರತಾಪ ಸಿಂಹ ಇದ್ದರೆ ಬರೀ ಮಾಂಸ, ಹಾ ಹಾ ಅನ್ನುತ್ತದೆ. ಅವರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವರು. ಆ ಕಂಪನಿಯ ಪರವಾಗಿ ಏಕೆ ಮಾತ​ನಾ​ಡು​ತ್ತಾರೆ. ಗುತ್ತಿಗೆದಾರ ಪ್ರತಾಪ್‌ ಸಿಂಹರ ಚಿಕ್ಕಪ್ಪನಾ. ನಾವು ದೆಹಲಿಗೆ ಹೋಗುತ್ತಿ​ದ್ದೇವೆ. ಸಚಿವ ಗಡ್ಕರಿ ಅವ​ರನ್ನು ಭೇಟಿ​ಯಾ​ಗು​ತ್ತೇವೆ. ನಾವು ದೂರು ನೀಡಲ್ಲ, ಕೆಲಸ ಮಾಡಿ ಎಂದು ಕೇಳುತ್ತೇವೆ.
-ಸಿ.ಎಂ.​ಇ​ಬ್ರಾಹಿಂ, ರಾಜ್ಯಾ​ಧ್ಯ​ಕ್ಷರು, ಜೆಡಿ​ಎಸ್‌

click me!