ಉತ್ತರ ಪ್ರದೇಶ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್‌

Published : Nov 06, 2024, 08:41 AM IST
 ಉತ್ತರ ಪ್ರದೇಶ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್‌

ಸಾರಾಂಶ

2004ರ ಉತ್ತರಪ್ರದೇಶದ ಮದರಸಾ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ವಜಾಗೊಳಿಸಿ, 16000 ಮದರಸಾಗಳು ಮತ್ತು 17 ಲಕ್ಷ ವಿದ್ಯಾರ್ಥಿಗಳಿಗೆ ನಿರಾಳತೆ.

ನವದೆಹಲಿ: 2004ರಲ್ಲಿ ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್‌ ಯಾದವ್ ಸರ್ಕಾರ ಜಾರಿಗೆ ತಂದಿದ್ದ ಮದರಸಾ ಕಾಯ್ದೆ ಸಿಂಧುತ್ವವನ್ನುಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಈ ಮೂಲಕ `ಮದರಸಾ ಕಾಯ್ದೆ ಸಂವಿಧಾನದ ಮೂಲ ಪರಿಕಲ್ಪನೆಯಾದ ಜಾತ್ಯತೀತ ತತ್ವಗಳ ಉಲ್ಲಂಘನೆ ಮಾಡುತ್ತದೆ. ಅದು ಅಸಾಂವಿಧಾನಿಕ' ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ವಜಾ ಮಾಡಿದೆ. ಹೀಗಾಗಿ ಮುಚ್ಚುವ ಭೀತಿಯಲ್ಲಿದ್ದ ಉತ್ತರಪ್ರದೇಶದ 16000 ಮದರಸಾಗಳು ಮತ್ತು ಮದರಸಾಗಳಿಂದ ಸಾಮಾನ್ಯ ಶಿಕ್ಷಣಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಎದುರಿಸುತ್ತಿದ್ದ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 

ಮದರಸಾ ಕಾಯ್ದೆ ಕಾನೂನು ಬದ್ಧ: 
ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಮಂಗಳವಾರ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾ| ಡಿ.ವೈ. ಚಂದ್ರಚೂಡ್ ಅವರ ನ್ಯಾಯಪೀಠ, 'ಯಾವುದೇ ಕಾಯ್ದೆಯನ್ನು, ಅದು ಶಾಸನದ ಬೆಂಬಲ ಹೊಂದಿಲ್ಲವೆಂದಾದಲ್ಲಿ ಮಾತ್ರ ವಜಾಗೊಳಿಸಬಹುದು. ಆದರೆ ಮದರಸಾ ಕಾಯ್ದೆ ಶಾಸನದ ಬೆಂಬಲ ಹೊಂದಿದೆ. ಮದರಸಾಗಳಲ್ಲಿ ಆಧುನಿಕ ಶಿಕ್ಷಣ ಇಲ್ಲ ಎನ್ನಬಹುದಾದರೂ, ಇಡೀ ಕಾಯ್ದೆಯ ಉದ್ದೇಶವೇ ಇಸ್ಲಾಂ ತತ್ವಗಳ ಅನ್ವಯ ಶಿಕ್ಷಣ ನೀಡುವುದಾಗಿದೆ. ಜೊತೆಗೆ ಮದರಸಾ ಕಾಯ್ದೆ, ಮದರಸಾಗಳ ಮೂಲಕ ಬೋಧಿಸುವ ಶಿಕ್ಷಣವನ್ನು ನಿರ್ದಿಷ್ಟಗೊಳಿಸುವ ಉದ್ದೇಶ ಹೊಂದಿದೆ. ಕಾಯ್ದೆಯನ್ನು ಅಸಾಂವಿಧಾನಿಕ ಎನ್ನಲಾಗದು ಎಂದು ಸ್ಪಷ್ಟಪಡಿಸಿತು.

ಏನಿದು ಉತ್ತರ ಪ್ರದೇಶ ಮದರಸಾ ವಿವಾದ?
2004ರಲ್ಲಿ ಅಂದಿನ ಸಮಾಜವಾದಿ ಸರ್ಕಾರ ಮದರಸಾ ಕಾಯ್ದೆ ಮೂಲಕ, ರಾಜ್ಯದಲ್ಲಿ ಮದರಸಾಗಳ ಮೂಲಕ ನೀಡುವ ಶಿಕ್ಷಣಕ್ಕೂ ಶಾಸನಾತ್ಮಕ ಮಾನ್ಯತೆ ನೀಡಿತ್ತು. ಆದರೆ ಇಂಥ ಕಾಯ್ದೆಯು, ಸಂವಿಧಾನದಮೂಲಪರಿಕಲ್ಪನೆಯಾದಜಾತ್ಯತೀತತತ್ವಗಳನ್ನು ಉಲ್ಲಂಘಿಸುತ್ತದೆ. ಮದರಸಾಗಳು ಪ್ರತ್ಯೇಕ ಇಲಾಖೆ ಅಡಿ ಬರುತ್ತವೆ. ಶಿಕ್ಷಣ ಇಲಾಖೆಯಡಿ ಬರಲ್ಲ. ಜೊತೆಗೆ 14 ವರ್ಷದದವರೆಗೆ ಕಡ್ಡಾಯ ಶಿಕ್ಷಣ ಕಾಯ್ದೆ ಅನ್ವಯ ನೀಡಬೇಕಾದ ಶಿಕ್ಷಣ ನಿಯಮ ಉಲ್ಲಂಘನೆ ಮಾಡುತ್ತವೆ ಎಂದು ಎಂದು ಅಂಶುಮನ್ ಸಿಂಗ್ ಎಂಬುವವರು ಅಲಹಾಬಾದ್ ಹೈಕೋರೈನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಈ ಕಾಯ್ದೆ ಅಸಾಂವಿಧಾನಿಕ. ಇದು ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಕಳೆದ ಮಾ.22ರಂದು ತೀರ್ಪು ನೀಡಿತ್ತು. ಜೊತೆಗೆ ಕಾಯ್ದೆಯನ್ನು ವಜಾ ಮಾಡಿ, ರಾಜ್ಯದ ಎಲ್ಲಾ ನೊಂದಾಯಿತ 16000 ಮದರಸಾಗಳನ್ನು ಮುಚ್ಚಲು ಸೂಚಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು